Poem

ತೃಪ್ತವಾದ ಬದುಕು

ಸಪ್ತಪದಿಯನು ತುಳಿದು ಬಂದಿರೆ
ಆಪ್ತ ಕನ್ನಿಕೆ ಬಾಳಲಿ
ತಪ್ತಗೊಂಡಿಹ ಬದುಕಿದೆನ್ನದು
ತೃಪ್ತಗೊಂಡಿದೆ ನಲಿವಲಿ

ಪ್ರೇಮದರಮನೆ ಕಟ್ಟಿಕೊಂಡೆವು
ನೇಮಕಿಲ್ಲವೊ ಬಡತನ
ಸಾಮರಸ್ಯದ ಪಥವ ಹಿಡಿದೆವು
ಧೂಮವಿಲ್ಲದ ಜೀವನ

ಬಾಳ ಯಜ್ಞವು ಸಾಗುತಿಹುದು
ಒಲವ ಸಮಿಧೆಯ ಬೆರೆಸುತ
ಹೂವ ಚೆಲುನಗೆ ಅರಳುತಿಹುದು
ಉಸಿರೊಳುಸಿರದು ಸೇರುತ

ಪ್ರೀತಿಗಿಂತಲು ಸಿರಿಯದೇನಿದೆ
ಸ್ವಾತಿ ಮುತ್ತಿನ ಹನಿಯಿದು
ಭೀತಿ ಕಳೆಯುವ ಬೆಳಕದಾಗುತ
ಛಾತಿ ತುಂಬುವ ಸಿಹಿಯಿದು

ತಾಳಲಯಗಳು ತಪ್ಪದಂತೆಯೆ
ಬಾಳ ಶ್ರುತಿಯದು ಮಿಡಿದಿದೆ
ಜಾಲಿಯಿಲ್ಲದ ಹಸಿರ ಬಯಲಿದು
ಮೇಳಗಾನದೆ ಕುಣಿದಿದೆ

-ಅನ್ನಪೂರ್ಣಾ ಬೆಜಪ್ಪೆ

 

ಅನ್ನಪೂರ್ಣಾ ಬೆಜಪ್ಪೆ

ಕವಯತ್ರಿ ಅನ್ನಪೂರ್ಣಾ ಬೆಜಪ್ಪೆ ಅವರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಿದೂರು ಗ್ರಾಮದವರು. ತಂದೆ ಹಳೆಮನೆ ವಿ ಗಣಪತಿಭಟ್, ತಾಯಿ ಪಾರ್ವತಿ. ಕವನ, ಗಝಲ್, ರುಬಾಯಿ,ಚುಟುಕು, ಶಿಶುಗೀತೆ,ಭಾವಗೀತೆ ,ಮುಕ್ತಕ ಸಣ್ಣ ಕಥೆ ಹೀಗೆ ಹಲವಾರು ಪ್ರಕಾರಗಳ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೃತಿಗಳು: ಅಕ್ಷರದೀಪ (ಕವನ ಸಂಕಲನ)

More About Author