Poem

ಬದಲು 

ಅರಿವಳಿಕೆ ತಜ್ಞರಾದ ‘ಗೋವಿಂದ ಹೆಗಡೆ’ ಸಾಹಿತ್ಯಾಸಕ್ತರು. ಕವನ, ಹನಿಗವನಗಳು, ಶಿಶುಗೀತೆಗಳು, ಭಾವಗೀತೆಗಳು, ಗಜಲ್, ಹಾಯ್ಕು, ಫರ್ದ್, ರುಬಾಯಿ ಮೊದಲಾದ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಪ್ರಕಟಿತ ಕವನ ಸಂಕಲನ 'ಕನಸು ಕೋಳಿಯ ಕತ್ತು', ‘ಪೇಟೆ ಬೀದಿಯ ತೇರು’. ಅವರ ‘ಬದಲು’ ಕವಿತೆ ಇಲ್ಲಿದೆ.

 

ಪಟಾಕಿ, ಮತಾಪುಗಳ ಗುಂಪಲ್ಲಿ

ಹೂಕುಂಡಗಳ ನೋಡಿದ್ದೀರಲ್ಲ?

ಹಚ್ಚಿದರೆ ಎರಡಾಳು ಎತ್ತರಕ್ಕೆ

ಕೆಳಗಿನಿಂದ ಮೇಲೆ ಬೆಳಕಿನ

ಕಾರಂಜಿಯಾಗಿ ಚಿಮ್ಮಿ- ಕರಗುತ್ತವೆ

 

ಉರಿವ ಹೂಕುಂಡಗಳ ಕಣ್ಣಲ್ಲಿ

ಸದಾ ಇರಿಸಿದಂಥ ಆ ಹುಡುಗ

ಎಷ್ಟು ಹೊತ್ತಿಗೂ ಬಿಳಿಬಿಳಿಯ ಪುಟ್ಟ

ಮೊಲವನ್ನು ಅಂಗಿ ಜೇಬಲ್ಲಿ

ಇರಿಸಿಯೇ ಇದ್ದ

ನಡೆಯುವಾಗ ನಿಲ್ಲುವಾಗ ಮಾತಾಡು

-ವಾಗಲೂ ಕೈಯೊಂದನ್ನು

ಮೊಲದ ಮೇಲೇ ಇರಿಸಿರುತ್ತಿದ್ದ

ಅದರ ಗುಲಗಂಜಿ ಕಣ್ಣುಗಳ ನಾನೂ ಕಂಡವನೇ

 

ತೀರ ಮೊನ್ನೆ ಅವನು ಮತ್ತೆ ಸಿಕ್ಕಾಗ

ಮೊಲ ಇರಲಿಲ್ಲ- ಬದಲಿಗೆ

ಸ್ಯಾಟಿನ್ ನಲ್ಲಿ ಮಾಡಿದ

ಗೊಂಬೆ- ಜೂಲು

ಹರಿದು ಬಂದ ಮೈ, ಕಿತ್ತು ಹೋದ ಕಣ್ಣು

 

ಅವನ ಕಣ್ಣಲ್ಲಿ ಬೆಳಗಿದ್ದ ಹೂ

ಕುಂಡಗಳು

ಎಲ್ಲಿ ಹೋದವು..

ಚಿತ್ರ : ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಗೋವಿಂದ ಹೆಗಡೆ

ಗೋವಿಂದ ಹೆಗಡೆ ಅವರು ಎಂಬಿಬಿಎಸ್, ಡಿಎ., ಪದವೀಧರರು. ಅರಿವಳಿಕೆ ತಜ್ಞ. ಹುಬ್ಬಳ್ಳಿಯಲ್ಲಿ ಖಾಸಗಿಯಾಗಿ ವೃತ್ತಿ ನಿರ್ವಹಣೆ. ಕವನ, ಹನಿಗವನಗಳು, ಶಿಶುಗೀತೆಗಳು, ಭಾವಗೀತೆಗಳು, ಗಜಲ್, ಹಾಯ್ಕು, ಫರ್ದ್, ರುಬಾಯಿ ಮೊದಲಾದ ಕಾವ್ಯಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.

ಮೈಸೂರು ದಸರಾ ಕವಿಗೋಷ್ಠಿ, ಧಾರವಾಡ ಉತ್ಸವ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಸಮ್ಮೇಳನ ಕವಿಗೋಷ್ಠಿಯೂ ಸೇರಿದಂತೆ ಹಲವಾರು ವೇದಿಕೆಗಳಿಂದ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದ್ದಾರೆ.

ಪ್ರಾಚಾರ್ಯ ಎಚ್ಚೆಸ್ಕೆ ಅವರ ಜನ್ಮಶತಮಾನೋತ್ಸವದಲ್ಲಿ ಏರ್ಪಡಿಸಲಾಗಿದ್ದ ‘ಎಚ್ಚೆಸ್ಕೆ ಬೆಳಕು’ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಕಟಿತ ಕವನ ಸಂಕಲನ 'ಕನಸು ಕೋಳಿಯ ಕತ್ತು' ಕನ್ನಡ ಪುಸ್ತಕ ಪ್ರಾಧಿಕಾರದ ‘ಯುವ ಬರಹಗಾರರಿಗೆ ಪ್ರೋತ್ಸಾಹ' ಯೋಜನೆಯಡಿಯಲ್ಲಿ ಪುರಸ್ಕೃತವಾಗಿದೆ. ‘ಸುವರ್ಣ ಕಾವ್ಯ', ‘ಮತ್ತೆ ಬಂತು ಶ್ರಾವಣಾ', ‘ಪಾರಿಜಾತ ಪರಿ' ಮೊದಲಾದ ಪ್ರಾತಿನಿಧಿಕ ಕವನ ಸಂಕಲನಗಳಲ್ಲಿ ಇವರ ಕವನಗಳು ಸೇರ್ಪಡೆಯಾಗಿವೆ. ಕವಿತೆ, ಕಥೆ, ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗಿವೆ. ಪೇಟೆ ಬೀದಿಯ ತೇರು ಎಂಬ ಕವನ ಸಂಕಲನ. 

 

More About Author