ಗಜಲ್ ಕಾವ್ಯ ಪ್ರೇಮಿಗಳ ಗುಲ್ಮೋಹರ: ಮಲ್ಲಿಗೆ ಸಿಂಚನ


ಕವಿ ಡಾ. ಮಲ್ಲಿನಾಥ ಅವರ ಅನ್ವೇಷಣೆ,ಭಾಷಾ ಅಧ್ಯಯನ ಮಂಡನೆ, ಕನ್ನಡ ಗಜಲ್ ಬರಹಗಾರಿಗೆ ತುಂಬಾ ಉಪಕಾರಿಯಾಗಿದೆ, ಪದಗಳ ಅರ್ಥ ತರ್ಜುಮೆಯೊಂದಿಗೆ ಅವುಗಳ ಕಾರ್ಯ ನಿರ್ವಹಣೆ ಕುರಿತು ವಿವರವಾಗಿ ಮನದಟ್ಟಾಗುವಂತೆ ಹಿರಿಯ ಗಜಲ್ಕಾರರ ಸಾಲಿನೊಂದಿಗೆ ಪ್ರಸ್ತುತ ಪಡಿಸಿದ ರೀತಿ ತುಂಬಾ ಅನನ್ಯವಾಗಿದೆ ಎನ್ನುತ್ತಾರೆ ನಬೀಲಾಲ್ ಮಕಾನ್ದಾರ್ ಅಮ್ಮಾಪುರ ಸುರಪುರ. ಅವರು ಮಲ್ಲಿನಾಥ ಎಸ್ ತಳವಾರ ಅವರ ಮಲ್ಲಿಗೆ ಸಿಂಚನ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ..

ಕೃತಿ: ಮಲ್ಲಿಗೆ ಸಿಂಚನ
ಲೇಖಕ: ಡಾ. ಮಲ್ಲಿನಾಥ ಎಸ್ ತಳವಾರ
ಪುಟಗಳು: 90
ಬೆಲೆ:100
ಮುದ್ರಣ: 2021

ಈ ಕೃತಿಯು ಪ್ರೇಮ ಸಂಭ್ರಮದ ಒಲವಿನ ಉದ್ಯಾನವನಲಿ ಅರಳಿ ನಿಂತು ಗಜಲ್ ಕಾವ್ಯ ಪ್ರೇಮಿಗಳ ಗುಲ್ಮೋಹರನಂತೆ ನಳ ನಳಿಸುತ್ತಿದೆ. ಗಾಲಿಬ್ ಸ್ಮೃತಿಯ ಗುಲಾಬಿ ಗುಲ್ದಸ್ತ ನಂತರದ ಈ ಮಲ್ಲಿಗೆ ಸಿಂಚನದ ಪರಿಮಳವು ಗಜಲ್ ರಚನೆಯ ಬರಹಕೆ ಉಸ್ತಾದ್ ಆಗಿ ಮೂಡಿ ಬಂದಿದೆ.ಇದರಲಿ 60 ಗಜಲ್ಗಳಿವೆ. ಇವುಗಳಲಿ ಹಿಮಗಟ್ಟಿದ ಮನುಷ್ಯನ ಬಾಳಿನ ದುಃಖ ದುಮ್ಮಾನ ನೋವು ನಲಿವು ಒಲವು ಚೆಲುವು ನುಡಿ ಜೀವನದಿಯಾಗಿ ಕರಗಿ ಹರಿದಿದೆ. ಬದುಕಿನ ಪ್ರೀತಿಯ ಸಮುದ್ರೆಯಾಗಿ ಭೋರ್ಗರೆಯುತ್ತಿದೆ. ಬಾಳ ಕುರುಕ್ಷೇತ್ರದ ಈ ಗ್ರಂಥ ರಚನೆಗೆ 18 ವಿದ್ವನ್ಮಣಿಗಳ ಆಕರ ಗ್ರಂಥಗಳು ಬೆಳಕಾಗಿವೆ.

ಪ್ರಕಾಶ್ ಸಿಂಗರ ಮುನ್ನುಡಿ ಕಾವ್ಯ ಕನ್ನಿಕೆಯ ಚೆಂದನೆಯ ಮುಖ ಪುಟಕೆ ಕನ್ನಡಿ ಹಿಡಿದಿದೆ. ಗಜಲ್ ಮಾತೃ ಭಾಷೆಯ ಪಾರಿಭಾಷಿಕ ಪದಕೋಶ ಪಾರಿವಾಳ ಮನ್ ಲಗನ್ ಗಗನಕ್ಕೆ ಚುಂಬಿಸಿದೆ. ಇದರಲಿ ಹೃಸ್ವ ಸ್ವರಕೆ ಒಂದು ಮಾತ್ರಾ, ದೀರ್ಘಕೆ ಎರಡು ಮಾತ್ರಾ, ದ್ವೀತ್ತ್ವಕೆ ಬೆಹರ್ ನ ಲಘು ಗುರು ಮಾತ್ರಾ ನಮೂದಾಗಿಲ್ಲ.

ಗಜಲ್ ಸಂಖ್ಯೆ 1,ರ ಸಾಲು, "ಪ್ರೀತಿ ಪ್ರೇಮ ಗಂಧವನ್ನು ಅರಿಯದವರು ಮೌಲ್ಯವನು ಹೊಸಕಿ ಹಾಕಿ ನಲಿಯುವರು" ಈ ಚರಣಗಳು ಜಿಹ್ವೆಯನು ಪಾದುಕೆಯಾಗಿಸಿಕೊಂಡ ನುಡಿಯ ನಡೆಯ ವಿಕೃತ ನಲಿವು ಸೂಚ್ಯವಾಗಿ ಹೇಳುತ್ತವೆ.

ಗಜಲ್ ಸಂಖ್ಯೆ 2,ಹೃದಯವು ಚೂರಾಗಿದ್ದರೂ ಮಿಡಿಯುತ್ತಿದೆ, ನೋವಿನ ಪರದೆ ಎಳೆದು ಜೀವಿಸುತ್ತಿರುವೆ, ಸದ್ದಾಗದಂತೆ ಪೆಟ್ಟು ಬಿದ್ದಿದೆ ಈ ನನ್ನ ಮನಕೆ, ಆ ಬೇನೆಯನ್ನು ನುಂಗಿ ಉಸಿರಾಡುತ್ತಿರುವೆ. ಈ ಸಾಲುಗಳು ಇಂದಿನ ಪರಿಸರದಲಿ ಸಹೃದಯಿಕ್ಕೊದಗಿದ ದುಸ್ಥಿತಿಯನು ಪ್ರತಿಬಿಂಬಿಸುತ್ತವೆ.

