ಧನಿಯರ ಸತ್ಯನಾರಾಯಣ ಕತೆಃ ಕಾಲಮಾನದ ಶೋಷಣೆಯ ಸ್ವರೂಪ

Date: 19-01-2024

Location: ಬೆಂಗಳೂರು


"ನಗರಕ್ಕೆ ಬಂದವರು ಮತ್ತೆ ಗ್ರಾಮಗಳಿಗೆ ಹಿಂದುರುಗುವ ಪರಸ್ಥಿಯಲ್ಲಿ ಕಾರ್ಮಿಕರು ಇರಲಿಲ್ಲ. ಆದ್ದರಿಂದ ಅವರನ್ನು ಕಾರ್ಖಾನೆಗಳಲ್ಲಿ ಕಡಿಮೆ ಕೂಲಿಗೆ ಹೆಚ್ಚು ದುಡಿಸಿಕೊಳ್ಳುತ್ತಿದ್ದರು. ಈ ಕಾರ್ಮಿಕ ವರ್ಗ ಯಾವ ಪ್ರತಿಕ್ರಿಯೆಯಿಲ್ಲದೆ ದುಡಿಯುತ್ತಿದ್ದರು. ಇವರಿಗೆ ಒಂದು ಪ್ರಜ್ಞೆಯನ್ನು ನೀಡುವ ಆಲೋಚನೆಯನ್ನು ಲೇಖಕರು ಮಾಡಿದರು," ಎನ್ನುತ್ತಾರೆ ಅಂಕಣಕಾರ ರಾಜಶೇಖರ ಹಳೆಮನೆ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ಕೊರಡಕಲ್ ಶ್ರೀನಿವಾಸ ಅವರ ‘ಧನಿಯರ ಸತ್ಯನಾರಾಯಣ ಕತೆ’ ಕುರಿತು ಬರೆದ ಲೇಖನ.

ಭಾರತ 1940ರಲ್ಲಿ ಅನೇಕ ಬದಲಾವಣೆಗೆ ಒಳಗಾಗುತಿತ್ತು. ಸ್ವಾತಂತ್ಯ್ರ ಚಳುವಳಿ ಗಂಭೀರ ಸ್ವರೂಪವನ್ನು ಪಡೆದುಕೊಂಡು ನಿರ್ಣಾಯಕ ಹಂತ ತಲುಪುತಿತ್ತು. ಅನೇಕ ಲೇಖಕರು ಈ ಚಳುವಳಿಯಲ್ಲಿ ಪಾಲ್ಗೊಂಡು ವಸಾಹತುಶಾಹಿ ಮುಕ್ತ ಭಾರತಕ್ಕೆ ನಾಂದಿ ಹಾಡುತ್ತಿದ್ದರು. ಹೊಸ ಭಾರತವನ್ನು ಕಟ್ಟುವ ಹುಮ್ಮಸ್ಸಿನಲ್ಲಿದ್ದರು. ಭಾರತ ಸ್ವಾತಂತ್ಯ್ರಗೊಂಡರೂ ಭಾರತದ ಕೆಲವು ಮೂಲಭೂತ ಸಮಸ್ಯೆಗಳು ಹಾಗೆ ಉಳಿಯುವದರ ಬಗ್ಗೆ ಮತ್ತು ಹೊಸದಾಗಿ ಬೆಳೆಯುತ್ತಿರುವ ನಗರೀಕರಣ ಪ್ರಕ್ರಿಯೆಯ ಬಗ್ಗೆ ಲೇಖಕರು ಗಂಭೀರವಾಗಿ ಯೋಚಿಸುತ್ತಿದ್ದರು. ಈಗಾಗಲೇ ನಗರೀಕರಣಕ್ಕೆ ಒಳಗಾದ ದೇಶಗಳ ಪರಸ್ಥಿತಿಯನ್ನು ಗಮನಿಸುತ್ತಿದ್ದರು. ಜಾತೀಯತೆ, ಅಸ್ಪೃಸ್ಯತೆ, ಲಿಂಗತಾರತಮ್ಯ, ಧರ‍್ಮಿಕ ಕಂದಾಚಾರ, ಮೌಢ್ಯ, ಅಸಮಾನತೆ ಮುಂತಾದ ಸಮಸ್ಯೆಗಳು ಯಾವ ಸ್ವರೂಪವನ್ನು ಪಡೆಯಬಹುದೆಂದು ಚಿಂತಿಸುತ್ತಿದ್ದರು. ಮುಖ್ಯವಾಗಿ ನಗರದಲ್ಲಿ ಬೆಳೆಯುತ್ತಿದ್ದ ಶ್ರೀಮಂತ ವರ್ಗದ ಮನೋಭವದ ಬಗ್ಗೆ ಗಮನಹರಿಸಲಾಗುತಿತ್ತು. ಅವರು ಯಾವ ರೀತಿಯಲ್ಲಿ ಸಮಾಜವನ್ನು ಮುಂದೆ ಕೊಂಡೊಯ್ಯುತ್ತಿದ್ದಾರೆ ಎಂಬುದನ್ನು ವಿಮರ್ಶೆಗೆ ಒಡ್ಡಲಾಗುತಿತ್ತು. ಯಾಕೆಂದರೆ ಈಗಾಗಲೇ ಈ ವರ್ಗ ಯುರೋಪ ದೇಶಗಳಲ್ಲಿ ಬಹುದೊಡ್ಡ ವರ್ಗತಾರತಮ್ಯವನ್ನು ಹುಟ್ಟುಹಾಕಿ ಬಡವರನ್ನು ಶೋಷಣೆಗೆ ಈಡುಮಾಡುತಿತ್ತು. ಜಗತ್ತನ್ನು ಏಕಮುಖನೆಲೆಯಲ್ಲಿ ನೋಡುವ ಮನೋಭಾವ ಹೆಚ್ಚಾಗುತಿತ್ತು. ಜಗತ್ತಿನ ಸಂಪತ್ತಿನ ಒಡೆಯರು ತಾವಾಗಬೇಕೆಂಬ ಸರ್ವಾಧಿಕಾರಿ ಧೋರಣೆಯು ಮೂಡುತಿತ್ತು. ಅದರ ಪರಿಣಾಮವಾಗಿ ಒಂದನೆಯ ಪ್ರಪಂಚ ಮಹಾಯುದ್ದ ನಡೆದಿತ್ತು. ಅದು ಜನಸಾಮನ್ಯರ ಮೇಲೆ ಯಾವ ಪರಿಣಾಮ ಮಾಡಿದೆ ಎಂಬುದರ ಚಿತ್ರಣ ಕಣ್ಣ ಮುಂದೆ ಇತ್ತು. ಇಡೀ ಯುರೋಪ್ ದೇಶವೇ ಯುದ್ಧದಿಂದ ಆರ್ಥಿಕವಾಗಿ ಕುಸಿದು ಹೋಗಿತ್ತು. ಸಾಮಾಜಿಕ ಸಂಬಂಧಗಳು ತುಂಬಾ ಸಂಕೀರ್ಣಗೊಂಡು ಸಹಜತೆಯನ್ನು ಕಳೆದುಕೊಂಡು ಕೃತಕವಾಗುತ್ತಿದ್ದವು. ರಾಜಕೀಯ ಅಸ್ಥಿರತೆ ತಲೆದೋರಿತ್ತು. ನಿರುದ್ಯೋಗ ತಾಂಡವಾಡುತಿತ್ತು. ಪರಸ್ಪರ ದೇಶಗಳ ನಡುವೆ ಸಂಬಂಧಗಳು ವಿಶ್ವಾಸ ಕಳೆದುಕೊಳ್ಳುತ್ತಿದ್ದವು. ಮುಖ್ಯವಾಗಿ ನಗರಗಳಲ್ಲಿ ಕಾರ್ಮಿಕ ವರ್ಗ ಬೆಳೆಯುತಿತ್ತು. ಕಾರ್ಖಾನೆಗಳು ತಲೆ ಎತ್ತುತ್ತಿದ್ದವು. ಕಾರ್ಖಾನೆಯ ಮಾಲೀಕರು ಈ ದುರ್ಬರ ಪರಸ್ಥಿಯನ್ನು ತಮ್ಮ ಸ್ವಾರ್ಥಕ್ಕೆ ಬಳಿಸಿಕೊಂಡರು. ಅಸಹಾಯಕರಾದ ಕಾರ್ಮಿಕರು ಗ್ರಾಮಗಳಿಂದ ವಲಸೆ ಬರುತ್ತಿದ್ದರು.

ನಗರಕ್ಕೆ ಬಂದವರು ಮತ್ತೆ ಗ್ರಾಮಗಳಿಗೆ ಹಿಂದುರುಗುವ ಪರಸ್ಥಿಯಲ್ಲಿ ಕಾರ್ಮಿಕರು ಇರಲಿಲ್ಲ. ಆದ್ದರಿಂದ ಅವರನ್ನು ಕಾರ್ಖಾನೆಗಳಲ್ಲಿ ಕಡಿಮೆ ಕೂಲಿಗೆ ಹೆಚ್ಚು ದುಡಿಸಿಕೊಳ್ಳುತ್ತಿದ್ದರು. ಈ ಕಾರ್ಮಿಕ ವರ್ಗ ಯಾವ ಪ್ರತಿಕ್ರಿಯೆಯಿಲ್ಲದೆ ದುಡಿಯುತ್ತಿದ್ದರು. ಇವರಿಗೆ ಒಂದು ಪ್ರಜ್ಞೆಯನ್ನು ನೀಡುವ ಆಲೋಚನೆಯನ್ನು ಲೇಖಕರು ಮಾಡಿದರು.

