Poem

ಆತ್ಮಸಾಕ್ಷಿ

 

ಕವಿತೆ ಬರೆಯಲು ಕುಳಿತಾಗಲೊಮ್ಮೆ
ಮತ್ತದೆ ಆಕ್ರಂದನದ ಪದಗಳ ಅಬ್ಬರ
ನೋವಿನಲಿ ನಲುಗಿ ನರಳಿದ ಶಬ್ದಗಳ
ಹಿಡಿದು ಪದ ಕಟ್ಟಲು ಕೈ ನಡುಗುತ್ತಿದೆ

ಹೆಣ್ಣಾಗಿ ಈ ಜಗಕೆ ಬಂದು ಒಂದಿಷ್ಟು
ದಿನ ಇದ್ದು ಹೋಗುವೆನೆಂದವಳ
ಸದ್ದು ಅಡಗಿಸುವ ತಯಾರಿ
ಅಂದಿನಿಂದಲೇ ನಡೆದಿತ್ತು ಅನ್ನಿಸಿತು

ಯಾರು ಸುದ್ದಿಗೂ ಹೋಗದವಳನ್ನು
ಸುದ್ದಿಯಾಗಿಸುವ ಹುನ್ನಾರದಿ
ತಿಂದು ಕೊಂದು ಎಸೆದು ನಡೆದವರ
ಮಧ್ಯದಿಂದ ಸದ್ದಿಲ್ಲದೆ ಸರಿದಳವಳು

ತನಗಾದ ನೋವನು ನಿಮ್ಮಲ್ಲಿ ಹೇಳುವಳಾದರೂ ಹೇಗೆ?
ಮಾತು ಬಂದರು ನಾಲಿಗೆ ತುಂಡಾಗಿತ್ತು
ಸಾಕ್ಷಿ ಇಲ್ಲದೆ ನ್ಯಾಯ ಸಿಗುವುದಾದರು ಎಲ್ಲಿ?

ಕೊಳ್ಳುವವರ ಮಾರುಕಟ್ಟೆಯ ಸರುಕು
ದುಬಾರಿ ಬೆಲೆಗೆ ಸಿಗುವುದಲ್ಲಿ ತಾಜಾ ಸಾಕ್ಷಿ
ಅನ್ನಕಾಣದವರು ಕೊಳ್ಳುವರಾದರು ಹೇಗೆ ಸಾಕ್ಷಿ
ಅದಕ್ಕೆ ಮಾರಿಬಿಟ್ಟರವರು ಆತ್ಮಸಾಕ್ಷಿ

ಕಲೆ : ಎಸ್. ವಿ. ಹೂಗಾರ

ಆಶಾ ಶಿವಾನಂದ ಯಮಕನಮರಡಿ

ಆಶಾ ಶಿವಾನಂದ ಯಮಕನಮರಡಿ ಅವರು ಮೂಲತಃ ಬೆಳಗಾವಿಯವರು. ರಾಜ್ಯಶಾಸ್ತ್ರ ಪದವೀಧರೆ. ಭಾವಬಂಧ, ಬೆಡಗಿನ ನವಿಲುಗರಿ (ಕವನ ಸಂಕಲನಗಳು), ಚಿಂತನಬಂಧ (ಅಂಕಣ ಬರೆಹ), ಬೆಳಗಾವಿ ಜಿಲ್ಲೆಯ ಸಾಧಿಕಿಯರ ಪರಿಚಯ-‘ಬೆಳಗಾಗಿ ಜಿಲ್ಲಾ ವಿಶಿಷ್ಟ ಸಾಧಕಿಯರು’ಕೃತಿ ಪ್ರಕಟಗೊಂಡಿದೆ. ಕಿತ್ತೂರು ರಾಣಿ ಚೆನ್ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿ ವೇದಿಕೆ, ಬೆಳಗಾವಿ, ಅಧ್ಯಕ್ಷತೆವಹಿಸಿದ್ದು, ಬೆಳಗಾವಿ ಜಿಲ್ಲಾ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಹಾಗೂ ಸಮಾಜ ಸೇವಾ ಸಂಸ್ಥೆಗಳ ಸದಸ್ಯತ್ವ ಹೊಂದಿದ್ದಾರೆ. ಉದಯ ಟಿ.ವಿ.ಯ ‘ಸಿರಿ’ಯಲ್ಲಿ ಊಲನ್ ಹೆಣಿಕೆ ಕುರಿತು ಕಾರ್ಯಕ್ರಮ, ಬೆಳಗಾವಿ ಆಕಾಶವಾಣಿಯಲ್ಲಿ ವೇಣುಧ್ವನಿಯಲ್ಲಿ ಹಲವು ಕಾರ್ಯಕ್ರಮ ನೀಡಿದ್ದಾರೆ. ಹಲವು ನಾಟಕ ರೂಪಕಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಇವರ ಸಾಹಿತ್ಯ ಸೇವೆಗೆ ಮ.ಗು.ಘೀವಾರಿ ಸಾಹಿತ್ಯ ಪ್ರಶಸ್ತಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಸೇವಾ ರತ್ನ ಪ್ರಶಸ್ತಿ, ಅಥಣಿಯ ಚಿನ್ಮಯ ಪ್ರಕಾಶನದಂದ ಬಸವ ಚೇತನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಗೌರವಗಳು ಸಂದಿವೆ.

More About Author