ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

Date: 26-04-2023

Location: ಬೆಂಗಳೂರು


ಶಿವಶರಣೆಯರನ್ನು ಜನಪದರು ಕೂಡ ಕೊಂಡಾಡುವ ಹಲವು ಉದಾಹರಣೆಗಳನ್ನು ಲೇಖಕಿ ವಿಜಯಶ್ರೀ ಸಬರದ ಗಮನಿಸುತ್ತಾರೆ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ಕುಂಬಾರ ಗುಂಡಯ್ಯ-ಕೇತಲದೇವಿ ಹಾಗೂ ದಾಸಿಮಯ್ಯ-ದುಗ್ಗಳೆ ದಂಪತಿಗಳ ಬಗ್ಗೆ ಬರೆದಿದ್ದಾರೆ.

ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ

ಕುಂಬಾರ ಗುಂಡಯ್ಯ ಮಹಾಶಿವಭಕ್ತ, ಆತನ ಪತ್ನಿಯೇ ಕೇತಲದೇವಿ. ಇವರ ಕಾಲ ಕ್ರಿ.ಶ.1160. ಈ ದಂಪತಿಗಳ ಊರು, ಬೀದರ ಜಿಲ್ಲೆಯ ಭಾಲ್ಕಿಯಾಗಿತ್ತು. ಭಾಲ್ಕಿಯಲ್ಲಿ ಕುಂಭೇಶ್ವರ ದೇವಾಲಯವಿದೆ. ಈ ದೇವಾಲಯವು ಕುಂಬಾರ ಓಣಿಯಲ್ಲಿದೆ. "ಕುಂಬೇಶ್ವರಾ" ಎಂಬುದೇ ಕೇತಲದೇವಿಯ ವಚನಾಂಕಿತವಾಗಿರುವುದರಿಂದ, ಭಾಲ್ಕಿಯ ಕುಂಭೇಶ್ವರ ದೇವಾಲಯದ ಮಹತ್ವ ಗೊತ್ತಾಗುತ್ತದೆ.

"ಭುವನಕೋಶ"ದಲ್ಲಿ ಕೇತಲದೇವಿಯ ವಿವರಗಳು ದೊರೆಯುತ್ತವೆ. ಈಕೆಗೆ ಸಂಬಂಧಿಸಿದ ಪವಡಕತೆಯೊಂದು ಅಲ್ಲಿ ವಿವರಿಸಲ್ಪಟ್ಟಿದೆ. ಕೇತಲದೇವಿ ನಿತ್ಯವೂ ಲಿಂಗಕ್ಕೆ ಪಾವಾಡವನ್ನು ಹಾಕುವ ನಿಯಮ ಹೊಂದಿದ್ದಳೆಂದೂ, ಒಂದುದಿನ ಅದು ಸಿಗದೇ ಹೋದಾಗ, ತನ್ನ ಎದೆಯ ಚರ್ಮವನ್ನೇ ತೆಗೆದು ಪಾವುಡ ಮಾಡಿ ಶಿವಲಿಂಗಕ್ಕೆ ಧರಿಸಲು, ಶಿವನು ಇವಳ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದನೆಂಬ ಕತೆಯಿದೆ. ಈ ಪವಾಡಕತೆಯ ಸತ್ಯಾಸತ್ಯತೆ ಏನೇ ಇರಲಿ, ಕೇತಲದೇವಿ ಮಾತ್ರ ಮಹತ್ವದ ಶರಣೆಯಾಗಿದ್ದಳೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಜನಪದ ಕಾವ್ಯದಲ್ಲಿ ಈ ದಂಪತಿಗಳನ್ನು ಕುರಿತಂತೆ ಅನೇಕ ತ್ರಿಪದಿಗಳು ಪ್ರಕಟವಾಗಿವೆ. ಡಾ.ಬಿ.ಎಸ್.ಗದ್ದಗಿಮಠ ಅವರ "ಕನ್ನಡ ಜಾನಪದ ಗೀತೆಗಳು" ಕೃತಿಯಲ್ಲಿ ಈ ತ್ರಿಪದಿಗಳನ್ನು ನೋಡಬಹುದಾಗಿದೆ.

