"ಔಪಚಾರಿಕ ಶಿಕ್ಷಣ ಪಡೆದದ್ದು ಸ್ವಲ್ಪವೇ ಆದರೂ ಅನುಭವಗಳ ನೆಲೆಗಟ್ಟಿನಲ್ಲಿ ಅದಮ್ಯ ಚಿಂತಕಿ, ಲೇಖಕಿ. ಪ್ರಸ್ತುತ ಸ್ತ್ರೀ ಲಹರಿ ಕೃತಿ ಲೇಖಕಿಯ ಲೇಖನಿಯಿಂದ ಹೊರಬಂದ ಎರಡನೆಯ ಕೃತಿ. ಒಟ್ಟು 52 ಲೇಖನಗಳನ್ನು ಇದು ಹೊಂದಿದ್ದು ಎಲ್ಲವೂ ವಿನಯ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿ ಜನಮನ್ನಣೆ ಪಡೆದ ಅಂಕಣ ಬರಹಗಳು ಇವಾಗಿವೆ," ಎನ್ನುತ್ತಾರೆ ಮಂಜುಳಾ ಪ್ರಸಾದ್. ಅವರು ಲೇಖಕಿ ದೀಪಿಕಾ ಬಾಬು ಅವರ ‘ಸ್ತ್ರೀ ಲಹರಿ’ ಕೃತಿ ಕುರಿತು ಬರೆದ ವಿಮರ್ಶೆ.
ಪುಸ್ತಕದ ಹೆಸರು :- ಸ್ತ್ರೀ ಲಹರಿ
ಪ್ರಕಾರ :- ಅಂಕಣ ಬರಹಗಳು
ಲೇಖಕರು:- ದೀಪಿಕಾ ಬಾಬು, ಮಾರಘಟ್ಟ
ಪ್ರಕಾಶಕರು:- ಆರ್ಯನ್ ಪ್ರಕಾಶನ ಬೆಂಗಳೂರು
ಒಟ್ಟು ಪುಟಗಳು:- 154
ಬೆಲೆ:- ರೂ.210
ಗೆಳತಿ ದೀಪಿಕಾ ಬಾಬು ಮಾಮ್ಸ್ ಪ್ರೆಸ್ಸೋ ವೇದಿಕೆಯ ಮೂಲಕ ಪರಿಚಯವಾಗಿ, ಕೈಗಾ ಕಥಾಯಾನದ ಸಹಚರ್ಯೆಯಲ್ಲಿ ಹತ್ತಿರವಾಗಿ ಅಂದಿನಿಂದ ಇಂದಿನವರೆಗೂ ಆತ್ಮೀಯ ಗೆಳತಿ. ಅದಕ್ಕೂ ಮಿಗಿಲಾಗಿ ಒಬ್ಬ ಅದ್ಭುತ ಬರಹಗಾರ್ತಿ. ಔಪಚಾರಿಕ ಶಿಕ್ಷಣ ಪಡೆದದ್ದು ಸ್ವಲ್ಪವೇ ಆದರೂ ಅನುಭವಗಳ ನೆಲೆಗಟ್ಟಿನಲ್ಲಿ ಅದಮ್ಯ ಚಿಂತಕಿ, ಲೇಖಕಿ. ಪ್ರಸ್ತುತ ಸ್ತ್ರೀ ಲಹರಿ ಕೃತಿ ಲೇಖಕಿಯ ಲೇಖನಿಯಿಂದ ಹೊರಬಂದ ಎರಡನೆಯ ಕೃತಿ. ಒಟ್ಟು 52 ಲೇಖನಗಳನ್ನು ಇದು ಹೊಂದಿದ್ದು ಎಲ್ಲವೂ ವಿನಯ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿ ಜನಮನ್ನಣೆ ಪಡೆದ ಅಂಕಣ ಬರಹಗಳು ಇವಾಗಿವೆ.
ಮೊದಲಿಗೆ ಹೆಣ್ಣೊಬ್ಬಳ ಸ್ವಗತವೇನೋ ಎಂಬಂತೆ ಕಂಡು ಬರುವ ಶೀರ್ಷಿಕೆಗಳು, ವಿಚಾರದ ಕುರಿತು ಸ್ಪಷ್ಟ ಮಾಹಿತಿ ಅನಿಸಿಕೆಗಳನ್ನು ಹೇಳ ಹೊರಟಾಗ, ಹೌದಲ್ಲ! ಈ ಬಗ್ಗೆ ನಾವು ಮತ್ತಷ್ಟು ಚಿಂತಿಸಬೇಕು ಎಂಬ ಭಾವ ಓದುವವರಲ್ಲಿಯೂ ಮೂಡುತ್ತದೆ. ಅಬ್ಬಾ! ಲೇಖಕಿ ಎಷ್ಟೆಲ್ಲಾ ವಿಚಾರಗಳನ್ನು ಇಲ್ಲಿ ವಿನಿಮಯ ಮಾಡಿಕೊಂಡಿದ್ದಾರೆ ಎಂಬ ಅಚ್ಚರಿ ಕಾಡುತ್ತದೆ.
