ಬುದ್ಧನ ಕುರಿತಾದ ಕನ್ನಡನಾಡಿನ ಕುತೂಹಲಕರ ವ್ಯಾಖ್ಯಾನಗಳು: ನಟರಾಜ್ ಹುಳಿಯಾರ್

Date: 07-05-2020

Location: ಬೆಂಗಳೂರು


ನಡುರಾತ್ರಿ ಮೂರು ಗಂಟೆ. 

‘ಕರ್ನಾಟಕದಲ್ಲಿ ಮೂವರು ಹುಟ್ಟಾ ಬುದ್ಧಿಸ್ಟ್ ಗಳಿದ್ದಾರೆ ಗೊತ್ತೇನ್ರೀ, ರೆಡ್ಡೀ?’ ಎಂದರು ಪೂರ್ಣಚಂದ್ರ ತೇಜಸ್ವಿ. ತೇಜಸ್ವಿಯವರ ಜೊತೆ ಕೂತು ಕುವೆಂಪು ಸಮಗ್ರ ಕೃತಿಗಳನ್ನು ಪ್ರಕಟಣೆಗೆ ಸಿದ್ಧಪಡಿಸುತ್ತಿದ್ದ ಲೇಖಕ ಕೆ.ಸಿ.ಶಿವಾರೆಡ್ಡಿಯವರ ಕುತೂಹಲ ಕೆರಳಿ, ‘ಯಾರು ಸಾ?’ ಎಂದರು. ‘ದೇವನೂರ ಮಹಾದೇವ, ಕಿ.ರಂ.ನಾಗರಾಜ, ಕಡಿದಾಳು ಶಾಮಣ್ಣ! ಈ ಬಡ್ಡೀ ಮಕ್ಕಳ ಸಾವಾಸ ಅಲ್ಲ ನೋಡು! ಇವರ ಜೊತೆ ಸೇರಿದರೆ ಕತೆಯೇ ಮುಗಿದೋಯ್ತು’ ಎಂದು ತೇಜಸ್ವಿ ನಕ್ಕರು. ಈ ಘಟನೆಯನ್ನು ನೆನಸಿಕೊಳ್ಳುತ್ತಾ ಶಿವಾರೆಡ್ಡಿ ಬರೆಯುತ್ತಾರೆ: ‘ಈ ಮೂವರ ಜನಪರ ಕಾಳಜಿ, ಸಾಮಾಜಿಕ ಹೋರಾಟಗಳಲ್ಲಿನ ನಂಬಿಕೆ; ಸಾಹಿತ್ಯ, ಸಂಸ್ಕೃತಿಗಳ ಬಗೆಗಿನ ಗೌರವ, ಸ್ವಂತ ಕುಟುಂಬಕ್ಕಿಂತ ಸಮಾಜವನ್ನೇ ತಮ್ಮ ಕುಟುಂಬವನ್ನಾಗಿಸಿಕೊಂಡು ಆಧುನಿಕ ಫಕೀರರಂತೆ ಬದುಕುವ ರೀತಿ... ಇದೆಲ್ಲದರ ಬಗ್ಗೆಯೂ ತೇಜಸ್ವಿಯವರಿಗೆ ಅಪಾರ ಗೌರವ. ಈ ಕಾರಣಗಳಿಂದ ತೇಜಸ್ವಿ ಆ ನಡುರಾತ್ರಿ ಈ ಮೂವರನ್ನೂ ನೆನಸಿಕೊಳ್ಳುತ್ತಾ ಹುಟ್ಟಾ ಬುದ್ಧಿಸ್ಟ್‍ಗಳು ಎಂದಿದ್ದರು.’