"ಕುಂಬಾರ ಗುಂಡಯ್ಯನ ಮಡದಿ ಕಡಗದ ಕೈಯಾಕಿ
ಕೊಡದ ಮ್ಯಾಲೇನು ಬರದಾಳ| ಕಲಬುರಗಿ
ಶರಣಬಸವನ ಚಿತ್ರ ಬರದಾಳ||"
"ಮಡದಿ ಕೇತಲದೇವಿ ಒಡನಾಡಿ ಗಂಡನಿಗೆ ಎಡೆಬಿಡದೆ ಸೇವೆ ಮಾಡುತಲಿ| ಬತ್ತಿಯೊಳು
ಬಿಡದೇರಿ ಎಣ್ಣೆಯುರಿದಂತೆ||"

ವೊಂದು ಈಕೆಯ ವಚನದಲ್ಲಿ ಉಲ್ಲೇಖವಾಗಿದೆ. ಕೇತಲದೇವಿ ಕಾಯಕನಿಷ್ಠೆ ಉಳ್ಳವಳಾಗಿರುವುದರ ಜತೆಗೆ ಪಂಡಿತಳೂ ಆಗಿದ್ದಳೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕಾಣದೇ ಇರುವುದನ್ನು ಕಂಡದ್ದನ್ನು ಒಂದೇ ಸಮವೆಂದು ಅರಿಯಬೇಕೆಂದು ಈಕೆ ತನ್ನ ವಚನದಲ್ಲಿ ಹೇಳಿದ್ದಾಳೆ.

"ಹದ ಮಣ್ಣಲ್ಲದೆ ಮಡಕೆಯಾಗಲಾರದು
ವ್ರತಹೀನನ ಬೆರೆಯಲಾಗದು
ಬೆರೆದಡೆ ನರಕತಪ್ಪದು
ನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ"
- ಸ.ವ.ಸಂ.5, ವ-772, 1993

ಈ ವಚನದಲ್ಲಿ ತನ್ನ ವೃತ್ತಿಪ್ರತಿಮೆಯ ಮೂಲಕ ಕೇತಲದೇವಿ ಮಾತನಾಡಿದ್ದಾಳೆ. ಮಣ್ಣನ್ನು ಸರಿಯಾಗಿ ತುಳಿದು ಹದ ಮಾಡದೆ, ಅದು ಮಡಕೆಯಾಗದು ಎಂಬ ಮಾತನ್ನು ತನ್ನ ವೃತ್ತಿ ಅನುಭವದ ಹಿನ್ನಲೆಯಲ್ಲಿ ಹೇಳುತ್ತ, ವ್ರತಹೀನನನ್ನು ಬೆರೆಯಬಾರದೆಂದು, ಬೆರೆತಡೆ ನರಕತಪ್ಪದೆಂದು ಸ್ಪಷ್ಟಪಡಿಸಿದ್ದಾಳೆ. ಕುಂಬಾರ ಗುಂಡಯ್ಯನದ್ದೆಂದು ಹೇಳುವ ಉಬ್ಬು ಶಿಲ್ಪವೊಂದು ಭಾಲ್ಕಿಯಲ್ಲಿ ದೊರೆತಿದ್ದು ಈ ದಂಪತಿಗಳು ಭಾಲ್ಕಿಯಲ್ಲಿಯೇ ಲಿಂಗೈಕ್ಯರಾಗಿರಬಹುದಾಗಿದೆ.

