Poem

ಹಾಡು ಹಕ್ಕಿ (ಭಾಮಿನಿ ಷಟ್ಪದಿ.)

ಮರದ ಮೇಲೆಯೆ ಕುಳಿತು ಹಾಡುವ
ಕರಿಯ ಬಣ್ಣದ ಪುಟ್ಟ ಹಕ್ಕಿಯು
ಹರಿಸಿ ಬಿಡುವಾ ನಾದ ಲಹರಿಗೆ ಮನವು ಸೋತಿಹುದು
ಕರೆಯುತಿರುವುದು ತನ್ನ ಬಳಗವ
ಮರೆಯಲಿರುತಿಹ ಹಣ್ಣು ತಿನ್ನಲು
ಸರಸವಾಡುತ ತನ್ನ ಯಿನಿಯನ ಜತೆಗೆ ಕೂಡುತಲಿ
ಹೂವು ತುಂಬಿದ ಮರಗಳೆಡೆಯಲಿ
ಕಾವು ಕೊಡುಲಿಯದರ ಮರಿಗಳ
ನೋವು ಕಾಣದ ರೀತಿ ಸಾಕುತ ಬೆಳೆಸಿ ಕೊಳ್ಳುವುದು
ಮಾವು ಹೂಗಳ ರಸವ ಹೀರುತ
ಜಾವದಲ್ಲಿಯೇ ಹಾರಿ ಬಿಡುತಲಿ
ಕಾವ ದೇವನ ನೆನೆದು ಹರುಷದಿ ತಿನಿಸ ಹುಡುಕುವುದು
ಬಣ್ಣ ತುಂಬಿದ ಗರಿಯ ಹರಡುತ
ಕಣ್ಣು ತುಂಬುವ ಚೆಲುವ ಬೀರುತ
ಸಣ್ಣ ಹೆಜ್ಜೆಯ ಹಾಕಿ ಕುಣಿಯುವ ನವಿಲ ನಾಟ್ಯವನು
ಹೆಣ್ಣ ಜತೆಯಲಿ ಸೇರಿ ನಲಿಯುತ
ಹೊನ್ನಿನಂತೆಯೆ ಹೊಳೆಯುತಿರುತಲಿ
ನನ್ನ ಮನದಲಿ ಹರುಷ ಮೂಡಿಸಿ ತನುವ ಮರೆಸುವುದು
ಬಾಳಿ ಬದುಕಲು ಪಕ್ಷಿ ಸಂಕುಲ
ಹಾಳು ಮಾಡದೆ ಪ್ರಕೃತಿ ಸಿರಿಯನು
ಕಾಳು ಹಾಕುತ ಪ್ರೀತಿ ತೋರುತಲಿರಲು ಸಂತಸವು
ನಾಳೆ ಮಾಡುವ ಕೆಲಸವೆಲ್ಲವ
ತಾಳುಯೆನ್ನುತ ಮುಂದೆ ಹಾಕದೆ
ಬಾಳು ಮುಗಿಯುವ ಮೊದಲು ಮಾಡಲು ದೇವನೊಲಿಯುವನು

- ಪಂಕಜಾ.ಕೆ. ಮುಡಿಪು

ಪಂಕಜಾ ರಾಮ ಭಟ್

ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ನಿವಾಸಿ ಪಂಕಜ ಕೆ ಮುಡಿಪು ಅವರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಮತ್ತು ಸಾವಿತ್ರಿ ದಂಪತಿಗಳ ಪುತ್ರಿ. ಅಂಚೆ ಇಲಾಖೆಯಲ್ಲಿ ಸುದೀರ್ಘ ಸೇವೆಯ ಬಳಿಕ ಅಸ್ಸಿಸ್ಟಂಟ್.ಪೋಸ್ಟ್ ಮಾಸ್ಟರ್ ಆಗಿ ಸ್ವಯಂ ನಿವೃತ್ತಿ ಪಡೆದಿರುವ ಇವರು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕಥೆ ಕವನಗಳನ್ನು ಅಲ್ಲದೆ ಇತ್ತೀಚಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಜಪಾನಿ ಪ್ರಕಾರದ ಹಾಯ್ಕು, ಟಂಕಾ ಗಜಲ್ ,ಚುಟುಕು ,ಜಾನಪದ ಗೀತೆ ,ರುಬಾಯಿ, ಹನಿಕವನ ಚಿತ್ರಕವನ ,ಭಕ್ತಿಗೀತೆ,ಭಾವಗೀತೆ , ದೇಶಭಕ್ತಿಗೀತೆ, ನ್ಯಾನೊ ಕಥೆಗಳು ಸಣ್ಣ ಕಥೆಗಳು ಇತ್ಯಾದಿ ಹಲವು ಪ್ರಕಾರಗಳನ್ನು ಬರೆಯುವ ಹ್ಯಾಸವುಳ್ಳವರು. ತುಮಕೂರಿನಲ್ಲಿ ನಡೆದ ರಾಜ್ತಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಇವರ ಮೊದಲ ಕವನ ಸಂಕಲನ ‘ಸಾವಿತ್ರಿ’ಗೆ ಸಾಹಿತ್ಯ ಶರಭ ಪ್ರಶಸ್ತಿ ಲಭ್ಯವಾಗಿದೆ. ಕೃತಿ: ‘ಸಾವಿತ್ರಿ’ (ಕವನ ಸಂಕಲನ -2019)

More About Author