Poem

ಕ್ಷಣಗಣನೆ

ಒಂದು.....ಎರಡು......ಮೂರು
ಹೀಗೆ ಸುರುವಾಗಿದೆ ಕ಼ಣಗಣನೆ.
ಹಚ್ಚಿಟ್ಟ ಹಣತೆಯ ಬೆಳಕು
ಕ್ಷೀಣವಾಗಿದೆ ಈಗಾಗಲೆ.
ಸಮಯ ಬಹಳಿಲ್ಲ ಇನ್ನು.

ಎಣ್ಣೆತೀರಿ,ಬತ್ತಿಸುಟ್ಟು ಕರಕಲು
ಖಮಟುವಾಸನೆ ಒಳಗೆಲ್ಲ-
ತುಂಬಿ ಉಸಿರುಗಟ್ಟಿದ ಅನುಭವ.
ಸಮಯ ಬಹಳಿಲ್ಲ ಇನ್ನು.

ಕಣ್ಣೆದುರು...ಮಬ್ಬು....ಮಬ್ಬು
ಜೀವ,ಜೀವನ ಚಿತ್ರಗಳೆಲ್ಲ ಅಸ್ಪಷ್ಟ,
ಚಿತ್ತದ ಒಳಗೂ.....ಹೊರಗೂ.
ಸಮಯ ಬಹಳಿಲ್ಲ ಇನ್ನು.

ದಡಸೇರಗೊಡದೆ ಕಾವಲು ಅಲೆ,
ಹಟಕ್ಕೆ ಬಿದ್ದಂತೆ ನೂಕಿ....ನೂಕಿ,
ತೂತು ದೋಣಿ, ಕಣ್ಣಳತೆಗೂ ದೂರ-
ಕಡಲ ಮಧ್ಯದಲ್ಲಿ ಅಸ್ಪಷ್ಟ.
ಸಮಯ ಬಹಳಿಲ್ಲ ಇನ್ನು.

ಆಲಯದೊಳಗೆ ಬಂಧಿ,
ಬಯಲ ಬಣ್ಣದ ಹಕ್ಕಿ ಚೀತ್ಕರಿಸಿ
ಚಡಪಡಿಸುತ್ತಿದೆ ಒಂದೇ ಸವನೆ.
ಸಮಯ ಬಹಳಿಲ್ಲ ಇನ್ನು.

ತೊಟ್ಟ ವೇಷಭೂಷಣ,ಮುಖವಾಡ
ಎಲ್ಲ ಕಳಚಿಟ್ಟು ಒಮ್ಮೆಗೇ..
ಬೆತ್ತಲಾಗಿ ನಿರುಮ್ಮಳವಾದಂತೆ...!

ನಡೆದೂ..ನಡೆದೂ ಸವೆಸಿದ ದಾರಿ-
ಯ ಕೊನೆ ಹತ್ತಿರ....ಹತ್ತಿರವಾದಂತೆ...!

ಇನ್ನಾದರೂ ಸಾಧ್ಯವಾಗದ್ದನ್ನು
ಸಾಧ್ಯವಾಗಿಸಿ,ಅಂದುಕೊಂಡದ್ದನ್ನು
ಆಗಮಾಡಿಸಿ,ವಿರಮಿಸಬೇಕು.

ಎದುರು ಇದ್ದಿರಬಹುದು,
ಕಾಲಾತೀತಕ್ಕೊಂದು ಸಣ್ಣ ಏಣಿ,
ಆಮೇಲೆ..ಆಮೇಲೆ......
ಗಡಿಯಾರ ಸ್ತಬ್ಧ.

-ಅಬ್ಳಿ, ಹೆಗಡೆ

ಸುಬ್ರಹ್ಮಣ್ಯ ಹೆಗಡೆ ಅಬ್ಳಿ.

ಹೊನ್ನಾವರ ತಾಲೂಕಿನ ಮುಗ್ವಾ ಮೂಲದವರು ಸುಬ್ರಹ್ಮಣ್ಯ ಹೆಗಡೆ ಅಬ್ಳಿ.ಅಬ್ಳಿ ಎನ್ನುವದು ಅವರ ಕುಟುಂಬದ ಹೆಸರು. ಕೃಷಿಯನ್ನೇ ಉದ್ಯೋಗವನ್ನಾಗಿಸಿಕೊಂಡಿರುವ ಇವರು ಕಲೆ,ಸಾಹಿತ್ಯ.ಓದು,ಬರವಣಿಗೆಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಅಂತರ್ಜಾಲ ಪತ್ರಿಕೆ ಗಳಲ್ಲಿ ಕಥೆ,ಕವನಗಳು ಬಹಳಷ್ಟು ಪ್ರಕಟವಾಗಿವೆ. ಕೃತಿ: 'ಗುಂದ' ಪ್ರಕಟವಾಗಿರುವ ಕಾದಂಬರಿ.

More About Author