ದುಗ್ಗಳೆ

ಆದ್ಯ ವಚನಕಾರ ಜೇಡರ ದಾಸಿಮಯ್ಯನ ಪತ್ನಿಯೇ ದುಗ್ಗಳೆ. 1148ರ ಗೊಬ್ಬೂರು ಶಾಸನದಲ್ಲಿ "ಜಾಡ ಕುಲತಿಲಕ ಜಾಡದಾಸಿಮಯ್ಯ" ಎಂಬ ಮಾತು ಬರುತ್ತದೆ. ಇದರಿಂದ ಈತ ಜಾಡರವನಾಗಿದ್ದು, ನೇಯ್ಗೆ ಕಾಯಕ ಮಾಡುತ್ತಿದ್ದನೆಂದು ತಿಳಿದು ಬರುತ್ತದೆ. ಈತನ ಕಾಲವನ್ನು ಕ್ರಿ.ಶ.1130 ರಿಂದ 1150ರ ನಡುವೆಯೆಂದು ಹೇಳಲಾಗಿದೆ. ದುಗ್ಗಳೆ, ದಾಸಿಮಯ್ಯನ ನಿಧನದ ನಂತರವೂ ಬದುಕಿದ್ದು ಈಕೆಯ ಕಾಲವನ್ನು ಕ್ರಿ.ಶ.1160 ಎಂದು ತಿಳಿಯಬಹುದಾಗಿದೆ. ಸುರಪುರ ತಾಲೂಕಿನ ಮುದನೂರಿನ ಕರಿಕಾಲದಂಡ ಕಾಮಯ್ಯ ಮತ್ತು ಶಂಕರಿ ದಂಪತಿಗಳ ಮಗನಾಗಿ ದಾಸಿಮಯ್ಯ ಜನಿಸುತ್ತಾನೆ.

ಮುದನೂರಿನ ನೇಯ್ಗೆಯ ಸಂಗಣ್ಣ ಮತ್ತು ಶ್ರೀದೇವಿಯರ ಮಗಳಾಗಿ ದುಗ್ಗಳೆ ಜನಿಸುತ್ತಾಳೆ. ಈಕೆ ಬಲು ಚತುರೆಯಾಗಿದ್ದಳೆಂದು ತಿಳಿದು ಬರುತ್ತದೆ. "ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ" ಕೃತಿಯಲ್ಲಿ ಒಂದು ಕಥೆ ಬರುತ್ತದೆ. ದಾಸಿಮಯ್ಯ ತಾನು ಗೃಹಸ್ಥಧರ್ಮವನ್ನು ಸ್ವೀಕರಿಸಬೇಕೆಂದಾಗ ತನ್ನನ್ನು ಚೆನ್ನಾಗಿ ಅರಿಯಬಲ್ಲ ಚತುರೆಯನ್ನು ಮದುವೆಯಾಗಬೇಕೆಂದು ತಿಳಿದು ಒಂದು ಉಪಾಯವನ್ನು ಮಾಡುತ್ತಾನೆ. ಒಂದು ಗಂಟಿನಲ್ಲಿ ಮಣ್ಣನ್ನು, ಮತ್ತೊಂದು ಗಂಟಿನಲ್ಲಿ ಅಕ್ಕಿಯನ್ನು, ಒಂದು ಕಬ್ಬಿನ ಕೋಲನ್ನು ಕೈಯಲ್ಲಿ ಹಿಡಿದುಕೊಂಡು "ಕಟ್ಟಿಗೆಯ ಮುಟ್ಟದೆ ಕಿಚ್ಚನೊಟ್ಟಿ, ನೀರ ಮುಟ್ಟದೆ ಮಳಲಕ್ಕಿಯಂ ಪಾಯಸವ ಮಾಡುವಲ್ಲಿ, ಕರಿಯ ಕಬ್ಬಿನಕೋಲ ಬಳೆಯೊಳಗಿಕ್ಕಿ ಬೆಂಕಿಯನುರುಹಿ ಮಳಲಕ್ಕಿಯಂ ಕೂಡಿ, ಪಾಯಸವಂ ಮಾಡಿ ನೀಡಿದಡೆ ಅಂತಪ್ಪ ಸ್ತ್ರೀಯಂ ಮದುವೆಯಾಗುವೆನೆಂದು" ಹೇಳುತ್ತ ದೇಶಾಟನೆ ಮಾಡುತ್ತಾನೆ. (ನೋಡಿ- ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ, ಪು- 387, ಧಾರವಾಡ, 1968) ಮುದನೂರಿನ ಒಂಬತ್ತು ವರ್ಷದ ಚತುರೆ ದುಗ್ಗಳಮ್ಮ ಈ ಸವಾಲನ್ನು ಸ್ವೀಕರಿಸಿ ಪಾಯಸವನ್ನು ಮಾಡಿ ನೀಡುತ್ತಾಳೆ. ಆಗ ಆಕೆಯನ್ನು ಮೆಚ್ಚಿದ ದಾಸಿಮಯ್ಯ ಅವಳೊಂದಿಗೆ ಮದುವೆಯಾಗುತ್ತಾನೆ. ದುಗ್ಗಳೆ ದಾಸಿಮಯ್ಯನ ಮೆಚ್ಚಿನ ಮಡದಿಯಾಗಿ ಸಂಸಾರ ಪ್ರಾರಂಭಿಸುತ್ತಾಳೆ. "ಇಂತಪ್ಪ ಪೆಣ್ಣಾದಡೆ ಸಂಸಾರ ಲೇಸು" ಎಂದು ಸಂತೋಷದಿಂದ ಸಂಸಾರ ಮಡುತ್ತಾನೆ. "ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ" ಎಂದು ದಾಸಿಮಯ್ಯ ತನ್ನ ವಚನದಲ್ಲಿ ಹೇಳಿರಬೇಕಾದರೆ, ದುಗ್ಗಳೆ ದಾಸಿಮಯ್ಯನ ಅತ್ಯಂತ ಪ್ರೀತಿಯ ಮಡದಿಯಾಗಿದ್ದಳೆಂದು ತಿಳಿಯುತ್ತದೆ. ಹೀಗೆ ದುಗ್ಗಳೆ ಪತಿಗೆ ತಕ್ಕ ಸತಿಯಾಗಿದ್ದಳೆಂದು ಪುರಾಣಕಾವ್ಯಗಳು ಹೇಳುತ್ತವೆ.

