Poem

ಬಿಸಿಲ್ಗುದುರೆ

ಬಾಯಾರಿದ ಕುದುರೆ
ಬಳಲಿ ನೀರ ಅರಸಿದೆ
ಬಯಲಲಿ ನೀರ ಕಂಡು
ಭರದಲಿ ಓಡಿ, ಓಡಿ, ಓಡಿದೆ...
ಸನಿಹ ಸನಿಹ ಹೋದರೂ
ದೂರ ದೂರ ಸರಿದಿದೆ
ಆಸೆ ತೋರಿ ಕುದುರೆಯ
ಬಿಸಿಲ್ಗುದುರೆ ಸೆಳೆದಿದೆ...!

ಭಾನುವಿನ ತಾಪಕೆ
ಭೂಮಿಯ ಕಾವು ಏರಿದೆ!
ಭುವಿಯ ತಬ್ಬಿದ ಗಾಳಿಯು
ವಿರಳದಿಂದ ಸಾಂದ್ರವಾಗುತ
ಪದರ ರಚನೆ ಮಾಡಿದೆ!
ನಿರ್ಣಾಯಕ ಕೋನ ಮೀರಿ
ಭಾನುವಿನ ಬೆಳಕು ಸಾಗೆ
ಪೂರ್ಣಾಂತರಿಕ ಪ್ರತಿಫಲನಗೊಂಡಿದೆ!
ನೀರು ನಿಂತ ಭ್ರಮೆಯನು
ಈ ವಿದ್ಯಮಾನ ತಂದಿದೆ!
ಕುದುರೆಯನು ಬಿಸಿಲ್ಗುದುರೆ
ಸವಾರಿ ಮಾಡುತ ಸಾಗಿದೆ....!!

- ರಾಜಬಕ್ಷಿ ಕೆ.

ರಾಜಬಕ್ಷಿ.ಕೆ.ಕೊಟ್ಟೂರು

ರಾಜಬಕ್ಷಿ.ಕೆ.ಕೊಟ್ಟೂರು ಅವರು ಮೂಲತಃ ವಿಜಯನಗರ ಜಿಲ್ಲೆಯ ಕೊಟ್ಟೂರಿನವರು. ಪ್ರಸ್ತುತ ಮೈಸೂರು ಜಿಲ್ಲೆಯ ಸಾಲಿಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಮೇಲೆ ಕವನಗಳನ್ನು ಹೆಣೆಯುವುದು, ವ್ಯಂಗ್ಯಚಿತ್ರಗಳನ್ನು ರಚಿಸುವುದು ಇವರ ಪ್ರವೃತ್ತಿ. ಸರಳ ರೀತಿಯಲ್ಲಿ ವಿಜ್ಞಾನ ಮನೆ ಮನೆಗೆ ತಲುಪಬೇಕು ಎಂಬುದು ಇವರ ಆಶಯ.

ಕೃತಿ: ಚಿಮಣಿ ಬುಡ್ಡಿ

More About Author