ಕನ್ನಡ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ದಿಗ್ಗಜರ ಕೃತಿಗಳ ಮುದ್ರಣದೊಂದಿಗೆ ವೇಗ ದಾಖಲಿಸಿರುವ ಮತ್ತು ಭರವಸೆಯ ಹೆಜ್ಜೆಗಳನ್ನು ಮೂಡಿಸಿರುವ ಸಂಸ್ಥೆ ಐಬಿಎಚ್ ಪ್ರಕಾಶನ. ಐದು ದಶಕಗಳಿಂದ ಕನ್ನಡದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಐಬಿಎಚ್, ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನೂ (2019) ಗಳಿಸಿದೆ.
ಈವರೆಗೆ ಸುಮಾರು ಮೂರು ಸಾವಿರಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ್ದು, ಹೆಚ್ಚಿನವು ಕನ್ನಡ ಕೃತಿಗಳು ಎಂಬುದು ವಿಶೇಷ. ಐಬಿಎಚ್ ಪ್ರಕಾಶನದ ಇಂಥ ಸಾಧನೆಯ ಹಿಂದಿರುವುದು ಎಚ್. ಕೆ. ಲಕ್ಷ್ಮೀನಾರಾಯಣ ಅಡಿಗ ಅವರ ಪುಸ್ತಕ ಪ್ರೀತಿ, ಶ್ರದ್ಧೆ ಮತ್ತು ಬದ್ಧತೆ.
ಐಬಿಎಚ್ ಪ್ರಕಾಶನದಿಂದ ಪ್ರಕಟಗೊಂಡ ವಿ.ಕೃ. ಗೋಕಾಕರ ‘ಭಾರತ ಸಿಂಧುರಶ್ಮಿ’ಗೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದಲ್ಲದೆ, ಮಕ್ಕಳ ಸಾಹಿತ್ಯದ ಎಂಟು ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ, ಮೂರು ಸಂಶೋಧನಾ ಕೃತಿಗಳು ಹಾಗೂ ಸಮಾಜ ವಿಜ್ಞಾನ, ಕಾವ್ಯ, ಮಾನಸಿಕ ವಿಭಾಗದ ತಲಾ ಒಂದು ಕೃತಿ ಅಕಾಡೆಮಿ ಪ್ರಶಸ್ತಿಗೆ, ನಾಲ್ಕು ಕಾದಂಬರಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಗಿವೆ.
©2023 Book Brahma Private Limited.