ಕವಿತ್ವದಿಂದ ಛಾಯಾಗ್ರಹಣದತ್ತ ಇಣುಕಿದ ಭಗವತಿ

Date: 05-10-2020

Location: .


ಛಾಯಾಗ್ರಹಣ ಎಂದ ತಕ್ಷಣ ನೆನಪಿಗೆ ಬರುವುದು ಪುರುಷರ ಇಮೇಜ್‌ಗಳೆ. ಛಾಯಾಗ್ರಹಣವೆಂಬುದು ಮೆನ್‌ ನಿರ್ಮಿತ, ಮೆನ್ಸ್‌ ಕಾರ್ಯಗಳಿಗೇ ಸೀಮಿತ ಎಂದು ಬಿಂಬಿತವಾಗಿರುವ ಈ ಸನ್ನಿವೇಶದಲ್ಲಿ ವೈವಿಧ್ಯಮಯ ಬಣ್ಣದ ಭಾವಗಳನ್ನು ತಮ್ಮ ಕ್ರಿಯಾಶೀಲತೆಯ ಸೆರಗಿನಲ್ಲಿ ಸೆರೆಹಿಡಿದವರು ಎಂ. ಆರ್‌. ಭಗವತಿ.

ತಮ್ಮ ಕವಿ ಮನದ ಕಣ್ಣಿನಿಂದ ಕಣ್ಣಿಗೆ ಕಾಣಲಾಗದ ಕ್ಷಣವನ್ನು, ಪರಿಸರದ ದಿನನಿತ್ಯದ ಘಟನೆಗಳನ್ನು, ಪರಿಸರ ಪ್ರಪಂಚದ ಜೀವ ವೈವಿಧ್ಯತೆಯ ವಿಸ್ಮಯಗಳನ್ನು ತಮ್ಮ ಕ್ಯಾಮೆರಾ ಕುಂಚದಿಂದ ನೋಡುಗರಿಗೆ ಉಣಬಡಿಸುವವರಲ್ಲಿ ಪ್ರಮುಖರು ಎಂ. ಆರ್‌. ಭಗವತಿ. ನಮ್ಮಲ್ಲಿರುವ ಒಂದು ಮಿಥ್‌ ಕಲ್ಪನೆ ಎಂದರೆ ಈ ಮಾಯಾನಗರಿಯಲ್ಲಿ, ಕಾಂಕ್ರೀಟ್ ಕಾಡಿನಲ್ಲಿ ಅದೆಂತಹ ಜೀವವೈವಿಧ್ಯತೆ ಇದ್ದಿತು?. ಪಕ್ಷಿಗಳೆಲ್ಲಿ ಸಿಕ್ಕುತ್ತವೆ ಫೋಟೋ ಕ್ಲಿಕ್ಕಿಸಲು ಎಂದು ಮನದಲ್ಲೇ ಹಲುಬುವವರು ಹೆಚ್ಚು. ಆದರೆ ಈ ಮಿಥ್‌ ಅನ್ನು ಬ್ರೇಕ್ ಮಾಡುವ ಎಂ. ಆರ್‌. ಭಗವತಿ ಅವತು ತೆಗೆದ ಬಹುತೇಕ ಫೋಟೋಗಳು ಮಹಾನಗರ ಬೆಂಗಳೂರಿಗೇ ಸೇರಿರುತ್ತದೆ. ಇವರು ಛಾಯಾಗ್ರಾಹಕಿ ಮಾತ್ರವಲ್ಲ ಕವಿಯತ್ರಿಯೂ ಹೌದು. ವಿಜ್ಞಾನ, ಕಲೆ ವಿಷಯಗಳಲ್ಲೂ ಸಮಾನ ಆಸಕ್ತಿಯುಳ್ಳ ಅವರು ಮೂಲತಃ ಚಿಕ್ಕಮಗಳೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ ತಮ್ಮ ಪ್ರವೃತ್ತಿಯನ್ನು ಮುಂದುವರೆಸುತ್ತಿದ್ದಾರೆ. 'ಏಕಾಂತದ ಮಳೆ, 'ಚಂಚಲ ನಕ್ಷತ್ರಗಳು’ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ರೆಕ್ಕೆ ಬಿಚ್ಚಿ ಬಾನಲ್ಲಿ ಹಾರುತ್ತಲೇ ಮತ್ತೆ ಬೇರಿನೊಂದಿಗೆ ಬೆಸೆಯುವ, ಕಲರ್‌ ಕಲರವ ಸೃಷ್ಟಿಸುವ ಹಕ್ಕಿಗಳ ಇವರ ಅನೇಕ ಚಿತ್ರಗಳು ಪತ್ರಿಕೆಗಳಲ್ಲಿ, ಬ್ಲಾಗ್‌ಗಳಲ್ಲಿ ಪ್ರಕಟವಾಗಿವೆ.