ಗಜಲ್ ಸಂಖ್ಯೆ 3, ಸ್ವರ್ಗ ಮೀರಿಸುವ ಗುಡಿಸಲು ಬಡತನದಲ್ಲಿಯೂ ಮೆರೆದ ಒಲವಿನ ಪ್ರತೀಕ.

ಗಜಲ್ ಸಂಖ್ಯೆ 4, ಬದುಕಲು ಅಂತರ ಕಾಪಾಡಿಕೊಳ್ಳಬೇಕು ದೊಡ್ಡವರಿಂದ ಇಲ್ಲಿ, ಸಮುದ್ರವನ್ನು ಸೇರಿದ ಮೇಲೆ ಆ ನದಿಗಳಂತೆ ತನ್ನತನ ಉಳಿಸಿಕೊಳ್ಳಲಾಗುವದಿಲ್ಲ.
ದೊಡ್ಡವರಿಂದ ಅಂತರ ಕಾಯ್ದುಕೊಳ್ಳದಿದ್ದರೆ ಸಿಹಿ ನೀರ ಸಿಂಧೂ ನದಿಗಳು ಮಹಾ ಸಾಗರವಾಗಿ ಕುಡಿಯಲು ಬಾರದ ಉಪ್ಪು ನೀರಾಗಿ ಮಾರ್ಪಡುತ್ತವೆ ಎಂಬುದು ಮಾರ್ಮಿಕ ಮಂಡನೆ. ಆದಷ್ಟು ದೂರ ಕಾಯುವಿಕೆ ಅಗತ್ಯ. ಮೌಲ್ಯಗಳು ಕಾಗದ ಗೋರಿಯಲಿ ಕಾಲು ಚಾಚಿ ಮಲಗಿವೆ, ಸೋತ ಹೃದಯಗಳಿಗೆ ಸಾಂತ್ವನ ಹೇಳಲು ಯಾರು ಬರುವದಿಲ್ಲ. ಇದು ಬದುಕು ಬರಹಕೆ ಪೂರಕವಿಲ್ಲದೆ ಕಡತ ಪುಸ್ತಕದ ಬದನೆ ಕಾಯಿ ಎಂಬಂತಾಗಿದೆ. ಕೊನೆ ಸಾಲು " ಪ್ರೀತಿಯೂ ವ್ಯವಹಾರದ ಸರಕಿನಂತೆ ಕಲ ಬೆರಕೆ ಆಗುತ್ತಿದೆ ಮಲ್ಲಿ,ಮನು ಕುಲವನು ಪ್ರೀತಿಸುವವರು ಬಹಳ ದಿನ ಜೀವಿಸುವದಿಲ್ಲ. ಈ ಸಾಲು ಭೂತ ವರ್ತಮಾನದ ಐತಿಹಾಸಿಕತೆಯ ವಾಸ್ತವನ್ನೊಳಗೊಂಡಿದೆ.

ಗಜಲ್ ಸಂಖ್ಯೆ 5, ಹಸಿ ರಕ್ತದೊಂದಿಗೆ ನಿನ್ನ ಹೊಸ್ತಿನು ಹೇಗೆ ತುಳಿಯಲಿ,ಪ್ರೇಮ ಗೌರವ ಹತ್ಯೆಯ ರಕ್ತಸಿಕ್ತ ಬಾಳಿನ ಸೂಚಕವಾಗಿದೆ.

ಗಜಲ್ ಸಂಖ್ಯೆ 6,.ಜುಲ್ ಕಾಫಿಯ , ಸಮಾಜ ಶರಾಬಿಯನ್ನು ಆಡಿಕೊಳ್ಳುತ್ತದೆ ಮೈಖಾನದೊಂದಿಗಿನ ಅವನ ಬಂಧವನು ಹುಡುಕುವದಿಲ್ಲ. ಇಲ್ಲಿ ಮದಿರೆ ಮಾನಿನಿಗೊದಗಿದ ಸ್ಥಿತಿ ಕಂಡು ದುನಿಯಾದ ಈ ವ್ಯವಸ್ಥೆಯ ಕರಾಳತೆಯನು ಪ್ರಶ್ನಿಸುವುದಿಲ್ಲ ಎಂಬ ಗಾಲಿಬ್ ಅಂತಃಕರಣ ಜುಲ್ತಾ ಸೀಮಾಬ್ ನಂತೆ ಇಂದ್ರಜಾಲ ಜಮಾನದ ಅಪ ಮೌಲ್ಯಿಕರಣದ ಹರಿವು ಸಂಕೇತಿಸಿದೆ.

ಗಜಲ್ ಸಂಖ್ಯೆ 7ರಲ್ಲಿ ಬಡತನ ಒಡಲ ಹಸಿವಿನ ದುರ್ಲಾಭ ಪಡೆದ ಬೆತ್ತಲ ರೂಪಾಯಿಯ ಹಾಸಿಗೆಯ ಮೇಲಿನ ದೌರ್ಜನ್ಯ ಚೆಲುವ ಹೀರುವ ರಣ ಹದ್ದುಗಳ ಎರಗುವಿಕೆ ಅಸಹಾಯಕತೆಯ ಮಡಿಲು ಬಚ್ಚಿಡಲು ಒದ್ದಾಟದ ಅಮಾನುಷ ಆಮೀಷದ ಬದುಕಿನ ಅನಾವರಣ.

ಗಜಲ್ ಸಂಖ್ಯೆ 8, ನಾಡೋಜ ಗೀತಾ ನಾಗಭೂಷಣರ ಭಾವ ಶ್ರದ್ಧಾಂಜಲಿ ಬದುಕು ಬರಹದ ಜೀವನದ ಕಥಾ ಹಂದರ ಮನ ಮುಟ್ಟುವಂತಿದೆ.

ಗಜಲ್ ಸಂಖ್ಯೆ9,ಕಂಬನಿ ಹೂಮಳೆ ಮಧುಶಾಲೆ ಮಧು ಬಟ್ಟಲು ಮೇಹಂದಿ ಹೃದಯ ತೈಲ ಮೆರೆವಣಿಗೆ ಒಡ್ಡೋಲಗ ದರ್ಶನ.