ವ್ಯಕ್ತಿ ವ್ಯಕ್ತಿಗಳ ನಡುವೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಎಲ್ಲಾ ರೀತಿಯ ಸಂಬಂಧಗಳ ಒಟ್ಟು ಮೊತ್ತ ಒಂದು ಸಾಮಾಜಿ ಸಂಸ್ಥೆ ಎನಿಸಿಕೊಳ್ಳುತ್ತದೆ. ಯಾವ ರೀತಿಯ ಸಾಮಾಜಿಕ ವ್ಯವ್ಯಸ್ಥೆಯೆ ಆಗಲಿ, ಅದರ ಮುಖ್ಯವಾದ ಸ್ವರೂಪ ನಿರ್ಣಯವಾಗುವುದು ಅದರ ತಳಪಾಯದಂತಿರುವ ಆರ್ಥಿಕ ವ್ಯವಸ್ಥೆಯ ಮೇಲೆ. ಆದ್ದರಿಂದಲೇ ವ್ಯವಸ್ಥೆಯಲ್ಲಿ ಅಂದರೆ ಉತ್ಪತ್ತಿ ಸಂಪಾದನ ಕ್ರಮಗಳಲ್ಲಿ ಮೂಲಭೂತ ಬದಲಾವಣೆಗಳು ಆದಗ್ಗೆಲ್ಲಾ ವ್ಯಕ್ತಿ ವ್ಯಕ್ತಿಗಳ ನಡುವಣ ಇತರ ಎಲ್ಲಾ ಸಂಬಂಧಗಳಲ್ಲೂ ಸೂಕ್ಷ್ಮ ಮಾರ್ಪಾಡುಗಳು ಆಗುತ್ತವೆಂಬುದನ್ನು ನಾವು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಆ ಸಂದರ್ಭದಲ್ಲಿ ಸಾಹಿತ್ಯ ಯಾವ ಧೋರಣೆಯನ್ನು ತಾಳಬೇಕು ಎಂದು ಗಂಭೀರವಾಗಿ ಚರ್ಚೆಗಳು ನಡೆಯುತ್ತಿದ್ದವು. ಈ ಹೊತ್ತಿಗೆಲ್ಲ ಮಾರ್ಕ್ಸನ ಸಿದ್ಧಾಂತಗಳು ಸಾಕಾರ ರೂಪ ಪಡೆಯುತ್ತಿದ್ದವು.

ಮಾರ್ಕ್ಸ್ ಚರಿತ್ರೆಯನ್ನು ದುಡಿಯುವವರ ನೆಲೆಯಲ್ಲಿ ನಿಂತು ಅವಲೋಕಿಸಿದನು. ಆರ್ಥಿಕಶಕ್ತಿಗಳು ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸಿ ಬಡವರನ್ನು ಹೆಚ್ಚು ಶೋಷಣೆ ಮಾಡುತ್ತವೆ ಮತ್ತು ಸರ್ವಾಧಿಕಾರಿ ಧೋರಣೆಯನ್ನು ತಾಳುತ್ತವೆ. ಆದ್ದರಿಂದ ಕಾರ್ಮಿಕರೆಲ್ಲ ಎಲ್ಲಾ ಒಂದಾಗಿ ಆರ್ಥಿಕ ಶಕ್ತಿಗಳ ಸರ್ವಾಧಿಕಾರವನ್ನು ನಿರ್ನಾಮ ಮಾಡಿ ಕಾರ್ಮಿಕರ ರಾಜಕೀಯ ಅಧಿಕಾರವನ್ನು ನಿರ್ಮಾಣ ಮಾಡಬೇಕೆಂದು ಮಾರ್ಕ್ಸ್ವಾದದ ನಿಲುವಾಗಿತ್ತು. ಅನಂತಮೂರ್ತಿಯವರು ಮಾರ್ಕ್ಸ್ವಾದದ ಬಗ್ಗೆ ಹೀಗೆ ಹೇಳುತ್ತಾರೆ. "ಜಗತ್ತು ಹೇಗೆ ಬದಲಾಗಬೇಕು ಎಂಬುದರ ಆಧಾರದ ಮೇಲೆ ಜಗತ್ತನ್ನು ಅರ್ಥಮಾಡಿಕೊಳ್ಳಬಹುದು ಎಂದು ಆತ ವಿವರಿಸಿದ. ಅದು ಕ್ರಿಯಾಪದ ತತ್ವಜ್ಞಾವಾಗಿದ್ದು, ತೀವ್ರವಾದಿ ಗಡಿರೇಖೆಯನ್ನು ಮುಟ್ಟಿತ್ತು. ಅಲ್ಲಿ ಬದಲಾವಣೆಯ ಗುರಿಯೇ ಜ್ಞಾನದ ಕೀಲಿಕೈ ಆಯಿತು. ಸಮಾನತೆಯ ಸಾಧನೆ ಒಡೆತನದ ವರ್ಗದ ನಿರ್ನಾನವು ಬದಲಾವಣೆಯ ಆಶಯ ಕೇಂದ್ರ ಬಿಂದುವಾಯಿತು. ಇಲ್ಲಿ ಕ್ರಿಯೆ ಒಂದು ನಿರ್ದಿಷ್ಟ ರೂಪದಲ್ಲಿತ್ತು. ಅಂದರೆ ಆಸ್ತಿ ಸಂಬಂಧಗಳಲ್ಲಿ ಬದಲಾವಣೆ ತಂದು ಸಮಾನತೆ ಸಾಧಿಸುವದಕ್ಕೆ ಸಂಬಂಧಪಟ್ಟ ಕ್ರಿಯೆಯಾಗಿತ್ತು.

1. ಮಾರ್ಕ್ಸ್ ಜ್ಞಾನದ ಉತ್ಪತ್ತಿಯ ಮೂಲವನ್ನು ಶೋಧಿಸುದರ ಜೊತೆಗೆ ಅದರ ಹೊಣೆಗಾರಿಕೆಯ ಬಗೆಗೆ ಗಂಭೀರವಾಗಿ ಚಿಂತಿಸಿದನು. ಅದು ಒಣಪಾಂಡಿತ್ಯವಾಗದೆ ಸಾಮಾಜಿಕ ಬದಲಾವಣೆಯ ಅಸ್ತ್ರವಾಗಬೇಕೆಂದು ಪ್ರತಿಪಾದಿಸಿದನು. ಬದಲಾವಣೆ ತರುವದೇ ಅದರ ಅಂತಿಮ ಗುರಿಯಾಗಿರಬೇಕೆಂದು ವಾದ ಮಾಡಿದನು. ಸಾಹಿತ್ಯವು ಕೂಡ ಸಾಮಾಜಿಕತೆಯ ಭಾಗವಾಗಿರುದರಿಂದ ಅದರಲ್ಲಿರುವ ಶೋಷಣೆಯ ನೆಲೆಗಳಿಗೆ ಸ್ಪಂದಿಸುವದು ಅದರ ಮೂಲ ಆಶಯವಾಗಿರಬೇಕು.``ಅವರ ಪ್ರಕಾರ ಕಲೆಯ ಬೆಳವಣಿಗೆಯು ಆಕಸ್ಮಿಕವಲ್ಲ. ಕಲೆಯಾಗಲಿ ಸಾಹಿತ್ಯವಾಗಲಿ ಸಾಮಾಜಿಕ ಬೆಳವಣಿಗೆಯೊಂದಿಗೆ ಚಲನಶೀಲತೆಯನ್ನು ಪಡೆದುಕೊಂಡಿದೆ ಮತ್ತು ಅದು ಸಾಮಾಜಿಕ ಉದ್ದೇಶಕ್ಕೆ ತಕ್ಕಂತೆ ಪರಿವರ್ತನೆಯನ್ನು ಕಂಡಿದೆ. ಕಲೆಯಾಗಲಿ ಸಾಹಿತ್ಯವಾಗಲಿ ಅಂತಿಮವಾಗಿ ಸಮಾಜವಾದಿ ಆಶಯಕ್ಕೆ ತಕ್ಕಂತೆ ಇರಬೇಕಾಗುತ್ತದೆ. ಅದು ಅನಿವರ‍್ಯ. ಸೌಂದರ್ಯಶಾಸ್ತ್ರ ಮತ್ತು ವಾಸ್ತವತೆಯ ನಡುವೆ ದ್ವಂದ್ವಮಾನ ಭೌತಿಕವಾದಿ ಸಂಘರ್ಷವಿರುತ್ತದೆ. ಕಲೆಯಾಗಲಿ, ಸಾಹಿತ್ಯವಾಗಲೀ ಚರಿತ್ರೆಯೊಂದಗಿನ ಮುಖಾಮುಖಿಯಲ್ಲಿ ಬೆಳೆಯುತ್ತದೆ. ವರ್ಗಸಂಘರ್ಷ, ರಾಜಕಾರಣ, ನಿರ್ದಿಷ್ಟ ವರ್ಗದ ತಾತ್ವಿಕತೆಯು ಸಾಹಿತ್ಯ ಚಿಂತನೆಯ ಮೇಲೆ ಪ್ರಭಾವ ಬೀರುತ್ತದೆ.” 2. ಸಾಹಿತ್ಯ ನರ‍್ಮಾಣಕ್ಕೆ ಕಾರಣವಾಗುವ ಅಂಶಗಳು ಯಾವುವು ಎಂಬುದರ ಮೇಲೆ ಸಾಹಿತ್ಯ ರಚನೆಯು ನಿಂತಿರುತ್ತದೆ. ಸಮಾಜವನ್ನು ಚಾರಿತ್ರಿಕವಾಗಿ ಗ್ರಹಿಸುವುದರ ಮೂಲಕ ವಾಸ್ತವವನ್ನು ಸರಿಮಾಡಬೇಕಾದ ಹೊಣೆಗಾರಿಕೆ ಲೇಖಕನದಾಗಿರುತ್ತದೆ. ಬರಹಗಾರ ಸಮಾಜದ ಭಾಗವಾಗಿರುದರಿಂದ ಸದಾ ಸಮಾಜಕ್ಕೆ ಸ್ಪಂದಿಸಬೇಕಾಗುತ್ತದೆ. ಶೋಷಣಾರಹಿತ ಸಮಾಜವನ್ನು ನರ‍್ಮಿಸುದೇ ಸಾಹಿತ್ಯದ ಗುರಿಯು ಆಗಬೇಕಾಗುತ್ತದೆ ಎಂದು ಮಾರ್ಕ್ಸ್ ಹೇಳಿದನು.

