Poem

ಭವದ ಅವಕಾಳಿ

ಬೊಳೆತನದ ಬೋಳುಬೋಳಾದ ಬೆದರ ಗೊಂಬೆ
ಮಹಾ ಭಾರದ ಬಾಲ ಹಿಡಿದು 
ವಚನ ಪಚನಿಸದೆ ಫತರಗುಟ್ಟುತ್ತ ಅಂಗಾಲ ಬೆವರು
ಕ್ಷಣ ಕಾಲ ಸಂದರ್ಭಕ್ಕೊಂದು ಅರಭಿ ಮಲ್ಮಲ

ಕನ್ನಡಕವಿಲ್ಲದೆ ಕನ್ನಡಕವಾದ ಕಣ್ಣು
ಮುಲಾಜಿನ ಹೊಟ್ಟೆಯ ಮೇಲೆ ಕೈಯಾಡಿಸಿ
ಗಿರಮಿಟ್ಟಿ ಬಾಯಿಗೆ. ಭವದ ಅವಕಾಳಿ ಮೋಡ
ಚಲ್ಲಾಪಿಲ್ಲಿ ಚಿಂದಿ ಅರಭಿ ಹಿಡಿಯಲಿ ಮಣ್ಣ ಹುಡಿ
ಕಣ್ಣೀರಿಗೆ ಕಣ್ಣೀರು ಭರತನ ನಾಟ್ಯ ವೇದಿಕೆಯಲಿ

ಮಾತು,ವೇದ ಉಪನಿಷತ್ತು 
ತುದಿ ಬೆರಳಲ್ಲಿ ಸ್ಲಮ್ಮು ಗ್ಲಿಮ್ಮಿನ 
ರಾಜಾಧಿರಾಜರ ಉದಾಹರಣೆ
ಅಲ್ಲೊಂದು ತೇಲುವ ಮಿಂಚು ಮಾಯಾಲೋಕಕ್ಕೆ 
ಮೈಮುರಿದೇಳುವ ಯೌವನದ ಉತ್ಸಾಹ
ಅಂತ್ಯದ ಕಾಣ್ಕೆ
ಊರ ಬೀದಿಯ ಕಡೆಯ ಮೂಲಿಗೆ ಚಿತಾಭಸ್ಮ

ನಾವು ದೊಡ್ಡವರು ಊದು ಕೊಳವೆ  ಗೇಯಿಸುವಾಗ
ನಾವು ಹೀನರು ತಮ್ಮೆಲ್ಲ ಮಾಂತ್ರಿಕತೆ ಮುಗಿದಾಗ

ಕಾಲದ ಜೊತೆ ರಥ ಎಳೆಯುವ ಕುದರೆ 
ಅಷ್ಟೇ ದಯಪಾಲಿಸಿದ 
ದೊಡ್ಡ ದೊಡ್ಡ ದೇವರ ದೊಡ್ಡ ವರ
ಉಳಿದದ್ದು ಈ ಯುಗದ ಶಾಪ
ಆಡಿಯೋ
ವಿಡಿಯೋ

ಮಧು ಬಿರಾದಾರ

ಮಧು ಬಿರಾದಾರ ಅವರು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸುಸಲಾದ ಗ್ರಾಮದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸದ್ಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ, "ಜಾಗತಿಕ ಕಾವ್ಯದ ಕನ್ನಡ ಅನುವಾದಗಳು: ತಾತ್ವಿಕ ಅಧ್ಯಯನ " ವಿಷಯ ಕುರಿತು ಸಂಶೋಧನೆ ಮಾಡುತ್ತಿದ್ದಾರೆ. ಸಂಚಯ‌ ಮತ್ತು ಸಂಕ್ರಮಣ ಕಾವ್ಯ ಬಹುಮಾನ ಹಾಗೂ ಕ್ರೈಸ್ಟ್ ಕಾಲೇಜ್ ದ.ರಾ. ಬೇಂದ್ರೆ ಕವನ ಸ್ಪರ್ಧೆಯಲ್ಲಿ ಆರು ಭಾರಿ ಬಹುಮಾನಿತರು. "‌ಕಾಲದ ರಶೀದಿ ಪುಟ" ಪ್ರಕಟಿತ ಕವನ ಸಂಕಲನ. ಈ ಸಂಕಲನವು ಗುಲ್ಬರ್ಗಾ ವಿಶ್ವವಿದ್ಯಾಲಯ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.

More About Author