Poem

ಬಾ ಮಳೆರಾಯ

ಧರಣೆಲ್ಲಾ ದಣದಾಳ ಕರುಣದಿಂದಲಿ ಕರುಣಿಸು
ನೆಲವೆಲ್ಲ ಹಸಿಯಾಗಲಿ
ನಿನ್ನೊಳಗಿನ ಬಿಂಕ ಬಿಡು

ಕಂಕಿ ಬೆಳೆಯಲು ಕೊಂಕವೇಕೆ
ಸುಂಕದ ಕಾಳು ಹಕ್ಕಿ ಪಾಲು
ನೆಲದವ್ವನ ಉಡಿದುಂಬಿದರ
ಹಸನಾದಾವು ನಮ್ಮ ಬಾಳು

ನಮ್ಮ ನೀಚತನಕ ನಾಚ್ಯಾಕ
ಸುಮ್ಮನ ಕುಂತಿದಿ ಹೇಳು
ನಿನ್ನನ್ನ ಬಗೆ ಬಗೆದು
ಬದುಕ ನಡೆಸಿವಿ ಕೇಳು

ಧನ ದಾಹಕ ನಿನ್ನ ಸೆರಗ ಬಿಚ್ಚಿ
ಮಾನ ಮಾರಿ ಬಾಳ್ವೆ ಮಾಡಿವಿ
ಕಳಕೊಂಡ ಕಸುವ ಹುಡಿಕ್ಯಾಡಿ
ದಿನ ದಿನವು ಸತ್ತೇವಿ

ನಿನ್ನ ಮುನಿಸಿಗೆ ನಾವ್ಹೆಂಗ
ಈ ಲೋಕದಾಗ ಬದುಕತಿವಿ
ನಿನ್ನ ಅಂಗಲಾಚಿ ಬೇಡುವೆ
ಧರೆಗಿಳಿದು ಬಂದರ ನಾವು
ಉಳಿತಿವಿ.

ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ

ಮರುಳಸಿದ್ದಪ್ಪ ದೊಡ್ಡಮನಿ

ಕವಿ ಮರುಳಸಿದ್ದಪ್ಪ ದೊಡ್ಡಮನಿಯವರು ಹುಟ್ಟಿದ್ದು ದಿನಾಂಕ 1976ರ ಜನವರಿ 1 ರಂದು ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಗಾವರಾಳದಲ್ಲಿ. 

ಗದಗ ಜಿಲ್ಲೆಯ ಹುಲಕೋಟೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿ, ಪದವಿ- ಪೂರ್ವ, ಶಿಕ್ಷಣವನ್ನು ಮುಗಿಸಿದರು.  ತಾಂತ್ರಿಕ ಶಿಕ್ಷಣ, ಮತ್ತು ಸಿ.ವಾಯ್ ಎಸ್ ಕೋರ್ಸ್ ನ್ನು ಪೂರೈಸಿಕೊಂಡು ನಂತರ ಗದಗ ಶಾಖೆಯಲ್ಲಿ ವಿಮಾ ಸಲಹೆಗಾರನಾಗಿ ಬದುಕು ರೂಪಿಸಿಕೊಳ್ಳುತ್ತಾ, ಕವನ, ಲೇಖನ, ಕಥೆಗಳನ್ನು ಬರೆಯುವ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದರು. 

ನಾಡಿನ ಹಲವಾರು ಪ್ರಸಿದ್ದ ಪತ್ರಿಕೆಗಳಲ್ಲಿ ಇವರ ಕವಿತೆ, ಲೇಖನ, ಕಥೆಗಳು ಪ್ರಕಟಗೊಂಡಿವೆ. 2010ರಲ್ಲಿ ’ಮುತ್ತಿನ ಹನಿ’ (ಹನಿಗವನ ಸಂಕಲನ) ಕೃತಿ, 2014ರಲ್ಲಿ ’ನೆಲದ ಹನಿ’ ಕಥಾ ಸಂಕಲನ ಪ್ರಕಟವಾಗಿದೆ. 

More About Author