``1. ತತ್ವಜ್ಞಾನದ ಗುರಿ ಜಗತ್ತಿನ ಮೂಲಸ್ವರೂಪವನ್ನು ವಿವರಿಸುವದಲ್ಲ. ಬದಲಾಗಿ ಜಗತ್ತನ್ನು ಪುನಾರಚಿಸುವುದು.

2. ಚರಿತ್ರೆಯನ್ನು ರೂಪಿಸುವ ಶಕ್ತಿಗಳು ಪ್ರಧಾನವಾಗಿ ಆರ್ಥಿಕ ಶಕ್ತಿಗಳು.

3. ಸಮಾಜ ಯಾವಾಗಲು ಮಾಲೀಕರು ಆಳುಗಳೆಂಬ ಎರಡು ವರ್ಗಗಳಾಗಿ ವಿಭಜನೆಯಾಗಿರುತ್ತದೆ. ಅವರುಗಳ ನಡುವೆ ಯಾವಾಗಲು ಘರ್ಷಣೆ ಸಾಗಿರುತ್ತದೆ.

4. ಕೂಲಿಗಳ ದುಡಿಮೆಯ ಫಲವಾದ ಹೆಚ್ಚಳ ಮೌಲ್ಯವನ್ನು ಮಾಲೀಕರು ಯವಾಗಲು ಕಬಳಿಸುತ್ತಾರೆ.

5. ಖಾಸಗಿ ಆಸ್ತಿಯ ರದ್ಧತಿ ಅಥವಾ ಉತ್ಪದನಾ ಸಾಧನಗಳ ರಾಷ್ಟ್ರೀಕರಣದಿಂದ ಮಾತ್ರ ಈ ಶೋಷಣೆ ನಿಲ್ಲುತ್ತದೆ.

6. ಈ ಬಡತನ ಕಾರ್ಮಿಕರಲ್ಲಿ ಕ್ರಾಂತಿಕಾರಿ ಚೈತನ್ಯತುಂಬಿ ವರ್ಗಗಳ ಘರ್ಷಣೆ ವರ್ಗಯುದ್ಧವಾಗಿ ಮಾರ್ಪಾಡಾಗುತ್ತದೆ.

7. ಕೂಲಿಕಾರರು ಮಾಲೀಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರು ಪ್ರಭುತ್ವವನ್ನು ವಶಪಡಿಸಿಕೊಂಡು ತಮ್ಮದೇ ಆದ ರಾಜ್ಯವನ್ನು ಸ್ಥಾಪಿಸುತ್ತಾರೆ.ಇದನ್ನೇ ಮಾರ್ಕ್ಸ್ ದುಡಿಮೆಗಾರರ ಸರ್ವಾಧಿಕಾರತ್ವ ಎಂದು ಕರೆಯುತ್ತಾನೆ.

8. ಈ ವಿದ್ಯಾಮಾನಗಳನ್ನು ಪಡೆಯಲಾಗುವದಿಲ್ಲ. ಹೀಗಾಗಿ ಸಮಾಜವಾದ ಅನಿವಾರ್ಯ.”

3. ಮಾರ್ಕ್ಸ್ನ ಈ ಚಿಂತನೆಗಳು ಸಾಹಿತ್ಯದ ಮೇಲೆ ಪ್ರಭಾವ ಬೀರಿದವು. ಸಾಹಿತ್ಯವನ್ನು ಅಭಿಜಾತ ನೆಲೆಯಲ್ಲಿ ನೋಡದೆ ಅದು ಸಾಮಾಜಿಕ ಸ್ವರೂಪದಲ್ಲಿ ಕಾಣಬೇಕೆಂಬ ನಿಲುವುಗಳು ಮುಂಚೂಣಿಗೆ ಬಂದವು. ಇದರಿಂದಾಗಿ ಸಾಹಿತ್ಯವನ್ನು ನೋಡುವ ದೃಷ್ಟಿಕೋನಗಳು ಕೂಡ ಬದಲಾದವು.

ಸಮಾಜವನ್ನು ವಾಸ್ತವವಾಗಿ ಕಟ್ಟಿಕೊಡಬೇಕೆಂಬ ಚಿಂತನೆ ಬೆಳೆಯಿತು. ಗ್ರಾಮಗಳು ಭೂಮಾಲಿಕ ವರ್ಗಗಳಿಂದ ಶೋಷಣೆಗೆ ಗುರಿಯಾಗುತ್ತಿದ್ದವು. ಜಾತೀಯಯೆ, ಅಸ್ಪೃಷ್ಯತೆಯಂತ ಸಮಸ್ಯೆಗಳು ಅಸಮಾನತೆಯನ್ನು ಸೃಷ್ಟಿಸಿದ್ದವು. ರೈತರು, ಕೂಲಿಕಾರರು, ಮಹಿಳೆಯರು, ಕಾರ್ಮಿಕರು, ಅರೆ ಕಾರ್ಮಿಕರು ಯಾವ ಭದ್ರತೆ ಇಲ್ಲದೆ ಜೀವನ ಸಾಗಿಸುತ್ತಿದ್ದರು. ಇಂತವರ ಜೀವನವನ್ನು ಕುರಿತು ಸಾಹಿತ್ಯ ರಚಿಸಬೇಕೆಂದು ಪ್ರಗತಿಶೀಲರು ಆಲೋಚಿಸಿದರು. ಈ ಸಂದರ್ಭದಲ್ಲಿ ಹೊಸ ಓದುಗ ವರ್ಗ ಸೃಷ್ಟಿಯಾಗುತಿತ್ತು. ಅವರಿಗೆ ಸಾಹಿತ್ಯ ಒದಗಿಸಬೇಕಿತ್ತು. ಅವರಿಗೆ ಕೇವಲ ಮನೋರಂಜನೆ ಮಾತ್ರ ಕೊಡದೆ ಚಿಂತನೆ ಮಾಡುವಂತ ವಾಸ್ತವವನ್ನು ದರ್ಶನ ಮಾಡಿಸಬೇಕೆಂಬ ನಿಲುವು ಸಾಹಿತ್ಯದ್ದಾಯಿತು.

ಪ್ರಗತಿಶೀಲರು ಸಾಹಿತ್ಯವನ್ನು ಸಾಮಾಜಿಕ ಸಂಸ್ಥೆ ಎಂದು ಪರಿಗಣಿಸಿ ಅದಕ್ಕೆ ಗಂಭೀರವಾದ ಜವಬ್ದಾರಿ ಇದೆ ಎಂದು ಬಾವಿಸಿದರು. ಪ್ರಗತಿಶಿಲರು ಸಾಹಿತ್ಯವನ್ನು ಕೂಲಿಕಾರರ, ಬಡವರ, ರೈತರ, ದಲಿತರ ಪರ ರಚಿಸಬೇಕೆಂದು ನಂಬಿದ್ದರು. ಅನ್ಯಾಯ, ಶೋಷಣೆ, ಜಮೀನ್ದಾರಿಕೆ, ರಾಜಕೀಯ ಬ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ಪರಿವರ್ತನೆ ಸಾಹಿತ್ಯದ ಮುಖ್ಯ ಗುರಿಯಾಗಬೇಕೆಂದರು. ಇದಕ್ಕೆ ಪ್ರೇರಣೆಯಾದವರು ರಷ್ಯದ ಸಾಹಿತಿಗಳು. ರಷ್ಯದ ಸಾಹಿತಿಗಳು ಮಾರ್ಕ್ಸವಾದನ್ನು ಅನುಸರಿಸುತ್ತಿದ್ದರು. ಅವರಂತೆ ಪ್ರಗತಿಶೀಲರು ಕೂಡ ಮಾರ್ಕ್ಸನ ಸಿದ್ಧಾಂತವನ್ನು ತಾತ್ವಿಕ ಪ್ರಣಾಳಿಕೆಯನ್ನಾಗಿ ಮಾಡಿಕೊಂಡರು. ವರ್ಗ ಹೋರಾಟವೇ ಅವರಿಗೆ ಮುಖ್ಯವಾಯಿತು. ದುಡಿಯುವ ವರ್ಗ ಒಗ್ಗೂಡಿ ಬಂಡವಾಳಿಶಾಹಿ ವರ್ಗವನ್ನು ಸದೆಬಡಿದು, ರಾಜಕೀಯ ಅಸ್ತಿತ್ವವನ್ನು ಪಡೆಯಬೇಕೆಂಬ ನಿಲುವನ್ನು ತಮ್ಮ ಸಾಹಿತ್ಯದಲ್ಲಿ ತಂದರು. ಬಂಡವಾಳಶಾಹಿಗೆ ಪೋಷಕರಾದ ಜಮೀನುದಾರರನ್ನು ಕಟುವಾಗಿ ಅಲ್ಲಗಳೆದರು. ಜಮೀನ್ದಾರರ, ಬಂಡವಾಳಶಾಹಿಗಳ, ಶ್ರೀಮಂತರ ಶೋಷಣಾ ಸ್ವರೂಪವನ್ನು ವಿಶ್ಲೇಷಿಸಿದರು. ಸಾಹಿತ್ಯ ರಚನೆ-ಹೋರಾಟ-ಸಂಘಟನೆ-ಬದಲಾವಣೆ-ಕ್ರಾಂತಿಯನ್ನು ಒಂದಕ್ಕೊಂದು ಪೂರಕ ಎಂದು ತಿಳಿದರು. ಲೇಖಕ ಸಾಮಾಜಿಕ ಜವಾಬ್ದಾರಿಯನ್ನು ಅರಿಯಬೇಕು. ಆ ಜವಬ್ದಾರಿಯ ಭಾಗವಾಗಿ ಸಾಹಿತ್ಯ ಮೂಡಿಬರಬೇಕೆಂದು ಭಾವಿಸಿದರು. ದುಡಿಯುವ ವರ್ಗದಲ್ಲಿ ರಾಜಕೀಯ ಅಧಿಕಾರ ನೆಲೆಗೊಳ್ಳಬೆಕು. ಇಂತಹ ರಾಜಕೀಯದ ಜೊತೆಗೆ ಸಾಹಿತಿ ಕಲಾವಿದರಿರಬೇಕೆಂದು ಪ್ರಗತಿಶಿಲರ ಆಶಯವಾಗಿತ್ತು.

