ಕತೆಗಳ ರಚನೆಯಲ್ಲಿ ವಿಭಿನ್ನ ಪ್ರಯೋಗಶೀಲತೆ


ದಿನೇಶರ ಕಥೆಗಳಲ್ಲಿರುವ ವಸ್ತು, ಪಾತ್ರ, ಸನ್ನಿವೇಶಗಳ ವೈವಿಧ್ಯ ಈ ದೃಷ್ಟಿಯಿಂದ ಗಮನಾರ್ಹವಾದದ್ದು ಎನ್ನುತ್ತಾರೆ ಲೇಖಕ ಕೆ ಸತ್ಯನಾರಾಯಣ. ಅವರು ದಿನೇಶ್ ಮಡಗಾಂವ್ಕರ್ ಅವರ ‘ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು..’ ಕಥಾ ಸಂಕಲನದ ಕುರಿತು ಬರೆದ ಅನಿಸಿಕೆ ನಿಮ್ಮ ಓದಿಗಾಗಿ..

ಲೇಖಕರು: ದಿನೇಶ್ ಮಡಗಾಂವ್ಕರ್
ಕೃತಿ:ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು
ಪುಟ ಸಂಖ್ಯೆ:80
ಬೆಲೆ: 80
ಮುದ್ರಣ: 2020
ಪ್ರಕಾಶನ: ಸಂಗಾತ ಪುಸ್ತಕ

ಹೊಸ ಕತೆಗಾರರೊಬ್ಬರ ಮೊದಲ ಕಥಾ ಸಂಕಲನ ಓದುವಾಗ ನಾನು ಸಂಭ್ರಮದಿಂದ ನಿರೀಕ್ಷಿಸುವುದು ಕೆಲವೇ ಕೆಲವು ಸಂಗತಿಗಳನ್ನು. ಬದುಕಿನ ವೈವಿಧ್ಯ ಮತ್ತು ಆಳದ ಬಗ್ಗೆ ಅವರಿಗಿರುವ ಕುತೂಹಲ ಯಾವ ಸ್ವರೂಪದ್ದು? ದಿನೇಶರ ಕಥೆಗಳಲ್ಲಿ ಪ್ರಾದೇಶಿಕ ಅಂಶಗಳ ದಟ್ಟ ವಿವರಣೆಗಳು ಕಾಣುವ ಹಾಗೆ ಬದುಕಿನ ವಿವಿಧ ಸ್ತರಗಳ ಬಗ್ಗೆ ಇರುವ ಕುತೂಹಲ ಕೂಡಾ ಓದುಗರಿಗೆ ಗೊತ್ತಾಗುತ್ತದೆ. ಬದುಕು ನಮಗೆ ಕಾಣುವುದು ಒಂದೇ ಒಂದು ನೆಲೆಯಲ್ಲಿ. ಅದನ್ನು ‘ಇರುವ’ ಹಾಗೇ ಕಂಡಾಗ ವೈವಿಧ್ಯ ಭಿನ್ನ ನೆಲೆಗಳು ಗೋಚರವಾಗುತ್ತವೆ. ದಿನೇಶರ ಕಥೆಗಳಲ್ಲಿರುವ ವಸ್ತು, ಪಾತ್ರ, ಸನ್ನಿವೇಶಗಳ ವೈವಿಧ್ಯ ಈ ದೃಷ್ಟಿಯಿಂದ ಗಮನಾರ್ಹವಾದದ್ದು. ಹೀಗೆ ವಿವಿಧ ನೆಲೆಗಳ ಬಗ್ಗೆ ದಿನೇಶರಿಗೆ ಇರುವ ಸಮಾನವಾದ ಗೌರವ ಮತ್ತು ಅವರು ಕಥಾ ಪಯಣದಲ್ಲಿ ಇನ್ನೂ ತುಂಬಾ ದಿನ ಉಳಿಯುತ್ತಾರೆ, ಬೆಳೆಯುತ್ತಾರೆ ಎಂಬ ಭರವಸೆಯನ್ನು, ಆಸೆಯನ್ನು ಮೂಡಿಸುತ್ತದೆ.

