Poem

ಬಣ್ಣ ಬಿಟ್ಟಾಗ

ಗಾಢ ಬಣ್ಣದ ಬಟ್ಟೆಗಳನ್ನು
ತಿಳಿ ಬಣ್ಣದ ಬಟ್ಟೆಗಳೊಂದಿಗೆ ನೆನೆಸಬಾರದು
ಎಲ್ಲರಿಗೂ ಗೊತ್ತಿರುವ ಸತ್ಯ
ಕೆಲವೊಮ್ಮೆ ನಿದ್ರೆಗಣ್ಣಿನಲ್ಲಿ
ತಪ್ಪಾಗಿ ಬಿಡುತ್ತದೆ..

ಆ ಬಣ್ಣ ಇದರ ಮೇಲೇರಿ
ಈ ಬಣ್ಣ ಅದರ ಒಳಸೇರಿ
ಕಡೆಗೆ ಯಾವ ಬಣ್ಣವೂ ಆ ಬಣ್ಣವಾಗಿ ಉಳಿಯುವುದೇ ಇಲ್ಲ

ತಿಕ್ಕಿದರೂ ಉಜ್ಜಿದರೂ ಒಗೆದರೂ
ಹೋಗದ ಕಲೆಗಳೊಂದಿಗೆ ಬದುಕುವುದು ಅಸಹನೀಯ..
ಕೆಲವೊಮ್ಮೆ ಪಿಸಿಯುವುದೂ ಉಂಟು
ತಿಕ್ಖಾಟ ಗುದ್ದಾಟ ಒದ್ದಾಟಗಳ ನಡುವೆ

ಅದರ ಬಣ್ಣ ಅದಕ್ಕಿರಲಿ
ಇದರ ಬಣ್ಣ ಇದಕ್ಕಿರಲಿ
ಎಂದುಕೊಳ್ಳುವಾಗಲೆಲ್ಲಾ ಹೋಳಿ ನೆನಪಾಗುತ್ತದೆ

ಕೇಸರಿ ಹಸಿರು ಕೆಂಪು ಹಳದಿ
ತೊಳೆದುಹೋಗುವ ಬಣ್ಣವೆಂದಲ್ಲವೇ ಮೆತ್ತಿಕೊಳ್ಳುವುದು ಮೈಗೆ
ಮನಸ್ಸಿಗೆ ಹತ್ತಿದ ಬಣ್ಣಗಳನ್ನೊಮ್ಮೆ
ಕೊಡವಿಬಿಡಬೇಕು ಹಾಗೆ

ಬಣ್ಣಗಳಿಲ್ಲದೇ ಬದುಕುವುದು ಹೇಗೆ?
ಉತ್ತರ ಹುಡುಕಬೇಕಿದೆ..

ಈ ಬಣ್ಣ ಹೋಗುವುದಿಲ್ಲ ಅಲ್ಲವೇ..?
ಪ್ರತಿ ಬಾರಿ ಹೊಸಬಟ್ಟೆ ಕೊಂಡಾಗಲೂ ಅದೇ ಪ್ರಶ್ನೆ..
ಅಂಗಡಿಯವನಿಗೂ ತಲೆಕೆಟ್ಟು
ಬಣ್ಣದ ಬಗ್ಗೆ ಗ್ಯಾರಂಟಿ ಕೊಡುವುದಿಲ್ಲ , ಬಿಲ್ ನ ಹಿಂದೆ
ಬರೆಸಿಟ್ಟಿದ್ದಾನೆ..

ಓದಿ ಮುಗುಳ್ನಕ್ಕು ಉಪ್ಪು ನೀರಿನಲ್ಲಿ ನೆನೆಸಲು ಸಜ್ಜು..
ಯಾವ ಬಣ್ಣವೂ ಬಿಡಬಾರದೆಂದಿದ್ದರೆ ಸಮುದ್ರದಲ್ಲೊಮ್ಮೆ ಮುಳುಗೇಳಬೇಕು ಪ್ರತಿಯೊಬ್ಬರೂ

ಬಣ್ಣ ಬಿಟ್ಟೀತು ಎಂಬುವದಕ್ಕೀಗ
ಬೇರೆಯದೇ ನಮೂನೆಯ ಅರ್ಥ
ಬಿಡಲಾರದ ಬಣ್ಣಕ್ಕೆ ಕಚ್ಚಾಟ ದಿನನಿತ್ಯ..

