Article

'ಹೌದು ನಾನು ಕೌದಿ' ಎನ್ನುವ ವಿಜಯಕಾಂತ ಪಾಟೀಲರ ಪ್ರಕೃತಿ ಸಹಜ ಶೈಲಿಯ ಕವನಗಳು..!

ವಿಜಯಕಾಂತ ಪಾಟೀಲರ ನಾಲ್ಕನೇ ಕವನ ಸಂಕಲನ ‘ಹೌದು ನಾನು ಕೌದಿ’. ವಿಜಯಕಾಂತ ಪಾಟೀಲರು ಗಮನ ಸೆಳೆಯುವುದು ಅವರು ಬಳಸುವ ಲಯಗಳ ಮೂಲಕ. ಇದು ವಿಜಯಕಾಂತ ಪಾಟೀಲರ ನಾಲ್ಕನೇ ಕವನ ಸಂಕಲನ ‘ಹೌದು ನಾನು ಕೌದಿ’. ವಿಜಯಕಾಂತರು ಗಮನ ಸೆಳೆಯುವುದು ಅವರು ಬಳಸುವ ಸರಳ ಲಯಗಳ ಮೂಲಕ. ಪ್ರತಿಮೆಗಳ ಜೋಡಣೆ, ಪ್ರಕತಿಯ ವಿವರಗಳ ಹಂದರ, ಆ ಮುಖೇನ ವರ್ತಮಾನದ ದಂದುಗಗಳಿಗೆ ಮುಖಾಮುಖಿಯಾಗುವ ವಿಧಾನ ಇವರ ಕಾವ್ಯದ ಬಹುಮುಖ್ಯವಾದ ಪಾತ್ರ ಎನಿಸುತ್ತದೆ...

ಉತ್ತರ ಕರ್ನಾಟಕದ ಬದುಕಿನ ಹಿನ್ನೆಲೆಯನ್ನು ಮೈಗೂಡಿಸಿಕೊಂಡಿದ್ದರೂ ಅದು ಒಟ್ಟು ಕರ್ನಾಟಕದ ನೆಲದ ಬದುಕಿನ ಸವಾಲುಗಳನ್ನು ಎದುರುಗೊಂಡಂತಿದೆ. ವಿಜಯಕಾಂತರ ಲಯ‌ವಿಧಾನ ನವೋದಯ ಕವಿಗಳು ಅದರಲ್ಲೂ ನರಸಿಂಹಸ್ವಾಮಿ, ಜಿ ಎಸ್ ಶಿವರುದ್ರಪ್ಪ, ಚೆನ್ನವೀರ ಕಣವಿ ಮುಂತಾದವರು ಬಳಸಿದ ಲಯಗಳು ನೆನಪಿಗೆ ಬರುತ್ತವೆ. ಲಯಕ್ಕೆ ತಕ್ಕ ಭಾಷೆಯನ್ನು ಹೆಣೆಯುವಾಗ ವಿಜಯಕಾಂತ ಪಾಟೀಲರು ಸರಳವಾದ ಭಾಷೆಯನ್ನು ಬಳಸುತ್ತಾರೆ... 

ಹೀಗಾಗಿ ಇವರ ಪ್ರತಿಮೆಗಳು ಹೆಚ್ಚು ಸಂಕೀರ್ಣವಾಗುವುದಿಲ್ಲ. ಇದರಿಂದ ಬಹುಪಾಲು ಕವಿತೆಗಲು ತೀರಾ ವಾಚ್ಯವಾಗುವುದರಿದಿಂದ ಪಾರಾಗಿವೆ. ಆದರೆ ಈ ಅಂಶಗಳಿಗೆ ತಕ್ಕ ವಸ್ತುವನ್ನು ಗಟ್ಟಿಯಾಗಿ ಬಳಸಬಹುದಿತ್ತು. ಇವರ ಬಹುಪಾಲು ಕವಿತೆಗಳು ವರ್ತಮಾನದ ರೈತರ ಸಮಸ್ಯೆಗಳು, ವಿಚ್ಛಿದ್ರಗೊಳ್ಳುತ್ತಿರುವ ಬದುಕು, ಮನುಷ್ಯನ ಆಂತರಿಕ ಸಮಸ್ಯೆಗಳೇ ಆಗಿವೆ. ಏಕೆಂದರೆ ಸ್ಬತಹ ವಿಜಯಕಾಂತ ಪಾಟೀಲ ತಮ್ಮ ನ್ಯಾಯವಾದಿ ವೃತ್ತಿಯೊಂದಿಗೆ ಸ್ವತಹ ರೈತರು ಕೂಡ ಹೌದು. ಹಾಗಾಗಿಯೇ ಈ ಸಂಕಲನದ ಯಶಸ್ವಿ ಪದ್ಯಗಳಲ್ಲಿ ಒಂದಾದ ‘ಹೌದು ನಾನು ಕೌದಿ’ ಕವಿತೆಯು ಜಿಎಸ್‌ಎಸ್ ಅವರ ‘ಭೀಮಾಲಾಪ’ ಕವಿತೆಯನ್ನು ನೆನಪಿಗೆ ತರುತ್ತದೆ. ಕೌದಿಯ ರೂಪದಲ್ಲಿ ರೈತನ ಸಮಸ್ಯೆಗಳು ಅಲ್ಲಿ ಮಡುಗಟ್ಟಿವೆ... 