ಗಜಲ್ ಸಂಖ್ಯೆ 10,ಮಾತ್ರಾಧಾರಿತ ಗಣ ಗಜಲ್ ,ದೇವರ ಆಶಿರ್ವಾದದಿಂದ ಮಗು ಪಡೆದರು, ದೇವಾಲಯದಲಿ ಅನ್ನಕ್ಕಾಗಿ ಕುಂತರು, ಕೈ ತುತ್ತು ಎಂಜಲಾಯಿತು ದಾನವಾಗಿ ಅನ್ನವನು ರಸ್ತೆಗೆ ಚೆಲ್ಲಿದರು, ನಾಕವ ಪಡೆಯಲು ಸಂತಾನ ಪಡೆದರು,ನರಕದ ದ್ವಾರದಲಿ ಹೆತ್ತವರು ನಿಂತರು. ಈ ಸಾಲುಗಳು ಎಂಜಲೆಲೆಗೆ ಪರದಾಡುವ ಕಂಕುಳಲಿ ಮಗುವನು ಸಿಕ್ಕಿಸಿಕೊಂಡ ಹಸಿವಿನ ಓಟದ ದಾರುಣ ಪ್ರಸ್ತುತ ಬದುಕಿನ ಸಾಕ್ಷ್ಯ ಚಿತ್ರಣ ಇದಾಗಿದೆ.

ಗಜಲ್ ಸಂಖ್ಯೆ11,ಮೂಡಣದಲಿ ರವಿ ಅಂಬೆಗಾಲು ಇಟ್ಟು ಅಕ್ಷಯ ಉಲ್ಲಾಸ ಹಂಚಿಕೆ ಬಾಳಿನ ಅನನ್ಯ ಕಲೆಯ ಪಾಠಿಸುತ್ತಿದ್ದಾನೆ ನೋಡಿ, ಪ್ರಕೃತಿ ಹಸಿರಿನ ಐಸಿಯ ಬೆಳಕಿನ ಕಿರಣದ ರಮಣೀಯ ನೋಟದ ಸಾಲು ಸಾಲು ಗಿಡ ಮರ.

ಗಜಲ್ ಸಂಖ್ಯೆ 12, ಜುಲ್ ಕಾಫಿಯಾ ಕದಡಿದ ಎದೆಯ ಸರೋವರ ಪ್ರೇಮ ಧ್ಯಾನದ ಮೂಲಕ ತಿಳಿಗೊಳಿಸುವ ಬದುಕಿನಂಗಳದ ತಪೋವನದ ತಂಗಾಳಿಯ ಆಲಿಂಗನ ಪ್ರಪಂಚವ ಗೆಲ್ಲುವ ಬೆನ್ನೆಲು ಪಕ್ಕೆಲುಬು ಸೊಗಸಾದ ಪ್ರತಿಮೆ.

ಗಜಲ್ ಸಂಖ್ಯೆ 13, ಸ್ವರ ಕಾಫಿಯ ಗಜಲ್, ಸೌಂದರ್ಯ ಆಸ್ವಾದಿಸಲು ಮನವು ಹದಗೊಂಡಿರಬೇಕು ಪ್ರೀತಿ ಹೂಬಳ್ಳಿ ಸಂತಸ ಅವನಿಯಲಿ ಸುಂದರ ಬೀಜ ಬಿತ್ತನೆ ಕಾವ್ಯ.

ಗಜಲ್ ಸಂಖ್ಯೆ14, ಹಸಿರೇ ಜೀವದ ಉಸಿರು,ಒಲವೇ ಚೆಲುವಾದ ಜೀವನದ ತಂಗಾಳಿಯ ಉಸಿರು ನಿಸರ್ಗವೇ ಚೆಂದನೆಯ ಮಡಿಲು.

ಗಜಲ್ ಸಂಖ್ಯೆ 15, ಹುಟ್ಟು ಸಾವು ಜಂಜಾಟದಿ ಮುಕ್ತಿ ನೀಡುವ ಮರಣಕೇಕೆ ಭೀತರಾಗುವುದು ಸಾವು ತೃಪ್ತಿಯ ಬದುಕಿನ ಚಿರನಿದ್ರೆ ಪ್ರೀತಿಯ ಹೋರಾಟದ ಎಂಟೆದೆಯ ಬಾಳಿನ ಭಂಟ ನೆಂಟ.

ಗಜಲ್ ಸಂಖ್ಯೆ 16, " ಮಾ" ಲಂಕೇಶರ ಅವ್ವ. ಚಿತ್ತಾಲರ ತಾಯಿ , ಮ್ಯಾಕ್ಸೀಂ ಗಾರ್ಕಿಯ ನೆನಪಿಸುವ ಸುಂದರ ರಚನಾತ್ಮಕ ಗಜಲ್.

ಗಜಲ್ ಸಂಖ್ಯೆ 17, ತರಹೀ ಗಜಲ್ , ಅನುರಾಗ ಅನುಬಂಧ ಹೃದಯ ಮದರಂಗಿ ಒಲವಿನ ಪ್ರೇಮ ಚಿತ್ತಾರದ ಅಮರ ಲೋಕದ ಸೃಜನಶೀಲ ಸೃಷ್ಟಿ.

ಗಜಲ್ ಸಂಖ್ಯೆ 18,ಜನನ ಮರಣಕೆ ಕಾರಣಗಳು ಮಾನದಂಡಗಳು ಮಸಣಕೆ ಸೂಚನೆಗಳಿಲ್ಲ. ಹುಟ್ಟಿನೊಂದಿಗೆ ಸಾವು ಉಚಿತ ಖಚಿತ.

ಗಜಲ್ ಸಂಖ್ಯೆ 19,ದುಡ್ಡಿಗಾಗಿ ಬದುಕಿನ ಶಾಂತಿ ನೆಮ್ಮದಿಯ ಹರಾಜು ಜೋಳಿಗೆಯ ಬದಲು ತೊಟ್ಟಿಲು ತೂಗುತ್ತಿವೆ ಲಾಲಿ ಹಾಡು ಮೌನ.

ಗಜಲ್ ಸಂಖ್ಯೆ 20, ಲಿಂಗ ತಾರತಮ್ಯ ಆದರ್ಶ ಮಾದರಿಯಾಗದಿರಲಿ ಅಗ್ನಿ ಪ್ರವೇಶ,ಜೂಜಿಗೆ ಪತ್ನಿಯ ಮಾರಾಟ,ಪುರುಷರಿಗೆ ಆದರ್ಶ ಮಾದರಿಯಾಗದಿರಲಿ! ಅದ್ಭುತ ಮೌಢ್ಯ ನಿವಾರಣಾ ಶೈಲಿಯ ವಿಮೋಚನಾ ವಿವರಣೆ.

ಗಜಲ್ ಸಂಖ್ಯೆ 21,ಜುಲ್ ಕಾಫಿಯ ,ದೇವರಿಗಾಗಿ ಹುಡುಕಾಟ.

