ವೈಫ್ ಆಫ್ ಪೋಯಟ್ ಅಲ್ಲ, ಲೈಫ್ ಆಫ್ ಪೋಯಟ್ ಆಗಿದ್ದವರು ಶಾಂತಾದೇವಿ ಕಣವಿ

Date: 23-05-2020

Location: ಧಾರವಾಡ


ಇತ್ತಿಚೆಗೆ ನಮ್ಮನ್ನಗಲಿದ ಲೇಖಕಿ, ಸಾಹಿತಿ ಶಾಂತಾದೇವಿ ಅವರಿಗೆ ಕವಿ ರಾಜಕುಮಾರ‌ ಮಡಿವಾಳರ‌ ಒಂದು ನೆನಪಿನ ಬರಹದ ಮೂಲಕ ಶ್ರದ್ದಾಂಜಲಿ ಅರ್ಪಿಸಿದ್ದು ಇಲ್ಲಿದೆ. 

ಶುದ್ಧ ಕನ್ನಡ ಜನಪದ ಹೃದಯದ, ಆಡು ಮಾತಿನ ಮಣ್ಣ ಕಥೆಗಾರ್ತಿ. ಎಷ್ಟೆಲ್ಲ ಹುಡುಕಿದಾಗಿಯೂ ಇವರದೊಂದು ಫೋಟೊ ಸಿಗಲಿಲ್ಲ. ಗೂಗಲ್ ತಡಕಿದಾಗ ಇದು ಸಿಕ್ಕಿತು. ಒಬ್ಬ ಪ್ರಮುಖ ಕಥೆಗಾರ್ತಿ, ಒಂದು ಭಾಷೆ, ನಾಡ ಸಂಸ್ಕೃತಿ ಬದುಕಿ, ಬರೆದವರ ಭಾವಚಿತ್ರ ಸಿಗುವುದರ 'ಹೇರಳತ್ವ’ ಕಂಡು ಬೇಸರವಾಯ್ತು.

ಜಾತ್ರೆ ಮುಗಿದಿತ್ತು, ಬಾಳೆಯ ದಿಂಡು ನನಗೆ ಅವರ ಕಥೆಗಳಲ್ಲಿ ತುಂಬ ಇಷ್ಟವಾದ ಕಥೆಗಳು, ಅವರು ಬರಹದಲ್ಲೂ ಕೂಡ ಕಥೆ ಹೇಳುತ್ತಿದ್ದರು, ಪ್ರತಿ ಪಾತ್ರ, ಹಳ್ಳಿಯ ಹೆಣ್ಣು ಮಕ್ಕಳ ನೈಜ ಮುಗ್ಧತೆ, ಕಷ್ಟ, ಸಂಕಷ್ಟ, ಹೆಚ್ಚು ಕನಸಿರದ ಇದ್ದೊಂದು ಕನಸೂ ಕೈಗೂಡದ, ಈಗಲೂ ಜೀವಂತ ಜೀವಂತ ಪ್ರಸ್ತುತ ಅನ್ನುವ ಕಥೆಗಳವು. ಕಥೆಯಲ್ಲಿನ ಸಾವಿತ್ರಿಗೆ ಪ್ರಾಯಶಃ ಸಾವೇ ಇಲ್ಲ, ಸಾವಿಲ್ಲದ ಒಂದು ಪಾತ್ರ ಬಿಟ್ಟು-ಕೊಟ್ಟು ಶಾಂತಮ್ಮ ಹೀಗೆ ಹೋಗಬಹುದೆ? ಸಧ್ಯ ವಯಸ್ಸಾಗಿತ್ತು, ಅವರ "ಚೆಂಬೆಳಕು" ಮನೆಗೆ ಭೇಟಿಕೊಟ್ಟವರು, ಇವರ ಕೈ ಚಹಾ ಕುಡಿಯದೆ ಬಂದಿರಲಿಕ್ಕಿಲ್ಲ.