ಪ್ರಗತಿಶೀಲತೆ ಮೊಳಕೆಯೊಡದದನ್ನು ಸಜ್ಜದ್ ಜಾಹೀರ್ ಹೀಗೆ ವಿವರಿಸುತ್ತಾರೆ. ``1931 ಒಂದು ವಿಶಿಷ್ಟ ವರ್ಷ. ಆಗ ನಾನು ಇಂಗ್ಲೆಂಡ್ ನಲ್ಲಿ ನನ್ನ ವಿದ್ಯಾರ್ಥಿ ಜೀವನದ ಕೊನೆಯ ದಿನಗಳನ್ನು ಕಳೆಯುತಿದ್ದೆ. ಜಗತ್ತನ್ನೇ ನುಂಗ ಹೊರಟ ಆರ್ಥಿಕ ಬಿಕ್ಕಟ್ಟಿನ ರಾಜಕೀಯ ಪರಿಣಾಮದ ವಿರಾಟರೂಪ ಕಾಣಿಸಿಕೊಂಡಿತು. ಎಲ್ಲ ಕಡೆಯೂ ಫ್ಯಾಸಿಸ್ಟ್ ದಬ್ಬಾಳಿಕೆಯ ದುಃಖಪೂರ್ಣ ಕಥೆಗಳೇ ಕೇಳಿ ಬರುತ್ತಿದ್ದವು. ಅಂಥ ಶಕ್ತಿಗೆದುರಾಗಿ ಜನತೆ ಪ್ರತಿಭಟಿಸುವುದನ್ನು ನಾವು ಕಂಡೆವು. ಬುದ್ಧಿಜೀವಿಗಳಲ್ಲು ವಿಚಾರ ಕ್ರಾಂತಿಯಾಯಿತು. ನಮ್ಮ ಕಣ್ಣೆದುರು ನಡೆಯುತ್ತಿದ್ದ ಘಟನೆಗಳು, ನಾವು ಓದುತ್ತಿರುವ ಪುಸ್ತಕಗಳು, ನಡೆಸುತ್ತಿದ್ದ ಚರ್ಚೆಗಳು ನಮ್ಮನ್ನು ಹೊಸಬರನ್ನಾಗಿ ಮಾಡಿದವು. ನಾವು ಮೆಲ್ಲ ಮೆಲ್ಲನೆ ಸಮಾಜವಾದ ಸಿದ್ಧಾಂತದತ್ತ ಸಾಗಿದೆವು.” 4 ಇವರು ಪ್ರಗತಿಶೀಲ ಸಾಹಿತ್ಯದ ಮೊಳಕೆಯೊಡೆಯಲು ಕಾರಣರಾದರು. ಅದರ ಪ್ರಣಾಲಿಯಂತೆ ಸಾಹಿತ್ಯ ರಚಿಸುವ ಪಣ ತೊಟ್ಟರು. ತಮ್ಮ ಜೊತೆಗಾರರನ್ನು ಬರೆಯುವಂತೆ ಪ್ರೇರೇಪಿಸಿದರು.

ಕೈಗಾರಿಕಾ ಕ್ರಾಂತಿಯಿಂದ ಬಂಡವಾಳಶಾಹಿ ವ್ಯವಸ್ಥೆ ಬೆಳೆಯುತಿತ್ತು. ದುಡಿವ ವರ್ಗವನ್ನು ಕಡಿಮೆ ಕೂಲಿಗೆ ದುಡಿಸಿಕೊಂಡು ಹೆಚ್ಚು ಲಾಭ ಪಡೆಯುತಿತ್ತು. ದುಡಿಯುವ ವರ್ಗಕ್ಕೆ ಶಿಕ್ಷಣ, ಆರೋಗ್ಯ, ವಸತಿ, ಸ್ವಾತಂತ್ಯ್ರದಂತ ಕನಿಷ್ಟ ಸೌಲಭ್ಯವನ್ನು ನೀಡಿರಲಿಲ್ಲ. ಕೇವಲ ದುಡಿಯುವ ಯಂತ್ರದಂತೆ ಭಾವಿಸಿದರು. ಕಾರ್ಮಿಕರ ದುಡಿಮೆ ಹೆಚ್ಚಾದಂತೆ ಮಾಲೀಕಕರ ಬಂಡವಾಳ ವೃದ್ಧಿಯಗುತ್ತಾ ಹೋಯಿತು. ಹಣವಂತರು ವ್ಯವಸ್ಥೆಯ ಮೇಲೆ ಸಂಪೂರ್ಣ ಹತೋಟಿ ಸಾಧಿಸುತ್ತಾ ಹೋದರು. ಅದು ಕೇವಲ ಆಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಹಣವಂತ ದೇಶಗಳು ಬಡ ದೇಶಗಳ ಸವಾರಿ ಮಾಡುತ್ತಿದ್ದವು. ಬಲಾಢ್ಯ ದೇಶಗಳು ಬಡ ದೇಶಗಳ ಮೇಲೆ ವಸಾಹತುವನ್ನು ಸ್ಥಾಪಿಸಿ ಸುಲಿಯುತ್ತಿದ್ದವು. ಶ್ರೀಮಂತ-ಬಡವ, ಮಾಲೀಕ-ಕಾರ್ಮಿಕ ಎಂಬ ಭೇದದ ಅಂತರ ಬೆಳೆಯುತ್ತಲೆ ಹೋಯಿತು. ದುಡಿಯುವ ವರ್ಗಕ್ಕೆ ಯಾವುದೇ ಭದ್ರತೆ ಮತ್ತು ಅಸ್ತಿತ್ವ ಇಲ್ಲದಂತಾಯಿತು. ಅನಿವಾರ್ಯವಾಗಿ ದುಡಿವ ವರ್ಗ ತಮ್ಮ ಬದುಕಿಗೆ ಹೋರಾಡಲೇಬೇಕಾಯಿತು. ಸಾಹಿತ್ಯ ರಚಿಸುವವರು ಸಂಘಟನೆ ಮಾಡಿಕೊಂಡರು. ಸಂಘಟನೆಯಿಂದ ಸಾಹಿತ್ಯ ರಚಿಸುವದರ ಜೊತೆಗೆ ಹೋರಾಟ ಮಾಡುವುದು ಅವರ ಉದ್ದೇಶವಾಯಿತು. ಬರೆಯುದರ ಜೊತೆಗೆ ಶೋಷಿತರ ಪರವಾಗಿ ಬೀದಿಗಿಳಿದು ಚಳುವಳಿ ಮಾಡುವುದು ಬಹು ಮುಖ್ಯ ಎಂದು ಭಾವಿಸಿದರು.

ಅದರಂತೆ ಪ್ರಗತಿಶೀಲ ಲೇಖಕರು ನಡೆದುಕೊಂಡರು. ಸಾಹಿತ್ಯವು ಅವರ ಬರವಣಿಗೆಗೆ ಒತ್ತಾಸೆಯಾಗಿತ್ತು. ಲೇಖಕರು ದುಡಿವವರ್ಗದ ಅಂಗವಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಬೀದಿಗಿಳಿಯುವ ವಿಚಾರ ಮಾಡಿದರು. ಇಂತಹ ಪರಸ್ಥಿತಿ ಆ ಸಂದರ್ಭದಲ್ಲಿ ನಿರ್ಮಾಣವಾಗುತಿತ್ತು. ಎರಡನೆಯ ಪ್ರಪಂಚ ಮಹಾಯುದ್ಧ ನಡೆದು ಜಗತ್ತಿನ ಪರಸ್ಥಿತಿ ತಂಬಾ ಅಧೋಗತಿಗೆ ಇಳಿದಿತ್ತು. ಆರ್ಥಿಕ ಬಿಕ್ಕಟ್ಟು ಸಂಭವಿಸಿತ್ತು. ಎಲ್ಲಲ್ಲೂ ನಿರುದ್ಯೋಗ ತಾಂಡವಾಡುತಿತ್ತು. ಇಂತಹ ದಯಾನೀಯ ಪರಿಸ್ಥಿತಿಯನ್ನು ದುರುಪಯೊಗ ಪಡಿಸಿಕೊಂಡ ಶ್ರೀಮಂತ ವರ್ಗ ಬಡವರನ್ನು ತಮ್ಮ ಸ್ವಾರ್ಥಕ್ಕೆ ಬಳಿಸಿಕೊಂಡಿತು. ಬಡವರನ್ನು ಮುನ್ನೆಡೆಸುವವರು ಯಾರು ಇದ್ದಿಲ್ಲ. ಆ ಕಾರ್ಯವನ್ನು ಸಾಹಿತಿಗಳು ಮಾಡಬೇಕೆಂದು ಅವರ ಉದ್ದಾರದಲ್ಲಿ ತೊಡಗಿದರು. ಸಾಹಿತಿಯದವನು ಬರವಣಿಗೆಯಲ್ಲಿ ತೊಡಗಿಕೊಂಡರೆ ಸಾಲದು. ಬಡವರಿಗೆ ಸಹಾಯ ಮಾಡಿ ಅವರಿಗೆ ತಿಳುವಳಿಕೆ ನೀಡುವ ಕಾರ್ಯವನ್ನು ಮಾಡಬೇಕೆಂದು ಎಲ್ಲಾ ಬರಹಗಾರರ ಮೇಲೆ ಒತ್ತಡ ಹಾಕಿದರು. ಬರವಣಿಗೆಯಲ್ಲು ಬಡವರ ಬವಣೆಗಳನ್ನು ಬಿಂಬಿಸಬೇಕೆಂದು ತಿಳಿಸಿದರು. ಹೀಗಾಗಿ ಪ್ರಗತಿಶೀಲರ ಸಾಹಿತ್ಯದಲ್ಲಿ ಹೆಚ್ಚಾಗಿ ಬಡವರ ಕಷ್ಟಗಳ ಸಂಗತಿಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