ಸಮೂಹದಿಂದ ಹೊರಟು ಏಕಾಂಗಿಯಾಗುವ ಬಗೆಗಳನ್ನು ಇಲ್ಲಿ ನಾವು ಕಾಣಬಹುದು. ಅಧುನುಕತೆ ಮತ್ತು ಜಾಗತೀಕರಣದ ಮಾರುವೇಷಗಳನ್ನೂ ಈ ಕವಿತೆ ಸದ್ದಿಲ್ಲದೆ ಬಿತ್ತರಿಸಿದೆ. ಇದು ಭಾರತೀಯ ಸಮುದಾಯದ ಒಂದು ಆತಂಕವನ್ನು ಹೇಳುತ್ತದೆ. ಭೇದವೆಣಿಸದೇ ಹೊದಿಕೆಯಾದೆ... ಎದೆಗೆ ಎದೆಯಾದೆ ಎದೆಗುದಿಯ ಕೊನೆಗಾಣಿಸಿದೆ... ಬೆದೆಗೆ ಬದಿಯಾದೆ ಒಲವಿಗೆ ನೆಲೆಯಾದೆ. ಕಣ್ಣೀರ ಹೀರಿದೆ ಒದ್ದೆಯಾಗಿಯೂ ನಗಾಡಿದೆ... ಕಾವಲಾದೆ ಕಾದೆ... ಜನಗಣಮನವಾದೆ ಭರತ ಖಂಡವಾದೆ... ಕಂಡ ಕಂಡವರನ್ನೆಲ್ಲ ಅಪ್ಪಿದೆ ಒಪ್ಪಿದೆ ಸವೆದೆ ಏನೆಲ್ಲ ಆದೆ... ಇಂಡಿಯಾದ ಅಘೋಷಿತ ಧ್ವಜವಾದೆ...

ಈ ಸಾಲುಗಳು ನೆಲದ ಬದುಕಿನ ಸಮಸ್ಯೆಗಳಿಂದ ಹಿಡಿದು ರಾಜಕಾರಣದ ದುಸ್ಥಿತಿಯವರೆಗಿನ ಅವಸ್ಥೆಗಳನ್ನು ಸಾರುತ್ತವೆ. ಕವಿತೆಯ ವಸ್ತುವಿನ ಬೆಳವಣಿಗೆಯ ಕ್ರಮ ಪಕ್ವಗೊಂಡಿರುವುದರಿಂದ ವಾಸ್ತವದ ಗೆರೆಗಳು ಕೂಡ ಚಿಂತನೆಯ ಚೌಕಟ್ಟಿಗೆ ಬರುತ್ತವೆ. ಇದೇ ಬಗೆಯ ಸಮಸ್ಯೆಯನ್ನು ‘ಮೈ ಮೆದುಳಾದ ಹೊತ್ತು’ ಎಂಬ ಕವಿತೆಯಲ್ಲೂ ಎತ್ತಿಕೊಂಡಿದ್ದಾರೆ. ಇಲ್ಲಿ ಬರುವ ಸೂಜಿ, ನೇಗಿಲು, ಮಳೆ, ಹೂವು ಇವುಗಳ ಮುಖೇನ ಅವರು ಕಟ್ಟಿಕೊಡುವುದು ರೈತರ ಸಮಸ್ಯೆಯನ್ನೇ. ‘ಯಾರಿಗೆ ಯಾರೋ’ ಎಂಬ ಕವಿತೆಯಲ್ಲಿ ಪಾಟೀಲರ ಸ್ವತಃ ವಕೀಲರಾಗಿದ್ದರಿಂದ ಬದುಕಿನ ವಿಚ್ಛಿದ್ರತೆಯನ್ನು ಸೂಕ್ಷ್ಮವಾಗಿ ಹೀಗೆ ಹಿಡಿದಿಟ್ಟಿದ್ದಾರೆ. 
ತೋಟ ಪಟ್ಟಿಯಲ್ಲೂ ಒಬ್ಬನಿಗೆ ಬೇರು... ಎಸಳು ಕುಸುಮ ಎಲೆ ತೊಟ್ಟು. ಕಾಂಡ ಹರಿದಂಟು...  ಸಿಪ್ಪೆ ಗುಳಲು, ವಾಟೆ... ಏನೊಂದೂ ಉಳಿಯದೆ ಹೋಳು ಹೋಳು...