ಹಿಂದೊಮ್ಮೆ ನಮ್ಮ ಗೆಳೆಯರೆಲ್ಲ ಸೇರಿ ಹೊರತರುತ್ತಿದ್ದ `ಕನ್ನಡ ಟೈಮ್ಸ್' ಪತ್ರಿಕೆಯಲ್ಲಿ, ತೇಜಸ್ವಿ ತೀರಿಕೊಂಡಾಗ ಶಿವಾರೆಡ್ಡಿ ಬರೆದಿದ್ದ ಈ ಸಂಭಾಷಣೆಯನ್ನು ಈಚೆಗೆ ಮತ್ತೊಮ್ಮೆ ಓದಿದೆ. ಬುದ್ಧಿಸ್ಟರನ್ನು ಕುರಿತಂತೆ ನಾನು ಓದಿದ ವ್ಯಾಖ್ಯಾನಗಳಲ್ಲಿ ಇದು ಕುತೂಹಲಕರವಾದ ಸಮಕಾಲೀನ ವ್ಯಾಖ್ಯಾನವಾಗಿತ್ತು. ಈ ‘ಹುಟ್ಟಾ ಬುದ್ಧಿಸ್ಟ್’ಗಳಲ್ಲಿ ಒಬ್ಬರಾದ ಕಿ.ರಂ.ನಾಗರಾಜ್ ಝೆನ್ ಬುದ್ಧಿಸಂನ ಕತೆಯೊಂದನ್ನು ಹೇಳಿದ್ದರು: ಒಬ್ಬ ಒಂದು ಊರಿಗೆ ಬಂದು ‘ಇಲ್ಲಿ ಝೆನ್ ಮಾಸ್ಟರ್ ಎಲ್ಲಿದ್ದಾರೆ?’ ಎಂದು ಆ ಊರಿನವನನ್ನು ಕೇಳುತ್ತಾನೆ. ಆತ ಟೀ ಅಂಗಡಿಯತ್ತ ಕೈ ತೋರಿಸುತ್ತಾ, ‘ಅಗೋ, ಅಲ್ಲಿ ಟೀ ಮಾಡ್ತಾ ಇದಾರಲ್ಲ, ಅವರೇ’ ಎನ್ನುತ್ತಾನೆ. ಈ ಕತೆಯನ್ನು ಚರ್ಚಿಸುತ್ತಾ ಕೀರಂ ಹೇಳಿದರು: ‘ಝೆನ್ ಬುದ್ಧಿಸಂನಲ್ಲಿ ಹಾಗೇ! ಗುರು ಅನ್ನೋನು ತೀರಾ ಬೇರೆ ಥರ ವಿಶಿಷ್ಟವಾಗಿ ಇರಲ್ಲ. ಅವನು ಬಡಗಿ ಕೆಲಸ ಮಾಡ್ತಿರ್ತಾನೆ, ಗಾರೆ ಕೆಲಸ ಮಾಡ್ತಿರ್ತಾನೆ. ಅವನು ಎಲ್ಲರಿಗಿಂತ ಡಿಫರೆಂಟ್ ಆಗಿ ‘ಗುರು’ ಥರ ಆಡ್ತಿರಲ್ಲ!’ ಝೆನ್ ನೋಟಕ್ರಮದಲ್ಲಿ ‘ಗುರು ಅನ್ನುವವನು ಯಾರೂ ಇಲ್ಲ; ಎಲ್ಲರೂ ವಿದ್ಯಾರ್ಥಿಗಳೇ’ ಎಂಬುದನ್ನು ಕೀರಂಗೆ ಯಾರೂ ನೆನಪಿಸಬೇಕಾಗಿರಲಿಲ್ಲ. ಅದು ಅವರ ವ್ಯಕ್ತಿತ್ವದಲ್ಲೇ ಇತ್ತು.