ಸಂಖ್ಯೆ 22, ಸಂಪೂರ್ಣ ಮತ್ಲಾ ಗಜಲ್,ಶಾಂತಿಯು ಮರಿಚಿಕೆ , ಸಂಖ್ಯೆ 23, ಹೆಣ್ಣಿನ ಅಳಲು ಎಲ್ಲಾ ಆವಸ್ಥೆಗಳ ವಿಶ್ಲೇಷಣೆ. ಸಂಖ್ಯೆ 24,ಮೂಲ ಹುಡಕಬ್ಯಾಡೊ,ತಿರಚೋದೆ ಮೂಲ ಅನ್ಕೊಂಡ ಪಾಂಡಿತ್ಯ ತೋರಬ್ಯಾಡೊ! ಕಾಲ ಗರ್ಭದಾಗ ಅದೆಷ್ಟ ಮೂಲ ಅಡಗ್ಯಾವೊ.

ಗಜಲ್ ಸಂಖ್ಯೆ 25, ಶ್ರಮ ಜೀವಿ ಕಾರ್ಮಿಕರು ಗಗನ ಚುಂಬಿ ಗೋಪುರ ರಕ್ಷಿಸುವ ಸಂಜೀವಿನಿ ಅವರು ,ಯಂತ್ರಗಳ ನಾಡಿ ಮಿಡಿತ ಬಲ್ಲ ಹೃದಯವಂತರು, ಸಾವಿನೊಂದಿಗೆ ಸೆಣಸುವ ಚಿರಂಜೀವಿಗಳವರು. ಬೆವರಿನ ಬೆಲೆ ಕೊಡದೆ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದೆ ಬೆವರು ಆರುವ ಮುನ್ನ ಸಮಾನ ಕೆಲಸಕೆ ಸಮಾನ ಪ್ರತಿಫಲ ನೀಡದೆ ಹೋರಾಟಕೂ ಸ್ಪಂದಿಸದವರು ಮನುಷ್ಯರೇ ಅಲ್ಲ ಎಂಬ ಧ್ವನಿ ಶ್ರಮಜೀವಿಗಳ ಪರವಾಗಿ ಮಾರ್ದನಿಸಿದೆ.

ಗಜಲ್ ಸಂಖ್ಯೆ 26. ಜೀ ಹುಜೂರ್ ಎನ್ನುವ ಸಂಸ್ಕತಿ ಬೆಳೆಯುತ್ತಿದೆ ಜಾಲಿಮ್. ಆಡಂಬರದ ಬದುಕಿಗೆ ಜಮಾನ ಸೋಲುತಿದೆ ಜಾಲಿಮ್..ಈ ದ್ವಿಪದಿಗಳು ಪ್ರಜಾ ಪ್ರಭುಗಳನ್ನೆ ತನ್ನ ಅಡಿಯಾಳಿನಂತೆ ನಡೆಯಿಸಿಕೊಳ್ಳುವ ನೋಡುವ ಅಧಿಕಾರಶಾಹಿಯ ಬಂಡವಾಳಶಾಹಿಯ ಅಕ್ಷರಶಾಹಿಯ ದೌರ್ಜನ್ಯವನು ಕೋಮಲ ಮೃದುವಾಗಿ ಮನ ಮುಟ್ಟುವ ಹಾಗೆ ಹೃದಯ ಸ್ಪರ್ಶಿಯಾಗಿ ಮೂಡಿ ಬಂದಿದೆ.

ಗಜಲ್ ಸಂಖ್ಯೆ 27,ತಾಯಿ ತನ್ನ ಕರುಳಿನ ಕುಡಿಗಾಗಿ ಮಾಡುವ ತ್ಯಾಗ ಮಮತೆಯನು ಸಾರಿದೆ.

ಗಜಲ್ ಸಂಖ್ಯೆ 28, ಕುಟುಂಬ ಪರಿವಾರ ಚೆಂದಾಗಿ ಬಾಳುವ ಉಪದೇಶಿಸುವ ಅಂದವಾದ ಸಾಲುಗಳ ನುಡಿ ಪುಷ್ಪ ಗುಚ್ಛದ ಹೆಣಿಗೆಯಾಗಿದೆ.

ಗಜಲ್ ಸಂಖ್ಯೆ 29, ತರಹಿ ಗಜಲ್(,ಪ್ರೇಮಾ ಹೂಗಾರ ಅವರ ಊಲಾ ಮಿಸ್ರಾ) ಪ್ರೇಮವಿಲ್ಲದೆ ಜಗವು ಅಳುತಿದೆ! ಸಾವಿನ ಸೂತಕ ಜೀವ ಬಿಟ್ಟ ಜಾಗದಲಿ ಹಚ್ಚಿಟ್ಟ ಮಂದ ಬೆಳಕಿನ ಸ್ತಬ್ಧಚಿತ್ರದ ದೀಪದ ನೆರಳಿನ ಮರೆಯಲಿ ಎಂಬಂತೆ ಭಾಸ. ಭಾವದುಂಬಿದ ಭಾವಪೂರ್ಣ ಶ್ರದ್ಧಾಂಜಲಿ.

ಗಜಲ್ ಸಂಖ್ಯೆ 30, ಹುದ್ದೆಯ ಹದ್ದಿನೊಂದಿಗೆ ಸೆಣಸಾಟ ಹೋರಾಟ, ಎರಡು ದೋಣಿಯ ಪ್ರಯಾಣ,ಲಲಾಟದ ವೇದನೆಗೂ ನಗು ಕಲಿಸಿದ ಜೀವನ್ಮುಖಿ,ಮಾರ್ಮಿಕ ಒಗಟಿನಂತೆ ಚೆಂದ ಬಂಧುರ ಕಟ್ಟುವಿಕೆಯ ಕಲೆ ಸಾಗರದ ಅಲೆ.