ಪ್ರಕೃತಿಯನ್ನು ತನ್ನದೆಂಬಂತೆ ಹಂಚಿಕೊಳ್ಳುವ ಮನಷ್ಯುನ ದುರಾಸೆಯನ್ನು ಕವಿ ಒಪ್ಪುವುದಿಲ್ಲ. ಬದುಕು, ಸಂಬಂಧಗಳು, ಪಾಲಾಗುವಿಕೆಯೂ ವರ್ತಮಾನದ ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ನಂಬಿದಂತಿದೆ. ವಿಜಯಕಾಂತರು ಈ ಸಂಕಲನದ ಮಟ್ಟಿಗೆ ಮುಖ್ಯವಾಗುವುದು ಪ್ರಕೃತಿಯ ಪ್ರತಿಮೆಗಳನ್ನು ಹೊಸ ಬಗೆಯಲ್ಲಿ ಬಳಸಿಕೊಳ್ಳುವುದರಲ್ಲಿ. ಇದರಲ್ಲಿ ನಮ್ಮ ಪರಂಪನೆಯ ಕವಿಗಳ ಪ್ರಭಾವವೂ ಇದೆ. ಆದರೆ ಇವರು ಆ ಪ್ರತಿಮೆಗಳ ಮೂಲಕ ವರ್ತಮಾನವನ್ನು ಶೋಧಿಸುತ್ತಾರೆ. ಇರುಳನ್ನು ಕುರಿತು ಅವರು ಕಟ್ಟಿರುವ ಚಿತ್ರಗಳು ಯಾರಿಗೇ ಆದರೂ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ. ಇದನ್ನು ಮುನ್ನುಡಿಯಲ್ಲಿ ಚಂದ್ರಶೇಖರ ನಂಗಲಿಯವರು ವಿವರವಾಗಿ ಚರ್ಚಿಸಿದ್ದಾರೆ. ‘ಇರುಳಮುಖೀ ಹರಿವು’ ಎಂಬು ಕವಿತೆಯು ಇದಕ್ಕೆ ನಿದರ್ಶನ...

