Poem

ಪುನರ್ಭವ

ಪ್ರತಿ ಶಿಶಿರದ ಆಳದಲೂ ನನಗೆ
ಬೇಸಿಗೆಯ ಚಿಗುರು ಕಾಣಿಸುತ್ತದೆ
ಅಸಂಖ್ಯ ಕಂಬಳಿಹೊದ್ದ ಇಳೆಯ ಒಳಗೆ
ಸಣ್ಣಗೆ ಉರಿವ ಹಿತಬಿಸಿಯ ಹಣತೆ
ಪ್ರತಿ ಋತುವಿನ ಮುಖವಾಡ ನನಗೂ
ಶಿಶಿರದಲಿ ಬೇಗೆಯ ನಾಟಕ,
ಬೇಗೆಯಲಿ ಮಳೆಯ ತಾಲೀಮು,
ಬದುಕಿಡೀ ಅಲಿಖಿತ ರಂಗಮಂಚ

ನನಗೆ ಗೊತ್ತು.

ಮುಂದೆ ಬೇಸಿಗೆ ರಣ ಇದೆ
ಶಿಶಿರದಲಿ ಹೆಚ್ಚೇ ಕೈ ಸುಟ್ಟುಕೊಳ್ಳುವೆ
ಬೆರಳುಗಳಲಿ ಉರಿದೀಪವ ಸವರುವೆ
ಕೆಂಡಗಳನು ದಿಟ್ಟಿಸುವೆ
ಬೇಗೆ ಮತ್ತು ಶಿಶಿರದ ನಡುವೆ
ಮಳೆಹನಿಗಳ ಪದ ಸೇತುವೆ ಕಟ್ಟುವೆ
ಈ ಜೀವ ಯಾವುದನೂ ಮರೆಯದಿರಲಿ
ಯಾವುದನೂ ವೃಣದಂತೆ ಹಚ್ಚಿಕೊಳ್ಳದಿರಲಿ

ಕಾಪಾಡಿಕೊಳ್ಳಬೇಕಾಗಿದೆ ನನ್ನದೆ ವಸಂತವೊಂದನು
ಮರುಭೂಮಿಯ ಆಳದಲಿ ಹಿಮವನು
ಯಾವ ಶಿಶಿರವೂ
ಯಾವ ಮಳೆಯೂ
ಯಾವ ವೈಶಾಖವೂ
ಒಳಮನೆಯನು ಅಲುಗಿಸದಹಾಗೆ
ಕನಸುಗಳನು ನೆಲಕೆ ಒರಗಿಸದ ಹಾಗೆ

ಸಂಗ್ರಹಿಸುತಿರುವೆ
ಶಿಶಿರದಾಳದ ಬೇಗೆಯ ಚಿಗುರನು
ಜೊತೆಗೆ
ನಾಳೆ ಬೇಗೆಯ ಸೆರಗಿನಲಿ ತೊಟ್ಟಿಕ್ಕುವ
ಮಳೆಯನು

ಪದಗಳು ಋತುವಿನ ಬೇಟೆಗೆ ಹೊರಟಿವೆ
ಮತ್ತೆ ಸಿಗುವೆ

ವಾಸುದೇವ ನಾಡಿಗ್

ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ಪ್ರಶಸ್ತಿ ಇವರಿಗೆ ದೊರೆತಿವೆ.

More About Author