“ಛಾಯಾಗ್ರಹಣ ಕೂಡ ಒಂದು ಕಲಾ ಮಾಧ್ಯಮ. ಸೃಜನಶೀಲ ಮನಸ್ಥಿತಿ, ಕಲಾವಿದನೊಬ್ಬನ ಕಣೋಟ ಇದ್ದರಷ್ಟೇ ಉತ್ತಮ ಛಾಯಾಚಿತ್ರಗಳು ಮೂಡಲು ಸಾಧ್ಯ” ಎನ್ನುತ್ತಾರೆ ಡಿ.ಜಿ. ಮಲ್ಲಿಕಾರ್ಜುನ. ಅವರು ತಮ್ಮ ‘ಚೌಕಟ್ಟು ಪಾಡು’ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ.
ಇದೊಂದು ಹಳೆಯ ಕಥೆ. ಒಮ್ಮೆ ಖ್ಯಾತ ಛಾಯಾಗ್ರಾಹಕನೊಬ್ಬನನ್ನು ಭೇಟಿಯಾಗಲು ಅವನ ಸ್ನೇಹಿತ ಬಂದ. ಆತ ಒಬ್ಬ ಹೆಸರಾಂತ ಸಾಹಿತಿ. ಈತನ ಕೆಲವು ಛಾಯಾಚಿತ್ರಗಳನ್ನು ನೋಡಿ. “ಛಾಯಾಚಿತ್ರಗಳು ತುಂಬಾ ಚೆನ್ನಾಗಿವೆ. ನಿನ್ನ ಬಳಿ ಒಳ್ಳೆಯ ಕ್ಯಾಮೆರಾ ಇರಬೇಕಲ್ಲವಾ?” ಎಂದ. ಅದಕ್ಕೆ ಆತ ಹೌದು, “ನೀನೂ ಚೆನ್ನಾಗಿ ಬರೀತೀಯ, ನಿನ್ನ ಬಳಿಯೂ ಒಳ್ಳೆಯ ಟೈಪ್ ರೈಟರ್ ಇರಬೇಕಲ್ವಾ?” ಎಂದ.
ಬಹುತೇಕ ಛಾಯಾಗ್ರಾಹಕರ ಅನುಭವವಿದು. ಒಳ್ಳೆಯ ಛಾಯಾಚಿತ್ರವನ್ನು ನೋಡಿದೊಡನೆ, “ಯಾವ ಕ್ಯಾಮೆರಾ ಬಳಸುತ್ತೀಯ?”, “ಬೆಲೆಬಾಳುವ ಕ್ಯಾಮೆರಾ ಇರಬೇಕಲ್ವಾ?” ಎಂಬರ್ಥದ ಮಾತುಗಳು ಕೇಳಿಬರುವುದು ಸಹಜ. ಛಾಯಾಗ್ರಹಣ ಕೂಡ ಒಂದು ಕಲಾ ಮಾಧ್ಯಮ. ಸೃಜನಶೀಲ ಮನಸ್ಥಿತಿ, ಕಲಾವಿದನೊಬ್ಬನ ಕಣ್ಣೋಟ ಇದ್ದರಷ್ಟೇ ಉತ್ತಮ ಛಾಯಾಚಿತ್ರಗಳು ಮೂಡಲು ಸಾಧ್ಯ.
ಛಾಯಾಗ್ರಹಣ ಎಂಬ ಹವ್ಯಾಸ ನನ್ನನ್ನು ಹಲವಾರು ಸ್ಥಳಗಳಿಗೆ ಕೊಂಡೊಯ್ದಿದೆ. ರಾಜ್ಯದ ನಾನಾ ಸ್ಥಳಗಳು, ದೇಶದ ಹಲವು ಮೂಲೆಗಳನ್ನು ತೋರಿಸಿದೆ. ಕ್ಯಾಮೆರಾ ಎಂಬ ಪಾಸ್ಪೋರ್ಟ್ 22 ದೇಶಗಳನ್ನು ಸುತ್ತಿಸಿದೆ. ಕುತೂಹಲ, ಅಚ್ಚರಿಯಿಂದ ಹೋದೆಡೆಯೆಲ್ಲಾ ಪರಿಸರ, ಸೌಂದರ್ಯ, ಸಂಸ್ಕೃತಿ, ಜನಜೀವನ, ಭಾಷೆ, ಆಹಾರ, ಆಚಾರ ಮುಂತಾದವುಗಳನ್ನು ಕಂಡು ಅನುಭವಿಸಿದ್ದೇನೆ. ನನ್ನ ಬೊಗಸೆಗೆ ನಿಲುಕಿದ್ದನ್ನು ಚಿತ್ರ ಹಾಗೂ ಬರಹಗಳ ರೂಪದಲ್ಲಿ ಕೊಡಲು ಪ್ರಯತ್ನಿಸಿದ್ದೇನೆ. "ತಿರುಗಾಟ ಅಥವಾ ಪ್ರವಾಸವೆಂದರೆ ಗ್ರಹಿಕೆಯ ವಿಸ್ತಾರ” ಎನ್ನುತ್ತಾರೆ. ಈ ಚಿತ್ರ ಬರಹಗಳನ್ನು ನೋಡಿ, ಓದಿ ಕುತೂಹಲದ ಮನಸ್ಸು ಜಾಗೃತವಾಗಲಿ, ತಿರುಗಾಡುವ ಹವ್ಯಾಸ ನಿಮ್ಮದಾಗಲಿ.
-ಡಿ.ಜಿ. ಮಲ್ಲಿಕಾರ್ಜುನ
'ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ' ಎನ್ನುವ ಗಾದೆ ಮಾತು ಎಷ್ಟು ಸತ್ಯವೋ ಅದೇ ರೀತಿ ಬದುಕಿನಲ್ಲಿ ಯಶಸ್ಸ ...
‘ಇದು ಪುರಾತನ ದೇವಾಲಯಗಳ ಅಸಂಖ್ಯ ಸಾಗರದ ನಡುವಿನ ಚಿಕ್ಕ ಬಿಂದು ಮಾತ್ರ. ಜನಮಾನಸದಿಂದ ದೂರವಾದ ದೇವಾಲಯಗಳನ್ನು ಜನರ...
‘ಕನಸುಗಳನ್ನು ಕಂಡರಷ್ಟೆ ಸಾಲದು; ಅವುಗಳನ್ನು ನನಸುಗಳನ್ನಾಗಿ ಮಾಡಿಕೊಳ್ಳುವ ಛಲ, ಹಠ, ಮತ್ತು ನಿರಂತರ ಪರಿಶ್ರಮ , ...
©2024 Book Brahma Private Limited.