Poem

ಭೀತಿಯ ಬೀಜಗಳ ಉರಿದು ಉಪ್ಪು ಖಾರ ಕಲೆಸಲಾಗಿದೆ

ತಲೆಯಲ್ಲಿ ಬಂದೂಕು ಹಿಡಿದ
ಮುಸುಕುದಾರಿಗಳು ನಡೆದಾಡುತ್ತಿದ್ದಾರೆ...
ಬೂಟಿನ ಟಕ್.. ಟಕ್.. ಹೃದಯ ಬಡಿತದ ಸದ್ದಡಗಿಸಿವೆ
ಕಣ್ತೆರೆದರೆ ಗುರಿಯಿಟ್ಟಾರೆಂದು ಶವದಂತೆ ನಟಿಸುತ್ತಿದ್ದೇನೆ.

ಅಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ.
ಕಲಾವಿದರು ತುಟಿಗಳ ಹೊಲೆದಂತೆ
ತೀಡಿ ಬೇಂಟಿಂಗ್ ಮಾಡುತ್ತಿದ್ದಾರೆ.
ದಬ್ಬಣ ಸೂಜಿ ದಾರ ರಕ್ತ ಯಾವುದೂ ಇಲ್ಲ..
ಆಯಿಲ್ ಪೇಂಟಿಂಗಿನ ಚೂರೇ ಚೂರು ಬಿಗಿತವಷ್ಟೇ..
ಇದೀಗ ಎಲ್ಲರೂ ನಡೆದಾಡುವ ಕಲಾಕೃತಿಗಳು,

ಆದೋ ಕಲಾಮಂದಿರ ಪ್ರಶ್ನಾರ್ಥಕ ಚಿನ್ನೆಯ ಬಹುರೂಪಿ
ಕಲಾಕೃತಿಗಳ ಪ್ರದರ್ಶನವಿದೆ
ಪ್ರಶ್ನೆಯ ಮೈಗೆ ಮೊಳೆ ಹೊಡೆಯಲಾಗಿದೆ
ಕೆಲವು ನೇಣು ಬಿಗಿದುಕೊಂಡಿವೆ
ತರಾವರಿ, ಕಲಾಕೃತಿಗಳು ನಮ್ಮೊಳಗಿನ
ಪ್ರಶ್ನೆಗಳನ್ನೂ ದಹಿಸುತ್ತಿವೆ.
ಸಾಕ್ಷಿಯೆಂಬಂತೆ ನಮ್ಮ ದೇಹವೇ ಹೊಗೆಯಾಡುತ್ತಿದೆ..

ನಮ್ಮ ದೇಹದ ಚರ್ಮ ಬಿರುಕು ಬಿಟ್ಟಿದೆಯೆಂದರೆ
ಅಲ್ಲಿ ಭೀತಿಯ ಬೀಜ ಮೊಳೆಯುತ್ತಿದೆ ಎಂದರ್ಥ..
ನನ್ನೊಳಗೆ ಅದೆಷ್ಟು ಬೀಜಗಳನ್ನು ಬಿತ್ತಲಾಗಿದೆಯೋ
ಕ್ಷಣಕ್ಷಣವೂ ಮೈಕೈ ಸವರಿಕೊಂಡು ಪರೀಕ್ಷಿಸಿಕೊಳ್ಳುತ್ತಿದ್ದೇನೆ..

ಎಲ್ಲರೂ ಅಗೋಚರ ಪಂಜರಗಳ ಹೊತ್ತು ನಡೆದಾಡುತ್ತಿದ್ದಾರೆ..
ಡಿಕ್ಕಿ ಹೊಡೆದಾಗ ಮಾತ್ರ ಚಳ್‌ ಎನ್ನುವ ಸದ್ದು ಮೆಲ್ಲಗೆ ಕೇಳುತ್ತದೆ.
ಕೈಕಾಲಾಡಿಸಲು ಅಡೆತಡೆಯಿಲ್ಲ, ಮಾತಿಗಂತೂ ಅಡ್ಡಿಯಿಲ್ಲ.
ಉಸಿರಾಟಕ್ಕೂ ತೊಂದರೆಯಿಲ್ಲ, ಪಂಜರ ಯಾವ ಕ್ಷಣದಲ್ಲಾದರೂ
ಗೋಚರಿಸಬಹುದೆಂಬ ಭಯವನ್ನು ಹೊರತುಪಡಿಸಿ
ಜೀವನ ಸರಾಗವಾಗಿ ಸಾಗಿದೆ..

