Poem

ಪ್ರೀತಿ ನದಿಯಂತೆ

ಪ್ರೀತಿ ನದಿಯಂತೆ-ನಿಜ,ಈ ನದಿಯು ನೇಸರಿನ
ಕಿರಣಗಳ ಹೊದಿಕೆಯಡಿಯಲ್ಲಿ ಎರಡೂ ದಡವ
ಅಪ್ಪುತ್ತ , ಮರಗಳ ನೆರಳ ಹಿಡಿಯುತ್ತ ಮೆಲು ಚಲನೆ-ಒಮ್ಮೊಮ್ಮೆ
ಹಠಮಾರಿ ಮಕ್ಕಳ ಮೇಲಿನಾಕ್ರೋಶದಂಥ ನಡವಳಿಕೆ
ಮುನ್ನಡೆದಂತೆ ಬೆಟ್ಠ ಸಾಗರವೊಂದು-ನಡುವ ವಿಸ್ತಾರದಲಿ
ನವಸೃಷ್ಟಿ ಸಂಭ್ರಮ.ಉಳಿದದ್ದೆಲ್ಲ ತನ್ನರಿವಿನಾಚೆ.

ಈ ಕುರುಡಿನಲ್ಲಿ ತಿಳಿಯುವುದೇ ಇಲ್ಲ-ನಡುವಿರುವ
ತಿರುಗಣಿ ಮಡುಗಳು,ಬಾಯ್ದೆರೆದು ಕುಳಿತ ಮೊಸಳೆಗಳು
ಈಜ ಬಂದವರನ್ನು ಜಾರಿಸುವ ಕ್ರೂರ ಹಿಕಮತ್ತುಗಳು
ಈ ನಡುವೆ ನದಿಗೆ ಹುಟ್ಟಿನ ಜಾಗವೂ ಮರೆವು

ಥಳಕು ಮೈ ಪ್ರೀತಿ ನದಿಯಾಳದಲಿ ಕಪ್ಪು
ಬರಸೆಳೆದ ಸಾಗರದ ನೀರಲ್ಲೂ ಉಪ್ಪು.

- ಸುಬ್ರಾಯ ಚೊಕ್ಕಾಡಿ

ವಿಡಿಯೋ
ವಿಡಿಯೋ

ಸುಬ್ರಾಯ ಚೊಕ್ಕಾಡಿ

ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು  ಹುಟ್ಟಿದ್ದು 29-06-1940 ರಂದು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ. ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ, ತಾಯಿ ಸುಬ್ಬಮ್ಮ. ಪ್ರಾಥಮಿಕ ಶಿಕ್ಷಣ ಚೊಕ್ಕಾಡಿ. ಹೈಸ್ಕೂಲು ಓದಿದ್ದು ಪಂಜದಲ್ಲಿ  ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಎಂ.ಎ. (ಕನ್ನಡ) ಪದವಿ. ತಂದೆ ಯಕ್ಷಗಾನ ಕವಿ, ಭಾಗವತರಾದುದರಿಂದ ಕಿವಿಗೆ ಬೀಳುತ್ತಿದ್ದ ಲಯಬದ್ಧ ಹಾಡುಗಳು, ಹೈಸ್ಕೂಲಿಗೆ ನಡೆದು ಹೋಗುವಾಗ ಕಾಡಿನ ಮಧ್ಯೆ ಕೇಳುತ್ತಿದ್ದ ನೀರಿನ ಝುಳು ಝುಳು ನಾದ, ಹಕ್ಕಿಗಳ ಕೂಗು, ಮರಗಳ ಮರ್ಮರತೆಯಿಂದ ಪ್ರಭಾವಿತರಾಗಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಕವನ ಕಟ್ಟುವ ಕಾಯಕ ಪ್ರಾರಂಭ. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಶಿಕ್ಷಕ ವೃತ್ತಿ. ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ 39 ವರ್ಷಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸಲ್ಲಿಸಿದ ಸೇವೆ. ಎಳೆವೆಯಿಂದಲೇ ಅನುಭವಿಸಿದ ಕಷ್ಟ ಕಾರ್ಪಣ್ಯದ ದಿನಗಳು, ನೋವಿನ, ಅವಮಾನದ, ಅಸಹಾಯಕತೆಯ ಘಟನೆಗಳಿಗೆ ಪ್ರತಿಭಟನೆಯ ರೂಪ ನೀಡಿದ್ದೆ ಮೂರ್ತ ಕಾವ್ಯರೂಪದಲ್ಲಿ. ಸಂಕೇತ, ಪ್ರತಿಮೆ, ರೂಪಕಗಳ ಮೂಲಕ ಹೊರಹಾಕಿದಾಗ ಕವಿಯೊಬ್ಬನ ಆವಿರ್ಭಾವ. ಹೀಗೆ ಬರೆದ ಕವನಗಳು ನಾಡಿನ ಪ್ರಮುಖ ಪತ್ರಿಕೆಗಳೆಲ್ಲದರಲ್ಲೂ ಪ್ರಕಟಿತವಾಗಿವೆ. 

ಸುಬ್ರಾಯ ಚೊಕ್ಕಾಡಿಯವರ ಪ್ರಕಟಿತ ಕೃತಿಗಳು- ಕವನ ಸಂಕಲನ- ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ. ಗೀತೆಗಳು-ಹಾಡಿನ ಲೋಕ, ಬಂಗಾರದ ಹಕ್ಕಿ. 

ವಿಮರ್ಶೆ-ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು. 

ಕಾದಂಬರಿ-ಸಂತೆಮನೆ. ಸಂಪಾದಿತ : 1901-1976 ರವರೆಗೆ ದಕ್ಷಿಣ ಕನ್ನಡ ಕಾವ್ಯ (ಇತರರೊಡನೆ). ಕ್ಯಾಸೆಟ್ ಹಾಗೂ ಸಿಡಿಗಳು-ಮಿಲನ, ಮಾನಸ, ಬೆಣ್ಣೆ ಕದ್ದ ನಮ್ಮ ಕೃಷ್ಣ, ವನಸಿರಿ, ಅನುರಾಗ, ಸಲ್ಲಾಪ, ಹುಣ್ಣಿಮೆ, ನೂಪುರ, ಸಿರಿಗನ್ನಡ, ದೀಪ, ಭಾವ ಚಿತ್ತಾರ, ನಿನ್ನ ಬಾಂದಳದಂತೆ. 

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಅವರಿಗೆ ಸಂದ ಗೌರವ ಪ್ರಶಸ್ತಿಗಳು- 65ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಸುಳ್ಯ ತಾಲ್ಲೂಕು 5ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದ.ಕ. ಜಿಲ್ಲಾ 15ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ವರ್ಧಮಾನ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ಮೃತ್ಯುಂಜಯ ಸಾರಂಗ ಮಠ ಪ್ರಶಸ್ತಿ, ಸಾಹಿತ್ಯಕಲಾನಿ ಪ್ರಶಸ್ತಿ, ಕರ್ನಾಟಕ ಶ್ರೀ ಪ್ರಶಸ್ತಿ ಮುಖ್ಯವಾದುವು. ಅರ್ಪಿಸಿದ ಗೌರವಗ್ರಂಥ ‘ಮುಕ್ತ ಹಂಸ.’  

More About Author