ನಿರೂಪಣೆಯ ಕುಶಲತೆ ಮತ್ತು ಭಾಷಾ ವಿಶಿಷ್ಟತೆಯನ್ನು ಹದವಾಗಿ ಮೈಗೂಡಿಸಿಕೊಂಡಿರುವ ದಿನೇಶರಿಗೆ ಕಥನ ಕೌಶಲ ಈಗಾಗಲೇ ಸಿದ್ಧಿಸಿದೆ. ಇದು ಕತೆಗಳ ರಚನೆಯಲ್ಲಿರುವ ಪ್ರಯೋಗಶೀಲತೆಯಿಂದ ಗೊತ್ತಾಗುತ್ತದೆ. ಕತೆಯ ವಸ್ತು, ಅನುಭವಗಳಿಗೆ ತಕ್ಕಂತೆ ಅವರ ಕತೆಯ ಆಕೃತಿ ರೂಪುಗೊಳ್ಳುತ್ತದೆ. ಒಂದು ನಿರ್ದಿಷ್ಟ ಕಥಾ ಆಕೃತಿಯನ್ನು ಮೊದಲೇ ಮನಸ್ಸಿನಲ್ಲಿ ರೂಪಿಸಿಕೊಂಡು ಅದಕ್ಕೆ ತಕ್ಕ ಹಾಗೆ ಇವರು ಕಥೆಗಳನ್ನು ಬರೆಯುವುದಿಲ್ಲ ಎಂಬುದು ಅವರ ಬಗ್ಗೆ ನಮಗೆ ಗೌರವ ಮೂಡಿಸುತ್ತದೆ.

ಓಂ ಭೂರ್ ಭುವಸ್ವಃ, ವಿಪಶ್ಶನ, ಪ್ರಧ್ಯುಮ್ನನ ಪತ್ರಗಳು ಸಂಕಲನದಲ್ಲಿ ಗುರುತಿಸಬಹುದಾದ ಪೂರ್ಣತೆಯ ಕಡೆಗೆ ಕೈ ಚಾಚಿರುವ ಕಥೆಗಳು. ಈ ಕಥೆಗಳನ್ನು ಸಂಕಲನದ ಯಶಸ್ವಿ ಕಥೆಗಳ ಸಾಲಿಗೆ ಸೇರಿಸುವಾಗಲೇ ಈ ಕಥೆಯಲ್ಲಿ ಅಡಕವಾಗಿರುವ ಅನುಭವ, ವಸ್ತುಗಳಿಗೆ ಕಾದಂಬರಿ, ದೀರ್ಘ ಕಥಾನಕವಾಗುವ ಸಾಧ್ಯತೆಯಿರುವುದನ್ನು ಕೂಡ ಓದುಗರು ಗಮನಿಸುತ್ತಾರೆ. ಹಾಗಾಗಿ ಮುಂದಿನ ಕಥಾ ಬರವಣಿಗೆಯ ಬಗ್ಗೆ ದಿನೇಶರಿಗೆ ಹೆಚ್ಚು ಜವಾಬ್ದಾರಿಯಿದೆ.

ಉತ್ತರ ಕನ್ನಡ ಸೀಮೆಯಿಂದ ಪ್ರತಿಭಾವಂತ ಕತೆಗಾರರ ದಂಡೇ ದಂಡೆತ್ತಿ ಹೊರಟಂತಿದೆ, ಆ ದಂಡಿನಲ್ಲಿ ಕೂಡಾ ದಿನೇಶರು ನಾಳೆಯ ದಿನಗಳಲ್ಲಿ ಮುನ್ನೆಲೆಗೆ ಬಂದೇ ಬರುತ್ತಾರೆ ಎಂಬ ಪ್ರೀತಿಯ ನಿರೀಕ್ಷೆ ನನ್ನದು.

ದಿನೇಶ್ ಮಡಗಾಂವ್ಕರ್ ಅವರ ಪರಿಚಯ ..
‘ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು’ ಕೃತಿಯ ಬಗ್ಗೆ ಹೆಚ್ಚಿನದಾಗಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ..

ಕೆ.ಸತ್ಯನಾರಾಯಣ ಅವರ ಪರಿಚಯ..

MORE FEATURES

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...

ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ!

26-04-2024 ಬೆಂಗಳೂರು

‘ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ! ಹಾಗಾಗಿ ಮಾನಸಿಕ ಸಮಸ್ಯೆಗಳ ಬಗ್ಗೆ ನನಗೆ ತಿಳಿದಷ್ಟು ವ...

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...