Poem

ಯಮನ ಪ್ರಶ್ನೆ

ನಾನಿಂಥವರ ಮಗಳು -ಏಕೆ ಒಯ್ಯುವೆ ನನ್ನ?
ಮೌನಿ ಯಮ, ನಿಲ್ಲಲಿಲ್ಲ
ಇಂಥವರ ತಂಗಿ, ಇಂಥವರ ಅಕ್ಕ
ಇಂಥವರು ಅಣ್ಣ ತಮ್ಮದಿರು ನನಗೆ..
ಎಲ್ಲಿಗೆಲ್ಲಿಗೆಲ್ಲಿಗೊಯ್ಯುವೆಯೋ?

ಮೌನಿ, ಯಮ ನುಡಿಯಲಿಲ್ಲ
ಇಂಥವರು... ನನ್ನತ್ತೆ, ನಮ್ಮಾವ, ನನ್ನತ್ತಿಗೆ
ಬಂಧು ಬಾಂಧವರೆಲ್ಲ ಎಂಥೆಂಥಾ ಜನ
ನನ್ನಜ್ಜನ ಮನೆಯೋ ಏಳು ಕೊಪ್ಪರಿಗೆ
ಬಿಟ್ಟು ಬಿಡೊ ನನ್ನ ನನ್ನ ಮನೆಗೆ

ಮೌನ - ಬಿಡಲಿಲ್ಲ ಯಮ

ಇವರೆನ್ನ ಪತಿ, ನಾ ತಾಯಿ ಈ ಮಕ್ಕಳಿಗೆ
ಅಜ್ಜಿ ಕಣೋ ನಾಕು ಮೊಮ್ಮಕ್ಕಳಿಗೆ
ಬರಲೆಂತು ಬಿಟ್ಟು ಈ ಎಲ್ಲರ?

ನಕ್ಕನೀಗ ಯಮ, ಮುರಿದ ಮೌನ
ಸರಿಯೆ ಸರಿ, ನೀನು? ನೀನು, ನೀನೇನು?
ಹೇಳಿ ಬಿಡು ಆ ಪ್ರವರ
ತೆಗೆವೆ ಕುಣಿಕೆ

ಮುರಿದ ಮೌನದ ಎದುರು
ಮೌನವಾಂತಳು ಆಕೆ
ಮುಕಾಂಬಿಕೆ

ಮುನ್ನಡೆದ ಮೌನ ಯಮ
ಹಿಂದೆಯೇ ಆಕೆ, ಹಿಂ-ಬಾಲಿಕೆ

-ವೈದೇಹಿ

 

 

 

ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)

ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ.  ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ.

ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ಬಡಗಿ, ಹರಿವ ನೀರು (ಪ್ರಬಂಧ ಸಂಕಲನಗಳು), ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಸೇಡಿಯಾಪು ನೆನಪುಗಳು, ಮುಂತಾದ ಕೆಲ ಪುಟಗಳು (ಆತ್ಮಚರಿತ್ರ ನಿರೂಪಣೆ), ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ, ಬೆಳ್ಳಿಯ ಸಂಕೋಲೆಗಳು, ಮೂವರು ಅಕ್ಕತಂಗಿಯರು, ಸಂಗೀತ ಸಂವಾದ, ಸೂರ್ಯ ಕಿನ್ನರಿಯರು (ಅನುವಾದ), ಜಾತ್ರೆ (ಸ್ಕೃತಿಕಥನ) ಅವರ ಪ್ರಕಟಿತ ಕೃತಿಗಳು. ಇವಲ್ಲದೆ 15 ಮಕ್ಕಳ ನಾಟಕಗಳು, ಮಕ್ಕಳ ಕಥಾ ಸಂಗ್ರಹ, ಮಕ್ಕಳ ಕಥೆಗಳ ಸಂಪಾದಿತ ಸಂಗ್ರಹ ಪ್ರಕಟಿಸಿದ್ದಾರೆ.

ಗೀತಾ ದೇಸಾಯಿ ದತ್ತಿ ನಿಧಿ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಎಂಕೆ.ಇಂದಿರಾ ಪ್ರಶಸ್ತಿ, ಎರಡು ಬಾರಿ ದೆಹಲಿಯ ’ಕಥಾ’ ಪ್ರಶಸ್ತಿ, ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಕರ್ಣಾಟಕ ರಾಜ್ಯದ ದಾನ ಚಿಂತಾಮಣಿ ಪ್ರಶಸ್ತಿ, ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. 

More About Author