ಗಜಲ್ ಸಂಖ್ಯೆ 31, ಜುಲ್ ಕಾಫಿಯಾ,ಹೃದಯ ಶ್ರೀಮಂತವಾಗಿತ್ತು ಹಣೆ ಬರಹ ಗುಡಿಸಲಲ್ಲಿ ಕೊಳೆಯುತ್ತಿತ್ತು, ನಾನು ಒಳ್ಳೆಯವನಿದ್ದೆ ಆದರೆ ವಿಧಿ ಕೊಳಕು ಹಾಸಿಗೆಯಲ್ಲಿ ನರಳುತ್ತಿತ್ತು.ಮನೆ ನೋಡಾ ಬಡವರು ಮನ ನೋಡಾ ಸಿರಿವಂತರು, ಪ್ರಾಮಾಣಿಕ ಒಳ್ಳೆಯತನದ ಬದುಕು ವಿಧಿಯ ಕೊಳಕು ಹಾಸಿಗೆಯಲಿ ನರಳುತ್ತಿತ್ತು. ಕೊಳಕು ಹಾಸಿಗೆ ಹಾಸಿದವರಾರು ಎಂಬ ಜಿಜ್ಞಾಸೆ, ಮನೆ ಧರೆ ಹೊತ್ತಿ ಉರಿಯುತ್ತಿದ್ದರೂ ನದಿಯೂ ಪಕ್ಕದಲಿ ಹರಿಯುತ್ತಿದ್ದರೂ ಆರಿಸಲಾಗದ ಅಸಹಾಯಕ ಹಕ್ಕಿಯ ಚುಂಚಿನ ಪ್ರಯತ್ನ ವಿಫಲ. ಒಡಲ ಹಸಿವು ಬೆಂಕಿಯಲ್ಲಿ ಬೇಯುತ್ತಿದ್ದರೂ ಮೂಕ ಪ್ರೇಕ್ಷಕ, ಬಿರುದು ಬಾವಲಿಗಳು ಅಂಗಡಿಯ ಪುಸ್ತಕ ಕಪಾಟು ಮಾತಿಗಿಳಿಯದೆ ಕಾಲ ಹರಣ ಶವ ಪೆಟ್ಟಿಗೆಗೆ ಹೆಗಲುಗಳಿಲ್ಲದೆ ನೀರವದಲಿ ಬಿಕ್ಕಳಿಕೆ ಈ ಭಯಾನಕ ಪರಿಸರ ಆತಂಕ ಸೃಷ್ಟಿಗೆ ಏನು ಕಾರಣ ಅನ್ವೇಷಣೆ.

ಗಜಲ್ ಸಂಖ್ಯೆ 32, ಭರತ ಭೂಮಿಯ ಕವಿಗಳನು ತಾರೆಗಳಂತೆ ಸ್ಮರಿಸುತ್ತಿದ್ದೇನೆ. ಯುಗಗಳಿಂದ ಗಾಲಿಬ್ ಸ್ಮೃತಿಗಾಗಿ ಕಾಯುವಿಕೆ ಮಧು ಶಾಲೆಯ ಮದಿರೆಯೊಂದಿಗೆ ಜೂಜಾಟದ ಶಬ್ದಗಳ ಚದುರಂಗದಾಟ ಜ್ಞಾನನರಸುವ ಮಾಟದ ಉನ್ಮತ್ತ ಚೆಲ್ಲಾಟದ ಜೀವನ ಓಟ.

ಗಜಲ್ ಸಂಖ್ಯೆ 33, ಮಾನಿನಿ ಸೌಂದರ್ಯ ಗುರಾಣಿ ಮೋಹದ ಬದುಕು ಪರಿತಪಿಸುವ ಯಾತನೆ.

ಗಜಲ್ ಸಂಖ್ಯೆ34, ನೀ ತೋರಿದ ವೃದ್ಧಾಶ್ರಮ ಕಲಿಸಿದ ಜೀವನ ಪಾಠ ಸಾವಿನ ಸವಿ ರುಚಿಯ ನೀತಿ ಪಾಠ.

ಗಜಲ್ ಸಂಖ್ಯೆ 35, ಬದುಕಿನ ಸಂಬಂಧಗಳ ವಿಶ್ಲೇಷಣೆ.

ಗಜಲ್ ಸಂಖ್ಯೆ 36, ಸಂಪೂರ್ಣ ಮತ್ಲಾ ಗಜಲ್ ಮುಶಾಯಿರಾ ಮಹೇಫಿಲ್ ಮುರದ್ದಫ್ ಗಜಲ್ ಆಗಿ ಪರಿವರ್ತನೆ.

ಗಜಲ್ ಸಂಖ್ಯೆ 37, ಸಾವು ಒಲವಿನ ಕುರಿತು ಮಾತಾಡುವ ಸಂಪೂರ್ಣ ಮತ್ಲಾ ಗಜಲ್.

ಗಜಲ್ ಸಂಖ್ಯೆ 38,ಜೀವನ ಸಂಗಾತಿ ನಾ ಸತ್ತಾಗ ಉಣಕೊಂತ ಕುಂತಿ.

ಗಜಲ್ ಸಂಖ್ಯೆ 39 ಸೆಹ್ ಗಜಲ್, ಹೆಣ್ಣು ಜಗದ ಕಣ್ಣು , ಇಪ್ಪತ್ತು ದ್ವಿಪದಿಗಳ ದೀರ್ಘವಾದ ಗಜಲ್.

ಗಜಲ್ ಸಂಖ್ಯೆ 40, ಮಾತ್ರೆಯಾಧಾರಿತ ಗಜಲ್

211/211/2121
ಸಾಲವು ಗೆದ್ದಿತು ಬಾಳಿನಲ್ಲಿ
ಮಾನವು ಸೋತಿತು ಸಾವಿನಲ್ಲಿ
ಒಳ್ಳೆದು ಕೆಟ್ಟದು ಯಾವುದಿಲ್ಲ
ಶಾಶ್ವತ ಯಾವುದು ದೇಹದಲಿ
ಈ ಗಜಲ್ ನ ಐದು ದ್ವಿಪದಿಗಳು
ಅನ್ನ ದಾಸೋಹಿ ರೈತನ ಬದುಕಿನ ಬವಣೆ
ಸಂಕಟಗಳಿಗೆ ಸ್ಪಂದಿಸದ ವ್ಯವಸ್ಥೆಯ ಕರಾಳ ಮುಖಗಳು ರೈತನ" ಮರ್ಯದೆ ಹತ್ಯೆಯ ನೇಣಿನ ಕುಣಿಕೆಗಳಾದದ್ದು ದುರಂತ ವಾಸ್ತವ.