ವೃತ್ತಿಗಿಂತ ಪ್ರವೃತ್ತಿಯ ಫೋಟೋಗ್ರಫಿ ಸುಖ

ಪಕ್ಷಿಗಳಿಗೆ ಸಂಬಂಧಿಸಿದ ಆರ್ತನಾಲಜಿ ಸ್ಟಡಿ ಮಾಡಿರದಿದ್ದರು ತಮ್ಮ ಏಕಲವ್ಯ ಆಸಕ್ತಿಯ ಏಕಾಗ್ರಹಿಕೆಯ ಮೂಲಕವೇ ಪಕ್ಷಿಗಳ ಚಲನವಲನ, ಜೀವನಶೈಲಿ, ಆಹಾರ ಸಂಸ್ಕೃತಿಗಳನ್ನು ಅಭ್ಯಸಿಸಿ ನಿಪುಣತೆ ಸಾಧಿಸಿದ್ದು ಮಾತ್ರವಲ್ಲ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಆ ಮೂಲಕ ತಾವು ಕಂಡುಕೊಂಡ ಅನೇಕ ವಿಸ್ಮಯ, ಸತ್ಯ ಸಂಗತಿಗಳನ್ನು ಇತರರಿಗೂ ತಲುಪಿಸಿದ್ದಾರೆ. ಹಾಗೆ ನೋಡಿದರೆ ಅವರ ಕೈಗೆ ಕ್ಯಾಮೆರಾ ಬಂದಿದ್ದು ಮೂರೂವರೆ ದಶಕಗಳ ನಂತರ. ಚಿಕ್ಕಂದಿನಿಂದ ಅಪ್ಪ ತೋರಿಸುತ್ತಿದ್ದ ಪಕ್ಷಿ, ಅವರ ತೆಗೆದ ಫೋಟೋಗಳು ಮುಂದೆ ತಾನೂ ಸಹ ಛಾಯಾಗ್ರಾಹಕಿ ಆಗಬೇಕೆಂಬ ಅದಮ್ಯ ಕನಸನ್ನು ಪ್ರೇರೇಪಿಸುತ್ತಿತ್ತು. ಅಂದು ಮೂಡಿದ ಈ ಛಾಯಾಗ್ರಹಣದ ಚಿತ್ರಣ ಅದೆಷ್ಟೋ ಕಾಲದ ಪರಿಧಿಯ ಸುಳಿಗೆ ಸಿಕ್ಕರು ಕುಗ್ಗದೆ ಛಾಯಾಗ್ರಹಣದ ತುಡಿತ ಎಂದಿನಂತೆ ಗುಪ್ತಗಾಮಿನಿಯಾಗಿ ನಿರಂತರವಾಗಿ ಎದೆಯಲ್ಲಿ ಹರಿಯುತ್ತಿತ್ತು. “ಅದಕ್ಕಾಗಿ ಟ್ರೈನಿಂಗ್ ಬೇಕಿಲ್ಲದಿದ್ದರು ಮೊದಲನೆಯದಾಗಿ ಆಸಕ್ತಿ, ಕ್ರಿಯೇಟಿವ್ ಮೈಂಡ್ ನಂತರ ತಾಳ್ಮೆ, ನೂತನ ಚೇತನ, ಹೂ-ಗಿಡ-ಬಳ್ಳಿ ಇವುಗಳ ಹೊರತು ವಿಭಿನ್ನ ನೋಟಗಳನ್ನು ಸಾಧಿಸಬೇಕಾಗುತ್ತದೆ. ಆದರೆ ಫೋಟೋಗ್ರಫಿಯನ್ನು ವೃತ್ತಿಯನ್ನಾಗಿಸಿ ನೋಡುವುದು ಬಹಳ ಕಷ್ಟಕರ. ಪ್ರವೃತ್ತಿಯಿಂದ ಮುಂದೆ ಬಂದರು ಮಹಿಳೆಯರಿಗೆ ಅವರದೇ ಆದ ಸಾಮಾಜಿಕ-ಕೌಟುಂಬಿಕ ಸವಾಲುಗಳನ್ನೆದುರಿಸಬೇಕಾಗುತ್ತದೆ” ಎನ್ನುತ್ತಾರೆ ಕವಿಯತ್ರಿ ಎಂ. ಆರ್‌. ಭಗವತಿ.

ವಿದೇಶಿ ಬರ್ಡ್ ಫೋಟೋಗ್ರಫಿ ಕನಸು

ಸದಾ ಚಟುವಟಿಕೆಯನ್ನು ಬಯಸುವ ಮನಸ್ಸು ಇದೀಗ ಪ್ರಾಣಿಗಳ, ಕೀಟಗಳ, ಹೂವುಗಳ ಸುತ್ತಲೂ ಅವರ ನೋಟ ಹರಿದಿದೆ. ಫೋಟೋಗ್ರಫಿಗಾಗಿ ಕುಟುಂಬದ ಜವಾಬ್ದಾರಿಯನ್ನು ಮರೆಯದ ಅವರು ಬೆಳಗ್ಗೆ ಐದಕ್ಕೆ ಎಲ್ಲಾ ಕೆಲಸಗಳನ್ನು ಮುಗಿಸಿ ಕ್ಯಾಮೆರಾ ಹೊತ್ತು ನಡೆಯುತ್ತಾರೆ ಮುಂಜಾನೆಯ ಹೊಸ ಚೇತನದಲ್ಲಿ ಹಕ್ಕಿಗಳನ್ನು ಎದುರುಗೊಳ್ಳಲು. ಇನ್ನು ಮುಂದೆ ದೇಶದಾದ್ಯಂತ ವಿದೇಶದಲ್ಲೂ ಸಂಚರಿಸಿ ಬರ್ಡ್ ಫೋಟೋಗ್ರಫಿ ಮಾಡಿ ನೋಡುಗರ ಎದುರಿಗೆ ವೈವಿಧ್ಯಮಯ ಜೀವ ಜಗತ್ತನ್ನು ತಮ್ಮ ಪುಟ್ಟ ಕ್ಯಾಮೆರಾದ ಮೂಲಕ ತೆರೆದಿಡುವ ಕನಸು ಹೊಂದಿದ್ದಾರೆ. ಈ ಅದಮ್ಯ ಕನಸುಗಳ ಬೆನ್ನೇರಿ ಹೊರಟಿರುವ ಈ ಕಲೆಗಾರ್ತಿಗೆ ನಮ್ಮದೂ ಒಂದು ಶುಭಹಾರೈಕೆ ಇರಲಿ.

- ಎಡೆಯೂರು ಪಲ್ಲವಿ

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...