ಸಕಾಲಿಕ ಉದಾಹರಣೆಗಳ ಮೂಲಕ ಜಗತ್ತಿನ ಆಗು ಹೋಗುಗಳನ್ನು ತಿಳಿಸುತ್ತಾ, ಧರ್ಮವನ್ನು ಕೆದಕುತ್ತಾ ಹೆಣ್ಣು ಸಬಲೆ ಎಂಬ ಮನಸ್ಥಿತಿಗೆ ಓದುವರನ್ನು ತಂದು ನಿಲ್ಲಿಸುತ್ತಾರೆ. ಅವಳು ವಿಧವೆಯಾಗಿಯೇ ಬಾಳ ಬೇಕೇನು? ಹೆಂಡತಿ ಎಂಬ ಬಿರುದು ಕೊಟ್ಟವರು ಯಾರು? ಅವಳ ಮುಟ್ಟು ಮೈಲಿಗೆಯೇ? ಕುಟುಂಬಗಳ ವಿಭಜನೆಗೆ ಸರ್ಕಾರವೇ ಕಾರಣವಾಯಿತೇ? ಹೆಣ್ಣು ಅಂತ್ಯ ಸಂಸ್ಕಾರ ಮಾಡಬಾರದೇ? ಮುಂತಾದ ಪ್ರಶ್ನಾರ್ಥಕ ಲೇಖನಗಳು ಓದುಗನ ಅಂತರಾಳದ ಮನೋಭಾವದ ಚರ್ಚೆಗೆ ನೇರ ಪಂಥಾಹ್ವಾನ ನೀಡಿದಂತೆ ಕಂಡುಬರುತ್ತದೆ.
ಅವಳ ವಿಶಾಲ ದೃಷ್ಟಿಕೋನ ಬದಲಾಗಿದೆ, ಸೀರೆ ಎಂದರೆ ಬರಿ ಉಡುಗೆಯಲ್ಲ; ಅವಳಿಗೆ ಅದೊಂದು ಸಂಭ್ರಮ, ಅಕ್ಷಯವಾಗಲಿ ಹಬ್ಬದ ಸಂತಸ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಸ್ತ್ರೀ ವಾದಿ ಚಳುವಳಿಯ ತರಂಗ, ಭೂಮಿ ತೂಕದ ಹೆಣ್ಣು, ಅವಳ ಮಾನಸಿಕ ಸ್ಥಿರತೆ... ಮುಂತಾದ ಲೇಖನಗಳಲ್ಲಿ ಹೆಣ್ಣಿನ ಆಂತರಿಕ ಸಮರ್ಥನೆ ಮೇಳೈಸಿದೆ.
"ಹೆಣ್ಣಿಗೆ ಬಜಾರಿತನವೊಂದು ಸೇಫ್ಟಿ ಪಿನ್" ಎಂದು ಹೇಳುವ ಲೇಖಕಿ ಕೌಟುಂಬಿಕ ಬದುಕನ್ನು ಮೆಟ್ಟಿ ನಿಂತವಳು ಎಂಬಲ್ಲಿ ಹಲವಾರು ಸಾಧಕಿಯರ ಉದಾಹರಣೆಗಳನ್ನು ನೀಡುತ್ತಾರೆ.
ಹೀಗೆ ತಮ್ಮ ಲೇಖನಗಳಲ್ಲಿ ಹೆಣ್ಣಿನ ಸ್ಥಾನಮಾನ, ಅಸಹಾಯಕತೆ, ನಿರಂತರ ಶೋಷಣೆ ಇತ್ಯಾದಿ ಬಗೆಗಳಲ್ಲಿ ಹೆಣ್ಣಿಗಾಗುತ್ತಿರುವ ಅನ್ಯಾಯದ ಬಗ್ಗೆಯೂ ಮುಕ್ತವಾಗಿ ವಿವರಿಸಿದ್ದಾರೆ.
ಒಟ್ಟಾರೆ ಪ್ರಸ್ತುತ ಕಾಲಮಾನಕ್ಕೆ ತಕ್ಕುದಾದ ವಿಚಾರಗಳನ್ನು ಸಮಕಾಲಿನ ದೃಷ್ಟಿಕೋನದಲ್ಲಿ ಮುಕ್ತವಾಗಿ ಚರ್ಚಿಸಿರುವ ಸ್ತ್ರೀ ಲಹರಿ ಒಂದು ಅದ್ಭುತ ಕೃತಿ. ನನ್ನ ಈ ಉದಯೋನ್ಮುಖ ಲೇಖಕಿ ಗೆಳತಿಯ ಅತ್ಯದ್ಭುತ ಸೃಜನಶೀಲತೆಯಿಂದ ಮತ್ತಷ್ಟು ಕೃತಿಗಳು ಹೊರಬರಲಿ ಮತ್ತು ಎಲ್ಲವೂ ಜನ ಮನ್ನಣೆ ಪಡೆಯಲಿ ಎಂಬುದು ನನ್ನ ಅಭಿಲಾಷೆ.
- ಮಂಜುಳಾ ಪ್ರಸಾದ್
'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...
‘ಕನ್ನಡ ನುಡಿ ಬೆಳವಣಿಗೆಯನ್ನು ಕುರಿತು ಮಾತನಾಡುವುದೆಂದರೆ ಅದು ನುಡಿ ನೀತಿ ಮತ್ತು ಯೋಜನೆಯ ನಿಲುವುಗಳನ್ನು ಹೊರತು...
‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...
©2024 Book Brahma Private Limited.