Poem

ಗೋರಿಯನು ಕಟ್ಟಬೇಡ

ವಾಸ್ತವ ರೇಖೆ ಗಾಳಿ ಮಳೆಗೆ ಅಳಿದಿದೆ
ಕಪೋಕಲ್ಪಿತ ಖಳನಾಯಕ ಖಂಡಿತ ನಾನಲ್ಲ

ಭ್ರಾಂತಿ ಬಿರುಕುಗಳ ಸೃಷ್ಟಿಸಿದೆ 
ಬಿರುಕು ಕಳೆದು ಮಣ್ಣು ಹದಗೊಂಡು 
ಏಕೀಭವಿಸಲು ಮುಸಲಧಾರೆ ನೀನಾಗು

ಮಾಡಿರದ ಖೂನಿಗೆ ಸುಖಾಸುಮ್ಮನೆ  ಅಪರಾಧಿ 
ಠರಾಯಿಸೋ ನಿಲುವಿಗೆ ಶಿಲುಬೆಗೆ ನೇತಾಡುತ್ತಿದ್ದೇನೆ
ಆರೋಪ ಹೆಸರಿನ ಮೊಳೆಗಳ ಜಡಿದಾಗ

ಪ್ರೀತಿ ನೆತ್ತರು ಜಿನುಗುತಿದೆ
ಅಜ್ಞಾನದಲ್ಲಿರುವವರು ಎಸಗಿದ ಪಾತಕವನು 
ಕ್ಷಮಿಸೆಂದು ಗಾಳಿ, ಮಳೆ, ಬೆಳಕಲಿ ಅರಿಕೆ ಮಾಡಿರುವೆ

ಏನಕೇನ ಪ್ರಕಾರೇನ ಕಟ್ಟಬೇಡ ವ್ಯರ್ಥ ಗೋರಿಯನು
ಪ್ರೇಮ ದೇಗುಲದ ಎದುರು, ಅದುವೋ ಅಪಶಕುನ

ಮೈ ಸುಟ್ಟುಕೊಳ್ಳುವ ರವಿತೇಜ ಬೆಳಗಿ
ಸಕಲ ಜೀವಾತ್ಮಗಳಲಿ ನಿತ್ಯ ಹರಿದಾಡುವ ಸಂಜೀವಿನಿ

ಅದೋ... ಇರುಳ ಬಾನಲಿ ಬುವಿಗೆ ಚಿಮ್ಮುವ 
ಕ್ಷುದ್ರ ತಾರೆಯ ಹುಸಿ ಮಿನುಗು
ಆ ಬೂದಿಯನೆ ಮಂತ್ರವೆಂದು ನಂಬಿ
ಸಾವಯವ ರೂಪಿ ಪ್ರೀತಿಗೆ ಗುಂಡಿ ತೋಡಬೇಡ

ಆ ಕ್ಷುದ್ರ ತಾರೆ ಸುಟ್ಟು ಕರಕಲು 
ಅದರ ಕಪ್ಪು ಮಣ್ಣಲಿ ನಂಬುಗೆಯ ಸಸಿ ನೆಡು
ಮುಂದೊಂದು ದಿನ ಪ್ರೇಮಿಗಳಿಗೆ ನೆರಳಾಗಬಹುದು

ಡಿ.ಎಸ್.ಚೌಗಲೆ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ‘ವಖಾರಿಧೂಸ’, ’ಕಸ್ತೂರಬಾ’, ’ಉಧ್ವಸ್ಥ’, ‘ಉಚಲ್ಯಾ’, ‘ತಮಾಶಾ’, ‘ಜನ ಮೆಚ್ಚಿದ ಅರಸು’, ‘ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಇವು ಬಹುಚರ್ಚಿತ ನಾಟಕಗಳು. 