ಕತ್ತಲನ್ನು ಅರ್ಥ ಮಾಡಿಕೊಳ್ಳುವುದಾಗಲೀ, ಒರಗು ಮಾಡಿಕೊಳ್ಳುವುದಾಗಲೀ ಬಹುಕಷ್ಟದ ಕೆಲಸ. ಇರುಳನ್ನು ಈ ವಿಜಯಕಾಂತ ಪಾಟೀಲ ಎಂಬ ಕವಿ ಎಲ್ಲೂ ನೇತ್ಯಾತ್ಮಕ ದೃಷ್ಟಿಕೋನದಿಂದ ನೋಡಿಲ್ಲ. ಬದುಕಿನ ಎಲ್ಲ ಘಟನೆಗಳಲ್ಲೂ ಅದು ಹಾಗೆಯೇ ಬರುತ್ತದೆ- ‘ಬೆಳಗಾಯಿತೆಂದು ಇರುಳ ಹಳಿಯಲಾರೆ... ಇರುಳ ಹೆರಳಿನಲ್ಲಿ ನನ್ನ ಕೆಲಸದ ಎಳೆಗಳಿವೆ... ಚುಕ್ಕಿಯಂದದ ಮುಗುಳುಗಳಿವೆ... ಇರುಳ ಸಾಂಗತ್ಯದ ಸುಖಕ್ಕಿಂತ ಮಿಗಿಲುಂಟೇ?’ ಎಂದು ಇರುಳಿನ ಸುಖವನ್ನು ಪಡೆಯುತ್ತಾರೆ. ಬೆಳಕು-ಇರುಳುಗಳ ದೊಡ್ಡ ಸಂಘರ್ಷವೇನೂ ಇಲ್ಲಿ ಇಲ್ಲ. ಬದಲಾಗಿ ಮನುಷ್ಯನ ಆಲೋಚನಾ ಕ್ರಮಗಳು, ಕನಸುಗಳು ಇರುಳನ್ನು ಅವಲಂಬಿಸಿವೆ ಎಂಬ ನಿಲುವು ಮುಖ್ಯವಾಗಿದೆ. ಹೀಗೆ ಮುಂದುವರಿದು, ‘ನಮ್ಮ ಕಣ್ಣೀರನ್ನು ಕುಡಿದು... ನಗು ಅರಳಿಸುವ ಶಕ್ತಿ ನಿನಗಿದ್ದರಿಂದಲೇ... ನಿನ್ನ ಬಣ್ಣ ಕಪ್ಪು... ಕೊರಗಬೇಡ ಇರುಳೇ... ನಮ್ಮ ಬೆತ್ತಲೆಯನ್ನು ಮುಚ್ಚಿ ಹಾಕುವ ನಗಿರುವ ಅಪಾರ ಪರಿವೆ ದೇವರಿಗೂ ಇಲ್ಲ... ಎನ್ನುವುದೇ ಖೇದದ ಸಂಗತಿ’ ಇಂದು ಮನುಷ್ಯರಿಗೂ ಇರುಳಿಗೂ ಇರುವ ಅವಿನಾಭಾವದ ಸಂಬಂಧವನ್ನು ಕಟ್ಟುತ್ತಾರೆ. ಬೆತ್ತಲೆ ಎಂಬ ವ್ಯಂಗ್ಯವೂ ಕೂಡ ಮನುಷ್ಯನ ಭಿನ್ನ ಸಂಗತಿಗಳನ್ನು ಹೇಳುವಂತಿದೆ. ಈ ಬಗೆಯ ಪ್ರಕೃತಿಗೆ ಸಂಬಂಧಿಸಿದಂತೆ ಅವರು ಬರೆದ ಪದ್ಯಗಳಲ್ಲಿ ‘ಮಳೆ ಪದ್ಯಗಳು’ ಕೂಡ ಸೇರಿವೆ. ಇದರಲ್ಲಿ ಮುಖ್ಯವಾಗಿ ಮನುಷ್ಯನ ಆಂತರಿಕ ತೊಳಲಾಟಗಳೇ ಇವೆ. ವಿಜಯಕಾಂತರು ಕನಕನನ್ನು ಕುರಿತು ಬರೆದ ಪದ್ಯ ಮತ್ತು ‘ಹೇಮಿ’ ಎಂಬ ಹುಚ್ಚಿಯ ಬಗ್ಗೆ ಬರೆದ ಪದ್ಯಗಳು ಅವರ ಅನುಭವದ ಹಿನ್ನೆಲೆಯ ಭಾವನೆಗಳನ್ನು ತಿಳಿಸುತ್ತವೆ. ಇಲ್ಲಿನ ಹಲವು ಪದ್ಯಗಳು ಕೂಡ ಅನುಭವ ಮತ್ತು ಭಾವನೆಗಳನ್ನು ಮೈಗೂಡಿಸಿಕೊಂಡಿವೆ...
ಇದು ಕವಿರೈತ ವಿಜಯಕಾಂತ ಪಾಟೀಲರ ಶೈಲಿ ಕೂಡ ಹೌದು. ಹೀಗಿದೆ ವಿಜಯಕಾಂತ ಪಾಟೀಲರ 'ಹೌದು ನಾನು ಕೌದಿ' ಎಂಬ ಕೃತಿ...
    

ಶಿವು ಕೆ. ಲಕ್ಕಣ್ಣವರ