ಹೀಗೇಕೆ ನೀ ಕಾಡುವೆ
ಎಡಬಿಡದೆ ಸುರಿವ ಮಳೆಯಂತೆ
ಮಳೆಯಾದರೂ ನಿಲ್ಲಬಹುದಂತೆ
ನಿಲ್ಲದೇ ಈ ನಿನ್ನ ಸಂತೆ....
ನಾ ದೂರವಿಟ್ಟರೂ
ನೀ ಇರುವೆ ಹತ್ತಿರ
ನಿನ್ನ ನೂರು ದಾಳಿಗೆ
ನಾನಾದೆ ತತ್ತರ
ಹೋಗಿಬಿಡು ನೀ
ಬರದಿರು ಇನ್ನೆಂದೂ
ಹೇಳದೇ ಕೇಳದೇ
ಸತಾಯಿಸದೇ ಪದೇ ಪದೇ
-ಅಜಯ್ ಅಂಗಡಿ
ಕಡಲ ತೀರದ ಮೇಲೆ ಕವಿತೆಗಳು
ಸಾಲಾಗಿ ಮಲಗಿವೆ ನಿರಾತಂಕವಾಗಿ
ಅಲೆಗಳ ದಾಳಿಗೆ ಭಯಪಡದೆ
ತಂಗಾಳಿಯ ಆಲಿಂಗನವ ಅನುಭವಿಸುವ
ಹುಚ್ಚು ಹಂಬಲವೇನೋ ಅವುಗಳಿಗೆ
ಒಮ್ಮೆಯಾದರೂ ಸಹ....
ಭಾವನೆಗಳ ಬಣ್ಣದೊಡನೆ ಬೆಸೆದಿರುವ
ಬಂಧಕೆ ತುಸು ತಂಗಾಳಿಯ ಹಸಿ ಸ್ಪರ್ಶ
ಸೋಕಿಸಿ ಬಿಡುವ ಬಯಕೆ ಯಥೇಚ್ಛವಾಗಿ
...