'ತೀರ ಆಳಕ್ಕಿಳಿವ ನುರಿತ ನಾವಿಕನಂತೆ ಬದುಕಿನ ಕಡಲಿಗೆ ಇಳಿದವರು, ಅಷ್ಟೇ ಚಾಕಚಕ್ಯದಿಂದ ದೊರೆತ ಮುತ್ತು ಹವಳ ಕಪ್ಪೆಚಿಪ್ಪುಗಳನ್ನ ಭೇದವಿಲ್ಲದೆ ಬಸಿದು ಕೊಟ್ಟ ಕವಿಗಳಿಗೆ ಶರಣು' ಎನ್ನುತ್ತಾರೆ ಜ್ಯೋತಿ ಸಾಮಂತ್ರಿ. ಅವರು ನಿಝಾಮ್ ಗೋಳಿಪಡ್ಪು ಅವರ ಅನಾಮಧೇಯ ಗೀರುಗಳು ಕವನ ಸಂಕಲನಕ್ಕೆ ಬರೆದ ವಿಮರ್ಶೆ ಇಲ್ಲಿದೆ.
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ಅನ್ನೋದ್ನ ಬಾಳ ಸೀರಿಯಸ್ ಆಗಿ ಅಷ್ಟೇ ಮುಗ್ಧವಾಗಿ ಅನುಸರಿಸಿದಂತೆ ಕಾಣುವ 'ಅನಾಮಧೇಯ ಗೀರುಗಳ' ಗೀಚಿದ ವ್ಯಕ್ತಿತ್ವ ಅತ್ಮವನ್ನೇ ಬದುಕಿನ ಕುಲುಮೆಯಲ್ಲಿ ಕಾಯಿಸಿ ಬಂಗಾರವಾದ ಮೇಲೆ, ಆ ಲೇಖನಿಯಿಂದ ಹೊಳೆದಂತೆ ಕಾಣುತ್ತದೆ. ಓದಿದ ಎಷ್ಟೋ ಕವಿತೆಗಳಲ್ಲಿ ಹಿಂದೆ ನಿಂತು ಮಾರ್ಗದರ್ಶಿಸುವ ನುರಿತ ಕವಿಗಳಂತೆ ಸಾಲುಗಳನ್ನ ಓದಿಸಿಕೊಳ್ಳುತ್ತವೆ, ಅಲ್ಲದೇ ಒಂದೇ ಎನ್ನುವ ಒಂದೂ ಪದ-ಸಾಲು-ಪುಂಜ-ಕವನವಿಲ್ಲ; ಬದಲಾಗಿ ಬದುಕಿನ ಸಾಕಷ್ಟು ಆಯಾಮಗಳಿಗೆ ಅನಾಯಾಸವಾಗಿ ಕನೆಕ್ಟ್ ಆಗುವ ಈ ಕವಿತೆಗಳು ಕೈಯೇರಿ ಕುಳಿತವರ ಕಾಡುತ್ತವೆ..
ಯಾವತ್ತೂ ಸಲ್ಲದ, ಬರೀ ಸದ್ದನ್ನಷ್ಟೇ ಮಾಡುವ ಸಮಾಜದ ವಿಪರ್ಯಾಸಗಳಿಗೆ ಅಥವಾ ನಮ್ಮದಲ್ಲದ ನಮ್ಮ ಬಗೆಗಿನ ಗಾಳಿಗೆ ವಿಮುಖವಾಗಿದ್ದುಬಿಡುವ ಸೌಂದರ್ಯ "ಆತ್ಮಮುಟ್ಟಿದ ಮೇಲೆ ಲೋಕದ ಬಾಯಿಗೆ ಕಿವುಡಾಗಿಬಿಡು" ಎಂಬ ಸರಳ ಸಾಲಿನಲ್ಲಿ ಚಂದವೆನಿಸುತ್ತದೆ..
"ವಸಂತದಲ್ಲಿ ಅತ್ತ ಪಕ್ಷಿಯ ಪರಿಚಯ ನಿಮಗುಂಟ?" ಅಂತ ಅತೀ ಮುಗ್ಧವಾಗಿ ಬರೆವಾಗ ಎಲ್ಲ ಸಂಭ್ರಮಗಳೂ ಮರೀಚಿಕೆಯಾಗಿದ್ದವನ ಎದೆಯ ಹನಿಗಳಾ?? ಅಥವಾ ಸಂಭ್ರಮ ಸಡಗರ ಅನ್ನುವ ಪರಿಕಲ್ಪನೆಯ ಜಗತ್ತು ಡಿಫೈನ್ ಮಾಡಿದ ರೀತಿಗೆ ಒಗ್ಗದ ಕೆಲವರ ಮನದ ದನಿಯ ಎಂಬ ಗುಮಾನಿ ಮೂಡದಿರದು!! ಎಲ್ಲವೂ customized ಆಗಿಲ್ಲವೆಂಬ ಜಾಗತಿಕ ಸತ್ಯ ಈ ಪ್ರೀತಿ ಸ್ನೇಹ ಇತ್ಯಾದಿಗಳನ್ನ ತೂಗುವ ತಕ್ಕಡಿಗಳ ಮಾರುವ ಅಂಗಡಿಯ ಯಜಮಾನರಾಗಿರುವ ಇಂದಿನ ಬಹುತೇಕ 'MiND' ಗಳಿಗೆ ಕೂಗಿ ಹೇಳುವ ಪರಿಯ??!!