ಗಜಲ್ ಸಂಖ್ಯೆ 41, ಜುಲ್ ಕಾಫಿಯಾ ಗಜಲ್,
ಪುಸ್ತಕಗಳ ಮಡಿಲಲ್ಲಿ ಮಲಗುತ್ತಿರುವೆ ನಾನು
ಅಂತರಂಗದ ಬೆಳಕಿನಲಿ ಬರೆಯುತ್ತಿರುವೆ ನಾನು
ಹೃದಯದ ತುಂಬಾ ಅನಿರ್ವಚನೀಯ ಪ್ರೀತಿಯಿದೆ
ನನ್ನವಳನು ಪದಗಳಲಿ ಮುದ್ದಿಸುತ್ತಿರುವೆ
ಅವಳ ಪ್ರೇಮ ಪುಟಗಳಲಿ ಕಾಣಿಸುತ್ತಿರುವೆ
ಭಗ್ನ ಹೃದಯದ ವೇದನೆಯ ಸುಂದರ ನಿವೇದನೆ ಬಿಗಿ ಬಂಧುರ ಸಾಲು

ಗಜಲ್ ಸಂಖ್ಯೆ 42, ಶವವನು ಸುಡಲು ಚಂದನದ ತುಂಡುಗಳನು ಖರೀದಿಸುತ್ತಿರುವೆ, ಮೃತ ದೇಹಕೆ ಹೆಗಲು ಕೊಡಲು ಸ್ನೇಹಿತರನು ಗಳಿಸುತ್ತಿರುವೆ.
ಬದುಕಿನ ವಾಸ್ತವಿಕತೆಯ ಪ್ರಜ್ಞೆಯಲಿ ಮೂಡಿ ಬಂದ ಈ ಸಾಲುಗಳು ಶವ ಸಂಸ್ಕಾರಕೂ ದುಡ್ಡು ಬೇಕು. ಮಸಣಕೂ ಹೋಗಲು ನಾಲ್ಕು ಜನ ಬೇಕು ಎಂಬ ಸತ್ಯ ಬಿಚ್ಚಿಡುತ್ತದೆ ಅಲ್ಲದೆ ಈ ಸಂಘರ್ಷಮಯ ಜೀವನದಲಿ ಪೂರ್ವ ಸಿದ್ಧತೆ ಇಲ್ಲದೆ ಉಸಿರಾಡುವುದನು ಕಲಿತ ಈ ಕವಿತೆ ದುಡ್ಡೆ ದೊಡ್ಡಪ್ಪನೆನ್ನುವ ಸಮಾಜದಲಿ ಯಾರು ಕದಿಯಲಾಗದ ಬಡತನವನು ಆಸ್ತಿಯಾಗಿಕೊಂಡ ಪರಿಯು ಎಲ್ಲಿ ವಿದ್ಯೆ ವಿನಯ ಆದರ್ಶದ ಬಾಳಿರುವುದೊ ಅಲ್ಲಿ ಲಕ್ಷ್ಮೀಯ ಪ್ರಸನ್ನವಿರುವದಿಲ್ಲ ಎಂಬ ಹಣ ಮತ್ತು ಗುಣದ ಸಂಘರ್ಷವಿರುತ್ತದೆಂಬ ಚಂಚಲೆ ಲಕ್ಷ್ಮೀ ಶಾರದೆಯ ಜಗಳ ನೆನಪಿಗೆ ತರುತ್ತದೆ.

ಗಜಲ್ ಸಂಖ್ಯೆ 43, ಕಂಬನಿಯ ಕಟ್ಟೆಯು ಒಡೆಯುತ್ತಿದೆ ಪಾ..ಮನವು ನಿನ್ನ ಮಡಿಲು ಹುಡುಕುತಿದೆ..
ಬಹಿರಂಗವಾಗಿ ಅಳಲು ಆಗುತ್ತಿಲ್ಲ ನನಗೆ ಮನವು ಉಪ್ಪು ನೀರನು ನುಂಗಲು ಆಗುತ್ತಿಲ್ಲ ಪಾ.. ಈ ಕವಿತೆ ಸಂಗಾತಿಯನು ಕಳೆದುಕೊಂಡ ವಿಧುರ ಜೀವನದ ಅಳಲು ತೊಳಲಾಟವೆನಿಸುತ್ತದೆ
ಈ ಮುಂಚೆ ಒಡೆದ ದುಃಖದ ಕಣ್ಣೀರಿನ ಉಪ್ಪು ನೀರಿನ ಹೊಳೆಗೆ ಅಣೆಕಟ್ಟು ನಿರ್ಮಿಸುವ ಕೌಶಲ್ಯ ಎನಗಿಲ್ಲ ಮಾತು ಮೀರಿ ಹೃದಯ ರೋಧಿಸುತಿದೆ ಪಾ..

ಈ ಪಾ ಎಂಬ ರಧೀಪ್ ಒಲವಿನ ಸಂಗಾತಿ ಇರಬೇಕೆನಿಸುತ್ತದೆ. ದುಃಖದ ಕಣ್ಣೀರ ನದಿಯಾಗಿ ಹೊರ ಹರಿದು ನೋವಿನ ಕಡಲಾದಾಗ ಉಪ್ಪು ನೀರಾಗುತ್ತದೆ!ಅದೆ ಹೊರ ಪಾಪೆಯಿಂದ ಹರಿದ ನೀರು ಆನಂದದ ಸಿಂಧು ನದಿಯ ಸಿಹಿ ನೀರ ಒರತೆಯಾಗಿ ಆನಂದ ಭಾಷ್ಪವಾಗುತ್ತದೆ ಸತ್ಯವನು ಸಾರುತ್ತದೆ.

ಗಜಲ್ ಸಂಖ್ಯೆ 44.ಅಷ್ಟೊಂದು ಪ್ರೀತಿಸಬೇಡ ಅವಳು ಮೋಸ ಮಾಡಬಹುದು.
ಪ್ರತಿಯೊಂದಕ್ಕೂ ತಲೆ ಬಗ್ಗಿಸಬೇಡ ಕಲ್ಲು ದೇವರಾಗಬಹುದು. ಮೊದಲ ಸಾಲು ಉಮರ ಖಯಾಮನ ನೆನಪು ತಂದರೂ ಇದರಲ್ಲಡಗಿದ ಅರ್ಥವಂತಿಕೆ ಕೊನೆಯ ಸಾಲು ಗಮನಿಸಿದಾಗ ಭಿನ್ನವಾಗಿ ಕಂಡು ಬರುತ್ತದೆ ಇದು ಸೂಕ್ಷ್ಮ ಗ್ರಾಹಿ ಯಾಗಿದೆ. ಜೀವನ ಜೋಕಾಲಿಯ ಜೀವನ ಸಿದ್ಧಾಂತದ ಸಾರ್ವಕಾಲಿಕ ಬಾಳಿನ ಲೌಕಿಕ ಪ್ರೀತಿಯೆಂಬಂತೆ ಮೇಲ್ನೋಟಕ್ಕೆ ಅನಿಸಿದರೂ ಆಂತರ್ಯದಲಿ ಆತ್ಮ ಜ್ಞಾನದಿನಿಯೆ ಮೈದಾಳಿ ಎಲ್ಲ ಕಡೆಗೂ ತನ್ನ ಸುಗಂಧ ಪರಿಮಳದ ಅನುಭಾವಿಕ ತಾತ್ವಿಕ ಅಲೌಕಿಕ ತಂಗಾಳಿ ಘಮ ಪಸರಿಸುತ್ತದೆ.