1936 ರಲ್ಲಿ ಪ್ರಗತಿಶೀಲ ಸಂಘಟನೆ ಸಭೆ ಸೇರಿತು. ಈ ಸಭೆ ಭಾರತೀಯ ಸಾಹಿತ್ಯ ವಲಯದಲ್ಲಿ ಹೊಸ ಗಾಳಿ ಬೀಸಲು ಕಾರಣವಾಯಿತು. ಸಭೆಯ ಅಧ್ಯಕ್ಷತೆಯನ್ನು ವಾಸ್ತವವಾದಿ ಲೇಖಕರಾದ ಪ್ರೇಮಚಂದರ್ ವಹಿಸಿದ್ದರು. ಅಧ್ಯಕ್ಷೀಯ ಭಾಷಣವೇ ಪ್ರಗತಿಶೀಲರ ಪ್ರಣಾಳಿಕೆಯಾಯಿತು. ``ಇಲ್ಲಿಯತನಕವೂ ತನ್ನ ಪ್ರತಿಗಮಿಗಾಮಿ ಶಕ್ತಿಯಲ್ಲಿ ಬಂಧಿಸಿಕೊಂಡ ಅದರ ಸತ್ಯ ಮತ್ತು ಪ್ರಗತಿ ಸಂರಚನೆಯನ್ನೇ ನಾಶಗೊಳಿಸಿದ ಪ್ರತಿಗಾಮಿವರ್ಗದ ಕಡೆಯಿಂದ ಸಾಹಿತ್ಯವನ್ನು ಮತ್ತಿತರ ಕಲೆಯನ್ನು ಸೆರೆಬಿಡಿಸಬೇಕಾದುದೇ ಹಾಗೆ. ಅದು ಸತ್ಯವನ್ನು ಜನರ ಹೃದಯದ ಹತ್ತಿರ ತಂದು ಬದುಕಿನ ಉಜ್ವಲವಾದ ವಾಸ್ತವತೆಯನ್ನು ಚಿತ್ರಿಸುವಂತೆಯು ಭವಿಷ್ಯತ್ತನ್ನೂ ರೂಪಿಸುವ ಜವಾಬ್ದಾರಿಯನ್ನು ಹೊರುವಂತೆಯು ಮಾಡಬೇಕಾಗಿದೆ. ಆದ್ದರಿಂದ ಇಂದಿನ ಭಾರತೀಯ ಸಾಹಿತ್ಯ ಜನರ ಮೂಲಭೂತ ಸಮಸ್ಯೆಗಳನ್ನು ಹೊಂದಿರಬೇಕಾಗಿದೆ. ಜನರ ಹಸಿವು, ಬಡತನ, ಹಿಂದುಳಿದಿರುವಿಕೆ ಮತ್ತು ರಾಜಕೀಯ ಕಟು ಪರಸ್ಥಿತಿಯ ಕುರಿತು ಗಂಭೀರ ಕಾಳಜಿ ಹೊಂದಿರಬೇಕೆಂದು ನಾವು ನಂಬುತ್ತೇವೆ. ಯಾವುದು ನಮ್ಮನ್ನು ನಿರಾಶವಾದಿ , ನಿಷ್ಕ್ರೀಯ ಮತ್ತು ವಿಚಾರ ಶೂನ್ಯತೆಯೆಡೆಗೆ ಒಯ್ಯುತ್ತದೆಯೋ ಅದೇ ಪ್ರತಿಗಾಮಿ ನಿಲುವು. ಅದನ್ನು ನಾವು ವೈಚಾರಿಕತೆಯಿಂದ ತಿರಸ್ಕರಿಸುತ್ತೇವೆ. ಯಾವುದು ನಮ್ಮ ವಿಮರ್ಶಕ ಬುದ್ಧಿಯನ್ನು ಹೊಡೆದೆಬ್ಬಿಸುತ್ತದೋ ಆ ಮೂಲಕ ನಮ್ಮ ಸಂಸ್ಥೆ, ಮಾಧ್ಯಮ, ಕಂದಾಚಾರ, ನಡೆ-ನುಡಿಗಳನ್ನು ಪರೀಕ್ಷಸಲು ಹಚ್ಚುತ್ತದೋ ಅದರಿಂದಾಗಿ ಅಥವಾ ಆ ಮುಖಾಂತರವಾಗಿ ಒಂದು ಸಂಘಟನೆಯ ಅಡಿಯಲ್ಲಿ ಒಂದು ಹೊಸಕಾಲ ಪರಿವರ್ತನೆಗೆ ಅನುವು ಮಾಡುತ್ತಾ ಮುಂದುವರಿವುದೋ ಆ ಸಿದ್ದಿಯನ್ನು ಪ್ರಗತಿಶೀಲತೆಯೆಂದು ಗ್ರಹಿಸುತ್ತೇವೆ ಮತ್ತು ಸ್ವೀಕರಿಸುತ್ತೇವೆ ಎಂಬುದಾಗಿದೆ.”5

ಸಾಹಿತ್ಯವು ಸಾಮಾಜಿಕ ಅಸಮಾನತೆ ಅನ್ಯಾಯ, ಭ್ರಷ್ಟತೆ, ಅಧಿಕಾದ ದುಷ್ಟತನ, ಚಾರಿತ್ರಿಕ ಶೋಷಣೆಯ ವಿರುದ್ಧವಿರಬೇಕೆಂಬ ನಿಲುವು ಪ್ರಗತಿಶೀಲರದಾಯಿತು. ಮಾರ್ಕ್ಸನ ಕ್ರಾಂತಿಯ ಪರಿಕಲ್ಪನೆ ಪ್ರಗತಿಶೀಲರಿಗೆ ಮಾದರಿಯಾಯಿತು. ಬಂಡವಾಳಶಾಹಿಯು ಬೆಳೆಯುತ್ತಾ ಹೋದಂತೆ, ದುಡಿಯುವ ವರ್ಗದ ಸಂಘಟನೆ ಗಟ್ಟಿಗೊಂಡು ವಿವೇಕ ಪಡಿದುಕೊಂಡು ಬಂಡವಾಳಶಾಹಿಯ ವಿರುದ್ಧ ಹೋರಾಡುತ್ತಾರೆ. ಆಗ ಕ್ರಾಂತಿ ಸಂಭವಿಸಿ ದುಡಿಯುವ ವರ್ಗದ ಜನರಿಗೆ ಅಧಿಕಾರ ಪ್ರಾಪ್ತವಾಗುತ್ತದೆ. ಸಮಾನತೆಯ ಸಮಾಜ ನಿರ‍್ಮಾಣವಾಗುತ್ತದೆ ಎಂಬ ಆಶಯವನ್ನು ಸಾಹಿತ್ಯದಲ್ಲಿ ತರಲು ಪ್ರಯತ್ನಿಸಿದರು. ಮಾರ್ಕ್ಸವಾದಕ್ಕೂ ಅಂಟಿಕೊಳ್ಳದೆ ಪ್ರಗತಿಪರವಾದುದನ್ನು ಪ್ರಗತಿಶೀಲರು ಒಪ್ಪಿಕೊಂಡರು.``ಮಾರ್ಕ್ಸ್ ವಾದವು ಒಂದು ತತ್ವಜ್ಞಾನ ಸಮಗ್ರ ಜೀವನವನ್ನು ನೋಡುವ ದೃಷ್ಟಿಕೋನ. ಬುದ್ಧಿಜೀವಿಗಳು ಆ ತತ್ವಜ್ಞಾನದಿಂದ ಪ್ರಭಾವಿತರಾಗಬಹುದು. ಆಗದೆ ಇರಬಹುದು. ಅದು ಅವರಿಗೆ ಸಂಬಂಧ ಪಟ್ಟ ವಿಷಯ.ಆದರೆ ಮಾಕ್ಸ್ವಾದಿಗಳು ಮಾತ್ರವೇ ಪ್ರಗತಿಶೀಲರು ಎನ್ನುವುದು ತಪ್ಪು. ವೈಜ್ಞಾನಿಕ ದೃಷ್ಟಿಕೋನವುಳ್ಳವರು, ಆದರ್ಶವಾದಿಗಳು ತಮ್ಮ ಮಾನವೀಯ ಭಾವನೆಗಳಿಂದ ಸತ್ಯ, ನಿಷ್ಟೆಯಿಂದ ಪ್ರಗತಿಶೀಲವಾದ ಸಾಹಿತ್ಯವನ್ನು ರಚಿಸುತ್ತಾರೆ”6

