Poem

ಸಾಕು ನಮಗವನೇ...

ದಮ್ಮಯ್ಯ ನಿಮ್ಮ
ಸ್ಥಾವರದ ಮೂರ್ತಿಗಳ
ಕತ್ತಲ ಗುಡಿಗಳಲ್ಲೇ ಬಂಧಿಸಿಡಿ
ನಮಗೆ ಬೇಕಿಲ್ಲ
ಅವನ ಉಸಾಬರಿ.

ನಮ್ಮ ಎದೆ ಹಾಲುಗಳಲ್ಲಿ
ನಿಯಮಿತ ಜೀವ ಸ್ರಾವಗಳಲ್ಲಿ
ನರನಾಡಿಗಳ ಇಂಚಿಂಚಲ್ಲಿ
ಈ ಅಪವಿತ್ರ ದೇಹದ ಅಣುಕಣಗಳಲ್ಲಿ
ನೀವೇ ಪ್ರತಿಪಾದಿಸಿದ
ಸರ್ವಾಂತರ್ಯಾಮಿ ಅವನಿದ್ದಾನೆ!

ಮುಟ್ಟು ಮೈಲಿಗೆಯ
ತೊಟ್ಟಿಲ ಗರ್ಭದೊಳಗೇ
ಸಕಲ ಚರಾಚರ
ಸೃಷ್ಟಿಯ ಹುಟ್ಟಿನ
ಗುಟ್ಟು ತೂಗುತ್ತಿರುವಾಗ.....

ನಿರಾಕಾರ ನಿರ್ಗುಣ
ನಮ್ಮೀ ಅನಂತ ಮೈಲಿಗೆಯ
ಉಸಿರಲ್ಲೇ ಸರ್ವಾಂತರ್ಯಾಮಿ
ಅವನು ಒಂದಾಗಿದ್ದಾನೆ!

- ರೂಪ ಹಾಸನ

ರೂಪ ಹಾಸನ

ರೂಪ ಹಾಸನ ಅವರು ಮೂಲತಃ ಮೈಸೂರಿನವರು. ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಗಳಿಗೆ ಬಟ್ಟಲ ತಿರುವುಗಳಲ್ಲಿ (ಕಿರುಪದ್ಯಗಳ ಸಂಕಲನ)  , ಕಡಲಿಗೆಷ್ಟೊಂದು ಬಾಗಿಲು, ಲಹರಿ ,  ಮಹಿಳೆ ಮತ್ತುಆಧುನಿಕತೆಯ ಸವಾಲುಗಳು,  ಹೇಮಯೊಡಲಲ್ಲಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಡಾ. ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ 2000, ಶಿವಮೊಗ್ಗದ ಕರ್ನಾಟಕ ಸಂಘ, ನೀಲಗಂಗಾದತ್ತಿ ಪ್ರಶಸ್ತಿ 2010, ಕನ್ನಡ ಸಾಹಿತ್ಯ ಪರಿಷತ್ತು. ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ 2000, ಹರಿಹರ ಶ್ರೀ ಪ್ರಶಸ್ತಿ 2010, ಸೇಡಂನ ಅಮ್ಮ ಪ್ರಶಸ್ತಿ 2010, ಡಿ.ವಿ.ಜಿ. ಸಾಹಿತ್ಯ ಪ್ರಶಸ್ತಿ 2001, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ 2001, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ 2000 ಗೊರೂರು ಸಾಹಿತ್ಯ ಪ್ರತಿಷ್ಠಾನ, ಸುಶೀಲಾ ಎಸ್.ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, 2005, ಕಾವ್ಯಾನಂದ ಪ್ರಶಸ್ತಿ 2005, ಹಾ.ಮಾ.ನ. ಪ್ರಶಸ್ತಿ 2008 ಶಿವಮೊಗ್ಗ ಕರ್ನಾಟಕ ಸಂಘದಿಂದ ಪ್ರಶಸ್ತಿ ದೊರಕಿದೆ.

 ಹಲವು ಭಾಷೆಗಳಿಗೆ ಕವಿತೆಗಳು ಭಾಷಾಂತರಗೊಂಡಿವೆ. ಮಹಿಳೆ ಮಕ್ಕಳು ಶಿಕ್ಷಣ ಪರಿಸರ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯದ ನೆಲೆ ಹಾಸನ.

More About Author