Poem

 ಆತ್ಮದ ಗುನುಗು

ಈ ಸಂತೆಯ ಸಮರದಲ್ಲಿ ಕಳೆದು ಹೋದ ಆತ್ಮ ಮಾರಾಟಕ್ಕೆ ಬಿದ್ದಾಗ
ತಮ್ಮ ಹಕ್ಕು ಚಲಾಯಿಸಿ ಕೊಳ್ಳ ಬಂದವರು ಅದೆಷ್ಟೋ ಮಂದಿ ಗಂಡಸರು
ಚೌಕಾಸಿ ವ್ಯಾಪಾರದಲ್ಲಿ ಆತ್ಮಗಳ ಬೆಲೆ ಕಟ್ಟಲಾಗದು.

ಲಲ್ಲೆ ಹೊಡೆಯುವುದಕ್ಕೂ, ಚೆಲ್ಲು ಸುರಿಯುವುದಕ್ಕೂ
ಸಾಟಿಗಿಲ್ಲದ ಇವರ ಸಹಿಸುವುದಾದರೂ ಹೇಗೆ?
ಮೈದಡವುವುದಕ್ಕೂ ಕೈಗೆಟುಕದ ನನ್ನಾತ್ಮದ ಜಾಡು
ಇವರ ಜಾಯಮಾನದ್ದಲ್ಲ.
ಬಾಜುಬಂದ್ ಖುಲ್ ಖುಲ್ ಜಾ...
ಬಟ್ಟೆ ಕಳಚಿ ಮೈಯ್ಯ ಕಾವೇರಿದಾಗ
ಮೂಗಿನ ತುದಿಯ ಹನಿ ಬೆವರು,
ಕಿವಿಯಂಚ ಕೆಂಪು, ಅಮಲೇರಿದ ಕಂಗಳು
ಸುರುಳಿ ಗುಂಗುರು ಮುಂಗುರುಳು
ನಾಭಿ ಸುತ್ತ ಕೈಯಾಡಿಸುವುದಕ್ಕೇ ಹರಡಿದವಕಾಶ
ಬೆನ್ನ ಹುರಿ, ನೀಳ ಕಾಲು, ಉಂಗುಷ್ಟ
ಇವೆಲ್ಲಕ್ಕೂ ಕುರುಡಾದವರಿಗೆ ಕಾಣುವುದು ತೊಟ್ಟು ಬಿಟ್ಟ ಮೊಲೆ
ತೊಡೆಸಂದಲ್ಲಿ ಅರಳಿದ ಯೋನಿ ಹೂ ಮಾತ್ರ
ಮೈಥುನದೊಂದು ಘಳಿಗೆಯ ಯಾಕೆ ತಾನೇ ನೆನಪಿಡಬೇಕು?

ಹಾರಗೋಡದಕ್ಕೆ ಹಾಡ ನೇಯುವನೆಂದಾಗ ಹೋ ಹೋ ಎಂದು
ಭೂಮಿ ಆಕಾಶಗಳ ಒಂದು ಮಾಡಿದವರಿಗೆ ಹೇಳಬೇಕಿದೆ

ಬರೆಯುವುದೆಂದರೆ ಗಾಯ ಗೊಳ್ಳುವುದು ಗಾಯ ಮಾಡುವುದು
ಚೂಪಾದ ಮೊನಚು ಆಲೋಚನೆಯ ಚುಚ್ಚಿ ಹೆರೆದು ಗೀಚಿ
ಗುರುತನೊತ್ತುವುದು ಮನಸಿನ ಮೇಲೆ ಹಚ್ಚೇ ಹಾಗೆ ಬರೆದದ್ದೆಲ್ಲಾ
ಮತ್ತೆ ಮರುಕಳಿಸಿ ಮೇಲಿಂದ ಮೇಲೆ ನೆನಪು ಧುಮ್ಮಿಕ್ಕುವಾಗ,
ಮೈ ಬೆತ್ತಲಾಗಿ ಬೆಚ್ಚಗೆ ಕಾಯುತ್ತದೆ ಕಾಮದ ಹೊಸದೊಂದು ಅನುಭವಕ್ಕೆ
ಆತ್ಮದ ಗುನುಗು ಸಂತೆಯ ಸಮರದ ಮೆಲುಕು ಹಾಕುತ್ತದೆ.

- ಮಮತಾ ಸಾಗರ

ಪೊಟೋ ಕೃಪೆ : ಕವನ ಪದ್ಮಶಾಲಿ

ಮಮತಾ ಜಿ. ಸಾಗರ

ಮೂಲತಃ ಬೆಂಗಳೂರಿನವರೇ ಆದ ಕವಯತ್ರಿ ಮಮತಾ ಜಿ. ಸಾಗರ್‌ ಅವರು ಜನಿಸಿದ್ದು 1966 ಜನವರಿ 19ರಂದು. ತಾಯಿ ಎಸ್‌.ಶೇಖರಿಬಾಯಿ, ತಂದೆ ಎನ್‌.ಗಿರಿರಾಜ್‌. ಕಾಲೇಜು ದಿನಗಳಿಂದಲೂ ಕನ್ನಡ ಸಾಹಿತ್ಯದಲ್ಲಿ ಅತೀವ ಆಸಕ್ತಿಯಿದ್ದ ಮಮತಾ ಅವರು ಹಲವಾರು ಕವಿಗೋಷ್ಠಿಗಳಲ್ಲಿ ಕವನ ರಚಿಸಿ ವಾಚಿಸಿದ್ದಾರೆ. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಬರೆದಿರುವ ಪ್ರಮುಖ ಕವನ ಸಂಕಲನಗಳೆಂದರೆ ಕಾಡ ನವಿಲಿನ ಹೆಜ್ಜೆ, ನದಿಯ ನೀರಿನ ತೇವ ಮುಂತಾದವು.

ಮಮತಾ ಅವರಿಗೆ ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿ ಬಹುಮಾನ ಒಲಿದು ಬಂದಿದೆ. ಹಾಗೆಯೇ ಸಾಹಿತ್ಯಕ್ಕಾಗಿ ಕೇಂದ್ರ ಸರ್ಕಾರದ ಜೂನಿಯರ್‌ ಫೇಲೋಷಿಪ್‌ ಕೂಡ ಇವರಿಗೆ ದೊರೆತಿದೆ.

More About Author