
ಈ ಹುಡುಗಿಯರೇ ಹೀಗೆ
ಹೂವಿನ ಹಾಗೆ
ನಗೆ ಬೀರಿ, ಬಳ್ಳಿಯಂತೆ ಬಳಕುತ್ತಾ
ಕಣ್ಣ ಅಯಸ್ಕಾಂತ ಬಿಟ್ಟು
ಸೆಳೆಯುತ್ತಾರೆ ಹುಡುಗರನು
ತಮ್ಮೆಡೆಗೆ ಕೆಲವೇ ಕ್ಷಣಗಳಲ್ಲಿ.
ಸ್ನೇಹದ ಬೀಜ ಬಿತ್ತಿ
ಮೋಹದ ಮಳೆಗರೆದು
ಪ್ರೀತಿಯ ಗಿಡ ಬೆಳೆಸುತ್ತಾರೆ
ಹುಡುಗರೆದೆಗಳಲ್ಲಿ
ನಿಗೂಢವಾಗಿ ಹಸಿವು
ನಿದ್ದೆಗಳ ಕಸಿದು
ಮೆದುಳನ್ನು ತೊಳೆದು
ವಾಸ್ತವ ಪ್ರಜ್ಞೆ ಪೂರ್ಣವಾಗಿ ಕಡಿದು ಬಿಡುತ್ತಾರೆ
ಪ್ರತಿದಿನ ಅನುಕ್ಷಣ ತಮ್ಮದೇ
ಧ್ಯಾನದಲಿ ತೊಡಗಿಸಿಕೊಳ್ಳುತ್ತಾರೆ ಅವರನು
ಆಗ ಹುಡುಗರೆದೆಗಳು ಗುಡಿಗಳಾಗಿ
ಇವರು ದೇವತೆಗಳಾಗುತ್ತಾರೆ ಅಲ್ಲಿ
ನಿತ್ಯ ನಡೆಯುತ್ತದೆ ಇವರದೇ ಆದ ಧ್ಯಾನ
ಕಾಲ ಸರಿದಂತೆ
ಸಂದರ್ಭಗಳ ಮುಲಾಜಿಗೆ ಮಣಿದ
ಈ ದೇವತೆಗಳು ಅಷ್ಟೇ
ನಿಗೂಢವಾಗಿ ಮಾಯವಾಗುತ್ತಾರೆ
ತಮ್ಮ ಆರಾಧಕರೆದೆ ಗುಡಿಗಳ ತೊರೆದು
ಮತ್ಯಾರೋ ಭಕ್ತರೆದೆ ಗುಡಿಯಲಿ
ದೇವತೆಗಳಾಗಿ ಮೆರೆಯಲು
ಈ ಹುಡುಗಿಯರು.
ಹೆಚ್. ಪಿ. ಕೃಷ್ಣಮೂರ್ತಿ
ಕೋಲಾರ ಜಿಲ್ಲೆ ಚಿಂತಾಮಣಿ ಮೂಲದ ಹೆಚ್. ಪಿ. ಕೃಷ್ಣಮೂರ್ತಿ ಅವರು ಬಿ ಕಾಂ ಪದವೀಧರರು. ಬಾಲ್ಯದಿಂದಲೇ ಸಾಹಿತ್ಯಾಸಕ್ತಿ.ಹೈಸ್ಕೂಲಿನಲ್ಲಿ ಇರುವಾಗಲೇ ಪದ್ಯ, ಹನಿಗವನ ಬರೆಯುವ ಗೀಳು ಪ್ರಾರಂಭಿಸಿದರು.ಇವರ ಕವಿತೆಗಳು ತುಷಾರಾ, ಮಯೂರ, ಸುಧಾ, ಮಂಗಳ, ವಿಶ್ವವಾಣಿ, ವಿಕ್ರಮಗಳಂತಹ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಪ್ರಸ್ತುತ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
More About Author