ದಾಸಿಮಯ್ಯನು ದುಗ್ಗಳೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದನೆಂದು ತಿಳಿದುಬರುತ್ತದೆ. ತನ್ನ ಒಂದು ವಚನದಲ್ಲಿ ಆಕೆಯ ಗುಣಶೀಲ-ಸ್ವಭಾವಗಳನ್ನು ಕುರಿತು ಬಣ್ಣಿಸಿದ್ದಾನೆ.

"ಬಂದುದನರಿದು ಬಳಸುವಳು,
ಬಂದುದ ಪರಿಣಾಮಿಸುವಳು
ಬಂಧುಬಳಗವ ಮರಸುವಳು,
ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ"
- ಜೇಡರ ದಾಸಿಮಯ್ಯ

ದಾಸಿಮಯ್ಯನ ವ್ಯಕ್ತಿತ್ವವನ್ನು ಬೆಳಗಿಸುವಲ್ಲಿ ದುಗ್ಗಳೆ ಪ್ರಮುಖ ಪಾತ್ರವಹಿಸಿದ್ದಳೆಂದು ಈ ವಚನದಿಂದ ತಿಳಿದುಬರುತ್ತದೆ. ಸಾಮಾನ್ಯವಾಗಿ ವಚನಕಾರ್ತಿಯರು ತಮ್ಮ ಪತಿಯನ್ನು ಕೊಂಡಾಡಿದ್ದಾರೆ. ಅದರೆ ದಾಸಿಮಯ್ಯ ಇಲ್ಲಿ ತನ್ನ ಪತ್ನಿಯನ್ನು ಕೊಂಡಾಡುತ್ತಿರುವುದು ವಿಶೇಷವಾಗಿದೆ. ಈ ಅಪರೂಪದ ದಂಪತಿಗಳನ್ನು ಕುರಿತು ಬಸವಣ್ಣ, ಕೋಲಶಾಂತಯ್ಯ, ಸೋಮಿದೇವಯ್ಯ, ಸತ್ಯಕ್ಕ ಈ ಮೊದಲಾದ ವಚನಕಾರರು ತಮ್ಮ ವಚನಗಳಲ್ಲಿ ಬಣ್ಣಿಸಿದ್ದಾರೆ. (ನೋಡಿ - ಮಿಶ್ರಸ್ತೋತ್ರದ ವಚನಗಳು, ಸಂ. ಡಾ.ವೀರಣ್ಣ ರಾಜೂರ) 12ನೇ ಶತಮಾನದ ಶರಣರು ಈ ದಂಪತಿಗಳನ್ನು ಕುರಿತು ಉಲ್ಲೇಖಿಸಿರುವ ಒಂದೆರಡು ವಚನಗಳನ್ನಿಲ್ಲಿ ನೋಡಬಹುದಾಗಿದೆ.

