ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

Date: 19-03-2024

Location: ಬೆಂಗಳೂರು


ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್ಯಾರ್ಥವನ್ನು ಹೊಂದಿರುತ್ತವೆ. ಯಾವುದೇ ಒಂದು ಕಾವ್ಯದಲ್ಲಿ ಧ್ವನಿ ಮುಖ್ಯವಾಗಿರುತ್ತದೆ. ಅಲ್ಲಿ ರೂಪಕಗಳಿರುತ್ತವೆ. ಸಂಕೇತಗಳಿರುತ್ತವೆ. ಆದರೆ ಶಾಸ್ತ್ರ ಕೃತಿಗಳಲ್ಲಿ ರೂಪಕ, ಧ್ವನಿ, ಸಂಕೇತಗಳಿಗೆ ಯಾವುದೇ ಅವಕಾಶಗಳಿರುವುದಿಲ್ಲ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ತುಮಕೂರು ಜಿಲ್ಲಾ ಲೇಖಕಿಯರ ಸಂಘ ಹಾಗೂ ಚಿಂತನ ಚಿತ್ತಾರ ಪ್ರಕಾಶನ, ಮೈಸೂರು ಸಹಯೋಗದಲ್ಲಿ ತುಮಕೂರು ವಿಶ್ವವಿಶ್ವವಿದ್ಯಾಲಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ 2024 ಮಾರ್ಚ್ 18ರ, ಸೋಮವಾರ ಆಯೋಜಿಸಿದ್ದ ತುಮಕೂರು ವಿವಿಯ ಸಹಾಯಕ ಪ್ರಾಧ್ಯಾಪಕಿ, ಕತೆಗಾರ್ತಿ ಡಾ.ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಜ್ಯೋತಿ ಅವರು ತಮ್ಮ ಕತೆಗಳಲ್ಲಿ ಮಹಾಭಾರತದ ಪ್ರಸಂಗಗಳನ್ನು ಮರುಸೃಷ್ಟಿ ಮಾಡಿ ಯಶಸ್ವಿಯಾಗಿ ಹೊಸ ಪ್ರಯೋಗ ಮಾಡಿದ್ದಾರೆ ಎಂದರು.

ಶಾಸ್ತ್ರಗಳನ್ನು ವಿಮರ್ಶೆ ಮಾಡುವುದಕ್ಕೂ ಕಾವ್ಯಗಳನ್ನು ವಿಮರ್ಶೆ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ಅರ್ಥದಲ್ಲಿ ಪುರಾಣ ಕಾವ್ಯ ಹಾಗೂ ಪುರಾಣ ಶಾಸ್ತ್ರಗಳನ್ನು ಪ್ರತ್ಯೇಕವಾಗಿ ನೋಡುವ ಗೆರೆ ಮಾಯವಾಗುತ್ತಿದೆ ಅಥವಾ ಹಿನ್ನಡೆಯನ್ನು ಅನುಭವಿಸುತ್ತಿವೆಯಾ ಎಂಬ ಆತಂಕವನ್ನು ಎರಡೂ ವಲಯದವರು ಉಂಟು ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ರಾಮಾಯಣ ಮಹಾಭಾರತದಂತಹ ಭಾರತದ ಮಹಾಕಾವ್ಯಗಳನ್ನು ಕುರುಡು ನಿರಾಕರಣೆ ಮಾಡಬಾರದು, ಪುರಾಣ ಕಾವ್ಯಗಳು ಯಾಕೆ ಇನ್ನೂ ಜೀವಂತವಾಗಿವೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕು. ಪುರಾಣ ಪಾತ್ರಗಳನ್ನು ದುರುಯೋಗಪಡಿಸಿಕೊಳ್ಳುವುದು ಬೇರೆ. ಪುರಾಣ ಪಾತ್ರಗಳನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕಾಗಿಯೇ ಅನೇಕ ಶಕ್ತಿಗಳು ನಮ್ಮ ನಡುವೆ ಇದ್ದೇ ಇರುತ್ತವೆ. ಆದರೆ ಅದರಾಚೆಗೆ ಪುರಾಣ ಕಾವ್ಯ ಯಾಕೆ ಹುಟ್ಟಿತು, ಅದರ ಪಾತ್ರಗಳು ಹೇಗೆ ರೂಪುಗೊಂಡವು? ವಚನಕಾರರ ಸಂದರ್ಭದಲ್ಲಿ ಅಲ್ಲಮ, ಬಸವಣ್ಣ ಮುಂತಾದವರು ವೇದ, ಪುರಾಣ, ತರ್ಕಗಳನ್ನು ಕುರಿತು ಆಡಿದ ಮಾತು ಅದು ಪುರಾಣ ಕಾವ್ಯಗಳನ್ನು ಕುರಿತು ಆಡಿದ ಮಾತು ಅಲ್ಲ. ಅದು ಶಾಸ್ತ್ರಗಳನ್ನು ಕುರಿತು ಆಡಿದ ಮಾತು. ಹಾಗಾಗಿ ಪುರಾಣ ಕಾವ್ಯಗಳನ್ನು ಅವಲೋಕನ ಮಾಡಲು ಬೇರೆ ರೀತಿಯ ಧ್ವನಿ ಇಟ್ಟುಕೊಳ್ಳಬೇಕಾಗುತ್ತದೆ. ಈ ಕಾರಣದಿಂದ ಅವು ಮತ್ತೆ ಮತ್ತೆ ಹುಟ್ಟುತ್ತವೆ ಎಂದರು.