ಗಜಲ್ ಸಂಖ್ಯೆ 45, 46, 47, ಸುಂದರ ಪ್ರೇಮ ಸ್ಪುರಣಗೊಂಡಿದೆ.

ಗಜಲ್ ಸಂಖ್ಯೆ 48,ಒಂಟಿತನ ನಮ್ಮ ಆಯ್ಕೆ ಆಗಿರಲಿ ಮಿತ್ರ.
ಅನ್ಯರ ಉಡುಗೊರೆ ಆಗದಿರಲಿ ಮಿತ್ರ.
ಬಾಳಿನ ಏಕಾಂಗಿತನದ ಬಾಳಿನ ಕಡೆಗೀಲು
ಪರರ ಪಾಲಾಗದಿರಲಿ ಸ್ವತಂತ್ರ ನಿಲುವಿರಲಿ ಎಂಬ ಆಶಯವಿದೆ.

ಗಜಲ್ ಸಂಖ್ಯೆ 49, ಸೃಷ್ಟಿಯ ಲೀಲೆಯ ಕುರಿತು ವಿಸ್ಮಯ ಬೆರಗುಗಣ್ಣಿನ ನೋಟದ ಕೋಮಲ ಗಜಲ್.

ಗಜಲ್ ಸಂಖ್ಯೆ 50,ಜೀವನ ಸ್ಪೂರ್ತಿ ಸಂಗಾತಿ ಬಯಕೆಯ ಬಿತ್ತುವ ಬೀಜ ನಿನ್ನ ನಯನಗಳಲ್ಲಿದೆ, ಮನವನು ಹದಗೊಳಿಸುವ ತಾಕತ್ತು ನಿನ್ನ ಎದೆಯಲ್ಲಿದೆ, ಪ್ರೇಮಮಯಿ ಹೆಣ್ಣು ಜಗದ ಕಣ್ಣು.

ಗಜಲ್ ಸಂಖ್ಯೆ 51. ಈ ಗಜಲ್ ಸಂಸಾರದ ನೋವೆಲ್ಲ ನನಗಿರಲಿ. ಸಂಸಾರವೆಲ್ಲ ನಗುತ್ತಿರಲಿ.. ಕನಸು ನೆನಪು ನನಗಿರಲಿ ಪ್ರೀತಿ ನಿಮಗಿರಲೆಂದು ಬಯಸುವ ಹೆಬ್ಬಯಕೆ ಚೆಂದನೆಯ ಗಜಲ್.

ಗಜಲ್ ಸಂಖ್ಯೆ 52, ಬಂಜೆತನ ಎನ್ನುವುದು ಮನಸಿನ ಮೈಲಿಗೆ,
ಹೆರಿಗೆಯ ನೋವಿದೆ ಪ್ರೇಮಿಗಳಲ್ಲಿ ಸಾಕಿ,
ಬಂಜೆ ಬಸಿರಾಗದೆ ಕಂದನ ಹಡೆದವ್ವ ಹೆಸರೇನಿಡಬೇಕವ್ವ. ಪ್ರೇಮ ಕುವರಂಥ ಕರಿಬೇಕವ್ವ, ಹೆಸರಿಡಬೇಕವ್ವ.

ಗಜಲ್ ಸಂಖ್ಯೆ 53.ಸಮಾಜವು ಅಶಾಂತಿ ಬೆಳೆಯುವ ಬಂಜರು ಭೂಮಿಯಾಗುತಿದೆ
ಕದಡಿದ ಮನವನು ತಿಳಿಗೊಳಿಸಲು ನೆಮ್ಮದಿಯಾಗಿ ಬಾ,
ಬೆನ್ನಿಗೆ ಚೂರಿ ಹಾಕುವುದು ಸಂಪ್ರದಾಯವಾಗಿ ಬೆಳೆಯುತ್ತಿದೆ,
ಸಂಘರ್ಷಮಯ ಬಾಳಿನ ರಣರಂಗದಲಿ ಗುರಾಣಿಯಾಗಿ ಬಾ..
ಈ ಸಾಲುಗಳು ಇಂದಿನ ಸಾಮಾಜಿಕ ಸ್ಥಿತಿ ಗತಿಗಳಿಗೆ ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಅನ್ನುವಂತಾಗಿರುವುದು ಮನದಟ್ಟಾಗಿಸಿದೆ.

ಗಜಲ್ ಸಂಖ್ಯೆ 54,ಕಂಬನಿ ಸುರಿಸದಿರು ನೆನಪು ಒದ್ದೆಯಾಗುವುದು, ನಕ್ಕು ಹೋಗಿ ಬಿಡು ಬಾಳಲಿ
ಛಲ ಮೂಡುವುದು, ಸಖಿಗೆ ಹೇಳಿದ ಮಾತು ಸಾರ್ವತ್ರಿಕಗೊಳಿಸುವ ಚಾಕಚಕ್ಯತೆ ಆಪ್ತವಾಗಿದೆ.

ಗಜಲ್ ಸಂಖ್ಯೆ 55, ಅನುಪಮ ಬೆಳದಿಂಗಳೂಟದ ಚೆಲುವಾದ ಪ್ರೇಮ ಗಜಲ್ ಗುಲ್ಮೋಹರ.

ಗಜಲ್ ಸಂಖ್ಯೆ56, ತರಹಿ ಗಜಲ್, ಜಗದೊಳಿರುವ ಸರ್ವ ಜಾತಿ ಸರ್ವ ನಾಶವಾಗಲಿ
ಹೃದಯದೊಳಿರುವ ಅಂದದ ಕಲ್ಮಶ ತಿಳಿಯಾಗಲಿ
ಧರ್ಮಗಳು ಬದುಕುವ ಭರವಸೆಯನ್ನು ಮೂಡಿಸಲಿ,
ರಕ್ತದ ಓಕುಳಿಯಿಂದ ನೆಲವನು ಕಾಪಾಡುವಂತಾಗಲಿ,
ಪ್ರೀತಿಯಿಲ್ಲದೆ ಬದುಕಿದವರಾರು ಈ ಜಗದೊಳಗೆ,
ಇಲ್ಲಿ ಜಾತಿ ಧರ್ಮಗಳಿಂದಾದ ಅನಾಹುತಗಳನು
ದೃಷ್ಟಿಯಲ್ಲಿಟ್ಟುಕೊಂಡು ಜೀವ ಸಂಕುಲದ ಉಳಿವಿಗಾಗಿ ಮಿಡಿಯು ಹೃದಯದ ಕಳಕಳಿಯ
ನುಡಿಗಡಣದ ನೆಮ್ಮದಿಯ ಕನಸಿನ ಲೋಕದ ನಿರ್ಮಾಣದ ಸದಾಶವುಳ್ಳ ಕಾವ್ಯ ಇದಾಗಿದೆ.

