About the Author

ಭಿಕಾಜಿಪಂತ ಕಾಳೆ ಎಂಬುದು  ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ.

ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ.  ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ನೆಲಸಿತು.

ಕಾಳೆಯವರ ಮನೆ ಮಾತು ಮರಾಠಿ. ಆದರೂ, ಪ್ರಾಥಮಿಕ ಶಿಕ್ಷಣ ಕನ್ನಡಭಾಷೆಯಲ್ಲೆ ಆಯಿತು. ಆ ಕಾಲದ ಪ್ರಾಥಮಿಕ ಶಾಲೆಯ ಕೊನೆಯ ಫಟ್ಟವಾದ ಮುಲಕೀ ಪರೀಕ್ಷೆಯಲ್ಲಿ ಕಾಳೆಯವರು ತೇರ್ಗಡೆ ಹೊಂದಿದರು.  ನಾಲ್ಕನೆಯ ತರಗತಿಯವರೆಗೆ ಇಂಗ್ಲಿಷ್ ಶಾಲೆಯಲ್ಲಿ ಓದಿದರು.

ಹಾವೇರಿ ತಾಲ್ಲೂಕಿನ ಅಗಡಿಯ ಬಳಿಯ ಆನಂದವನ ಅಗ್ರಹಾರದಲ್ಲಿ, ಸದ್ಬೋಧ ಚಂದ್ರಿಕೆ ಮಾಸಪತ್ರಿಕೆಗಾಗಿ ಆರಂಭವಾದ ಒಂದು ಚಿಕ್ಕ ಮುದ್ರಣಾಲಯದ ವ್ಯವಸ್ಥಾಪಕರಾಗಿ ಕಾಳೆಯವರು 1909ರಲ್ಲಿ ಅಲ್ಲಿಗೆ ಹೋದರು. ಗಳಗನಾಥರ ಮೊದಮೊದಲಿನ ಪುಸ್ತಕಗಳೆಲ್ಲ ಇವರ ವ್ಯವಸ್ಥಾಪಕತ್ವದಲ್ಲಿಯೇ ಮುದ್ರಿತವಾಗುತ್ತಿದ್ದುವು. ಗಳಗನಾಥರು ಆನಂದವನವನ್ನು ಬಿಟ್ಟು ಹೊರಟಮೇಲೆ, ಸದ್ಬೋಧ ಚಂದ್ರಿಕೆಯ ಹೆಚ್ಚಿನ ಹೊಣೆಯನ್ನು ಇವರೇ ಹೊರಬೇಕಾಯಿತು. ಈ ಅವಧಿಯಲ್ಲಿ ಕಾಳೆಯವರು 20ಕ್ಕಿಂತ ಹೆಚ್ಚು ಐತಿಹಾಸಿಕ, ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಬರೆದು ಪ್ರಕಟಿಸಿದರು. ಇವುಗಳಲ್ಲಿ ಹೆಚ್ಚಿನ ಸಂಖ್ಯೆಯವು ಮರಾಠಿಯಿಂದ ಭಾಷಾಂತರಿಸಿದವು. ಮಹಾರಾಷ್ಟ್ರದ ಸುಪ್ರಸಿದ್ಧ ಸಾಹಿತಿ ದಿ. ನ. ಚಿಂ. ಕೇಳಕರ ಅವರ ಮರಾಠಾ ಆಣಿ ಇಂಗ್ರಜ ಎಂಬ ಇತಿಹಾಸ ಗ್ರಂಥವನ್ನೂ ಪ್ರಕಟಿಸಿದರು. ಮಕ್ಕಳ ಶಿಕ್ಷಣಕ್ಕಾಗಿ ಇವರು ಆನಂದವನವನ್ನು ಬಿಡಬೇಕಾಯಿತು. ಧಾರವಾಡದ ಮದೀಹಾಳ ಭಾಗದಲ್ಲಿ ಮನೆಮಾಡಿ ಇರತೊಡಗಿದ ನಂತರ ಚಿಕ್ಕ ಮುದ್ರಣಾಲಯವನ್ನು ತೆರೆದು 12 ವರ್ಷಗಳವರೆಗೆ ತಮ್ಮ ಕೃತಿಗಳನ್ನು ಪುನರ್ಮುದ್ರಿಸುವ ಕಾರ್ಯ ನಡೆಸಿದರು. ಈಗ ಆ ಮುದ್ರಣಾಲಯವನ್ನು ಧಾರವಾಡದ ಜನತಾ ವಿದ್ಯಾಸಂಸ್ಥೆಗೆ ದಾನವಾಗಿ ಕೊಟ್ಟಿದ್ದಾರೆ. ಕಾಳೆಯವರು ತಮ್ಮ ವೃದ್ಧಾಪ್ಯ ಜೀವನವನ್ನು ಧಾರವಾಡದಲ್ಲಿಯೇ ಕಳೆಯುತ್ತಿದ್ದಾರೆ. ಕೆಲವು ಕಾದಂಬರಿಗಳು -ಅಂಬಿಕೆ, ಇಂದುಮುಖಿ, ಘಾತಕ ಶಶಿಕಂಠ, ವಿಚಿತ್ರ ಚಟ ಹಾಗೂ ಸೇಡಿನ ಯಜ್ಞ

ಭಿ.ಪ. ಕಾಳೆ

(20 Jan 1889)