Poem

ಕಣ್ಣು ಚುಚ್ಚದ ಬೆಳಕು

ಅಂತಃಪುರದ ಮಂದ ಬೆಳಕಿನಲ್ಲಿ
ಸಿದ್ಧಾರ್ಥನೆದ್ದುದು ಬುದ್ಧ ಕಂಡ.
ತೆರೆಯೆ ನಡೆಯೆ ದಾರಿ ಹೆಜ್ಜೆ
ಹೆಜ್ಜೆಗೂ ಮುಂದೆ ಮುಂದೆ.

ನಡೆಯೆನೆ - ಇರುವೆಗೂ ಎಚ್ಚರಿಲ್ಲ
ನೆಲದಾಯಿ ಎದೆಗೆ ವಜನು ಅಲ್ಲ.
ಬಾವಲಿಯ ಪಹರೆಯಲಿ ನಡೆದ
ಕಾಲಿಗೆ ಸರ್ಪ ಸುತ್ತಿಕೊಳಲಿಲ್ಲ.

ಹೇಳದೆಯೆ ಕಾಲಿಗೆ ದಾರಿ ದೂರ
ನಡೆದ ನಡೆದ ನಡೆದೇ ನಡೆದ
ಕತ್ತಲೆಯ ಗವಿಬಂದಿ ತೇಜ
ಮುಕ್ತಿಗೆ ತೊಡೆತಟ್ಟಿದ ಮಲ್ಲ.

ಕತ್ತಲೆಯ ಮುಡಿಗೆ ನೇಸರನ ಮುಡಿಸಿ
ದೇಹಕೆ ಕಿರಣ ವಸ್ತ್ರವ ತೊಡಿಸಿ
ತಾವರೆಯ ಮೊಗ ನಗಿಸಿ
ಅರಮನೆಯ ತೊರೆದವ ಗುರುಮನೆಯ ತೆರೆದ.

ಕಣ್ಣು ಚುಚ್ಚದ ಬೆಳಕಿನಲಿ ಮಿಂದ
ಹುಳುಕು ಕಂಗಳಿಗೆ ಅದೃಶ್ಯನಾದ
ಕರೆವವರ ಎದೆಗಳಿಗೆ ಬುದ್ಧ ಸಿದ್ಧ
ಬರಿ ನಾಮಜಪದ ಜಪಮಾಲೆ ಹರಿದ.

ಜಗದಲ್ಲಿ ಎದ್ದಿರುವ ಬುದ್ದನಿಗೆ
ಕತ್ತಲೆಯ ಹೊದ್ದವರ ಎದೆ ಸಮಾಧಿ.
ತೇಜವೆಂದಿಗು ಮನೆಯ ಕಟ್ಟಿದುದಿಲ್ಲ
ಕಟ್ಟಡಗಳಲಿ ತೇಜ ಹಿಡಿಸುವುದೂ ಇಲ್ಲ.

ಎದ್ದಿರುವ ಬುದ್ಧನಿಗೆ ಸುಪ್ರಭಾತವೆ ಹೊರತು
ಜೋಗುಳದ ಹಾಡಿಗೂ ತೂಕಡಿಕೆ ಬಹುದೂರ
ಅದು ಅಂದು, ಇಂದೆಲ್ಲಿ ಹುಡುಕುವಂತಿಲ್ಲ
ಪರಿಮಳವು ಬಾಡದ ಅಂತರಂಗವೆ ಬುದ್ಧ.

- ಸ.ರಘುನಾಥ

ಸ. ರಘುನಾಥ

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು.

1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ನೀಡಿಕೆ. ಆಪ್ತ ಸಮಾಮಾಲೋಚನೆ:ಉಚಿತ ಸಲಹೆ, ಸಹಕಾರ. 2006ರಲ್ಲಿ ಹಸಿರುಹೊನ್ನು ಬಳಗ ಸ್ಥಾಪನೆ: ಗಿಡಮರ ಸಂರಕ್ಷಣೆ. ಗಿಡಮೂಲಿಕೆ  ಸಂಗ್ರಹ, ಗಿಡ ನೆಡುವುದು, ನೀರಾವರಿ ಹೋರಾಟ. ಅದರ ಸ್ಥಾಪಕ ಕಾರ್ಯದರ್ಶಿ. 2015 ರಲ್ಲಿ ಬೊಮ್ಮಲಾಟಪರುದ ತೊಗಲುಗೊಂಬೆ ಕಲಾವಿದರ ಸಂಘಟನೆ. ಶಿಳ್ಳೇಕ್ಯಾತ ಬಂಗಾರಕ್ಕ ತೊಗಲುಗೊಂಬೆ ಕಲಾ ಸಂಘ ಸ್ಥಾಪನೆ. ಅದರ ಅಧ್ಯಕ್ಷತೆ. 2017ರಲ್ಲಿ ಅಲೆಮಾರಿ ನಿರಾಶ್ರಿತರಾಗಿ ನಮ್ಮ ಮಕ್ಕಳು-ಹಸಿರು ಹೊನ್ನೂರು ಗ್ರಾಮ ನಿರ್ಮಾಣ. 22 ಮಂದಿಗೆ ವಸತಿ, ಶೀಕ್ಷಣ, ಉದ್ಯೋಗ ವ್ಯವಸ್ಥೆ. ಇವೆಲ್ಲೂ ಸ ರಘುನಾಥ ಅವರ ಸಮಾಜಮುಖಿ ಕಾರ್ಯಗಳಿಗೆ ಕೆಲವು ಉದಾಹರಣೆಗಳಷ್ಟೆ.

ಸ. ರಘುನಾಥ ಅವರು ಈ ವರೆಗೂ 8 ಕವನ ಸಂಕಲನಗಳು, 3 ಸಣ್ಣ ಕಥೆಗಳು,  9ಲೇಖನ/ವಿಮರ್ಶೆಗಳ ಕೃತಿ, 3ಮಕ್ಕಳ ಸಾಹಿತ್ಯ, 3ಜಾನಪದ ಸಂಗ್ರಹ ಕೃತಿ, 19 ಅನುವಾದಗಳು , 15ಸಂಪಾದನ ಕೃತಿಗಳನ್ನು ಪ್ರಕಟಿಸಿದ್ದಾರೆ.

More About Author