ಬೆರಳ ತುದಿಯ ಬೆರಗು

Author : ಟಿ.ಜಿ. ಶ್ರೀನಿಧಿ

Pages 128

₹ 120.00




Year of Publication: 2021
Published by: ವಿಕಾಸ ಪ್ರಕಾಶನ
Address: ಬೆಂಗಳೂರು

Synopsys

ವಿಜ್ಞಾನ - ತಂತ್ರಜ್ಞಾನಗಳನ್ನು ದೇಸೀ ಭಾಷೆಯಲ್ಲಿ ಸರಳವಾಗಿ ಹೇಳಲು ಸಾಧ್ಯವಿಲ್ಲ, ಅದು ಕಬ್ಬಿಣದ ಕಡಲೆ ಎಂಬ ಭಾವನೆ ಈಗಲೂ ಅನೇಕರಲ್ಲಿದೆ. ಆದರೆ ಅದನ್ನು ಸುಳ್ಳು ಮಾಡುವಂತೆ ಅಂದಂದಿನ ವಿಜ್ಞಾನವನ್ನು 'ಸುಲಿದ ಬಾಳೆಯ ಹಣ್ಣಿನಂದದಿ' ನಮ್ಮ ಕೈಗಿತ್ತ ವಿಜ್ಞಾನ ಲೇಖಕರ ಪರಂಪರೆಯೇ ಕನ್ನಡದಲ್ಲಿ ಇದೆ.  ಈ ಪೈಕಿ ಟಿ.ಜಿ. ಶ್ರೀನಿಧಿ ಒಬ್ಬರು.  'ಬೆರಳ ತುದಿಯ ಬೆರಗು' ಕೃತಿಯ ಐದು ವಿಭಾಗಗಳಲ್ಲಿ ವಿಷಯ ಹರಡಿಕೊಂಡಿದೆ. ಅತಿ ಕ್ಲಿಷ್ಟ ಸಂಗತಿಗಳನ್ನು ಅತ್ಯಂತ ಸರಳವಾಗಿ ಹೇಳುವುದು ಹೇಗೆ ಎನ್ನುವುದಕ್ಕೂ ಉದಾಹರಣೆಗಳು ಸಿಗುತ್ತವೆ. ತಂತ್ರಜ್ಞಾನ, ತಾಂತ್ರಿಕತೆಯಂಥ ಗಂಭೀರ ವಿಚಾರಗಳನ್ನು ತಿಳಿಹಾಸ್ಯದ ಲೇಪದೊಡನೆ ಮುಂದಿಡುವ ಅವರ ಶೈಲಿ,ಆಕರ್ಷಣೀಯ. ತಂತ್ರಜ್ಞಾನದ ಜಗತ್ತು ಕುರಿತು ಬರೆದ 30 ಬರಹಗಳು ಕೃತಿಯಲ್ಲಿ ಸಂಕಲನಗೊಂಡಿವೆ. 

