Poem

ಪದ್ಯ

ನೋಡಿ ನೀವು,
ಮಾಡುವುದು ಇದೇ ತಪ್ಪು
ಬರೆಯುವುದಿಲ್ಲ ಬಿಚ್ಚಿ,ಹರವಿ,ಕೊಡವಿ
ಬಯಲಿಗಿಟ್ಟಂತೆ ಬಯಲಾಗದ್ದನ್ನು

ಅಡಗಿಸಿಟ್ಟುಕೊಳ್ಳುತ್ತೀರಿ ಎಲ್ಲ
ಎಲ್ಲವನ್ನು
ಎಲ್ಲದನ್ನು ಕಣ್ಣೊಳಗೆ,ಎದೆಯೊಳಗೆ
ನಾಭಿಯ ಕಣಿವೆಯೊಳಗೆ

ಮುಚ್ಚಿಟ್ಟುಕೊಳ್ಳುತ್ತೀರಿ
40ರ ದಶಕದವರಂತೆ
ಸಿಡಿಯಬೇಕಿದೆ ಕೊಂಚ ಕೊಂಚ
ತುಸು ನವಿರಾಗಿ
ಹದಬೆರೆತ ಕಾವಿನಲಿ ಏರಿಳಿವ
ಜಾಡಿನಲಿ ತೆವಳುವ ಸಂಗತಿಗಳ
ಹೇಳಬೇಕಿದೆ ನೀವು

ನಿಜ ಹೇಳಿ, "ಬೋಲ್ಡ್"
ಎನ್ನಿಸಿಕೊಳ್ಳುವ ಮನಸ್ಸಿಲ್ಲವೆ? ನಿಮಗೆ
ಒಪ್ಪಲಾರೆವು "ಇಲ್ಲ" ಎಂದರೆ..
ಆಸೆಯಿದೆ ನಿಮಗೂ

ತೆಳು ಸೊಂಟವ ಒತ್ತಿ ತೀದಿ
ತೋರಿಸಿಕೊಳ್ಳುವುದಕ್ಕೆ
ಸೀಳುಗಳ ತೆರೆದಿಟ್ಟು ಮುದ್ರೆ ಒತ್ತಿಸಿಕೊಳ್ಳುವುದಕ್ಕೆ!
ಅಂಜುತ್ತೀರಿ ನೀವು ಸುಖಾಸುಮ್ಮನೆ

"ಹೌದೋ ಅಲ್ಲವೋ"
ಒಮ್ಮೆ ಸ್ಪಷ್ಟ ನುಡಿದುಬಿಡಿ
" ಹೌದು" ಕಾವ್ಯ ಮೋಹಿತರೆ
ಒಪ್ಪುತ್ತೇವೆ ನಿಮ್ಮನ್ನು

ಈ ಮಾತುಗಳು
ತಮ್ಮ ಮನೆಯ ಲಜ್ಜೆಗಳಿಗು
ಅನ್ವಯಿಸುವುದಾದರೆ
ನಮ್ಮದೊಂದು ಬಹುಪರಾಕ್

- ದೀಪ್ತಿ ಭದ್ರಾವತಿ

 

ದೀಪ್ತಿ ಭದ್ರಾವತಿ

ದೀಪ್ತಿ ಭದ್ರಾವತಿ -ದಕ್ಷಿಣ ಕನ್ನಡದ ಮರವಂತೆ ಮೂಲದವರು. ಚಿಕ್ಕಮಂಗಳೂರಿನ ನಕ್ಕರಿಕೆ ಎಂಬ ಕುಗ್ರಾಮದಲ್ಲಿ ಹುಟ್ಟಿದ್ದು, ಹೆಸರು ಕೇವಲ ದೀಪ್ತಿ ಮಾತ್ರ ಆದರೆ ಭದ್ರಾವತಿಯ ಜೊತೆ ಅವಿನಾಭಾವ ಸಂಬಂಧ ಇರುವುದರಿಂದ ಹಾಗೂ ಅವರ ಜೀವನದಲ್ಲಿ ಬಾಲ್ಯದಿಂದ ಯೌವನದವರೆಗೆ ಭದ್ರಾವತಿಯ ಕೊಡುಗೆ ತುಂಬಾ ಇರುವುದರಿಂದ ದೀಪ್ತಿ ಭದ್ರಾವತಿ ಎಂಬ ಹೆಸರಿನಿಂದ ಕಾವ್ಯವನ್ನು ಬರೆಯುತ್ತಾರೆ. ದೀಪ್ತಿಯವರು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವೀಧರರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನೂ ಹಾಗೂ ಹಿಂದಿಯಲ್ಲಿ ವಿಶಾರದ ಪದವಿಯನ್ನು ಪಡೆದಿದ್ದಾರೆ. ಪದವಿಪೂರ್ವದಲ್ಲಿ ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದ ಇವರಿಗೆ ಸಾಹಿತ್ಯ ಕ್ಷೇತ್ರದ ಆಕರ್ಷಣೆ ಬೇರೆ ಬೇರೆ ಪದವಿಗಳಿಗೆ ಅನುವು ಮಾಡಿಕೊಟ್ಟಿತ್ತು. ಪ್ರಸ್ತುತ ಸರಕಾರಿ ಉದ್ಯೋಗದಲ್ಲಿದ್ದು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  

ಅವರ ಮೊದಲ ಕೃತಿ-ಕಾಗದದ ಕುದುರೆ, ಎರಡನೇ ಕೃತಿ- ಗ್ರೀನ್ ರೂಮಿನಲ್ಲಿ ಹಾಗೂ ಮತ್ತೊಂದು ಕಥಾ ಸಂಕಲನ- ಆ ಬದಿಯ ಹೂವು. ದೀಪ್ತಿ ಅವರ ‘ಆ ಬದಿಯ ಹೂವು’  ಕೃತಿಗೆ ಈ ವರ್ಷದ ಮಾಸ್ತಿ ಕಥಾ ಪ್ರಶಸ್ತಿಗೆ ಭಾಜನವಾಗಿದೆ. ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಇವರು ಕೊಡಮಾಡುವ ಗೀತಾ ದೇಸಾಯಿ ದತ್ತಿ ನಿಧಿ ಪ್ರಶಸ್ತಿ,  ಮುಂಬೈಯ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರ ಶಾರದಾ ವಿ ರಾವ್ ದತ್ತಿ ನಿಧಿ ಪ್ರಶಸ್ತಿ,  ಧಾರವಾಡದ ಹರಪನಹಳ್ಳಿ ಭೀಮವ್ವ ಪ್ರಶಸ್ತಿ,  ಮಂಡ್ಯದ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ,  ಈ ವರ್ಷ ಮಾಸ್ತಿ ಕಥಾ ಪ್ರಶಸ್ತಿ ಇವರ ಮುಡಿಗೇರಿವೆ. ಇದಲ್ಲದೆ ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಸ್ಪರ್ಧೆ ಬಹುಮಾನ, ಚೇತನಧಾರ ಟ್ರಸ್ಟ್ ಕಾವ್ಯ ಪ್ರಶಸ್ತಿ, ಗುರುಸಿದ್ಧ ಬಸವಶ್ರೀ ಪ್ರಶಸ್ತಿ, ವಿವಿಧ ಪತ್ರಿಕೆಗಳ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ಅವರ ಎರಡನೇ ಕಥಾ ಸಂಕಲನ "ಗೀರು" ಕೃತಿಯು ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. 

More About Author