Date: 27-09-2020
Location: ಬೆಂಗಳೂರು
2020ನೇ ಸಾಲಿನ ಛಂದ ಪುಸ್ತಕ ಬಹುಮಾನಕ್ಕೆ ಕತೆಗಾರ್ತಿ ಛಾಯಾ ಭಟ್ ಅವರು ಆಯ್ಕೆಯಾಗಿದ್ದಾರೆ.
ಛಾಯಾ ಭಟ್ ಅವರ ಕತೆಗಳ ಪುಸ್ತಕವನ್ನು ‘ಛಂದ ಪುಸ್ತಕ’ವು ಪ್ರಕಟಿಸಲಿದೆ. ಈ ಬಹುಮಾನವು 30 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
“ಮುಂದಿನ ತಿಂಗಳಲ್ಲಿ ಓದುಗರಿಗೆ ಪುಸ್ತಕ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ. ಕೊರೊನಾ ಕಾರಣದಿಂದ ಕಾರ್ಯಕ್ರಮ ಏರ್ಪಡಿಸುವುದು ಕಷ್ಟ. ಆದ್ದರಿಂದ ಡಿಜಿಟಲ್ ಮೂಲಕವೇ ಪುಸ್ತಕ ಬಿಡುಗಡೆ ಮಾಡುತ್ತೇವೆ. ಅವರಿಗೆ 30,000 ರೂಪಾಯಿ ಬಹುಮಾನ, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ಕೊಡಲಾಗುತ್ತದೆ” ಎಂದು ಪ್ರಕಾಶಕ, ಲೇಖಕ ವಸುಧೇಂದ್ರ ಅವರು ತಿಳಿಸಿದ್ದಾರೆ.
ಛಾಯಾ ಭಟ್ ಅವರು ಮೂಲತಃ ಕುಮಟಾ ತಾಲೂಕಿನ ಹೊಲನಗದ್ದೆ ಊರಿನವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಈಗ ಬೆಂಗಳೂರಿನ ಶ್ರೀ ಕುಮರನ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಈ ಬಾರಿಯ ಛಂದ ಪುಸ್ತಕದ ತೀರ್ಪುಗಾರರಾಗಿದ್ದ ತಾರಿಣಿ ಶುಭದಾಯಿನಿ ಅವರು “ಛಾಯಾ ಭಟ್ ಅವರ ಕತೆಗಳು ಸಮಕಾಲೀನ ಸಮಾಜದ ಸಂಸಾರ, ಸಂಬಂಧಗಳನ್ನು ಒಡಲಲ್ಲಿಟ್ಟುಕೊಂಡ ಕತೆಗಳು. ಇವು ಮಡಂಬ ಪತ್ತನ ದ್ರೋಣಾಮುಖಗಳ ಸಂಚಾರವನ್ನು ಉದ್ದೇಶಿಸಿ ಹೊರಟ ಮಹತ್ವಾಕಾಂಕ್ಷಿ ಕತೆಗಳಲ್ಲವಾದರೂ, ದೂರದಲ್ಲೆಲ್ಲೋ ಸುನಾಮಿ ಎದ್ದರೆ ಅದರ ಪರಿಣಾಮೀ ಅಲೆಗಳು ಅದರ ಪ್ರತಿನಾಡಿನಲ್ಲೆಲ್ಲೋ ಕಂಪನ ಎಬ್ಬಿಸಿದಂತೆ ಪುಟ್ಟ ಜಗತ್ತಿನಲ್ಲಿ ಎದ್ದ ಅಲೆಗಳನ್ನು ಕಾಣುವಂತಹವು. ಈ ’ಕಾಣುವ’ ರೀತಿ ತನ್ನ ಕಣ್ಣಿನ ಸತ್ಯವನ್ನೇ ಅಂತಿಮ ಎಂದು ನಂಬುವ ರೀತಿಯಲ್ಲಿಲ್ಲ. ಸ್ತ್ರೀವಾದ, ಪ್ರಾದೇಶಿಕತೆ, ಜಾತಿ, ವರ್ಗ ಮುಂತಾದ ಸಿದ್ಧಾಂತಗಳ ನೆಲೆಗಟ್ಟುಗಳನ್ನು ಬಳಸಿ ಹೇಳಬೇಕೆನ್ನುವ strategy writing ಸಹ ಅಲ್ಲ. ಈ ಬಗೆಯ ಮಹತ್ವಾಕಾಂಕ್ಷೆಯ ಗುರಿಯಿರದ ಕತೆಗಳು ಏಕಾಂತದಲ್ಲಿ ಕೆಲವು ಮಾನವೀಯ ಪ್ರಶ್ನೆಗಳನ್ನು ಎತ್ತಬಲ್ಲವು. ಅದಕ್ಕಾಗಿ ಈ ಆಯ್ಕೆ. ಸಮರ್ಥನೆಗೆ ಹಲವಾರು ಕಾರಣಗಳಿರುತ್ತವೆ. ಅವುಗಳ ನಿಜದ ಮಾತು ಅಂತಿರಲಿ, ಛಾಯಾ ಅವರ ಕತೆಗಳು ಕಲಕಿದವು"’ ಎಂದಿದ್ದಾರೆ.
ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
©2024 Book Brahma Private Limited.