Poem

ಅವಳು ಬರುವಾಗ

ಸೀರೆ ಸಂಪತ್ತು, ಕಾಲುಂಗರ ತಾಳಿ ಬಿಲ್ವಾರು
ಹಲವಾರು ಶೃಂಗಾರ ಮಾತ್ರ ತರಲಿಲ್ಲ.

ಒಲುವಿನೆರೆಡು ಕಣ್ಣು ದೀಪಗಳ
ತರೆದೆರಡು ಮೃದು ಹಸ್ತ, ಬಾಚುವಾ ತೋಳು

ತುಸು ನಗು ಹಗುರ
ಪಾದದ ಸದ್ದು ತಂದಳು

ಅವಳು ಬರುವಾಗ ಹಾಗೇಯೇ ಬರಲಿಲ್ಲ
ಆಕಡೆಯ ನೂರು ಕರುಳ ಬಳ್ಳಿಯ ಕಸಿಗಳ
ಆವೂರ ಬಿಸಿ ನೆನಪುಗಳ ಜೊತೆಗೆ ತಂದಳು

ಈಗ ಗೊತ್ತಾಗಿದೆ
ಅವಳು ಹಾಗೆಯೇ ಬರಲಿಲ್ಲ, ಬರುವಾಗ
ಗುಟ್ಟಾಗಿ ಎರಡು ಮಕ್ಕಳ, ಹೊಟ್ಟೆಯಲ್ಲಿಟ್ಟು
ಒಂದೊಂದೆ ಬಿಟ್ಟಳು
ನಾಲ್ಕೆರಡು ವರ್ಷಗಳಲ್ಲಿ

ನಗು ಖುಷಿ, ತುಸು ಸಿಡಿಮಿಡಿ
ಹಾಡು ಹಗಲುಗುನುಗು, ಎಲ್ಲ ತಂದಿದ್ದಳು
ಅವಳು ಬರುವಾಗ

ಕಳೆದಂತೆ ದಿನಗಳು ಇಂಗಿ
ನೀರಾದಳು, ತಲೆಗೆ ನೆರಳು
ಎದೆನೋವಿಗೆ ಕೊರಳು
ಇಂತಹ ಸಂತ ಗುಣದ ಗುಣವಂತೆ

ಎಲ್ಲ ಎಲ್ಲ ತಂದಿರುವಳು, ಅವಳು ಬರುವಾಗ!

- ಸತೀಶ ಕುಲಕರ್ಣಿ

ಸತೀಶ ಕುಲಕರ್ಣಿ

ಕವಿ, ಕಲಾವಿದ, ನಾಟಕಕಾರ ಸತೀಶ ಕುಲಕರ್ಣಿ ಅವರು 1951 ಜುಲೈ 13 ರಂದು ಧಾರವಾಡದಲ್ಲಿ ಜನಿಸಿದರು. ತಾಯಿ ಲೀಲಾಬಾಯಿ, ತಂದೆ ನೀಲಕಂಠರಾವ್ ಕುಲಕರ್ಣಿ. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಇದ್ದ ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ. 

ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಬ್ಬಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿಬಂತುಗಾಡಿ ಮುಂತಾದ ನಾಟಕ ನಿರ್ದೇಶನ ಮತ್ತು ಅಭಿನಯ.  

‘ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್, ಬೆಂಕಿನೀರು, ನೆಲದ ನೆರಳು, ವಿಕ್ಷಿಪ್ತ: ಗಾಂಧಿ ಒಡಲಾಳ ಕಿಚ್ಚು’ ಅವರ ಕವನ ಸಂಕಲನಗಳು. ಇವರಿಗೆ ವಿದ್ಯಾವರ್ಧಕ ಸಂಘದ ಪ್ರಶಸ್ತಿ, ರಾಜ್ಯ ಮಟ್ಟದ ನಿರ್ದೇಶಕ ಪ್ರಶಸ್ತಿಗಳು ದೊರೆತಿವೆ. ಯುವರಂಗದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಬಂಗಾರಕೊಡ ನಾಟಕಕ್ಕೆ ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ, ವಿದ್ಯಾವರ್ಧಕ ಸಂಘದ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ನಿರ್ದೇಶಕ ಪ್ರಶಸ್ತಿಗಳು ಅವರಿಗೆ ಸಂದಿವೆ.

 

More About Author