ಎದೆಯಾಳಕ್ಕೆ ಇಳಿಯುವ ಕವಿತೆಗಳ ಸಂಕಲನ ‘ಬಟ್ಟೆಗಂಟಿದ ಬೆಂಕಿ’ : ಹೆಚ್.ಎಸ್ ಮುಕ್ತಾಯಕ್ಕ

Date: 14-12-2022

Location: ಬೆಂಗಳೂರು


ವಿಶಾಲ್ ಮ್ಯಾಸರ್ ಅವರ ಬಟ್ಟೆಗಂಟಿದ ಬೆಂಕಿ ಕವನ ಸಂಕಲನದ ಕುರಿತು ಹಿರಿಯ ಕವಯತ್ರಿ ಹೆಚ್.ಎಸ್ ಮುಕ್ತಾಯಕ್ಕ ಬರೆದಿರುವ ಮಾತುಗಳು ನಿಮ್ಮ ಓದಿಗಾಗಿ..

ಕೃತಿ: ಬಟ್ಟೆಗಂಟಿದ ಬೆಂಕಿ
ಲೇಖಕ: ವಿಶಾಲ್ ಮ್ಯಾಸರ್
ಪುಟ:
64
ಬೆಲೆ: 80
ಮುದ್ರಣ: 2022
ಪ್ರಕಾಶನ:
ದುಡಿಮೆ ಪ್ರಕಾಶನ, ಬಳ್ಳಾರಿ

ನಮ್ಮ ನಡುವಿನ ಭರವಸೆ ಹುಟ್ಟಿಸುವ ಕವಿ, ವಿಶಾಲ್ ಮ್ಯಾಸರ್ ಇವರ ಕವನ ಸಂಕಲನ " ಬಟ್ಟೆಗಂಟಿದ ಬೆಂಕಿ" ಎಲ್ಲ ರೀತಿಯಿಂದ ಪ್ರಸ್ತುತ ಕನ್ನಡ ಕಾವ್ಯ ಸಂಧರ್ಭದಲ್ಲಿ, ಓದಿಸಿಕೊಂಡು ಹೋಗುವ, ಉತ್ತಮ ಕೃತಿಯಾಗಿದೆ.

ಇಲ್ಲಿ ಸಾಮಾಜಿಕ ಕಳಕಳಿ, ಪ್ರಣಯ, ಪ್ರೀತಿ, ಇತ್ಯಾದಿಗಳ ಬಗೆಗೆ ಕವಿತೆಗಳಿವೆ. ಎಲ್ಲವೂ ತಮ್ಮದೇ ಆದ ಅರ್ಧ್ರದಿಂದ ಗಮನ ಸೆಳೆಯುತ್ತದೆ. ಪ್ರಣಯ ಪ್ರಿತಿಯ ಬಗೆಗೆ ಆ ವಯೋಮಾನಕ್ಕೆ ಅನುಗುಣವಾಗಿ ಇರುವಂಥ ಹಸಿಬಿಸಿ ಭಾವನೆಗಳು ಬಹು ಸುಂದರವಾಗಿ ವ್ಯಕ್ತವಾಗಿವೆ. " ಅವಳು" ಎಂಬ ಕವಿತೆಯಲ್ಲಿ...

"ಹುಡುಗಿಯಿಂದ ಹೆಣ್ಣಾದಾಗ
ಅವಳ ತುಟಿ ಬಣ್ಣ ಬಯಸಿತ್ತು...."

ಎಂದು ಬರುವ ಹದಿವಯಸ್ಸಿನ ಹುಡುಗಿಯ ತೀವ್ರ ಬದಲಾಗುತ್ತಿರುವ ಭಾವನೆಗಳನ್ನು ಮನೋಜ್ಞವಾಗಿ ಸೆರೆಹಿಡಿದಿದ್ದಾರೆ.

"ಸಿಹಿಕನಸು" ಕವಿತೆಯಲ್ಲಿ,
"ಗೆಳತಿ ಜೊತೆಗಿದ್ದರೂ
ಇರದಿದ್ದರೂ
ನನಗೆ ಸಿಹಿಕನಸು ನೀನು..."

ಎಂಥ ಅದ್ಭುತ ರಮ್ಯ ಸಾಲುಗಳು ! ತನ್ನ ಗೆಳತಿಯ ಇರುವಿಕೆ, ಇಲ್ಲದಿರುವಿಕೆ ಎಲ್ಲವೂ ಕವಿಗೆ ಖುಷಿಯನ್ನು ನೀಡುತ್ತವೆ. ಅಪ್ಯಾಯಮಾನವಾಗುತ್ತವೆ.

ಇಲ್ಲದಿರುವಿಕೆನ್ನೂ ಆತ ಖುಷಿಯಿಂದಲೆ ಸ್ವೀಕರಿಸುತ್ತಾನೆ. ಇಂತಹ ಹಲವಾರು ಹೃದಯವನ್ನು ಸೆರೆಹಿಡಿದು ಮುಖದತುಂಬ ಮುಗುಳ್ನಗೆ ಮೂಡಿಸುವ ಕವಿತೆಗಳು ಇಲ್ಲಿವೆ.