ಕರ್ನಾಟಕದಲ್ಲಿ ಹಲವು ರೀತಿಗಳಲ್ಲಿ ಹರಡಿರುವ ಬುದ್ಧಚಿಂತನೆ ಹಾಗೂ ಬುದ್ಧನ ನಂತರದ ವ್ಯಾಖ್ಯಾನಗಳನ್ನು ನೆನೆಯುತ್ತಿರುವಾಗ, ಇಂಡಿಯಾದುದ್ದಕ್ಕೂ ಬೌದ್ಧಧರ್ಮ ಪ್ರಸಾರ ಮಾಡುವ ಬೋಧಕರನ್ನು ತರಬೇತು ಮಾಡುವ ಬುದ್ಧಿಸ್ಟ್ ಸೆಮಿನರಿಯೊಂದನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಅಂಬೇಡ್ಕರ್ ಯೋಚಿಸಿದ್ದು ನೆನಪಾಗುತ್ತದೆ. 1954ರಲ್ಲಿ ಬೆಂಗಳೂರಿಗೆ ಬಂದಿದ್ದ ಅಂಬೇಡ್ಕರ್ ಅವರಿಗೆ ಮೈಸೂರು ಮಹಾರಾಜರು ಐದು ಎಕರೆ ಜಮೀನು ಕೊಟ್ಟಿದ್ದರು. ಈ ವಿವರಗಳು ಧನಂಜಯ ಕೀರ್ ಅವರ ‘ಡಾ.ಅಂಬೇಡ್ಕರ್: ಲೈಫ್ ಅಂಡ್ ಮಿಷನ್’ ಪುಸ್ತಕದಲ್ಲಿವೆ: ಈ ಸೆಮಿನರಿಯಲ್ಲಿ ಬುದ್ಧವಿಹಾರಗಳು, ಶಾಲಾಕೊಠಡಿಗಳು, ಬೃಹತ್ ಗ್ರಂಥಭಂಡಾರ; ಬೋಧಕರು, ವಿದ್ಯಾರ್ಥಿಗಳು, ಸಂಶೋಧಕರಿಗೆ ವಸತಿಗೃಹಗಳು; ಜಗತ್ತಿನ ದೊಡ್ಡ ವಿದ್ವಾಂಸರು ಬುದ್ಧಿಸಂ ಬಗ್ಗೆ ಬರೆದ ಪುಸ್ತಕಗಳನ್ನು ಮುದ್ರಿಸಲು ಮುದ್ರಣಾಲಯ- ಇವೆಲ್ಲವೂ ಇರಬೇಕೆಂಬುದು ಅಂಬೇಡ್ಕರ್ ಕನಸಾಗಿತ್ತು. ಅದಕ್ಕಿಂತ ಕೆಲವು ವರ್ಷಗಳ ಕೆಳಗೆ ಬನಾರಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೆದುರು ಮಾತಾಡುತ್ತಾ, ಅಂಬೇಡ್ಕರ್ ಆತ್ಮವಿಶ್ವಾಸದಿಂದ ಹೇಳಿದ್ದರು: ‘ಶಂಕರಾಚಾರ್ಯರು ಹಿಂದೂಧರ್ಮಕ್ಕೆ ಏನು ಮಾಡಿದರೋ, ಅದನ್ನು ನಾನು ಬೌದ್ಧಧರ್ಮಕ್ಕೆ ಮಾಡುತ್ತೇನೆ.’ ಬೌದ್ಧಧರ್ಮವನ್ನು ಪುನರುಜ್ಜೀವನಗೊಳಿಸುವ ಮಹತ್ತರ ಆಶಯ ಅಂಬೇಡ್ಕರ್ ಅವರಲ್ಲಿ ಬೆಳೆಯತೊಡಗಿತ್ತು. ಆದರೆ ಬೌದ್ಧಧರ್ಮ ಸೇರಿದ ಕೆಲವೇ ತಿಂಗಳುಗಳಲ್ಲಿ ಅಂಬೇಡ್ಕರ್ ತೀರಿಕೊಂಡಿದ್ದರಿಂದ ಈ ಕೆಲಸ ಅಪೂರ್ಣವಾಯಿತು. ಸಾಮ್ರಾಟ್ ಅಶೋಕನ ನಂತರ ಬೌದ್ಧಧರ್ಮವನ್ನು ಇಂಡಿಯಾದುದ್ದಕ್ಕೂ ಹಬ್ಬಿಸುವ ಅಂಬೇಡ್ಕರ್ ಮಹತ್ವಾಕಾಂಕ್ಷೆ ಈಡೇರಲಿಲ್ಲ. ಅಂಬೇಡ್ಕರ್ ತಮ್ಮ ಕೊನೆಯ ಘಟ್ಟದಲ್ಲಿ ಬರೆದ ‘ಬುದ್ಧ ಅಂಡ್ ಕಾರ್ಲ್ ಮಾರ್ಕ್ಸ್’ ಬರಹದಲ್ಲಿರುವ ಚಿಂತನೆಗಳ ವಿಸ್ತರಣೆಯ ಸಾಧ್ಯತೆ ಹಾಗೂ ಬೌದ್ಧಧರ್ಮ ಸ್ವೀಕಾರದ ನಂತರ ಅವರು ಹೊಸ ನೆಲೆಯಲ್ಲಿ ಆರಂಭಿಸಬಹುದಾಗಿದ್ದ ಸಾಮಾಜಿಕ ವ್ಯಾಖ್ಯಾನಗಳ ಸಾಧ್ಯತೆ ಇವೆರಡೂ ಕೈಗೂಡದೆ ಉಳಿದವು. ಎಲ್ಲಕ್ಕಿಂತ ಮುಖ್ಯವಾಗಿ, ಭಾರತದ ಇಬ್ಬರು ಧೀಮಂತರ ಆಧ್ಯಾತ್ಮಿಕ ಚಿಂತನೆಗಳ ತಾತ್ವಿಕ ಬೆಸುಗೆ- ಹಿಂದೂ ಸುಧಾರಣವಾದಿ ಗಾಂಧೀಜಿ ಹಾಗೂ ಬೌದ್ಧ ಬಾಬಾಸಾಹೇಬರ ಹೊಸ ತಾತ್ವಿಕ ಬೆಸುಗೆ- ಅಂಬೇಡ್ಕರ್ ಚಿತ್ತದಲ್ಲಿ ಸಾಧ್ಯವಾಗಬಹುದಿತ್ತೇ? ಮಹಾತ್ಮರ ಬಗ್ಗೆ ಬೌದ್ಧ ಬಾಬಾಸಾಹೇಬರ ಕಹಿ ಕಡಿಮೆಯಾಗಬಹುದಿತ್ತೇ? ಬುದ್ಧಿಸಂ ದೊಡ್ಡ ಪ್ರಮಾಣದಲ್ಲಿ ಜನಸಾಮಾನ್ಯರ ಕಡೆಗೆ ಚಲಿಸಬಹುದಿತ್ತೇ? ಈ ಪ್ರಶ್ನೆಗಳು ಕೂಡ ಹಾಗೇ ಉಳಿದವು.

