Poem

ಬಪ್ಪಿಯ ಕುಡಿ  

ಬಪ್ಪಿಯ ಕುಡಿ ಇವಾಂಕ ಮೊದಲ ಸೂರ್ಯ
ಕಿರಣಗಳ ಅಪ್ಪಿಕೊಂಡ ದಿನ

 

ಬಾಶೋ ಸ್ಪೇಸಿನಲಿ ಕೂತು
ನೋಡುತ್ತಲೇ ಇದ್ದಾನೆ
ಕಪ್ಪೆಯೊಂದು ಪ್ರಪಂಚವ
ನೂಕಿಕೊಂಡು ಹೋಗುತ್ತಿರುವುದ
ಅಥವಾ
ಸ್ಪೇಸೇ ಕೂರಿಸಿಕೊಂಡು ಕಪ್ಪೆಯ
ನೂಕುತ್ತಿದೆ ಪ್ರಪಂಚವ
ಅಪರಿಮಿತ ಸದ್ದಿನ ಜಗದಲಿ
ಅದರ ಪುಳಕ್
ಧ್ಯಾನ
ಅದರೂಳಗೆ ಬಾಶೋ
ನದಿ ದಡದಲ್ಲಿ ಕೂತು ಮೀನು ಹಿಡಿಯುತ್ತಿದ್ದಾನೆ
ಬರೀಗೈಯಲ್ಲಿ
ಅವನು ಬರೆದ ಕವಿತೆ ಮತ್ತು ಕಾಗದ
ಮಾರ್ಕ್ವೇಜ್ ನ ಪಾತ್ರಗಳಂತೆ
ಹಾರುತ್ತಿವೆ ಸ್ಪೇಸಿನಾಚೆ
ಇದನೆಲ್ಲ ಝೆನ್ ಗುರುವೊಬ್ಬ
ಮಾರುಕಟ್ಟೆಯಿಂದ ಕೊಂಡು ತಂದ ಹೊಸ ಪಿಂಗಾಣಿ
ಕಪ್ಪು ಮತ್ತು ಸಾಸರನ್ನು
ಒಡೆದು
ಮತ್ತೆ ಜೋಡಿಸಿ
ಅದರೊಳಗೆ ಟೀ ಸುರಿದುಕೊಂಡು
ಕುಡಿಯುತ್ತಿದ್ದಾನೆ ನೋಡುತ್ತ

ಕಲಾಕೃತಿ: ಡಾ. ಅಶೋಕ ಶೆಟಕಾರ

ಎಚ್‌.ಆರ್‌. ರಮೇಶ

ಹೊಸ ತಲೆಮಾರಿನ ಪ್ರತಿಭಾವಂತ ಕವಿ ಎಚ್.ಆರ್. ರಮೇಶ್ ಮೂಲತಃ ಚಿತ್ರದುರ್ಗದ ಬಳಿಯ ಹರಿಯಬ್ಬೆಯವರು. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ್ ಕೆಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಹೊಸ ತಲೆಮಾರಿನ ವಿಮರ್ಶಕರಾಗಿಯೂ ಗುರುತಿಸಿಕೊಂಡಿರುವ ಇವರು ಸಮಕಾಲೀನ ಲೇಖಕರ ಕೃತಿಗಳ ಕುರಿತು ವಿಮರ್ಶೆಗಳನ್ನು ಬರೆಯುತ್ತಾರೆ, ಕಥೆ, ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. ಮತ್ತೊಂದು ಕೃತಿ ‘ಅದರ ನಂತರ’ ಪ್ರಕಟವಾಗಿದೆ. 

More About Author