About the Author

ಟಿ.ಜಿ. ಶ್ರೀನಿಧಿ

ಟಿ.ಜಿ. ಶ್ರೀನಿಧಿ ಬೆಂಗಳೂರಿನ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಹಿರಿಯ ಪ್ರೋಗ್ರಾಮರ್ ಅನಲಿಸ್ಟ್ ಆಗಿ ಉದ್ಯೋಗ ಮಾಡುತ್ತಿದ್ಧಾರೆ.  ವಿಜ್ಞಾನ-ತಂತ್ರಜ್ಞಾನ ವಿಷಯಗಳ ಕುರಿತು ಕನ್ನಡದಲ್ಲಿ ಬರೆಯುವುದು ಇವರ  ಅಚ್ಚುಮೆಚ್ಚಿನ ಹವ್ಯಾಸ. ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ಕನ್ನಡ ಜಾಲ ತಾಣ 'ಇಜ್ಞಾನ ಡಾಟ್ ಕಾಮ್' (www.ejnana.Com) ನ ರೂವಾರಿ. ನಾಲ್ಕು ನೂರಕ್ಕೂ ಹೆಚ್ಚು ಲೇಖನಗಳು ಹಾಗೂ ಆರು ಪುಸ್ತಕಗಳು ಈವರೆಗೆ ಪ್ರಕಟವಾಗಿವೆ. ಪ್ರಸ್ತುತ ಉದಯವಾಣಿಯಲ್ಲಿ 'ವಿಜ್ಞಾಪನೆ' ಅಂಕಣ ಪ್ರಕಟವಾಗುತ್ತಿದೆ. ಈ ಹಿಂದೆ ವಿಜಯ ಕರ್ನಾಟಕ, ಉಷಾಕಿರಣ ಹಾಗೂ ಸೂರ್ಯೋದಯ ಪತ್ರಿಕೆಗಳಿಗೆ ಅಂಕಣಕಾರರೂ ಆಗಿದ್ದರು. 'ಶ್ರೀನಿಧಿಯ ಪ್ರಪಂಚದಲ್ಲಿ (WWW.Srinidhi.net.in) ಬ್ಲಾಗಿಸುವುದು, ಛಾಯಾಗ್ರಹಣ, ಪ್ರವಾಸ ಹಾಗೂ ಪುಸ್ತಕಗಳ ಓದು ...

READ MORE

Excerpt / E-Books

ಅದೆಷ್ಟೋ ಯುಗಗಳು ಉರುಳಿದ ನಂತರ ಕಲಿಯುಗ ಬಂದಿದೆಯಂತೆ; ಇದರ ನಂತರ ಇನ್ನೊಂದು ಯುಗ ಬರಲಾರದು ಅನ್ನಿಸುತ್ತದೆ. ಏಕೆಂದರೆ ತಂತ್ರಜ್ಞಾನದಲ್ಲಿ ಏನು ಹೊಸತು ಬಂದರೂ ಅದನ್ನು ಕಲಿಯದಿದ್ದರೆ ಉಳಿಗಾಲವಿಲ್ಲ ಅನ್ನುವುದನ್ನು ಒತ್ತಿ ಹೇಳುವ ಈ ನಿರಂತರ `ಕಲಿ'ಯುಗ ಶಾಶ್ವತವಾಗಿ ಇದ್ದೇ ಇರುತ್ತದೆ. ಅತಳವಿತಳಪಾತಾಳ ಲೋಕಗಳನ್ನು ಒಂದುಗೂಡಿಸಲು ತಂತ್ರಜ್ಞಾನದ ಹರಿವು ಅರಿವುಗಳೇ ದಿವ್ಯಮಂತ್ರ. ಹಿಂದಿನ ದಿನಗಳಲ್ಲಿ, ಅಷ್ಟಿಷ್ಟು ತಿಳಿದರೂ 'ಕರತಲಾಮಲಕ', ಅಂದರೆ ಎಲ್ಲವೂ ಅಂಗೈಯಲ್ಲಿನ ನೆಲ್ಲಿಕಾಯಿ ಎಂದು ಹೊಗಳುತ್ತಿದ್ದರು. ಇಂದಿನ ದಿನಗಳಲ್ಲಿ ತಂತ್ರಜ್ಞಾನದ ನೆರವಿನಿಂದ, ಗುಂಡಗಿರುವ ಭೂಲೋಕವನ್ನೇ ನಮ್ಮ ಅಂಗೈ ಮೇಲಿನ ಒಂದು ನೆಲ್ಲಿಕಾಯಿ ಮಾಡಿಟ್ಟುಕೊಳ್ಳಬಹುದು. ಆದರೆ ಭೂಲೋಕವನ್ನು ನಮ್ಮ ಅಂಗೈಗೆ ತಂದುಕೊಳ್ಳಲು ಅದನ್ನು ಯಾರಾದರೂ ಎತ್ತಿಕೊಡಬೇಕು, ನಮ್ಮ ಭಾಷೆಯಲ್ಲಿ ನಮಗೆ ತಿಳಿಯುವ ಹಾಗೆ ಹೇಳಿಕೊಡಬೇಕು. ಕನ್ನಡದಲ್ಲಿ 'ತಂತ್ರಜ್ಞಾನದ ಶ್ರೀನಿಧಿ' ಇರುವಾಗ ಕಲಿಯಲೇನೂ ಕಷ್ಟವಿಲ್ಲ! ಅವರಂಥ ಪಕ್ಕಾ ವೈ-ಫೈ ಇರುವಾಗ ಟೆಕ್ ಲೋಕಕ್ಕೆ ನಮ್ಮನ್ನು ಕನೆಕ್ಟ್ ಮಾಡಿಕೊಳ್ಳಲು ನಮ್ಮ ಆಸಕ್ತಿಯನ್ನು ಕ್ಲಿಕ್ ಮಾಡಿಕೊಂಡರೆ ಸಾಕು.  