1. "ದಾಸನ ವಸ್ತ್ರವ ಬೇಡದ ಮುನ್ನ ತವನಿಧಿಯನಿತ್ತಡೆ ನಿಮ್ಮ ದೇವರೆಂಬೆ"
- ಬಸವಣ್ಣ (ಸ.ವ.ಸಂ.1, ವ-444, 1993)
2. "ದಾಸನ ವಸ್ತ್ರವ ಸೀಳುವುದೊಂದು ಗರುವತನುವೆ?"
- ಬಸವಣ್ಣ (ಸ.ವ.ಸಂ.1, ವ-740, 1993)
3. "ಎನಗುಡಕೊಟ್ಟರಯ್ಯ ದಾಸ-ದುಗ್ಗಳೆಯರು"
- ಬಸವಣ್ಣ (ಸ.ವ.ಸಂ.7, ವ-188, 1993)
4. "ದಾಸ ದುಗ್ಗಳೆಯವರ ತವನಿಧಿ ಪ್ರಸಾದವು ಕೊಂಡೆನಯ್ಯಾ"
- ಬಸವಣ್ಣ (ಸ.ವ.ಸಂ.6, ವ-1212, 1993)

ಈ ನಾಲ್ಕು ವಚನಗಳಲ್ಲಿ ದಾಸಿಮಯ್ಯ-ದುಗ್ಗಳೆಯರ ಹೆಸರನ್ನು ಪ್ರಸ್ತಾಪಿಸಲಾಗಿದೆ. ಬಸವಣ್ಣನು ಜೇಡರದಾಸಿಮಯ್ಯನ ಪರವಾಗಿ ದೇವರನ್ನೇ ಪ್ರಶ್ನಿಸಿದ್ದಾನೆ. "ದಾಸನ ವಸ್ತ್ರವನ್ನು ಪಡೆದು ನೀ ತವನಿಧೆಯನ್ನಿತ್ತೆ, ಇದೇನು ಮಹಾ?" ಎಂದು ಬಸವಣ್ಣ ಸ್ವತ: ದೇವರನ್ನೇ ಕೇಳಿದ್ದಾನೆ. ಶಿವನು ದಾಸನವಸ್ತ್ರವನ್ನು ಸೀಳುವ ಪ್ರಸಂಗ ಬರುತ್ತದೆ. ಆ ಪ್ರಸಂಗವನ್ನು ಉಲ್ಲೇಖಿಸಿದ ಬಸವಣ್ಣನು, ಇದು ನಿಮ್ಮ ಗರುವತನುವೆ ಎಂದು ಪ್ರಶ್ನಿಸಿದ್ದಾನೆ.