ಬೆಂಗಳೂರಿನಲ್ಲಿ ಅಂಬೇಡ್ಕರ್ ಅವರಿಗೆ ಕೊಟ್ಟ ಐದು ಎಕರೆಯಲ್ಲಿ ಈಗ ಬುದ್ಧವಿಹಾರವಿದೆ. ಆದರೆ ಬೌದ್ಧ ಧರ್ಮ ಪ್ರಚಾರಕರ ಸೆಮಿನರಿ ಸ್ಥಾಪನೆಯಾಗಲಿಲ್ಲ. ಅದೇನೇ ಇದ್ದರೂ, ಕರ್ನಾಟಕದಲ್ಲಿ ಬೌದ್ಧಚಿಂತನೆಯನ್ನು ಜೀವಂತವಾಗಿಟ್ಟಿರುವುದು ಕನ್ನಡ ಸಾಹಿತ್ಯ ವಲಯ ಹಾಗೂ ದಲಿತ ಚಳುವಳಿಯ ವಲಯ ಎಂಬುದು ಚರಿತ್ರೆಯಲ್ಲಿ ಖಚಿತವಾಗಿ ದಾಖಲಾಗಲಿದೆ. ಒಮ್ಮೆ ಕರೀಗೌಡ ಬೀಚನಹಳ್ಳಿ, ಅಂಬೇಡ್ಕರ್ ಬೌದ್ಧಧರ್ಮ ಸೇರುವ ಮೊದಲೇ ಕುವೆಂಪು ಅವರ ‘ಕಾನೂರು ಹೆಗ್ಗಡಿತಿ’ (1936) ಕಾದಂಬರಿಯ ನಾಯಕ ಹೂವಯ್ಯ ಬೆಂಗಳೂರಿನಿಂದ ಬುದ್ಧನ ವಿಗ್ರಹ ತರಿಸಿ ಮಲೆನಾಡಿನ ಮೂಲೆಯ ಕಾನುಬೈಲಿನ ಶಿಖರದಲ್ಲಿ ಪ್ರತಿಷ್ಠಾಪಿಸುವ ರೂಪಕದ ಮಹತ್ವವನ್ನು ಚರ್ಚಿಸಿದ್ದರು. ಹಿಂದೂ ಧರ್ಮದ ಶೋಷಣೆಯ ಮೂಲಗಳನ್ನು ಪ್ರಶ್ನಿಸುವ ಹೂವಯ್ಯ `ಮತಾಂತರ'ವಾಗದಿದ್ದರೂ ಅವನು ಬುದ್ಧಮಾರ್ಗವನ್ನು ಸ್ವೀಕರಿಸುವುದು ಬುದ್ಧಜಯಂತಿಯ ದಿನ; ‘ಜ್ಞಾನದ ವಿಜ್ಞಾನದ ಮತಿಖಡ್ಗದಿ ಮೈದೋರುವಳೈ ನವಕಾಳಿ!’ ಎಂಬ ನವಜೀವನ ಗಾನದೊಂದಿಗೆ ಕಾದಂಬರಿ ಮುಕ್ತಾಯವಾಗುವ ರೀತಿ ಮುಂದೊಮ್ಮೆ ಬೌದ್ಧಮಾರ್ಗ ಹಾಗೂ ಆಧುನಿಕ ವೈಚಾರಿಕತೆಯನ್ನು ಬೆಸೆಯಲಿದ್ದ ಅಂಬೇಡ್ಕರ್ ದರ್ಶನವನ್ನು ಎದುರು ನೋಡುತ್ತಿರುವಂತಿದೆ. ಆನಂತರ, ಬೇಂದ್ರೆ ನಿತ್ಯದ ಪರಿಚಿತ ವಿವರಗಳನ್ನೇ ರೂಪಕವಾಗಿಸಿ ಬುದ್ಧನ ಚಿತ್ರವೊಂದನ್ನು ಕೊಟ್ಟರು:

ಬುದ್ಧ, ಬುದ್ಧ, ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ!

ಇದ್ದರೇನಿಲದಿದ್ದರೇನೆನಲು ಗೆದ್ದ 

ಈ ವರ್ಣನೆಯ ಮೂಲಕ ಬೇಂದ್ರೆ ಬುದ್ಧಪ್ರತಿಮೆಯನ್ನು ಆಕರ್ಷಕವಾಗಿ ಕಡೆದಿಟ್ಟರು. ಜಿ.ಪಿ. ರಾಜರತ್ನಂ ಹಾಗೂ ಆನಂತರ ರಾಜಶೇಖರ್ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಓದಬಲ್ಲ ಭಾಷೆಯಲ್ಲಿ ಬುದ್ಧಚಿಂತನೆಯನ್ನು ಸರಳವಾಗಿ ಬರೆದು ಜನಪ್ರಿಯಗೊಳಿಸಿದರು. ನೂರಾರು ಪದ್ಯಗಳು, ನಾಟಕಗಳು, ಕತೆಗಳು, ಲಂಕೇಶರ ‘ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’, ಡಿ.ಆರ್. ನಾಗರಾಜರು ಅಂಬೇಡ್ಕರ್ ಲೇಖನವನ್ನು ವಿಶ್ಲೇಷಿಸಿ ಬರೆದ ‘ಬುದ್ಧನೋ? ಕಾರ್ಲ್ ಮಾರ್ಕ್ಸೋ ಬರಹದಲ್ಲಿ ಈ ಎರಡೂ ದಾರಿಗಳು ಕೂಡುವ, ಭಿನ್ನವಾಗುವ ಬಿಂದುಗಳನ್ನು ಕಾಣಿಸಿದ ರೀತಿ, ಗುಲಬರ್ಗಾದ `ಬುದ್ಧವಿಹಾರ'... ಹೀಗೆ ಕರ್ನಾಟಕದಲ್ಲಿ ಬುದ್ಧ ದರ್ಶನ, ವ್ಯಾಖ್ಯಾನಗಳ ಪರಂಪರೆ ಈಚಿನ ನಟರಾಜ ಬೂದಾಳು ಅವರ ವ್ಯಾಖ್ಯಾನದವರೆಗೂ ಬೆಳೆಯುತ್ತಲೇ ಇದೆ.       