ಕೊನೆಯದಾಗಿ ನನ್ನ ಮನದ ಒಂದು ಮಾತು, ಈ ಚಿತ್ರದಲ್ಲಿ ಶಾಂತಾದೇವಿಯವರ ಹೆಸರಿನ ಕೆಳಗೆ ಶ್ರೀಮತಿ ಕಣವಿ ವೈಫ್ ಆಫ್ ಪೋಯಟ್ ಅಂತ ಬರೆದಿದೆ, ಶಾಂತಾದೇವಿಯರು ಲೈಫ್ ಆಫ್ ಪೋಯಟ್ ಆಗಿದ್ದವರು ಮತ್ತು ಆ ಅಡಿಬರಹವಿಲ್ಲದೆಯೂ ಕನ್ನಡ ಸಾಹಿತ್ಯದಲ್ಲಿ ಪ್ರಖರವಾಗಿ ಗುರುತಿಸಿಕೊಳ್ಳಬಹುದಾದ ಸಾಮರ್ಥ್ಯ ತಮ್ಮ ಕೃತಿಗಳ ಮೂಲಕವೆ ಹೊಂದಿದ್ದರು.

ನೀವು ಹೊರಟು ನಿಂತ ಹೊತ್ತಲ್ಲಿ, ಇಲ್ಲಿ ಭರ್ಜರಿ ಮಳೆ, ದೊಡ್ಡವರು ಹೋಗುವಾಗಲೂ ಕೂಡ ಸುಖ ಕೊಟ್ಟು ಹೋಗುತ್ತಾರಂತೆ, ನಿಮ್ಮ ಧಾರವಾಡಕ್ಕೆ ಮುಂಗಾರ ಹರಿಸಿ, ತುಂಬ ಮುಂದೆ ಹೋಗಿಬಿಟ್ಟರಿ. ತಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅನ್ನುವುದು ಪ್ರಾರ್ಥನೆ, ಸ್ವತಃ ಶಾಂತಿಗೆ ದೇವಿ ನೀವು, ಶಾಂತಿ ನಿಮ್ಮ ಅಧಿನದಲ್ಲಿದ್ದದ್ದು ನೀವು ಇದ್ದಾಗ ಕಣ್ಣಾರೆ ಕಂಡಿದ್ದೇವೆ. ತಾಯಿ ಕೋಟಿ ಶರಣು.

ಹೋಗಿ ಬನ್ನಿ, ನನ್ನ ಕವಿಯ ಜೀವಕ್ಕೆ ಈ ಅಗಲಿಕೆ ತಡೆದುಕೊಳ್ಳುವ ಚೈತನ್ಯ ದೇವರು ಕರುಣಿಸಲಿ. ಕಲ್ಯಾಣನಗರ ಅಂದರೆ ಧಾರವಾಡದ ರಾಜಧಾನಿ, ಅಲ್ಲಿಗೆ ಬಂದು ಹೋಗುವರ ಸಂಖ್ಯೆ ಹೆಚ್ಚಿಸಿದವರು ನೀವು , ಆ ಬಂದು ಹೋಗುವ ಚೆಲುವಿಕೆಗೆ, ಚೆಂಬೆಳಕಿನಲ್ಲಿ ಸದಾ ಬೆಳಕಿರಲಿ.

ಲಲಿತ ಶೃಂಗಾರ ರಸಪೂರ್ಣೆ ಚಂದಿರವರ್ಣೆ

ದೃಷ್ಟಿ ತೆಗೆಯಲು ಒಂದು ಮುತ್ತನಿಡುವೆ;

ನಿನ್ನ ಸಕ್ಕರೆ ನಿದ್ದೆ ಸವಿಗನಸ ಕಥೆ ಹೇಳು

ಒಂದು ಚಣ ಜಗವನ್ನೇ ಮರೆತು ಬಿಡುವೆ...

-ಚೆನ್ನವೀರ ಕಣವಿ.

ಸಾಧ್ಯವಾದರೆ ನಮ್ಮ ಭಾಗ್ಯ ತೆರೆದು, ಈ ಸಾಲು ಸತ್ಯವಾಗಲಿ.

ರಾಜಕುಮಾರ‌ ಮಡಿವಾಳರ

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...