ಮದನೂರಿನ ರಾಮನಾಥ ಮಂದಿರದ ಮಗ್ಗುಲಲ್ಲಿಯೇ ಬಾವಿಗಳಿವೆ. ಈ ಊರ ಸುತ್ತಮುತ್ತ ಜಲರಾಶಿಯೇ ಇದೆ. ಈ ಜಲಕ್ಕೆ ಸಂಬಂಧಿಸಿದಂತೆ ದಾಸಿಮಯ್ಯನಿಗೆ ಅಪಾರ ಜ್ಞಾನವಿತ್ತೆಂದು ತಿಳಿದುಬರುತ್ತದೆ. ರಾಮನಾಥ ಮಂದಿರದ ಎದುರಿಗಿರುವ ಇನ್ನೊಂದು ಗರ್ಭಗೃಹದಲ್ಲಿ ದಾಸಿಮಯ್ಯನ ಇತ್ತೀಚಿನ ಶಿಲ್ಪವೊಂದನ್ನು ಸ್ಥಾಪಿಸಲಾಗಿದೆ. ದುಗ್ಗಳೆಯೂ ಇಲ್ಲಿಯೇ ಲಿಂಗೈಕ್ಯಳಾಗಿರಬೇಕೆಂದು ನಂಬಬಹುದಾಗಿದೆ.

ದುಗ್ಗಳೆ ವಚನಗಳನ್ನು ರಚಿಸಿದ್ದು ಆಕೆಯ ಎರಡು ವಚನಗಳು ಪ್ರಕಟವಾಗಿವೆ. "ದಾಸಯ್ಯಪ್ರಿಯ ರಾಮನಾಥಾ" ಎಂಬುದು ಆಕೆಯ ವಚನಾಂಕಿತವಾಗಿದೆ. ಬಸವಣ್ಣನಿಂದ ಗುರುಪ್ರಸಾದಿಯಾದೆ, ಚೆನ್ನಬಸವಣ್ಣನಿಂದ ಲಿಂಗಪ್ರಸಾದಿಯಾದೆ, ಪ್ರಭುದೇವರಿಂದ ಜಂಗಮಪ್ರಸಾದಿಯಾದೆ, ಮರುಳಶಂಕರದೇವರಿಂದ, ಮಹಾಪ್ರಸಾದಿಯಾದೆನೆಂದು ತನ್ನ ವಚನದಲ್ಲಿ ಹೇಳಿಕೊಂಡಿದ್ದಾಳೆ.

"ಭಕ್ತನಾದಡೆ ಬಸವಣ್ಣನಂತಾಗಬೇಕು ಜಂಗಮವಾದಡೆ ಪ್ರಭುದೇವರಂತಾಗಬೇಕು ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು ಐಕ್ಯನಾದಡೆ ಅಜಗಣ್ಣನಂತಾಗಬೇಕು ಇಂತಿವರ ಕಾರುಣ್ಯ ಪ್ರಸಾದವ ಕೊಂಡು ಸತ್ತ ಹಾಗಿರಬೇಕಲ್ಲದೆ ತತ್ವದ ಮಾತು ಎನಗೇಕಯ್ಯ ದಾಸಯ್ಯಪ್ರಿಯ ರಾಮನಾಥಾ"

- ದುಗ್ಗಳೆ (ಸ.ವ.ಸಂ.5, ವ-786, 1993)

ಈ ವಚನವನ್ನು ನೋಡಿದಾಗ ದುಗ್ಗಳೆಗೆ ಕಲ್ಯಾಣದ ಶರಣರ ಸಂಪರ್ಕ ನಿಕಟವಾಗಿಯೇ ಇತ್ತೆಂದು ತಿಳಿದುಬರುತ್ತದೆ. ಒಬ್ಬೊಬ್ಬ ಶರಣನ ಗುಣವಿಶಿಷ್ಟತೆಯನ್ನು ಕಂಡುಕೊಳ್ಳುವುದು ದೂರದಲ್ಲಿದ್ದವರಿಗೆ ಸಾಧ್ಯವಾಗುವುದಿಲ್ಲ. ದುಗ್ಗಳೆ ಶರಣರ ಒಡನಾಟದಲ್ಲಿ ಅವರ ಗುಣವಿಶಿಷ್ಟತೆಯನ್ನು ಕಂಡುಕೊಂಡು ಎಲ್ಲರೂ ಒಪ್ಪುವಂತೆಯೇ ಹೇಳಿದ್ದಾಳೆ. ಇಂತಹ ಮಹಾಮಹಿಮರ ಕಾರಣದಿಂದ ತಾವು ಬದುಕಬೇಕಲ್ಲದೆ ತತ್ವದ ಮಾತು ತಮ್ಮಂತವರಿಗೇಕೆ? ಎಂದು ಕೇಳಿಕೊಂಡಿಂದ್ದಾಳೆ. ಆದ್ಯವಚನಕಾರನ ಮೆಚ್ಚಿನ ಮಡದಿಯಾಗಿ, ಶರಣಸಂಕುಲದ ವಿನಯಪೂರ್ಣ ಸದಸ್ಯೆಯಾಗಿ ದುಗ್ಗಳೆ ಗಮನ ಸೆಳೆಯುತ್ತಾಳೆ. ಆಕೆಯ ವ್ಯಕ್ತಿತ್ವ-ಸಾಧನೆ, ಕುರಿತು ಹೆಚ್ಚಿನ ಸಂಶೋಧನೆ

