Poem

ಕವಿಗೆ ಹಾಳೆಗಳು ಸಿಗುತ್ತಿಲ್ಲ 

ಗಾಳಿ ನಿಂತಿದೆ ಹೊರಗೆ
ಫ್ಯಾನು ತಿರುಗುತಿದೆ ಒಳಗೆ
ಮೈಯೊಳಗೆಲ್ಲ ಇಬ್ಬನಿ ಸಂಚಾರ
ತಲೆಮೇಲೆ ತಟತಟ ಮಳೆಹನಿ
ಅಂಗಾಲ ಕೆಳಗೆ ಬೆಂಕಿ ಬಿಸಿಲು


ಹಿತ್ತಲ ಗಿಡಗಳು ಬೋಳುಬೋಳು
ಅಂಗಳದಲ್ಲಿ ನೆರೆಯೋ ನೆರೆ
ಚಳಿ ತಾಳದೆ ನಡುಗುತಿದೆ
ನಡು ಮನೆಯ ಕಂಬ

 

ಕೇದಗೆಯ ಬನದ ಹಾವುಗಳು
ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷ
ಹೊಲದ ಬದುವಿನ ಗೂಟಗಳ್ಳಿ
ಡಬಗಳ್ಳಿ ದೆವ್ವಬಾಳಿ ಪೀಕಜಾಲಿಗಳು
ರಾಷ್ಟ್ರೀಯ ಹೆದ್ದಾರಿಯಲಿ
ಸೊಂಪಾಗಿ ಬೆಳೆದು ನಿಂತಿವೆ

 

ಕವಿ ನಾಳೆಯ ಬಗ್ಗೆ ಚಿಂತಿಸುತ್ತಿದ್ದಾನೆ
ಅವನಿಗೆ ಹಾಳೆಗಳು ಸಿಗುತ್ತಿಲ್ಲ
ಕಾಗದ ತಯಾರಿಕೆಯನು
ನಿರ್ಬಂಧಿಸಲಾಗಿದೆ ನಾಡಿನಲ್ಲಿ
ಪೆನ್ನು ಬಿದ್ದಿದೆ ಸುಮ್ಮನೆ
ಕಾಗದವಿಲ್ಲದೆ

ಲಕ್ಷ್ಮಣ ಬಾದಾಮಿ

ಲಕ್ಷ್ಮಣ ಬಾದಾಮಿ ಅವರ ಮೂಲ ಹೆಸರು ಲಕ್ಷ್ಮಣ ತುಕಾರಾಮ ಬಾದಾಮಿ. ಇವರು ಮೂಲತಃ ಬಾಗಲಕೋಟ ಜಿಲ್ಲೆ ಸಿರೂರು ಗ್ರಾಮದವರು. ಕಲಾ ವಿಭಾಗದಲ್ಲಿ ಎಂ.ಎಫ್.ಎ., ಎ.ಎಂ., ಜಿ.ಡಿ.(ಆರ್ಟ್) ಪೂರ್ಣಗೊಳಿಸಿದ್ದು, 2008ರಿಂದ ಸರಕಾರಿ ಪ್ರೌಢಶಾಲೆ ಕುರುಕುಂದದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಕಲೆ ಹಾಗೂ ಸಾಹಿತ್ಯ ವೇದಿಕೆ, ಸಿರೂರದ ಮೂಲಕ ಕಳೆದ 15 ವರ್ಷಗಳಿಂದ ಸಾಹಿತ್ಯ, ಜಾನಪದ ಕಲೆಗಳ ಪುನರುತ್ಥಾನಕ್ಕಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಕಲೆಯೊಂದಿಗೆ ಸಾಹಿತ್ಯದತ್ತರು ಆಸಕ್ತಿಹೊಂದಿರುವ ಅವರ ‘ಭವ’, ‘ಬೇರು ಮತ್ತು ಬೆವರು’, ‘ಒಂದು ಚಿಟಿಕೆ ಮಣ್ಣು’ ಎಂಬ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಮನುಷ್ಯರು ಬೇಕಾಗಿದ್ದಾರೆ’ ಅವರ ಪ್ರಕಟಿತ ಕವನ ಸಂಕಲನ. ‘ರೂಪ ನಿರೂಪ’ ಪೇಂಟಿಂಗ್ಸ್ ಗಳ ಕುರಿತ ಕೃತಿಯಾಗಿದೆ. ‘ಬಿಸಿಲ ಸೀಮೆಯ ಜಾನಪದ ಸಿರಿ’ ಅವರ ಸಂಪಾದಿತ ಕೃತಿ. ಅವರ ‘ಬೇರು ಮತ್ತು ಬೆವರು’ ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ, ‘ಒಂದು ಚಿಟಿಕೆ ಮಣ್ಣು’ ಕಥೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಚಿನ್ನದ ಪದಕ ದೊರೆತಿದ್ದು, ಇದೇ ಶೀರ್ಷಿಕೆಯ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ. 

More About Author