ಪ್ರಗತಿಶೀಲರು 1946ರಲ್ಲಿ ನಡೆದ ಧಾರವಾಡದ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಸಾಹಿತ್ಯಿಕ ನಿಲುವುಗಳನ್ನು ಸ್ಪಷ್ಟಪಡಿಸಿದರು.``ಸಾಹಿತ್ಯವೆಂಬ ಮಡಿಕೋಟೆಯನ್ನು ಕಟ್ಟಿಕೊಂಡು ಸುತ್ತಮುತ್ತಲಿನ ಜಗತ್ತಿನ ಹಾಹಾಕಾರದ ಮೇಲೆ ಅವಕುಂಠನ ಹಾಕಿ ತನ್ನ ಭಾವ ಪ್ರಪಂಚದಲ್ಲಿ ಮೈಮರೆಯುವ ಸಾಹಿತಿ ತನ್ನ ಅಥವಾ ದೇಶದ ಹಿತವನ್ನು ಸಾಧಿಸಲಾರ. ಇವರು ಮಧ್ಯಮ ವರ್ಗದ ಆಸೆ, ಕೋಪ, ತಾಪ, ತೃಪ್ತಿಗಳನ್ನಷ್ಟೇ ಸೃಷ್ಟಿಸುತ್ತಾರೆ. ವರ್ಗವೈಷಮ್ಯವನ್ನು ಅವರು ಕೆರಳಿಸುವದಿಲ್ಲ. ಆದ್ದರಿಂದ ಇಂದಿನ ಸಾಹಿತ್ಯ ಬದಲಾಗಬೇಕಿದೆ. ಒಂದು ವರ್ಗಕ್ಕೆ ಅನ್ಯಾವಗುತ್ತಿದ್ದರೆ ಸಾಹಿತಿ ಸುಮ್ಮನೆ ಕೂಡಬಾರದು. ತಕ್ಷಣ ಅದಕ್ಕೆ ಸ್ಪಂದಿಸಬೇಕು. ಅನ್ಯಾಯ, ಕ್ರೌರ್ಯ, ದಬ್ಬಾಳಿಕೆ, ಶೋಷಣೆ ಯಾರಲ್ಲಿ ಕಂಡುಬಂದರು ಸಾಹಿತಿ ಸಿಡಿದೇಳಬೇಕು. ಎಲ್ಲಾ ಸಾಹಿತ್ಯ ಕಲೆಗಳ ಉಗಮಕ್ಕೆ ಸಾಮನ್ಯ ಜನತೆಯೆ ಮೂಲ. ಉತ್ತಮ ಕಲೆಯ ತಾಯಿಬೇರು ಸಾಮನ್ಯ ಜನತೆಯಲ್ಲಿಯೇ ಅಡಗಿದೆ. ನವೋದಯದವರು ಜನಪದವನ್ನು ಕಡೆಗಣಿಸಲಿಲ್ಲ. ಅವರೊಂದಿಗೆ ಪೂರ್ಣ ಬೆರೆಯಲಿಲ್ಲ. ಅವರು ನಿರ್ವಿಣ್ಣರಾಗಿ ಸುಮ್ಮನೆ ಕುಳಿತರು. ಪರಂಪರಾಗತ ಮೌಢ್ಯವನ್ನು ಖಂಢಿಸಬೇಕು. ದುರ್ಬಲತೆಯಿಂದ ಶಾಂತಿ ಲಭಿಸುವದಿಲ್ಲ. ನ್ಯಾಯ ದೊರಕುವದಿಲ್ಲ. ಕ್ರಾಂತಿಯಿಂದ ಶಾಂತಿ ಸಾಧ್ಯವಾಗುತ್ತದೆ. ಈಗ ಜಗತ್ತಿನಲ್ಲಿ ಪ್ರಜಾಸಾಮ್ಯ, ಬಂಡವಾಳಸಾಮ್ಯ ಎಂಬ ಎರಡು ಪಕ್ಷಗಳು ಉದಯಿಸುತ್ತಿವೆ. ಇವೇ ಎರಡು ಜಾತಿಗಳು. ಇವುಗಳಲ್ಲಿ ಸಾಹಿತಿ ಯಾವುದರೊಂದಿಗೆ ಗುರಿತಿಸಿಕೊಳ್ಳುತ್ತಾನೆ ಎಂಬುದು ಮುಖ್ಯ. ಸಾಹಿತ್ಯ ವಿಲಾಸದ ಸಾಧನವಲ್ಲ. ದೇಶೋದ್ಧಾರಕ್ಕೆ, ಆತ್ಮೋದ್ಧಾರಕ್ಕೆ ಸಾಧನವಾಗಿರುವ ಗಾಯಿತ್ರಿಯಿದು. ಸಾಹಿತ್ಯ ದುರ್ಬಲರ, ದಲಿತರ, ಬಡವರ ರಕ್ಷಾಕವಚವಾಗಬೇಕು.”7

ಪ್ರಗತಿಶೀಲರ ಒಟ್ಟು ನೋಟವನ್ನು ಗಮನಿಸಿದಾಗ ಅನೇಕ ಮಿತಿಗಳು ಕಂಡುಬರುತ್ತವೆ. ಅದು ಮುಖ್ಯವಾಗಿ ಬರಹಕ್ಕಿರುವ ಸಾಹಿತ್ಯಕ ಮೌಲ್ಯವನ್ನು ಕುರಿತು. ಬರಹ ವರದಿಯ ಮಾದರಿಯನ್ನು ಪಡೆಯದೆ ಅದು ಕಲೆಯ ರೂಪವನ್ನು ಹೊಂದಿರಬೇಕು ಎಂಬುದು ಮುಖ್ಯವಾದ ಅಭಿಪ್ರಾಯ. ಕಲೆಗಿಂತ ಬದುಕು ಮುಖ್ಯ ಅದನ್ನು ಬಿಂಬಿಸುವುದು ಜನರಿಗೆ ತಲುಪಿಸುವುದು ಆ ಮೂಲಕ ಜನರಲ್ಲಿ ಪ್ರಜ್ಞೆಯನ್ನು ಮೂಡಿಸುವುದು ಮುಖ್ಯ ಎಂದು ವಾದಿಸುವವರು ಉಂಟು. ಈ ಚರ್ಚೆ ನಡೆಯುತ್ತಲೇ ಇದೆ. ಈ ಅಂಶವನ್ನು ಕೇಂದ್ರವಾಗಿಟ್ಟುಕೊಂಡು ಪ್ರಗತಿಶೀಲ ಸಾಹಿತ್ಯವನ್ನು ವಿಮರ್ಶೆ ಮಾಡುವ ಮನೋಭಾವಗಳು ಕನ್ನಡದಲ್ಲಿ ನಡೆದಿವೆ.

ಈ ಹಿನ್ನಲೆಯಲ್ಲಿ ಧನಿಯರ ಸತ್ಯನಾರಾಯಣ ಕಥೆಯನ್ನು ನೋಡಬೇಕು. ಈ ಕಥೆ ಕಲಾತ್ಮಕತೆ ಮತ್ತು ಪ್ರಗತಿಶೀಲ ಆಶಯವನ್ನು ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ. ವರ್ಗ ಸಮಾಜದ ಸ್ವರೂಪವನ್ನು ಅದರ ಶೋಷಣೆಯ ಕ್ರಮವನ್ನು, ದುಡಿಯುವವರ ಅಸಾಯಕತೆಯನ್ನು ಸೂಕ್ಷ್ಮವಾಗಿ ಕಥೆ ಕಡೆದಿಡುತ್ತದೆ. ಕಥೆ ತುಂಬಾ ಸರಳವಾಗಿದ್ರೂ ಭಾವತೀರ್ವತೆಯಿಂದ ಮನ ಕಲುಕುತ್ತದೆ. ಮೇಲ್ನೋಟಕ್ಕೆ ತುಂಬಾ ಸರಳವಾಗಿ ಕಂಡರೂ ಸಂದ್ರತೆಯಿಂದ ಮನ ತಟ್ಟುತ್ತದೆ. ಮಾನವೀಯ ಸಂವೇದನೆಯನ್ನು ಸ್ಪರ್ಷಿಸುತ್ತದೆ. ಇದನ್ನು ಗಿರಡ್ಡಿ ಗೋವಿಂದರಾಜು ಅವರು ಸರಿಯಾಗಿಯೇ ಗುರಿತಿಸಿದ್ದಾರೆ. `ನಿರೀಕ್ಷೆ ಮತ್ತು ವಾಸ್ತವಗಳ ನಡುವಿನ ಅಂತರ ತನ್ನ ಉತ್ಕಟತೆಯಿಂದಾಗಿ ಅತ್ಯಂತ ಪರಿಣಾಮಕಾರಿಯಾಗಿದೆ. ತಾವು ದುಡಿದು ಬೆಳೆದೆದ್ದೆಲ್ಲಾ ತಮಗೇ ಎಂದು ನ್ಯಾಯವಾಗಿಯೇ ಭಾವಿಸುವ ಮುಗ್ಧ ಉತ್ಸಾಹದ ದೃಷ್ಟಿಕೋನ ಒಂದು ಕಡೆ, ಈ ಜಗತ್ತಿನ ನ್ಯಾವೇನೆಂದು ಬಲ್ಲ ಅವರ ತಂದೆ ತಾಯಿಗಳ ಅಸಹಾಕತೆಯಿನ್ನೊಂದು ಕಡೆ, ತನ್ನ ನೆಲದಲ್ಲಿ ಬೆಳದೆದ್ದೆಲ್ಲ ತನ್ನದೇ ಎಂದು ಭಾವಿಸುವ ಧನಿಯ ದೃಷ್ಟಿ ಮತ್ತೊಂದು ಕಡೆ. ಈ ಮೂರು ದೃಷ್ಟಿಕೋನಗಳು ತಮ್ಮ ತಮ್ಮ ರೀತಿಯಲ್ಲಿ ಪ್ರಮಾಣಿಕವಾಗಿಯೇ ಇವೆ. ಅಂತೆಯೇ ಅವುಗಳ ಘರ್ಷಣೆ, ಅದರಿಂದ ಹುಟ್ಟುವ ದುಃಖ ರೋಷಗಳು ನೈಜವಾಗಿವೆ.’