ನಡೆಯಬೇಕಾಗಿದೆ. ತನ್ನ ಸಮಕಾಲೀನ ಶರಣರನ್ನು ಮೇಲುಗಟ್ಟಿಕೊಂಡು ಬಸವಣ್ಣ ಇಲ್ಲಿ ದೇವರೊಡನೆ ವಾಗ್ವಾದಕ್ಕಿಳಿದಿದ್ದಾನೆ. ತನಗೆ ವಸ್ತ್ರವನ್ನು ಉಡಲು ದಾಸ- ದುಗ್ಗಳೆಯರು ಕೊಟ್ಟರೆಂದು ಕೋಲಶಾಂತಯ್ಯನು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾನೆ. ತಾನು ದಾಸ-ದುಗ್ಗಳೆಯರ ತವನಿಧಿ ಪ್ರಸಾದವ ತೆಗೆದುಕೊಂಡೆನೆಂದು ಉಪ್ಪರಗುಡಿ ಸೊವಿದೇವಯ್ಯ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಹೀಗೆ ಅನೇಕ ವಚನಕಾರರು ದಾಸಿಮಯ್ಯ-ದುಗ್ಗಳೆಯರ ಮಹಿಮೆಯನ್ನು ತಮ್ಮ ವಚನಗಳಲ್ಲಿ ಕೊಂಡಾಡಿದ್ದಾರೆ.

ಅನೇಕ ಜನಪದ ತ್ರಿಪದಿಗಳಲ್ಲಿ ದಾಸಿಮಯ್ಯ-ದುಗ್ಗಳೆಯರನ್ನು ಕುರಿತು ಗರತಿಯರು ಹಾಡಿದ್ದಾರೆ. ಜನಪದರ ನಾಲಗೆಯ ಮೇಲೆ ಈ ಶರಣ ದಂಪತಿಗಳು ಕುಣಿದಾಡಿದ್ದಾರೆ.

"ಹುಗ್ಗಿಯ ದುಗ್ಗಳೆ ಹುಗ್ಗಿ ಅಕ್ಕಿ ಕುಟ್ಯಾಳ
ಹಿಗ್ಗಿಲಿ ಕಾಯಕ ಮಾಡ್ಯಾಳ| ದುಗ್ಗಳೆ
ಬಗ್ಗಿ ತಾ ನೀಡಿ ಪಂಕ್ತೀಗಿ||
"ಹಿಗ್ಗಿನಿಂದ ಕೇಳೆ ಮುದನೂರ ದುಗ್ಗಳೆ ಬಂದಾಳ
ಬಗ್ಗಿ ನಮಿಸ್ಯಾಳ ಶರಣರಿಗೆ| ತವನಿಧಿಯ ಕಲ್ಯಾಣದ ಜನಕ್ಕೆಲ್ಲಾ ಹಂಚ್ಯಾಳ||"
- (ಹಾಡಿದವರು - ಬಸಮ್ಮ ಸಬರದ)