 ಹಾಗೆಯೇ, ಸಮೂಹದ ನೆಲೆಯಲ್ಲಿ ಬುದ್ಧನನ್ನು ಜೀವಂತವಾಗಿಟ್ಟ ಯಶಸ್ಸು ಕರ್ನಾಟಕದ ದಲಿತ ಚಳುವಳಿಗೆ ಸಲ್ಲಬೇಕು. ದಲಿತ ಚಳುವಳಿಯ ಪ್ರೇರಕರಲ್ಲೊಬ್ಬರಾದ ಬಿ.ಬಸವಲಿಂಗಪ್ಪ ಬೌದ್ಧಮಾರ್ಗವನ್ನು ಜನಪ್ರಿಯಗೊಳಿಸಲೆತ್ನಿಸಿದರು. ದಲಿತ ಸಂಘಟನೆಗಳು ಏರ್ಪಡಿಸಿದ ಬೌದ್ಧಧರ್ಮಸ್ವೀಕಾರ ಸಮಾರಂಭಗಳು ಬೌದ್ಧ ಚಳುವಳಿಯಾಗಿ ಬೆಳೆಯದೇ ಪ್ರದರ್ಶನದ ಮಟ್ಟದಲ್ಲೇ ನಿಂತರೂ, ಅವು ಬೌದ್ಧ ಮಾರ್ಗವನ್ನು ವೈದಿಕ ಚಿಂತನೆಯ ಎದುರು ಪ್ರಬಲವಾಗಿ ಪ್ರತಿಪಾದಿಸುತ್ತಲೇ ಬಂದಿವೆ. ಚಾಮರಾಜನಗರದ ಮನೋರಖ್ಖಿತ ಭಂತೇಜಿ ಕಾಲೇಜಿನಲ್ಲಿ ಚರಿತ್ರೆಯ ಉಪನ್ಯಾಸಕರಾಗಿ, ಚೇತವನದಲ್ಲಿ ನೆಲೆಸಿ ಬೌದ್ಧಧರ್ಮವನ್ನು ಅರ್ಥಪೂರ್ಣವಾಗಿ ಪ್ರಸಾರ ಮಾಡುತ್ತಲೇ ಇದ್ದಾರೆ. ಅವರೊಮ್ಮೆ ‘ಹಿಂದುಳಿದ ವರ್ಗದ ಹುಡುಗ, ಹುಡುಗಿಯರಿಗೆ ಬೌದ್ಧಮಾರ್ಗದ ಬಗ್ಗೆ ಹೇಳುವ ಚಿಂತಕರೇ ಇಲ್ಲವಲ್ಲ?’ ಎಂದಿದ್ದರು. ಈ ಪ್ರಶ್ನೆಯನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಬೇಕಾದ ತುರ್ತು ಈಗ ಹೆಚ್ಚಿದೆ. ಹಿಂದುಳಿದ ವರ್ಗಗಳ ಹುಡುಗರಿಗೆ ಬುದ್ಧನ ಚಿಂತನೆಯ ಪರ್ಯಾಯಗಳನ್ನು ತೋರಿಸದಿದ್ದುದರಿಂದ ಕೂಡ ಅವರು ಧರ್ಮದ ಹೆಸರಿನಲ್ಲಿ ಹಿಂಸೆ ಹರಡುವ ಮೇಲುಜಾತಿಯ ನಾಯಕರ ಕಾಲಾಳುಗಳಾಗಿ ನಾಶವಾಗುತ್ತಿದ್ದಾರೆ. ಕರ್ನಾಟಕದ ದಲಿತ ಚಳುವಳಿ ಅಂಬೇಡ್ಕರರನ್ನೂ, ಅಂಬೇಡ್ಕರ್ ಮೂಲಕ ಬುದ್ಧನನ್ನೂ ಹೇಳಿಕೊಟ್ಟಿದ್ದರಿಂದ ದಲಿತ ಹುಡುಗರಿಗೆ ಹೆಚ್ಚಿನ ವೈಚಾರಿಕ ಪ್ರಬುದ್ಧತೆ ಬಂದಿರುವುದನ್ನು ಹಿಂದುಳಿದ ವರ್ಗಗಳ ತರುಣ, ತರುಣಿಯರು ಗಮನಿಸಬೇಕು.

