Poem

ಬಾಗಿಲಿಲ್ಲದ ಮನೆ

ಅನಕ್ಷರಸ್ತನಾದ ನನ್ನಪ್ಪನ
ಹೆಗಲ ಮೇಲೆ
ಅನ್ನಕ್ಕಾಗಿ ಹಠವಿಡುವ
ಮಕ್ಕಳಿದ್ದಾರೆ
ಅವನೆದೆಯ ಬಾರಗಳು
ತೊಟ್ಟಿಕ್ಕುವಾಗಲೆಲ್ಲ
ಖಾಲಿ ತಟ್ಟೆ ಕಣ್ಣೀರಿಡುತ್ತದೆ

ಅಕ್ಷರದ ಹಸಿವು ನೀಗಿಸಲು
ಅವ್ವ ನಮ್ಮನ್ನು ಅಂಗನವಾಡಿಗೆ 
ಬಿಟ್ಟಿದ್ದಾಳೆ
ಹಸಿವಿನ ಬೆಲ್ ಹೊಟ್ಟೆ ತಟ್ಟುವಾಗ
ಲೋಟದ ನೀರು
ಬೆವರಾಗಿ ಹರಿಯುತ್ತದೆ

ಬಾಗಿಲಿಲ್ಲದ ಮನೆಗೆ
ಬೆಳಕನು ತರಲು ಹೋದ
ಕಂದಿಲು 
ದಾರಿ ತಪ್ಪಿಸಿಕೊಂಡಿರಬೇಕು

ಹುಡುಕಲೊದ
ಅಣ್ಣನ ಕಣ್ಣ ಬೆಳಕು 
ಖಾಲಿಯಾಗಿರಬೇಕು

ಇನ್ನು ತುಂಡು ಸೇದುವ ಅಜ್ಜ
ಎಲೆಗೆ ಸುಣ್ಣ ಬೆರೆಸುವ ಅಜ್ಜಿ
ಸಾವು-ನೋವುಗಳನು ಕಂಡುಂಡ
ಭವ್ಯ ಬಂಗಲೆಗೆ ಶತಮಾನ
ಕಳೆದರು
ಇಲ್ಲಿ
ಅಪ್ಪ,ಡೊಡ್ಡಪ್ಪ,ಚಿಕ್ಕಪ್ಪರೇ
ಒಂದಾಗದ ದಾಯಾದಿಗಳು 

ಆಡಿಯೋ
ವಿಡಿಯೋ

ರವಿ ರಾಯಚೂರಕರ್

ರವಿ ರಾಯಚೂರಕರ್ ಅವರು ಮೂಲತಃ ರಾಯಚೂರು ಜಿಲ್ಲೆ, ದೇವದುರ್ಗ ತಾಲೂಕಿನವರು. ಎಂ.ಎ.ಪದವೀದರರಾಗಿರುವ ಅವರು ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಅವರು ಬೆಂಗಳೂರು ವಿವಿ ಕನ್ನಡ ಸಂಘದ 99ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಲ್ಲದೇ ರಾಯಚೂರು ಜಿಲ್ಲೆಯ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ ಹಾಗೂ ದಲಿತ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ  ಕನ್ನಡ ಮತ್ತು ಜಾನಪದದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಚೊಚ್ಚಲ ಕವನಸಂಕಲನ " ಬಸವನ ಕಾಲಿನ ಜೋಡಿಮೆಟ್ಟು " ಪ್ರಕಟವಾಗಿದೆ. ಸಾಹಿತ್ಯ ಕ್ಷೇತ್ರದ ಕಾರ್ಯಗಳಿಗಾಗಿ ಬೆಂಗಳೂರು ನಗರ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಕನ್ನಡ ಸೇವಾರತ್ನ ಪ್ರಶಸ್ತಿ, ಕರುನಾಡ ಸೇವಾ ಟ್ರಸ್ಟ್ ನೀಡುವ ಪ್ರಜಾರತ್ನ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. 

More About Author