ಒಂದು ಪಾತ್ರವನ್ನು ಇಟ್ಟುಕೊಂಡು ಕಾವ್ಯ, ಕಥೆ, ಕಾದಂಬರಿ ಅಳೆಯುವುದು ವಿಮರ್ಶೆಯಾಗುವುದಿಲ್ಲ.  ಅದರಲ್ಲಿ ಅನೇಕ ಪಾತ್ರಗಳು ಬರುತ್ತವೆ. ಎಲ್ಲ ಪಾತ್ರಗಳೂ ಸಂಯೋಜನೆಗೊಂಡು ಅಂತಿಮವಾಗಿ ಕಾವ್ಯ ಏನು ಹೇಳುತ್ತದೆ, ಹಾಗೆಯೇ ಮಹಾಭಾರತದ ಎಲ್ಲಾ ಪಾತ್ರಗಳು ಸಂಯೋಜನೆಗೊಂಡು ಅಂತಿಮವಾಗಿ ಮಹಾಭಾರತ ಏನು ಹೇಳುತ್ತದೆ, ಅದರ ಧ್ವನಿ ಏನು? ಅದರ ಆಶಯ ಏನು? ಎಂಬುದನ್ನು ಗುರುತಿಸಬೇಕೆ ಹೊರತು ಒಂದು ಸನ್ನಿವೇಶವನ್ನು, ಒಂದು ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಅದರ ಮುಖಾಂತರವೇ ಎಲ್ಲವನ್ನು ವಿಮರ್ಶೆ ಮಾಡುವುದು ಸಾಹಿತ್ಯ ವಿಮರ್ಶೆಯ ನಿಜವಾದ ಗುಣಲಕ್ಷಣ ಅಲ್ಲ, ಅದು ಸಾಹಿತ್ಯ ವಿಮರ್ಶೆ ಎಂದು ಅನ್ನಿಸಿಕೊಳ್ಳುವುದಿಲ್ಲ ಎಂದು ಅಭಿಪ್ರಾಯಪ್ರಪಟ್ಟರು. 

ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು, ಪರೀಕ್ಷಾಂಗ ಕುಲಸಚಿವ ಪ್ರೊ ಪ್ರಸನ್ನಕುಮಾರ್ ಕೆ, ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಶೇಟ್ ಎಂ ಪ್ರಕಾಶ್, ಪ್ರಜಾಪ್ರಗತಿ ಸಂಪಾದಕ ಎಸ್ ನಾಗಣ್ಣ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಲೇಖಕ ಜಿ ವಿ ಆನಂದಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 


 

MORE NEWS

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...

ರಾಜಧರ್ಮ ಎನ್ನುವುದು ಪ್ರಜಾಧರ್ಮಕ್ಕಿಂತ ಭಿನ್ನವಾದುದು : ನಿತಿನ್ ಪೈ

02-12-2023 ಬೆಂಗಳೂರು

ಬೆಂಗಳೂರು: 12ನೇ ಬೆಂಗಳೂರು ಸಾಹಿತ್ಯ ಉತ್ಸವವು ಲಲಿತ್ ಅಶೋಕ ಹೋಟೆಲ್ ನ ಆವರಣದಲ್ಲಿ ಭರದಿಂದ ನಡೆಯುತ್ತಿದ್ದು , ಮೊದಲ ದಿ...