ಆದರೂ ಮಹಾರಾಷ್ಟ್ರದಲ್ಲಾದಂತೆ ದೊಡ್ಡ ಮಟ್ಟದ ಬೌದ್ಧಧರ್ಮಸ್ವೀಕಾರ ಕರ್ನಾಟಕದಲ್ಲಾಗಲಿಲ್ಲ. ಡಾ.ಸಿದ್ಧಲಿಂಗಯ್ಯನವರು ದಶಕಗಳ ಕೆಳಗೆ ವಿಧಾನಪರಿಷತ್ತಿನಲ್ಲಿ ಕರ್ನಾಟಕದಲ್ಲಿ ಬೌದ್ಧ ಧರ್ಮೀಯರ ಸಂಖ್ಯೆ ಕುರಿತು ಪ್ರಶ್ನೆ ಕೇಳಿದಾಗ, ಸರ್ಕಾರ ಕೊಟ್ಟ ಅಧಿಕೃತ ಸಂಖ್ಯೆ ನಿರಾಶಾದಾಯಕವಾಗಿತ್ತು. ಸಿದ್ಧಲಿಂಗಯ್ಯನವರ ಪ್ರಕಾರ, ‘ಮಹಾರಾಷ್ಟ್ರದಲ್ಲಿ ಮಹರ್ ಜಾತಿಯ ಜನರು ತಮಗೆ ಪರಿಶಿಷ್ಟ ಜಾತಿಯ ಮೀಸಲಾತಿ ಸಿಗದಿದ್ದರೂ ಪರವಾಗಿಲ್ಲ ಎಂದು ಬೌದ್ಧಧರ್ಮವನ್ನು ಸ್ವೀಕರಿಸಿದರು. ಮೀಸಲಾತಿಯಿಲ್ಲದ ಸ್ಥಿತಿಯನ್ನೇ ಸವಾಲಾಗಿ ತೆಗೆದುಕೊಂಡು ಎಲ್ಲ ರಂಗಗಳಲ್ಲೂ ಸ್ಪರ್ಧಿಸಿ ಯಶಸ್ಸು ಪಡೆದರು. ತೊಂಬತ್ತರ ದಶಕದಲ್ಲಿ ವಿ.ಪಿ.ಸಿಂಗ್ ನವಬೌದ್ಧರಿಗೂ ಮೀಸಲಾತಿ ವಿಸ್ತರಿಸಿದರು. ಆದರೆ ಕರ್ನಾಟಕದಲ್ಲಿ ಸರ್ಕಾರಗಳು ನವಬೌದ್ಧರಿಗೆ ಪ್ರತ್ಯೇಕ ಸರ್ಟಿಫಿಕೇಟ್ ಕೊಡಲು ಹಿಂದೆಮುಂದೆ ನೋಡುತ್ತಿವೆ.’  

ಅದೇನೇ ಇರಲಿ, ತೇಜಸ್ವಿ ಹೇಳಿದಂಥ `ಹುಟ್ಟಾ ಬುದ್ಧಿಸ್ಟ'ರ ಸಂಖ್ಯೆ ಹೊಸ ತಲೆಮಾರಿನಲ್ಲಿ ಬೆಳೆಯದಿದ್ದರೆ ಇವತ್ತಿನ ಕರ್ನಾಟಕದಲ್ಲಿ ಬುದ್ಧಿಸಂ ಹೊಸ ವ್ಯಾಖ್ಯಾನಗಳನ್ನು, ಆಯಾಮಗಳನ್ನು ಪಡೆಯುವುದು ಕಷ್ಟ!        

ಕೊನೆ ಟಿಪ್ಪಣಿ : ಧರ್ಮ ಮತ್ತು ಆಹಾರ : ಬೌದ್ಧಧರ್ಮಕ್ಕೆ ಸಸ್ಯಾಹಾರವನ್ನು ತಳಕು ಹಾಕಿ ಗೊಂದಲ ಹುಟ್ಟಿಸುವವರಿದ್ದಾರೆ. ಕೆಲವು ವರ್ಷಗಳ ಕೆಳಗೆ ಲೇಖಕರೊಬ್ಬರು ಬೌದ್ಧಧರ್ಮ ಸ್ವೀಕಾರ ಮಾಡಿದರು. ಅವತ್ತು ಆ ಲೇಖಕರ ಜೊತೆ ಹೋಟೆಲಿಗೆ ಹೋದ ಮಿತ್ರರೊಬ್ಬರು ‘ಸಾರಿ ಸಾರ್! ನಾವು ನಾನ್ ವೆಜ್ ಆರ್ಡರ್ ಮಾಡ್ತಿದೀವಿ’ ಎಂದರು. 

‘ನನಗೂ ಅದೇ ಇರಲಿ’ ಎಂದರು ಲೇಖಕರು. 

‘ಇದೀಗ ಪ್ರತಿಜ್ಞಾ ಸ್ವೀಕಾರವಾಯಿತಲ್ಲ ಸಾರ್?’  