ಇಂತಹ ಅನೇಕ ತ್ರಿಪದಿಗಳನ್ನು ಕುಕನೂರಿನಲ್ಲಿ ನನ್ನ ಅತ್ತೆ ಬಸಮ್ಮ ಮತ್ತು ಆಕೆಯ ಗೆಳತಿಯರು ಹಾಡುತ್ತಿದ್ದರು. ಇಂತಹ ಕೆಲವು ಹಾಡುಗಳು ಪ್ರಕಟವಾಗದೆ ಹಾಗೆಯೇ ಉಳಿದುಕೊಂಡಿವೆ. ಜಾನಪದದಲ್ಲಿ, ದಾಸಿಮಯ್ಯ ದುಗ್ಗಳೆಯರನ್ನು ಗೌರವದಿಂದ ಕಾಣಲಾಗಿದೆ. ದಾಸಿಮಯ್ಯನ ನೇಯ್ಗೆಯ ಕಾಯಕ ಅಷ್ಟೊಂದು ಪ್ರಸಿದ್ಧಿಯಾಗಿತ್ತು ಮತ್ತು ಅದು ತುಂಬ ಸರಳವಾಗಿತ್ತು. ಅಂತೆಯೇ ಜನಪದರು ದಾಸಿಮಯ್ಯನ ನೆನೆಸಿ ಕೂಸು ನೇಯುವುದಯ್ಯ ಎಂದು ಹೇಳಿದ್ದಾರೆ. ದಾಸಿಮಯ್ಯನ ನಿಧನದ ನಂತರ ದುಗ್ಗಳೆ ಕಲ್ಯಾಣಕ್ಕೆ ಬಂದಿರಬೇಕು, ಅಲ್ಲಿ ಶರಣರ ಸಂಗದಲ್ಲಿ ಇದ್ದಿರಬೇಕೆಂದು ಈ ತ್ರಿಪದಿಗಳಿಂದ ತಿಳೆದು ಬರುತ್ತದೆ. ಮುದನೂರಿನಲ್ಲಿ ರಾಮನಾಥ ಮಂದಿರವಿದೆ. ಇದೇ ದಾಸಿಮಯ್ಯನ ವಚನಾಂಕಿತವಾಗಿದೆ. ಲಿಂಗವಂತ ಜಾಡರ ಸಮುದಾಯಕ್ಕೆ ಸೇರಿದ ಈ ದಂಪತಿಗಳು ತಮ್ಮ ಕಾಯಕ ದಾಸೋಹದಿಂದ ಜನಮನ್ನಣೆಯನ್ನು ಪಡೆದವರಾಗಿದ್ದಾರೆ. ದಾಸಿಮಯ್ಯನ ಕೆಲವು ಸ್ಮಾರಕಗಳು ಮುದನೂರಿನಲ್ಲಿವೆ. ದಾಸಿಮಯ್ಯ ಇಲ್ಲಿಯೇ ವಾಸವಾಗಿದ್ದನೆಂದು ಒಂದು ಹಳೆಯ ಮನೆಯನ್ನು ತೋರಿಸುತ್ತಾರೆ. ಆದರೆ ಅದು ಹನ್ನೆರಡನೇ ಶತಮಾನದಲ್ಲಿ ಕಟ್ಟಿಸಿದ್ದ ಮನೆಯಲ್ಲವೆಂಬುದು ಸ್ಪಷ್ಟವಾಗುತ್ತದೆ.

ಈ ಅಂಕಣದ ಹಿಂದಿನ ಬರೆಹಗಳು:
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಸತ್ಯಕ್ಕ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ವಚನಗಾರ್ತಿ ಮುಕ್ತಾಯಕ್ಕ
ಅಕ್ಕನಾಗಮ್ಮ
ಅಮುಗೆ ರಾಯಮ್ಮ
ವಚನಕಾರ ಜೇಡರ ದಾಸಿಮಯ್ಯನ ಪತ್ನಿ ದುಗ್ಗಳೆ
ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ, ಶಾಂಭವಿದೇವಿ

ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...