ವಿಜ್ಞಾನ - ತಂತ್ರಜ್ಞಾನಗಳನ್ನು ದೇಸೀ ಭಾಷೆಯಲ್ಲಿ ಸರಳವಾಗಿ ಹೇಳಲು ಸಾಧ್ಯವಿಲ್ಲ, ಅದು ಕಬ್ಬಿಣದ ಕಡಲೆ ಎಂಬ ಭಾವನೆ ಈಗಲೂ ಅನೇಕರಲ್ಲಿದೆ. ಆದರೆ ಅದನ್ನು ಸುಳ್ಳು ಮಾಡುವಂತೆ ಅಂದಂದಿನ ವಿಜ್ಞಾನವನ್ನು 'ಸುಲಿದ ಬಾಳೆಯ ಹಣ್ಣಿನಂದದಿ' ನಮ್ಮ ಕೈಗಿತ್ತ ವಿಜ್ಞಾನ ಲೇಖಕರ ಪರಂಪರೆಯೇ ಕನ್ನಡದಲ್ಲಿ ಇದೆ. ಈಗಿನ ವಿಜ್ಞಾನ- ತಂತ್ರಜ್ಞಾನವನ್ನು ಕನ್ನಡದಲ್ಲೇ ಚೆನ್ನಾಗಿ ಬರೆದು ತಿಳಿಸುತ್ತಿರುವ ಹೊಸ ಲೇಖಕರ ಹುರುಪಿನ ಪಡೆಯೂ ಬೆಳೆಯುತ್ತಿದೆ. ಈ ಪೈಕಿ ಟಿ.ಜಿ. ಶ್ರೀನಿಧಿ ಅವರಂಥ ಮೋಸ್ಟ್ ಅಪ್‌ಡೇಟೆಡ್ ವರ್ಷನ್‌ಗಳೂ ಇದ್ದಾರೆ! ತಂತ್ರಜ್ಞಾನದಲ್ಲಿ 'ಬದಲಾವಣೆಯೊಂದೇ ಶಾಶ್ವತ' ಎನ್ನುವುದನ್ನು ಅವರು ಚೆನ್ನಾಗಿ ಬಲ್ಲರು; ಆದ್ದರಿಂದಲೇ ಅವರ ಲೇಖನಗಳು ಹಳೆಯದನ್ನು ನೆನಪಿಸುತ್ತ, ಇಂದಿನದನ್ನು ವಿವರಿಸುತ್ತ, ನಾಳೆಯ ಬದಲಾವಣೆಯನ್ನೂ ಸೂಚಿಸುತ್ತವೆ. 

