Poem

ತರುವನೇನವ ಸುಖವ 

ಹಸುಗೂಸು ಅಳುತಿರಲು
ಹಸಿವೆನುತ ಬಳಿಬಂದು
ತುಸುವೆ ನೀಡಲು ತುತ್ತು ಬಳಿಯಲಿಲ್ಲ
ಬಸಿದರೂ ಜೀವವನೆ
ಹುಸಿಯಾಯ್ತು ಕನಸೆಲ್ಲ
ದೆಸೆಯೊಳಿತು ನನ್ನೆಡೆಗೆ ಸುಳಿಯಲಿಲ್ಲ

ಇರಲೊಂದು ಸೂರಿಲ್ಲ
ನೆರವಾಗೊ ಮನವಿಲ್ಲ
ಬಿರುಬಿಸಿಲಲೇ ಕರ್ಮ ಸಾಗುತಿದೆ ನಿರತ
ಉರಿವ ಬೆಂಕಿಯ ಎದುರು
ಸುರಿಸಿದರು ಕಂಬನಿಯ
ಅರಿವೊಂದು ಮನವಿಲ್ಲ ನೋವ ಮಿಡಿತ

ರಚ್ಚೆ ಹಿಡಿದರು ಕಂದ
ಮುಚ್ಚಿಕೂರುವೆ ಕಿವಿಯ
ಬಚ್ಚಿಡುತಲೆಲ್ಲ ಕಲ್ಲೆದೆಯ ಮಾಡಿ
ಹುಚ್ಚುಗೊಂಡರು ಮನವು
ಹೆಚ್ಚುತಲಿಯೊಡಲಿನುರಿ
ಮೆಚ್ಚದೀ ಜೀವ ಬದುಕುವುದ ಬೇಡಿ

ಧರೆಗಿಳಿಸಿದಾ ದೇವ
ಮರೆತಹಾಗಿದೆಯೇಕೊ
ನರಳಿದರು ಜೀವ ಸಹಿಸುತಲಿ ಬೇಗೆ
ತೆರೆದು ಬೆಳಕಿನ ಹಾದಿ
ಕರುಣೆಯನು ತೋರುತಲಿ
ತರುವನೇನವ ಸುಖವ ಒಂದು ಘಳಿಗೆ

ಅನ್ನಪೂರ್ಣಾ ಬೆಜಪ್ಪೆ

ಅನ್ನಪೂರ್ಣಾ ಬೆಜಪ್ಪೆ

ಕವಯತ್ರಿ ಅನ್ನಪೂರ್ಣಾ ಬೆಜಪ್ಪೆ ಅವರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಿದೂರು ಗ್ರಾಮದವರು. ತಂದೆ ಹಳೆಮನೆ ವಿ ಗಣಪತಿಭಟ್, ತಾಯಿ ಪಾರ್ವತಿ. ಕವನ, ಗಝಲ್, ರುಬಾಯಿ,ಚುಟುಕು, ಶಿಶುಗೀತೆ,ಭಾವಗೀತೆ ,ಮುಕ್ತಕ ಸಣ್ಣ ಕಥೆ ಹೀಗೆ ಹಲವಾರು ಪ್ರಕಾರಗಳ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೃತಿಗಳು: ಅಕ್ಷರದೀಪ (ಕವನ ಸಂಕಲನ)

More About Author