"ಮುಟ್ಟಿನ ಬಟ್ಟೆಯಲ್ಲಿ ನೋವ ನೆತ್ತರ
ಎದೆ ಹಿತ್ತಲಲ್ಲಿ ಮುಚ್ಚಿಟ್ಟ
ಮೊನ್ನೆ ಪ್ರಾಯಕ್ಕೆ ಬಂದ ಹುಡುಗಿ" ಎಂದು ಶುರುವಾಗುವ ಹೆಣ್ಣಿನ ಮತ್ತೊಂದು ವಿಧದ ಪರಿಚಯ ತೀರ ತಿಯದ್ದೇನಲ್ಲ; ಆದರೂ ತಿಳಿಯದ್ದೇ!!
"ಅವಳದು ಕಿಟಕಿಯಾಚೆಗಿನ ಪ್ರೀತಿ" ಎಂದು ಉದ್ಭವಿಸಿರುವ ಸಾಲು ಬಹುತೇಕ ಹೆಣ್ಣುಗಳ ತ್ಯಾಗದ ಕನ್ನಡಿಯಾಗಿ ಮಾತ್ರ ಉಳಿಯದೇ ಇನ್ನೇನನ್ನೋ ಸೂಕ್ಷ್ಮವಾಗಿ ಪ್ರಚುರಪಡಿಸುತ್ತವೆ.. ಮತ್ತೆ ಅವಳು "ತ್ಯಾಗದ ಬ್ರಾಂಡ್ ಅಂಬಾಸಿಡರ್" ಆಗಿ ಅನಿವಾರ್ಯದ ಕತ್ತಿಗೆ ಕತ್ತು ಕೊಟ್ಟು ನಗುತ್ತ ನಿಂತ ಮೊಗ್ಗಂತೆ..
"ಆಸೆಯ ಗಿಳಿಗಳನ್ನೆಲ್ಲ
ಬಂಧದ ಪಂಜರದಲ್ಲಿಟ್ಟು
ಅವಳು ನಗೆಯ ಹುಳುವೊಂದನ್ನ ಸಾಕಬೇಕು"..
ಒಟ್ಟಿನಲ್ಲಿ, ತೀರ ಆಳಕ್ಕಿಳಿವ ನುರಿತ ನಾವಿಕನಂತೆ ಬದುಕಿನ ಕಡಲಿಗೆ ಇಳಿದವರು, ಅಷ್ಟೇ ಚಾಕಚಕ್ಯದಿಂದ ದೊರೆತ ಮುತ್ತು ಹವಳ ಕಪ್ಪೆಚಿಪ್ಪುಗಳನ್ನ ಭೇದವಿಲ್ಲದೆ ಬಸಿದು ಕೊಟ್ಟ ಕವಿಗಳಿಗೆ ಶರಣು....
ಹಾಗೆಯೇ, ಅವನ್ನು ಅಷ್ಟೇ ಚಂದವಾಗಿ ಜೋಡಿಸಿ ಅಂದವಾಗಿಸಿದ, ಮೊದಲ ಕೂಸನ್ನ ಜೋಪಾನಮಾಡುವ ತಾಯಿಯಂತೆ ಜಾಗೃತೆವಹಿಸಿ ಪ್ರಕಟಿಸಿರುವ "ಪದ ಪ್ರಕಾಶನ"ಕ್ಕೂ ಇಂತಹ ಉತ್ತಮ ಕವನಸಂಕಲನಕ್ಕಾಗಿ ಧನ್ಯವಾದಗಳು..
-ಜ್ಯೋತಿ ಸಾಮಂತ್ರಿ
ಈ ಕಾದಂಬರಿ ಅಕ್ಕಮಹಾದೇವಿಯ ಕಥನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಶರಣ ಧರ್ಮದ ಸಾಮಾಜಿಕ, ತಾತ್ವಿಕ, ವೈಚಾರಿಕ ಚಿಂತನೆಗಳನ್ನು...
‘ನನಗೀ ಪುಸ್ತಕದಲ್ಲಿ ಅರ್ಥವಾದ್ದದಾದರು ಏನು. ಪುನಃ ಪುಸ್ತಕದ ಹೆಸರು ಓದಿದೆ. " ನಿರ್ಗಮನ ". ಹೂ...! ...
'ಒಬ್ಬ ಜವಾಬ್ದಾರಿಯುತ ನಾಗರಿಕ, ಪ್ರಜ್ಞಾವಂತ ಬರಹಗಾರ- ತನ್ನ ಸಮಾಜದ ದುರಿತಗಳ ತುರ್ತಿಗೆ ಅನುಗಾಲವೂ ಹೇಗೆ ಸಂವೇದಿಸು...
©2024 Book Brahma Private Limited.