Poem

ಹೊಂಬಳದ ಚೆಂಬೆಳಕು

ಶ್ರೀ ಚೆನ್ನವೀರ ಕಣವಿಯವರು
ಇನ್ನು ನಮಗೆ ನೆನಪು ಮಾತ್ರ.
ಕನ್ನಡಮ್ಮನ ಹೊನ್ನ ಚರಿತೆಯೊಳು
ಸದಾ ಹಸಿರು ಸಮನ್ವಯ ಸೂತ್ರ.

ಹೊಂಬಳ ಸೀಮೆಯ ಚೆಂಬೆಳಕದು
ಲೋಕದೊಳೆಲ್ಲೆಡೆ ಸೂಸಿತು ಚೆಲುವ.
ಜಂಬವಿರದ ಸಹಜ ಸರಳತೆಯೊಳು
ತುಂಬಿ ತುಳುಕಿಸಿತು ರಾಶಿ ರಾಶಿ ಒಲವ.

ಯಾವ ಪಂಥಕೂ ಮೀಸಲಾಗದೆ,
ವಿಶಾಲ ಭಾವದಿ ಮೆರೆದು ಸ್ವಂತತೆ.
ಹ್ಯಾವ ಪಂಥಗಳ ಮುಖವ ನೋಡದೆ
ಸೆಳೆಯಿತು ಕುಶಲ ಸಂದೇಶದ ಕಾಂತತೆ.

ಸರ್ವರೂ ತಲೆದೂಗುವ ಲಾಲಿತ್ಯದಿ
ಅರಿವಿನಮೃತವನು ಜಗಕೆ ಉಣಿಸಿ,
ಅಜರಾಮರವಾಯ್ತು ಸಿರಿ ಸಾಹಿತ್ಯ
ರಸಿಕ ಹೃದಯಗಳ ಕುಣಿಸಿ ತಣಿಸಿ.

- ವೀರೇಶ ಬ ಕುರಿ, ಸೋಂಪೂರ.

ವೀರೇಶ ಕುರಿ

ಕೊಪ್ಪಳದ ಕುಕನೂರು ತಾಲ್ಲೂಕಿನ ಸೋಂಪೂರದವರಾದ ಲೇಖಕ ವೀರೇಶ ಕುರಿ ಅವರು ಬಸಪ್ಪ ಕುರಿ- ಪಾರವ್ವ ಕುರಿ ಪುತ್ರನಾಗಿ 30-06-1987 ರಂದು ಜನಿಸಿದರು. ಸ.ಹಿ.ಪ್ರಾ.ಶಾಲೆ ಸೋಂಪೂರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಸೋಂಪೂರದ ಶ್ರೀ ಶರಣಬಸವೇಶ್ವರ ಹೈಸ್ಕೂಲ್ ದಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ತಿಗೊಳಿಸಿದರು. ಪಿ.ಯು.ಸಿಯನ್ನು ಶ್ರೀ ಜಗದ್ಗುರು ಅನ್ನದಾನೀಶ್ವರ ಪದವಿಪೂರ್ವ ಮಹಾ ವಿದ್ಯಾಲಯ, ಮುಂಡರಗಿ( ಶ್ರೀ ಮಠದ ವಸತಿ ನಿಲಯದಲ್ಲಿ ಊಟ ಮತ್ತು ವಾಸ್ತವ್ಯದೊಂದಿಗೆ) ಹಾಗೂ ಡಿ.ಇಡಿ: ಕೊಪ್ಪಳದ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ( ಶ್ರೀ ಗವಿಸಿದ್ದೇಶ್ವರ ಮಠದ ಉಚಿತ ಪ್ರಸಾದ ಮತ್ತು ವಸತಿ ನಿಲಯದ ಆಶ್ರಯದೊಂದಿಗೆ) ಯಲ್ಲಿ ಮಾಡಿದ್ದರು. ನಂತರ ಪದವಿ ವಿದ್ಯಾಭ್ಯಾಸವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ,ಮಾನಸ ಗಂಗೋತ್ರಿ,ಮೈಸೂರಿನಲ್ಲಿ ದೂರ ಶಿಕ್ಷಣದ ಮೂಲಕ ಪಡೆದ ವೀರೇಶ ಕುರಿ ಅವರು ಸ್ನಾತಕೋತ್ತರ ಪದವಿಯನ್ನು ಇತಿಹಾಸ ವಿಷಯದಲ್ಲಿ ಕ.ರಾ.ಮು.ವಿ,ಮಾನಸ ಗಂಗೋತ್ರಿ ಮೈಸೂರಿನಲ್ಲಿ ದೂರ ಶಿಕ್ಷಣದ ಮೂಲಕ ಪೂರ್ತಿಗೊಳಿಸಿದರು.

ಪ್ರಸ್ತುತ ಪದವೀಧರ ಪ್ರಾಥಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಈ ಹಿಂದೆ ನಿರ್ವಹಿಸಿರುವ ಹುದ್ದೆಗಳು: N.E.K.R.T.C ಯಲ್ಲಿ ನಿರ್ವಾಹಕ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಎಸ್.ಡಿ.ಎ.ಎ. ಮತ್ತು 1 ರಿಂದ5 ನೇ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದರು. ಆಧುನಿಕ ವಚನಗಳ ರಚನೆ,ಕವಿತೆ,ಚುಟುಕುಗಳು ಮತ್ತು ಮಕ್ಕಳ ಗೀತೆಗಳ ರಚನೆ ಇವರ ಹವ್ಯಾಸಗಳು.

ಕೃತಿ: ವಚನ ಜ್ಯೋತಿ 

More About Author