ಬೂದ ಮತ್ತು ತುಕ್ರಿ ಎಂಬ ಇಬ್ಬರು ಮಕ್ಕಳ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ಇವರ ಅಪ್ಪ ತೌಡ ಕಡು ಬಡವ. ಕೋಟೆಮನೆ ನಾಗಪ್ಪಯ್ಯನ ನಾಲಾಕಾರು ಚೋಕು ತೆಂಗಿನಪಾಳು ತೋಟದ ಗುಡಿಸಿಲಲ್ಲಿ ಅವನ ವಾಸ. ಅದಕ್ಕೂ ಆರು ರೂಪಾಯಿ ಗೇಣಿಕೊಟ್ಟು ಚಾವಣಿ ಮಾಡಿಕೊಳ್ಳಬೇಕಾಗಿತ್ತು. ಅವನ ಬಡತನದ ತೀವ್ರತೆ ಎಷ್ಟಿತ್ತೆಂದರೆ `ಊರ ಜಾತ್ರೆಯಲ್ಲಿ ಅಂಗಡಿಯೆದರು ತೂಗಿಸಿದ್ದ ಬಾಳೆಯ ಗೊನೆಗಳನುಳೀ ಮಕ್ಕಳು ಕಂಡಿದ್ದರಲ್ಲದೆ ತಿಂದು ನೋಡಿದವರಲ್ಲ. ಜಾತ್ರೆಗೆ ಹೋದಲ್ಲಿ ಒಂದರೆಡು ಮಂಡಕ್ಕಿಯುಂಡೆ ಚಕ್ಕುಲಿಗಳಿಗಿಂತ ಹೆಚ್ಚಿನದೇನನ್ನು ಕೊಂಡುಕೊಳ್ಳಲಾರದಷ್ಟೂ ಆ ಮಕ್ಕಳ ತಣದೆ ತೌಡನಿಗೆ. ಹಾಗಾಗಿ ಅಜ್ಜಿ ಮನೆಗೆ ಹೋದಾಗ ತಿಂದ ಬಾಳೆಯ ಹಣ್ಣು ಆ ಮಕ್ಕಳಿಗೆ `ಅಮೃತಪ್ರಾಶನದಂತಾಯಿತು.’ ತಾವು ಅಲ್ಲಿಂದ ಒಂದು ಕಂದನ್ನು ಕೊಂಡುಹೋಗಿ ತಮ್ಮ ಮನೆಯೆದರು ಮೋರೆ ತೊಳೆವಲ್ಲಿ ನೆಟ್ಟರಾಗದೆ ಎಂದು ಅವರು ಹಂಬಲಿಸುತ್ತಾರೆ. ಮಕ್ಕಳ ಈ ಸಹಜ ಹಂಬಲದಲ್ಲಿ ಲೋಭವಿಲ್ಲ, ದುರಾಶೆಯಿಲ್ಲ. ಹೇಗಾದರೂ ಇನ್ನಷ್ಟೂ ಹಣ್ಣುಗಳನ್ನು ತಿಂದುಬಿಡಬೇಕೆಂಬ ಚಪಲವಿಲ್ಲ. ಗಿಡವನ್ನು ನೆಟ್ಟು ಬೆಳಸಿ ತದನಂತರ ಅದರ ಫಲವುಣ್ಣಬೇಕೆಂಬ ಅವರ ಆಸೆಯಲ್ಲಿ ದೈಹಿಕ ಶ್ರಮದ ಇಂಗಿತ ಅಂತರ್ಗತವಾಗಿದೆ. ಅಂದರೆ ತಿನ್ನುವ, ಅನುಭವಿಸುವ ಹಕ್ಕು ಬರುವುದು ದುಡಿಮೆಯ ಮೂಲಕ. ಆದರೆ ಲೋಕ ನೋಡುವುದು ಅವರ ದುಡಿಯುವದು ಅವರ ಕರ್ಮ. ದುಡಿಯಲಿಕ್ಕಾಗಿಯೇ ದೇವರು ಅವರನ್ನು ಹುಟಿಸಿದ್ದಾರೆ. ದುಡಿಯಬೇಕು ಯಾವ ಫಲಾಪೇಕ್ಷೆಯನ್ನು ನಿರೀಕ್ಷಿಸಬಾರದು. ಈ ಲೋಕನೀತಿಯಂತೆ ಇವರು ಬದುಕುತ್ತಿದ್ದಾರೆ. ಆದರೆ ಮಕ್ಕಳಿಗೆ ಈ ನೀತಿ ಗೊತ್ತಿಲ್ಲ. ತಾವು ದುಡಿದು ಬೆಳೆಸಿದ್ದು ತಮಗೆ ದಕ್ಕಬೇಕೆಂಬ ಸಹಜ ಚಿಂತನೆ ಅವರದು. ಈ ಸಹಜ ಚಿಂತನೆಯನ್ನು, ಮುಗ್ಧತೆಯನ್ನು ಕ್ರೂರವಾಗಿ ಉಳ್ಳವರ ಮನಸ್ಥಿತಿ ಹೊಸಕಿ ಹಾಕುತ್ತದೆ. ಇದು ಕೇವಲ ತುಕ್ರಿ ಬೂದರ ಮುಗ್ಧತೆಯನ್ನು ತುಳಿಯುವದಲ್ಲ. ದುಡಿವ ಎಲ್ಲಾ ವರ್ಗಗಳ ತುಳಿಯುವಿಕೆಯೂ ಆಗಿದೆ. ಅದು ಸಹಜ ಪ್ರಕ್ರಿಯೆ ಎಂಬಂತೆ ತೌಡನಂತಹ ಸಮುದಾಯ ನಂಬಿ ಬಂದಿದೆ. ಇದರಿಂದ ಯಾವುದೇ ಪ್ರತಿರೋಧ ಅವರು ತೋರುವದಿಲ್ಲ. ಅಸಹಾಯಕತೆಯ ಕಣ್ಣೀರು ಮಾತ್ರ ಸುರಿಸುತ್ತಾರೆ.

ಆದ್ದರಿಂದ ಬೂದನ ತಂದೆ ತಾಯಿಗಳಿಗೆ ಅವರು ವಾಸಿಸುತ್ತಿದ್ದ ಗುಡಿಸಲು ಮುಂದೆ ಬಾಳೆಯ ಕಂದನ್ನು ನೆಡಲು ಮನಸ್ಸಿರುವದಿಲ್ಲ. ಮಕ್ಕಳ ಆಸೆಯನ್ನು ನಿರಾಕರಿಸಬಾರದೆಂದು ಅಲ್ಲಿ ನೆಡಲು ಅವಕಾಶ ನೀಡುತ್ತಾರೆ. ಅವರಿಗೆ ಒತ್ತಿದೆ. ತಾವು ವಾಸಿಸುವ ಭೂಮಿ ತಮಗೆ ಸೇರಿದ್ದಲ್ಲ. ಅದು ತಮಗೆ ಕೆಲಸ ನೀಡಿದ ಧಣಿಗೆ ಸೇರಿದ್ದು. ಅಲ್ಲಿರುವ ಪ್ತರಿಯೊಂದು ಬೆಳೆ ಆತನಿಗೆ ಸೇರಿದ್ದು. ದುಡಿದವರು ತಾವಾದರೂ ಅದರ ಬಗ್ಗೆ ಯೋಚಿಸುವದಿಲ್ಲ. ತಮಗೆ ಅನ್ನ ನೀಡಿದ ಧಣಿ ಎಂದು ಅವರ ಅಣಿತಿಯಂತೆ ಬದುಕುವುದೆ ತಮ್ಮ ಧರ್ಮ ಎಂದು ಬಲವಾಗಿ ನಂಬಿದ್ದಾರೆ. ಆದ್ದರಿಂದ ಅವರಿಗೆ ಆಶ ಭೂಮಿಯ ಯಾವ ಹಕ್ಕು ಇಲ್ಲ. ಯಾಕೆ ನಮಗೆ ಬೂಮಿಯಿಲ್ಲ ಎಂದು ಅವರು ಯೋಚಿಸುವ ಅರಿವು ಇಲ್ಲ. ಈ ಎಲ್ಲಾ ಬಿಕ್ಕಟ್ಟುಗಳನ್ನು ಕಥೆ ಶೋಧಿಸುತ್ತದೆ.

ಮಕ್ಕಳ ಕಾಟಕ್ಕಾಗಿ ಕಂದನ್ನು ನೆಡುತ್ತಾರೆ. ಮುಂದೆ ಅದನ್ನು ಬೆಳೆಸುವ ಮಕ್ಕಳ ಸಂಭ್ರಮವನ್ನು ಕಥೆ ಕಾವ್ಯಾತ್ಮಕವಾಗಿ ಬಣ್ಣಿಸುತ್ತದೆ. ಆದರೆ ಹಾಗೆ ಮಾಡುವಾಗ ಗಿಡ ಬೆಳೆಸುವಾಗ `ಆ ಮಕ್ಕಳ ಮೈಯಿಂದ ಎಷ್ಟು ಬೆವರು ಸುರಿದಿತ್ತೋ ಅಳೆದವರಾರು?’ ಎಂದು ಕೇಳದೆ ಬಿಡುವುದಿಲ್ಲ. ಬೆಳೆದು ಬಾಳೆ ಗೊನೆ ಬಿಟ್ಟಾಗ ಭೂಮಿಯ ಮಾಲಿ ನಾಗಪ್ಪಯ್ಯ ಸಹಜವಾಗಿ ಆ ಗೊನೆಯನ್ನು ತಮ್ಮ ಮನೆಯ ಸತ್ಯನಾರಾಯಣ ಪೂಜೆಗೆ ಸಾಗಿಸಬೇಕೆಂದು ಹೇಳುತ್ತಾನೆ. ಆಗ ತೌಡನಿಗೆ ಭೂಮಿ ಕುಸಿದಷ್ಟೂ ಸಂಕಟವಾಗುತ್ತದೆ. ಅದನ್ನು ಧಣಿ ನಾಗಪ್ಪಯ್ಯನ ಮುಂದೆ ಹೇಳುವ ಹಾಗಿಲ್ಲ. ಯಾಕೆಂದರೆ ಭೂಮಿ ಆತನದು. ಆ ಕಡೆ ಮಕ್ಕಳಿಗೆ ಉತ್ತರ ಕೊಡಲಾರದೆ, ಈ ಕಡೆ ನಾಗಪ್ಪಯ್ಯನನ್ನು ಪ್ರಶ್ನೆ ಮಾಡಲಾರದೆ ಅಸಹಾಕತೆಯಿಂದ ತೌಡ ನರಳುತ್ತಾನೆ. ನಾಗಪ್ಪಯ್ಯನ ಹೇಳುವ ಮಾತುಗಳು ದಲಿತ ದುಡಿಯುವವರನ್ನು ಯಾವ ರೀತಿ ನೋಡುತ್ತಿದ್ದರೂ ಎಂಬುದಕ್ಕೆ ಸಾಕ್ಷಿಯಾಗಿವೆ. `ಮಕ್ಕಳಿಗೆ ರಸಬಾಳೆ ಹಣ್ಣೋ, ಮಣ್ಣೋ,! ದೇವರ ಬಾಯಿಗೆ ಬೀಳಲಿ! ಮಕ್ಕಳ ಮೈ ಕೈ ಸುಖ ಕೊಡುತ್ತಾನೆ ಸತ್ಯನಾರಾಯಣ.! ಮಕ್ಕಳಿಗಿಟ್ಟುಕೊಂಡು ದೇವರಿಗೆ ಕೊಡೋದೆ? ಹೀಗೆಲ್ಲಾ ಮಾಡೋದರಿಂದಲೇ ನಿತ್ಯ ದರಿದ್ರ ತಪ್ಪೋದಿಲ್ಲ ನಿಮಗೆಲ್ಲ!’ ಎನ್ನುತ್ತಾನೆ. ಇವರ ಶೋಷಣೆಯ ನೀತಿಗೆ ದೇವರನ್ನು ಸಾಕ್ಷಿಯಾಗಿ ತಂದು ದುಡಿಯುವವರ ಬಾಯಿಯನ್ನು ಮುಚ್ಚಿಸುತ್ತಾರೆ. ಅವರಲ್ಲಿ ಇನ್ನಷ್ಟೂ ಭಯವನ್ನು ಮೂಡಿಸುತ್ತಾರೆ.

