Poem

ಕವಿತೆ ಎಲ್ಲಿ

ನೀವು ಕವಿತೆ ಎಲ್ಲಿ ಎಂದು ಕೇಳಿದಾಗೆಲ್ಲ
ತಲೆ ತಗ್ಗಿಸುತ್ತೇನೆ
ನೆಲದ ಹುಡುಕಾಟಕೆ ತೊಡಗುತ್ತೇನೆ
ಗಾಳಿಯಲಿ ಹಣತೆ ಹಚ್ಚಿದಂತಲ್ಲ
ಉಸಿರು ಮತ್ತು ಕವಿತೆ
ನಕ್ಷತ್ರಗಳಲಿ ಮನೆ ಕಟ್ಟುವುದ ಬಿಟ್ಟು
ಬೇರುಗಳಲಿ ಗೂಡು ರಚಿಸುತ್ತಿದ್ದೇನೆ
ನಶ್ವರ ಇಬ್ಬನಿಯ ಹಾಗೆ
ಹಠಾತ್ತನೆ ಅಪ್ಪಳಿಸೋ ಭಾವಗಳು
ಪದಗಳ ಎದೆ ಕದ ತಟ್ಟಿ ಹಿಂದೆ ಸರಿಯುತ್ತಿವೆ

ನೀವು ಕವಿತೆ ಎಲ್ಲಿ ಎಂದು ಕೇಳಿದಾಗೆಲ್ಲ
ಹೂತ ಚಕ್ರವ ನೆನೆಯುತ್ತೇನೆ
ಲಗಾಮಿಲ್ಲದೆ ಗಾಳಿ ಕೂಡ ಸರಸ
ಸರಭರ ಹೊರಡುವುದು ಬಿಟ್ಟಿದ್ದೇನೆ
ಅಂಗಳದಲಿ ಅರಳಿದ ಮಲ್ಲಿಗೆಯೊಂದು
ನಗುತ್ತದೆ ಕಿಸಕ್ಕನೆ
ಸಂಜೆಯಾದ ಕೂಡಲೆ ಉದುರುವ ಅದು
ಭ್ರಮೆಯ ಕಿರೀಟವನ್ನು ನೂಕುತ್ತದೆ
ಮೋಡದ ಹಿಂದೆ ಚಂದ್ರ ಪ್ರಾರ್ಥನೆ
ಕಂಡು ಮರೆಯಾಗುವ ಸತ್ಯದ ಸ್ಪರ್ಶ

ನೀವು ಕವಿತೆ ಎಲ್ಲಿ ಎಂದು ಕೇಳಿದಾಗೆಲ್ಲ
ಕಿಟಕಿಯಾಚೆ ಜಿರಾಫೆ ಕತ್ತು ಚಾಚುತ್ತೇನೆ
ನಡಿಗೆ ಶುರುಮಾಡಿದ ಮಗುಹಿಂದೆ ಆ ತಾಯಿ
ಬಿದ್ದರೂ ಅಳು, ಎದ್ದರೂ ಹಠ
ಕಣ್ಣ ಕಾವಲಿನಲಿ ಜೀವ ತಾಲೀಮು
ಬಿಡುವುದಿಲ್ಲ ಆಕೆ ಅರೆಗಳಿಗೆ
ಪುಟ್ಟ ಪಾದದ ಸುತ್ತ ಕರುಳ ಬೇಲಿ
ಬಲಿತು ದಾಟುವವರೆಗೂ ಬರೆದ ಸಾಲು
ಕಣ್ಣರಳಿಸಿ ನಕ್ಕ ಮಗು ತೊದಲು ಪದ ಬೆಳಕು
ಎದೆಗವಚಿಕೊಂಡ ನಿಜದ ಕವಿತೆ

ನೀವು ಕವಿತೆ ಎಲ್ಲಿ ಎಂದು ಕೇಳಿದಾಗೆಲ್ಲ
ಮೊದಲ ಪದ್ಯವೊಂದಕೆ ಮೊರೆಹೋಗುತ್ತೇನೆ

ವಾಸುದೇವ ನಾಡಿಗ್

ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ಪ್ರಶಸ್ತಿ ಇವರಿಗೆ ದೊರೆತಿವೆ.

More About Author