ಮೈ ಬೆವರಿ ಎದ್ದಾಗ..ಇದು ವಾಸ್ತವದ ಕನಸೋ..ಕನಸಿನ ವಾಸ್ತವವೋ
ಬೂಟಿನ ಸದ್ದಿಗಿಂತ ಹೃದಯ ಬಡಿತ ಜೋರಾಗಿದೆ
ತುಟಿಗಳು ಮಾತಿಗೆ ತವಕಿಸುತ್ತಿವೆ.
ಪ್ರಶ್ನೆಗಳು ಬಿರುಸಾಗಿವೆ, ಮೈಮುರಿತಕ್ಕೆ ಪಂಜರ ನುಗ್ಗಾಗಿದೆ
ಮೈಕೊಡವಿದಾಗ ಉದುರಿ ಬಿದ್ದ ಭೀತಿಯ ಬೀಜಗಳ ಉರಿದು
ಉಪ್ಪುಖಾರ ಕಲೆಸಲಾಗಿದೆ
ಹೊರಗೆ.. ಮಳೆ ಧೋ ಎಂದು ಸುರಿಯುತ್ತಿದೆ.

- ಅರುಣ್ ಜೋಳದಕೂಡ್ಲಿಗಿ

ವಿಡಿಯೋ
ವಿಡಿಯೋ

ಅರುಣ್ ಜೋಳದಕೂಡ್ಲಿಗಿ

ಅರಣ್ ಜೋಳದಕೂಡ್ಲಿಗಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜೋಳದಕೂಡ್ಲಿಗಿಯ ಜಿ. ಹನುಮಂತಪ್ಪ, ಎಸ್. ನಾಗರತ್ನಮ್ಮ ಅವರ ಮಗನಾಗಿ 13.02.1980 ರಲ್ಲಿ ಜನಿಸಿದರು. ಕೂಡ್ಲಿಗಿ ತಾಲೂಕಿನ ಹಾರಕನಾಳು, ಉಜ್ಜಿನಿ, ಕೊಟ್ಟೂರಿನಲ್ಲಿ ಪದವಿವರೆಗಿನ ಶಿಕ್ಷಣ ಮುಗಿಸಿದ ಅವರು ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು ಸದ್ಯಕ್ಕೆ ಪ್ರೊ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಜನಪದ ಕವಿಗಳ ಕುರಿತು ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ.

ಅರುಣ್ ಅವರ ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ಸಂಡೂರು ಭೂಹೋರಾಟ ( ಸಂಶೋಧನೆ, 2008) ಅವ್ವನ ಅಂಗನವಾಡಿ ( ಕವನಸಂಕಲನ, 2010),  ಕನ್ನಡ ಜಾನಪದ ತಾತ್ವಿಕ ನೆಲೆಗಳು ( ಪಿಎಚ್.ಡಿ ಸಂಶೋಧನೆ, 2012), ಜಾನಪದ ಮುಖಾಮುಖಿ (ಸಂಶೋಧನೆ, 2013), ಜಾನಪದ ವರ್ತಮಾನ (ಸಂಶೋಧನೆ, 2013), ಕನಸೊಡೆದೆದ್ದೆ ( ವಿಮರ್ಶೆ, 2013) ಗಂಟಿಚೋರ್ ಸಮುದಾಯ (ಸಂಶೋಧನೆ, 2016) ತತ್ವಪದ ಪ್ರವೇಶಿಕೆ (ಪ್ರೊ.ರಹಮತ್ ತರೀಕೆರೆ ಅವರ ಜತೆ ಸಹ ಸಂಪಾದಕ, 2017)

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿ, ಹೊನ್ನಾವರದ ಜಾನಪದ ಪ್ರಕಾಶನ ನೀಡುವ `ಜಾನಪದ ದೀಪ ಪ್ರಶಸ್ತಿ’ ಪ್ರಜಾವಾಣಿ, ಸಂಚಯ ಕಾವ್ಯ ಪ್ರಶಸ್ತಿಗಳು ಲಭಿಸಿವೆ. ಎಂ.ಎಂ.ಕಲ್ಬುರ್ಗಿ ಅವರ ಕೊಲೆಯ ತನಿಕೆಯ ವಿಳಂಬವನ್ನು ವಿರೋಧಿಸಿ ಕನ್ನಡ ಸಾಹಿತ್ಯ ಪರಿಷತ್ತು ನೀಡಿದ `ಅರಳು ಸಾಹಿತ್ಯ ಪ್ರಶಸ್ತಿ’ಯನ್ನು ಸರಕಾರಕ್ಕೆ ಹಿಂತಿರುಗಿಸಿದ್ದಾರೆ.

ಈತನಕ ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯಮಟ್ಟದಲ್ಲಿ ನೂರಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕವಿತೆ, ಕಥೆ, ಸಂಶೋಧನ ಪ್ರಬಂಧಗಳು ಇವರ ಸೃಜನಶೀಲ ಅಭಿವ್ಯಕ್ತಿ ಕ್ರಮವಾಗಿದೆ. 2010 ರಿಂದ `ಕನ್ನಡ ಜಾನಪದ’ ಎನ್ನುವ ವೆಬ್ ಬ್ಲಾಗ್‍ನ್ನು ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಜೀವಪರ ಸಂಗತಿಗಳ ಬಗ್ಗೆ ಚರ್ಚೆ ಸಂವಾದಗಳನ್ನು ನಡೆಸುತ್ತಾರೆ.

More About Author