Poem

ಬೇಟೆಯಲೂ

ಬಾಚಿಕೊ
ಕಪ್ಪು ನದಿಯನ್ನು
ಬೆಂಬಿಡದೆ ಬೆನ್ನಟ್ಟಿ
ಕತ್ತುಪಟ್ಟಿ ಹರಿಯುವಾಗಲೂ

ಮುರಿದು ತಾ ಹೆಗಲುಗಳನ್ನು
ಕತ್ತರಿಸಿ ತಾ ಪಾದಗಳನ್ನು
ತುತ್ತುಗಳ ತುತ್ತೀರಿ ಊದುವಾಗಲೂ
ಬತ್ತಿದ ಕಡು ನೇತ್ರಗಳ ದಾಳದಲೂ

ಬಾಚಿಕೊ
ನೆರಳುಗಳನ್ನು
ನೆರಳ ಅಂಗೈಗಳನ್ನು

ಬಾಚಿಕೊ
ಕಪ್ಪು ಕಡಲನ್ನು
ಹಣೆಯ ಸಾಣೆಯಲಿ
ನರ್ತಿಸುವಾಗಲೂ

ಬಾಚಿಕೊ
ಕಪ್ಪು ಬೆಟ್ಟವನ್ನು
ಪುಳಕವನ್ನು
ಪ್ರೇಮವನ್ನು
ಬೀದಿ ಬೀದಿಗಳ ಬೇಟೆಯಲೂ

 

ಅಶೋಕ ಹೊಸಮನಿ

ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು. 1983 ಜೂನ್ 01 ರಂದು ಜನನ ‘ಅಶೋಕವನ’ ಇವರ ಕಾವ್ಯನಾಮ. ತಂದೆ ಬಸವಂತಪ್ಪ, ತಾಯಿ ಮಲ್ಲವ್ವ. ಸಿಂಧನೂರಿನಲ್ಲಿ ಡಿ.ಇಡಿ ತರಬೇತಿ, ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ಬಿ.ಎ. ಪದವಿ, ಹಾಗೂ ಎಂ.ಎ. ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಕರ್ನಾಟಕ ರಾಜ್ಯ ಮುಕ್ತ ವಿ.ವಿ.) ಪಡೆದಿದ್ದಾರೆ.  ಸೂಫಿ ಸಾಹಿತ್ಯ ಅಚ್ಚು ಮೆಚ್ಚು. 'ಒಂಟಿ ಹೊಸ್ತಿಲು' ಮೊದಲ ಕವನ ಸಂಕಲನ. ‘ಅನಾಮಧೇಯ ಹೂ’ ಅವರ ಮತ್ತೊಂದು ಹನಿಗವನ ಸಂಕಲನ.

More About Author