ವಿಜ್ಞಾನ ಸೇರಿ ಎಲ್ಲ ಬರವಣಿಗೆಯಲ್ಲೂ 'ತಿಳಿಸುವ ವಿಷಯ ಮತ್ತು ಹೇಳುವ ವಿಧಾನ' ಎರಡೂ ಮುಖ್ಯ ಎಂಬ ಅಂಶವನ್ನು ಶ್ರೀನಿಧಿ ಎಂದೂ ಮರೆಯುವುದಿಲ್ಲ. 'ಬೆರಳ ತುದಿಯ ಬೆರಗು' ಕೃತಿಯ ಐದು ವಿಭಾಗಗಳಲ್ಲಿ ಹರಡಿಕೊಂಡಿರುವ ಲೇಖನಗಳನ್ನು ಓದಿದರೆ ಈ ಮಾತಿಗೆ ಒಳ್ಳೆಯ ಮಾದರಿಗಳು ಕಾಣುತ್ತವೆ. ಅತಿ ಕ್ಲಿಷ್ಟ ಸಂಗತಿಗಳನ್ನು ಅತ್ಯಂತ ಸರಳವಾಗಿ ಹೇಳುವುದು ಹೇಗೆ ಎನ್ನುವುದಕ್ಕೂ ಹಲವು ಉದಾಹರಣೆಗಳು ಸಿಗುತ್ತವೆ. ತಂತ್ರಜ್ಞಾನ, ತಾಂತ್ರಿಕತೆಯಂಥ ಗಂಭೀರ ವಿಚಾರಗಳನ್ನು ತಿಳಿಹಾಸ್ಯದ ಲೇಪದೊಡನೆ ಮುಂದಿಡುವ ಅವರ ಶೈಲಿ, ಕನ್ನಡದ ಎಲ್ಲ ಪತ್ರಿಕೆಗಳಿಗೆ  ಅಚ್ಚುಮೆಚ್ಚು. ಏಕೆಂದರೆ ಇಂಥ ಸರಳ, ಜೀವಂತ ವಿಧಾನ, ಅಷ್ಟೊಂದು ವಿಜ್ಞಾನ ಕಲಿಯದ ಓದುಗರಿಗೂ ಎಷ್ಟೊಂದು ಕಲಿಸುತ್ತದೆ ಅನ್ನುವುದು ಬಹಳ ಮುಖ್ಯ. 

ಇವೆಲ್ಲದರ ಜೊತೆಗೆ ತಂತ್ರಜ್ಞಾನ ಅನ್ನುವುದರಲ್ಲಿ ಸಾಮಾಜಿಕ ಪ್ರಜ್ಞೆಯ ಒಳತಂತು ಇದ್ದೇ ಇರುತ್ತದೆ  ಅಥವಾ ಅದು ನಿಸ್ತಂತುವಾಗಿಯೇ ಅದರೊಳಗೆ ಇರಲೇಬೇಕು ಎಂಬ ಜವಾಬ್ದಾರಿಯ ಅರಿವು ಇಲ್ಲಿರುವ ಎಲ್ಲ ಲೇಖನಗಳಿಂದ ಸ್ಪಷ್ಟವಾಗುತ್ತದೆ. ತಂತ್ರಜ್ಞಾನದಲ್ಲಿ ಹೊಸದೇನು ಬಂದರೂ ಅದನ್ನು ಬೇಡವಾದ ವಿಚಾರಗಳಿಗೆ, ಬೇರೆಯವರಿಗೆ ತೊಂದರೆ ಕೊಡುವುದಕ್ಕೆ ಬಳಸಿಕೊಳ್ಳುವ ಸಮಸ್ಯೆಯೂ ಅದರೊಳಗೆ ಇನ್‌ಬಿಲ್ಟ್ ಆಗಿ ಇರುತ್ತದಲ್ಲ, ಅದರ ಬಗ್ಗೆ ಓದುಗರಿಗೆ ಎಚ್ಚರಿಕೆ ಮೂಡಿಸುವ ಅಗತ್ಯದ ಕೆಲಸವನ್ನು ಇವು ಮಾಡುತ್ತವೆ.

Related Books