ವಿಶಾಲ್ ಅವರ ಕವಿತೆಗಳಲ್ಲಿ ಗಮನ ಸೆಳೆಯುವ ಅಂಶವೆಂದರೆ ಅವರು ಬಳಸುವ ಉಪಮೆ, ರೂಪಕಗಳು. ಪ್ರಕೃತಿಯಲ್ಲಿರುವಂಧ ನಕ್ಷತ್ರ, ಬೆಟ್ಟ, ಗುಡ್ಡ, ಚಂದ್ರ, ಮರ,ಆಕಾಶ, ನೆಲ, ಮುಗಿಲು, ಬಯಲು, ನಿಲಿ, ಹಸಿರು.... ಇವುಗಳನೆಲ್ಲ ಸಮರ್ಥವಾಗಿ ಬಳಸಿದ್ದಾರೆ. ಪ್ರಕೃತಿಯೊಡನಿ ಒಂದಾದಾಗಲೆ ಒಂದು ಕವಿತೆ ಅರ್ಥಪೂರ್ಣವಾಗುತ್ತದೆ. ಪ್ರಕೃತಿಯನ್ನು ಬಿಟ್ಟು ನಾವಿಲ್ಲ ಅಲ್ಲವೆ.....

ಪ್ರಕೃತಿಯನ್ನು ಪ್ರೀತಿಸುವ ಕವಿಹೃದಯ ಅದರಲ್ಲಿ ತನ್ನ ಗೆಳತಿ,ನೋವು,ನಲಿವು,ವಿರಹ, ಪ್ರಿತಿಯನು ಕಾಣಲೆತ್ನಿಸಿದ್ದಾನೆ. ಇದರೊಡನೆ ಸಿಗರೇಟು,ಬೈಟು ಕಾಫಿ, ಪ್ಲಾಸ್ಟಿಕ್ ಹೂಗಳು,ಕೆಂಪುದೀಪ, ಇಂತಹವನ್ನು ಕೂಡಾ ರೂಪಕವಾಗಿ ಕವಿ ಬಳಸಿದ್ದಾನೆ. ಸೂಕ್ಷ್ಮ ಸಂವೇದನೆಯುಳ್ಳ ಕವಿ ಪ್ರೀತಿಗೆ ಸ್ಪಂದಿಸಿಂತೆ ಸಾಮಾಜಿಕ ಕಳಕಳಿಗೂ ಅಷ್ಟೇ ತೀವ್ರವಾಗಿ ಸ್ಪಂದಿಸಿದ್ದಾನೆ.

ಇದರೊಡನೆ ನಾನು ಹೇಳಬೇಕಾದ ಇನ್ನೊಂದು ಅಂಶವೆಂದರೆ ಕಾವ್ಯ ಲೋಕದಲ್ಲಿ ಬೆಳೆಯುತ್ತಿರುವಂಥ ಕವಿ ಇನ್ನು ಸ್ವಲ್ಪ ಲಯ,ಪದ ಬಳಕೆ, ಇವಗಳ ಕಡೆಗೆ ಗಮನ ಹರಿಸುವ ಅಗತ್ಯವಿದೆ. ಬರೆಯುತ್ತ ಹೋದಂತೆ ಅದು ತಾನೇ ರೂಢಿಯಾಗುತ್ತದೆ.

ಕನ್ನಡ ಕಾವ್ಯ ಸಂದರ್ಭದಲ್ಲಿ ಅನೇಕರು ಬರೆಯುತ್ತಿದ್ದಾರೆ. ಅವರಲ್ಲಿ ವಿಶಾಲ್ ಮ್ಯಾಸರ್ ಇವರು ಒಬ್ಬ ಊತ್ತಮ ಕವಿಯಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದಾರೆ. ಮುಂದಿನ ಕನ್ನಡ ಕಾವ್ಯ ಸಂದರ್ಭದಲ್ಲಿ ಮಹತ್ವದ ಕವಿಯಾಗಿ ಇವರು ಬೆಳೆಯಬಲ್ಲರು. ಆದರೆ ಇದಕ್ಕೆ ಪೂರಕವಾಗಿ ಇವರು ಮಾಡಬೇಕಾಗಿರುವುದೇನೆಂದರೆ ಯಾರ ಹೋಗಳಿಕೆಗೂ ಹಿಗ್ಗದೆ, ಯಾರ ತೆಗಳಿಕೆಗೂ ಕುಗ್ಗದೆ, ಪ್ರಶಸ್ತಿ, ಸನ್ಮಾನಗಳ ಆಮಿಶಕ್ಕೆ ಒಳಗಾಗದೆ ಕಾವ್ಯವನ್ನು ಗಂಭೀರವಾಗಿ ತೆಗೆದುಕೊಂಡು ತಪಸ್ಸಿನಂತೆ ಸಿದ್ಧಿ ಮಾಡಿಕೊಳ್ಳುವುದೇ ಆಗಿದೆ.

ಹೀಗೆ.... ವಿಶಾಲ್ ಅವರ "ಬಟ್ಟೆಗಂಟಿದ ಬೆಂಕಿ" ಕವನ ಸಂಕಲನ ಖುಷಿ ಕೊಟ್ಟಿತು.

-ಎಚ್.ಎಸ್ ಮುಕ್ತಾಯಕ್ಕ
ಎಚ್.ಎಸ್. ಮುಕ್ತಾಯಕ್ಕ ಅವರ ಲೇಖಕ ಪರಿಚಯ..

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...