ಗಜಲ್ ಸಂಖ್ಯೆ 57 , ಪ್ರೇಮ ಗಜಲ್

ಗಜಲ್ ಸಂಖ್ಯೆ 58, ಒಲವಿನ ಸಾಂಗತ್ಯ ಮಂಡನೆ

ಗಜಲ್ ಸಂಖ್ಯೆ 59,

ಕಂಬನಿಯನ್ನು ಒರೆಸುವ ಬೆರಳುಗಳು ದೂರವಾಗಿವೆ ಇಂದು
ಹೃದಯ ಬಡಿತ ಆಲಿಸುವ ಕಿವಿಗಳು ದೂರವಾಗಿವೆ ಇಂದು
ಪ್ರಪಂಚದ ನರ ನಾಡಿಗಳಲಿ ವಿಷವೇ ತುಂಬಿ ತುಳುಕುತಿದೆ ಗಾಲಿಬ್
ಜೊತೆಯಾಗಿ ಹೆಜ್ಜೆ ಹಾಕುವ ಕಾಲುಗಳು ದೂರವಾಗಿವೆ ಇಂದು
ಈ ಗಜಲ್ ಇಂದುಧರನ ಜೀವವುಳ್ಳದ್ದೆಲ್ಲ ಶಿವನೆಂಬ ಮುಹೂರ್ತ ಅಮುಹೂರ್ತ ತಂಪಾದ
ಒಲವಿನ ಬೆಳದಿಂಗಳು ಬಯಸುತ್ತದೆ.

ಗಜಲ್ ಸಂಖ್ಯೆ 60. ತರಹಿ ಗಜಲ್ ,ಸಾಗರ ತುಮುಲದ ವಿರಹ ವೇದನೆ ಮಧು ಶಾಲೆ ಮಧು ಬಟ್ಟಲು,ಆಗಸದಿ ಕರಿ ಮೋಡ ಸುರಿದ ಕಣ್ಣೀರು ನೇಸರನ ಮೂಕ ಪ್ರೇಕ್ಷಕ ಮೌನ ಧ್ಯಾನ..

ಈ ಕೃತಿಯ ಮೂಲ ಪ್ರಾಣ ಜೀವಾಳ ಗಜಲ್ ರಚನೆಯ ಪಾರಿಭಾಷಿಕ ಉರ್ದು ಪದಗಳು ಜಗತ್ತಿನ ಭಾಷೆಗಳ ಸಂಸ್ಕೃತಿ ಸಂವಹನಕೆ ಪೂರಕವೆಂಬ ಮಾತು ಸಾರ್ವಕಾಲಿಕ ಸತ್ಯ. ಪ್ರಾಚೀನ ಹಳೆ ಶೀಲಾಯುಗ ಹೊಸ ಶೀಲಾ ಯುಗದ ಮನುಷ್ಯ ಪ್ರಾಣಿಯ ಬದುಕು ನೆನಪಿಸುತ್ತದೆ. ಲೇಖಕರು ಕವಿಗಳು, ಸಂಶೋಧಕರು ಆದ ಡಾ. ಮಲ್ಲಿನಾಥ ಸರ್ ಅವರ ಅನ್ವೇಷಣೆ,ಭಾಷಾ ಅಧ್ಯಯನ ಮಂಡನೆ, ಕನ್ನಡ ಗಜಲ್ ಬರಹಗಾರಿಗೆ ತುಂಬಾ ಉಪಕಾರಿಯಾಗಿದೆ, ಸ್ಮರಣೀಯವೂ ಸ್ತುತ್ಯಾರ್ಹವೂ ಆಗಿದೆ. ಪದಗಳ ಅರ್ಥ ತರ್ಜುಮೆಯೊಂದಿಗೆ ಅವುಗಳ ಕಾರ್ಯ ನಿರ್ವಹಣೆ ಕುರಿತು ವಿವರವಾಗಿ ಮನದಟ್ಟಾಗುವಂತೆ ಹಿರಿಯ ಗಜಲ್ಕಾರರ ಸಾಲಿನೊಂದಿಗೆ ಪ್ರಸ್ತುತ ಪಡಿಸಿದ ರೀತಿ ತುಂಬಾ ಅನನ್ಯವಾಗಿದೆ. ಇವರ ಈ ಪ್ರಯತ್ನ ಸಾಧನೆ ಅಭಿನಂದನಿಯವಾಗಿದೆ. ಇವರ ಅರವತ್ತು ಗಜಲ್ ಗಳಲಿ ಬಹುತೇಕ ಗಜಲ್ ಗಳು ಕೂಡ ಮಾನಿನಿಯನ್ನೆ ಗುರಾಣಿಯಾಗಿಸಿಕೊಂಡು ಗಟ್ಟಿ ಬಂಧುರ ಕೋಮಲ ಧ್ವನಿಯಲಿ ಮಾತಾಡುತ್ತವೆ. ಬರಹಗಾರರಿಗೆ ಮಾರ್ಗದರ್ಶಿ ಸ್ನೇಹಿ ಸಖ ಉಸ್ತಾದ್ ಆಗಬಲ್ಲ ಎಲ್ಲ ಲಕ್ಷಣಗಳನೊಳಗೊಂಡ ಒಂದು ಸುಂದರ ಅದ್ಭುತ ಕೃತಿ ರಚನೆಯಾಗಿದೆ.

ಲೇಖಕರು ಗಜಲ್ಕಾರರು ಆದ ಡಾ. ಮಲ್ಲಿನಾಥ ಸರ್ ಅವರಿಗೆ ಹಾರ್ದಿಕ ಅಭಿನಂದನೆಗಳು..

ಮಲ್ಲಿನಾಥ ಶಿ.ತಳವಾರ ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ..

ಮಲ್ಲಿಗೆ ಸಿಂಚನ ಸಂಕಲನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

--

 

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...