- ಸಿಂಧುಚಂದ್ರ ಹೆಗಡೆ ಶಿರಸಿ

ವಿಡಿಯೋ
ವಿಡಿಯೋ

ಸಿಂಧು ಚಂದ್ರ ಹೆಗಡೆ

ಕವಯಿತ್ರಿ, ಕತೆಗಾರ್ತಿ ಸಿಂಧು ಚಂದ್ರ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯವರು. ತಂದೆ ಜಯರಾಮ ಹೆಗಡೆ, ತಾಯಿ ರೇವತಿ. ಬದುಕಿನ ಮೊದಲ ಹನ್ನೆರಡು ವರ್ಷಗಳನ್ನು ಹಾಸನದಲ್ಲಿ ಕಳೆದಿರುವ ಸಿಂಧು ಪದವಿಯವರೆಗೆ ಓದಿದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಕರ್ನಾಟಕ ವಿಶ್ವ ವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕೆ.ಡಿ.ಸಿ.ಸಿ ಬ್ಯಾಂಕ್ ಉದ್ಯೋಗಿ. ಬದುಕಿನ ಅನುಭವದಿಂದಲೇ ಸತ್ವಯುತ ಬರವಣಿಗೆಗೆ ಬುನಾದಿ ದಕ್ಕುತ್ತದೆ ಎಂದು ನಂಬಿರುವ ಅವರು 2010ರಲ್ಲಿ ತಮ್ಮ ಚೊಚ್ಚಲ ಕವನ ಸಂಕಲನ ‘ನಗುತ್ತೇನೆ ಮರೆಯಲ್ಲ’ ಪ್ರಕಟಿಸಿದರು.

ಇದೀಗ ಕಣ್ಣಿಗೆ 'ಕನಸಿನ ಕಾಡಿಗೆಯನ್ನು ಹಚ್ಚಿಕೊಂಡು’, ‘ಹಗಲುರಾತ್ರಿಗಳನ್ನು' ವಿಭಿನ್ನ ದೃಷ್ಟಿಕೋನ ದಿಂದ ನೋಡಿ ಅವುಗಳನ್ನು ದಾಖಲಿಸುವ ಪ್ರಯತ್ನವನ್ನು 'ಪತ್ರಸಂವಾದ'ದ ಮೂಲಕ ಮಾಡಿದ್ದಾರೆ ಮತ್ತು 10 ಸಣ್ಣ ಕಥೆಗಳನ್ನು ಅತ್ಮೀಯವಾಗಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈ ಕೃತಿಗೆ 2014 ನೇ ಸಾಲಿನಲ್ಲಿ ಕರ್ನಾಟಕ ಸಂಘ ಶಿವಮೊಗ್ಗ ಇವರಿಂದ ಪ್ರತಿಷ್ಠಿತ ಎಂ.ಕೆ. ಇಂದಿರಾ' ಪ್ರಶಸ್ತಿ ದೊರೆತಿದೆ ಹಾಗೂ ಅವನಿ ರಸಿಕರ ರಂಗ ಧಾರವಾಡದವರು ಏರ್ಪಡಿಸಿದ್ದ ವಿ. ದೇವಾಂಗನಾ ಶಾಸ್ತ್ರಿ ಸ್ಮಾರಕ ರಾಜ್ಯಮಟ್ಟದ ಕಥಾಸಂಕಲನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ದೊರೆತಿದೆ. ಅವರ ಮತ್ತೊಂದು ಕವನ ಸಂಕಲನ 'ರಸ್ತೆಯಲ್ಲಿ ಮೇ ಫ್ಲವರ್' 2015 ರಲ್ಲಿ ಪ್ರಕಟಗೊಂಡಿದೆ.

More About Author