‘ನೋ! ನೋ! ಮಾಂಸಾಹಾರದ ಬಗೆಗಿನ ಪ್ರತಿಜ್ಞಾವಿಧಿ ಬಂದಾಗ ನಾನು ಸೈಲೆಂಟಾಗಿದ್ದೆ!' ಈ ಮಾತುಕತೆ ಕೇಳಿಸಿಕೊಂಡ ವಿದ್ವಾಂಸರೊಬ್ಬರು ಬೌದ್ಧಧರ್ಮದಲ್ಲಿ ‘ಸಸ್ಯಾಹಾರ ಭಯೋತ್ಪಾದನೆ ಇಲ್ಲ' ಎಂದು ಹೇಳಿ ಈ ಗೊಂದಲವನ್ನು ಪರಿಹರಿಸಿದರು. ಇದರ ಆಸುಪಾಸಿನಲ್ಲೇ ಮತ್ತೊಬ್ಬ ಲೇಖಕರು ತಾನು ಬೌದ್ಧನಾದ ಮೇಲೆ ಮಾಂಸಾಹಾರ ಸೇವಿಸಬಹುದೋ ಇಲ್ಲವೋ ಎಂಬ ಗೊಂದಲದಲ್ಲಿದ್ದರು. ಆಮೇಲೆ  ಒಮ್ಮೆ ಇದ್ದಕ್ಕಿದ್ದಂತೆ, ‘ಬುದ್ಧಿಸಂ ಪ್ರಕಾರ ಯಾವುದೇ ಆಹಾರವನ್ನು ಭಿಕ್ಷೆಯಾಗಿ ಪಡೆಯಬಹುದಂತೆ! ಸ್ನೇಹಿತರು ನಮಗೆ ಮಾಂಸಾಹಾರ ಕೊಡಿಸಿದಾಗ ಅದನ್ನು ತಿಂದರೆ ಅದಕ್ಕೆ ದೋಷವಿಲ್ಲ! ಅದು ಭಿಕ್ಷೆ’ ಎಂದು ಸಮಸ್ಯೆಯನ್ನು ಬಗೆಹರಿಸಿಕೊಂಡರು!

ಅದೇನೇ ಇರಲಿ, ಆಹಾರಪದ್ಧತಿಗಳ ಬಗ್ಗೆ ಫರ್ಮಾನು ಹೊರಡಿಸುವ ಧರ್ಮ ಈ ಕಾಲದಲ್ಲಂತೂ ಬೆಳೆಯಲಾರದು. ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂ ವೇಗವಾಗಿ ಬೆಳೆದದ್ದಕ್ಕೆ ಆಹಾರಪದ್ಧತಿಯ ಬಗ್ಗೆ ಅವು ಇಟ್ಟುಕೊಂಡಿರುವ ಮುಕ್ತ ಧೋರಣೆಯೂ ಕಾರಣವಿರಬಹುದು. ಕೆ.ಎಸ್. ಭಗವಾನ್ ‘ಹಿಂದೂಧರ್ಮ ಬೆಳೆಯದಿರಲು ಸಸ್ಯಾಹಾರ ಕುರಿತಂತೆ ಅದರ ಅತಿಯಾದ ವ್ಯಸನವೂ ಕಾರಣ’ ಎಂದಿದ್ದರು. ಡಿ.ಆರ್. ನಾಗರಾಜ್ ಕಂಡಂತೆ, `ಥಾಯ್ಲೆಂಡಿನ ಬೌದ್ಧ ಭಿಕ್ಷುಗಳೆಲ್ಲ ಮಾಂಸಾಹಾರಿಗಳು.' ಬೌದ್ಧರಲ್ಲಿ ಸಸ್ಯಾಹಾರವಾದಿಗಳ ಕ್ರೌರ್ಯ ಇಲ್ಲ. ಅಹಿಂಸಾತತ್ವವನ್ನು ಮಾಂಸಾಹಾರದ ವಿರುದ್ಧ ವಾದಿಸಲಷ್ಟೇ ಬಳಸುತ್ತಾ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮಾನವಹಿಂಸೆಯನ್ನು ಬೆಂಬಲಿಸುವ ಆಷಾಢಭೂತಿಗಳಿಗೆ ಈ ಥರದ ಸೂಕ್ಷ್ಮಗಳು ಗೊತ್ತಿರಲಿಕ್ಕಿಲ್ಲ.

-ನಟರಾಜ್ ಹುಳಿಯಾರ್

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...