ಮಕ್ಕಳ ಆಸೆಗಿಂತ ಸತ್ಯನಾರಾಯಣನಿಗೆ ಬಾಳೆಯನ್ನು ಕೊಡುವುದು ಮಾಲೀಕರಿಗೆ ಮುಖ್ಯವಾಗುತ್ತದೆ. ನಿಜ ಹಸಿದವರನ್ನು ಬಿಟ್ಟು ಹಸಿವಿಲ್ಲದ ದೇವರಿಗೆ ಬಾಳೆಹಣ್ಣನ್ನು ನೀಡುತ್ತಾರೆ. ಇದು ಮನುಷ್ಯನ ಕ್ರೌರ್ಯದ ಪರಮಾವಧಿಯನ್ನು ಸೂಚಿಸುತ್ತದೆ. ಇಲ್ಲಿ ಮಕ್ಕಳೇ ದೇವರೆಂಬ ನಂಬಿಕೆ ಹುಸಿಯಾಗುತ್ತದೆ. ಸಾಮಾಜಿಕ ಆರ್ಥಿಕ ಶೋಷಣೆಗಳೊಂದಿಗೆ ಧಾರ್ಮಿಕ ಸಾಂಸ್ಕೃತಿಕ ಶೋಷಣೆಗಳೂ ಬೆರೆತು ವರ್ಗ ಸಮಾಜದ ಕ್ರೌರ್ಯದ ಚಿತ್ರಣ ಪೂರ್ಣವಾಗುತ್ತದೆ. ದೇವರ ಹೆಸರಿನಲ್ಲಿ ಭೂಮಾಲೀಕರ ಕ್ರೌರ್ಯವೇ ವಿಜೃಂಭಿಸುತ್ತದೆ. ಬಾಳೆಗೊನೆ ನಾಗಪ್ಪಯ್ಯನ ಮನೆ ಸೇರುತ್ತದೆ. `ದೇವ್ರು ಅದನ್ನು ತಿನ್ನುತ್ತಾರೆಯೇ? ಎಂಬ ಬೂದನ ಪ್ರಶ್ನೆಗೆ, `ದೇವ್ರರಿಗೆ ಅಷ್ಟು ಬೇಕಿತ್ತೆ? ನಮಗೆ ಎರಡೆರೆಡು –ಒಂದೊಂದು ಆದರೂ ಇರಬಾರದಿತ್ತೆ? ಎಂಬ ತುಕ್ರಿಯ ತರ್ಕಕ್ಕೆ ಆ ಸಮಾಜದಲ್ಲಿ ಉತ್ತರವಿಲ್ಲ.

ಇದಕ್ಕೆ ರೊಚ್ಚಿಗೆದ್ದ ಮಕ್ಕಳು ಅಸಹಾಕತೆಯಿಂದ ಕುದಿಯುತ್ತವೆ. ಈ ದೊಡ್ಡವರ ಮನಸ್ಸುಗಳನ್ನು ಅರ್ಥಮಾಡಿಕೊಳ್ಳುವ ವಯಸ್ಸೂ ಆ ಮಕ್ಕಳದಲ್ಲ. ಈ ನ್ಯಾವನ್ನು ಯಾರ ಮುಂದೆ ಕೇಳಬೇಕು? ಇದನ್ನು ಅವರ ಅಪ್ಪ, ಅಮ್ಮ ಒಪ್ಪಿದ್ದಾರೆ. ನಾಗಪ್ಪಯ್ಯ ದೇವರ ಮುದ್ರೆ ಹಾಕಿದ್ದಾನೆ. ಇದಕ್ಕೆ ಪ್ರತಿರೋಧ ಎಂಬಂತೆ ಆ ಮಕ್ಕಳು `ಮಕ್ಕಳು ಮನೆಯಲ್ಲಿ ಏನೋ ಮಹಾವಿಪತ್ತು ಸಂಭವಿಸಿದಂತೆ ತಲೆಗೊಂದು ಕೈಗೊಟ್ಟು ಜೋಲು ಮೋರೆ ಹಾಕಿ ಕಣ್ಣೀರು ಒರಸಿಕೊಳ್ಳುತ್ತಾ ಜಗಲಿಯಲ್ಲಿ ಕುಳಿತಿದ್ದವು. ತುಸು ಹೊತ್ತಾದ ಮೇಲೆ ಅದೇನು ಯೋಚನೆ ಹೊಳೆಯಿತೋ ಆ ಬೂದನಿಗೆ ಅಂಗಳಕ್ಕೆ ಹಾರಿದ! `ತುಕ್ರಿ ಬಾ’ ಎನ್ನುತ್ತಾ ಬಾಳೆಯ ಕಂದುಗಳಿರುವೆಡೆ ಧಾವಿಸುತ್ತಿದ್ದಾನೆ. ತುಕ್ರಿಯೂ ಓಡಿ ಸೇರಿದ್ದಾಳೆ. ಬೂದನು ಆ ಕಂದುಗಳನ್ನು ಒಂದೊಂದಾಗಿ ಹಿಡಿ ಹಿಡಿದು ಬಗ್ಗಿಸಿ, ತಿರು ತಿರುವಿ ಮುರಿಯುತ್ತಾ, `ಇ ಇ ಇ ಇ ಇ ಇವು ಗೊನೆ ಹಾಕೋದೂ ಬೇಡಾ! ಆ ಆ ಆ ಆ ಆ ಸತ್ತ್ ನಾರ್ಣಾ ತಿ ತಿ ತನ್ನೋದು ಬೇಡಾ! ಎನ್ನುತ್ತಾ ಅವನ್ನೆಲ್ಲಾ ಸೀಳಿ ಸೀಳಿ ಮುರುಮುರಿದು ಹಾಕಿ ಅಲ್ಲೆಲ್ಲಾ ಕೆಸರೇಳುವಂತೆ ಅವುಗಳ ಮೇಲೆ ತಕ ತಕ ಕುಣಿಯುತ್ತಿದ್ದಾನೆ. ತುಕ್ರಿಯೂ ಕುಣಿಯುತ್ತಿದ್ದಾಳೆ. ಅದೇನು ಆವೇಶ! ಅದೆಂತಹ ನೃತ್ಯ!’

ಹೀಗೆ ಕತೆಯು ಭಾರತದ ಕಾಲಮಾನದ ಶೋಷಣೆಯ ವಿದ್ಯಾಮಾನವೊಂದನ್ನು ಎಳೆ ಮಕ್ಕಳ ಆವೇಶದೊಂದಿಗೆ ತೆರೆದಿಡುತ್ತದೆ. ವರ್ಗ ಸಂಘರ್ಷದ ಕ್ರಮವನ್ನು ತಣ್ಣಗೆ ನಿರೂಪಿಸುತ್ತದೆ. ಎಲ್ಲಿಯೂ ವಾಚ್ಯವಾಗದಂತೆ ಕಲಾತ್ಮಕವಾಗಿ ಕತೆಯನ್ನು ಹೆಣದು ಕರುಳಿಗೆ ತಟ್ಟುವ ಹಾಗೆ ಭಾಷೆಯನ್ನು ದುಡಿಸಲಾಗಿದೆ. ಪರಂಪರಾಗತ ಭಾರತದ ಶೋಷಣೆಯ ಸ್ವರೂಪವನ್ನು ಮನಗಾಣಿಸಿ ಯೋಚಿಸುವಂತೆ ಮಾಡುತ್ತದೆ. ಈ ಕಾರಣಕ್ಕೆ ಕನ್ನಡದ ಶ್ರೇಷ್ಠ ಕತೆಗಳಲ್ಲಿ ಒಂದಾಗಿದೆ.

ಅಡಿಟಿಪ್ಪಣೆ

1. ಯು. ಆರ್. ಅನಂತಮೂರ್ತಿ, ಪ್ರಜ್ಞೆ ಮತ್ತು ಪರಿಸರ, ಪು. 27
2. ಡಾ. ಕೆ. ಕೇಶವಶರ್ಮ, ಮಾರ್ಕ್ಸವಾದಿ ವಿಮರ್ಶೆ ಪು. 45
3. ಡಿ.ಆರ್. ನಾಗರಜ್, ಸಂಸ್ಕೃತಿ ಕಥನ, ಪು. 206
4. ನಿರಂಜನ , ಬುದ್ದಿ ಬಾವ ಬೆಳಕು 1984,ಪು.96
5. ಆರ್.ವಿ.ಭಂಡಾರಿ: ಕಾದಂರಿಗಳಲ್ಲಿ ವರ್ಗ ವರ್ಣ ಸಂಘರ್ಷ, 2003,ಪು.73
6. ನಿರಂಜನ , ಬುದ್ದಿ ಬಾವ ಬೆಳಕು, 1984 ಪು. 53
7. ಎಚ್.ಎಸ್. ರಾಘವೇಂದ್ರರಾವ್, ನಿರಂಜನರ ಕಾದಂರಿಗಳು ಕೆಲವು ಟಿಪ್ಪಣೆಗಳು, ಪು. 340 ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭಟ್ಟ, 1986,)

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...