1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ಗಾಂಧಿ’, ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನವುಂಟು ಮಾಡಿತು. ’ಗಾಂಧಿ-ಅಂಬೇಡ್ಕರ’, ’ಪೇಯಿಂಗ್ ಗೆಸ್ಟ್’, ’ಕಿರವಂತ’, ‘ಶುದ್ಧ ’ಚದುರಂಗ ಮತ್ತು ಕತ್ತೆ’, ’ಶುದ್ಧವಂಶ’, ‘ಸತ್ಯ ಶೋಧಕ’ ಮುಂತಾದ ನಾಟಕಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ‘ನೆರಳುಗಳು’ (ಕಾದಂಬರಿ), ’ನಿನ್ನ ಮೇಲೆ ಸಿಟ್ಟಿಲ್ಲ ಮಾಯಿ’, ಆಯ್ದ ಮರಾಠಿ ಕತೆಗಳು, ’ಮರಾಠಿ ಕೈದಿಗಳ ಕವಿತೆಗಳು’ಇವು ಪ್ರಮುಖ ಅನುವಾದಿತ ಕೃತಿಗಳು.

’ವಾರಸಾ’, ’ಒಡಲ ಉರಿಯ ಹೊತ್ತು’, ‘ಚೌಗಲೆ ಕತೆಗಳು’, ’ಜಂಗು ಹಿಡಿದ ಬ್ಲೇಡು’, ‘ಸೀಮೆಗೊಂದು ಅಟಾಟಿ’ ಅವರ ಕಥಾ ಸಂಕಲನಗಳು. 'ಸುಡುಕಾವಿನ ಒಣ ಎಲೆ' ಕವನ ಸಂಕಲನ, 'ಕನ್ನಡ-ಮರಾಠಿ ಆಧುನಿಕ ರಂಗಭೂಮಿ' ಸಂಶೋಧನ ಕೃತಿ, ಮರಾಠಿ ಚಿತ್ರಕ್ಕೆ ಕನ್ನಡ ಸಂಭಾಷಣೆ ಬರೆದಿರುವರು. ಚಿತ್ರಕಲಾವಿದರಾದ ಇವರ ಪ್ರಮುಖ ಚಿತ್ರಕಲಾ ಪ್ರದರ್ಶನಗಳು ಬೆಂಗಳೂರು, ಮುಂಬಯಿ, ಪುಣೆ, ಕೊಚ್ಚಿನ, ಚೆನ್ನೈ ಹಾಗೂ ಹೈದರಾಬಾದಿನಲ್ಲಿ ನಡೆದಿವೆ. 2017 ರಲ್ಲಿ ಟರ್ಕಿ ದೇಶದ ಎಸ್ಕಿಸೆಹರ್‌ನ ಹ್ಯಾನ್‌ನಲ್ಲಿ ಹತ್ತು ದಿನಗಳವರೆಗೆ ಜರುಗಿದ ಅಂತರಾಷ್ಟ್ರೀಯ ಚಿತ್ರಕಲಾ ಸಿಂಪೋಜಿಯಮ್‌ನಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರಕಲೆ ಮತ್ತು ರಂಗಭೂಮಿ ಕುರಿತು ಹಲವು ಕೃತಿಗಳನ್ನು ರಚಿಸಿರುವ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ 'ನಾಟಕಕಾರ ಪ್ರಶಸ್ತಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ದಿಶಾಂತರ ನಾಟಕಕ್ಕೆ ಪ್ರತಿಷ್ಠಿತ 'ಚದುರಂಗ' ಪ್ರಶಸ್ತಿ ಮತ್ತು ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿಗಳು ಸೇರಿ ಹದಿನಾರು ಪುರಸ್ಕಾರಗಳು ಸಂದಿವೆ. ಕನ್ನಡ-ಮರಾಠಿ ರಂಗಭೂಮಿ ಸೇವೆಗೆ ಮುಂಬೈ ಕರ್ನಾಟಕ ಸಂಘದ 'ವರದರಾಜ ಆದ್ಯ' ಪ್ರಶಸ್ತಿ ಸೇರಿದಂತೆ 16 ಪುರಸ್ಕಾರಗಳು ಇವರಿಗೆ ಸಂದಿವೆ. ‘ಕಾಳಾಚಾ ಪಾವುಲಖುಣಾ’ ಆಯ್ದ ಮರಾಠಿಗೆ ಅನುವಾದಗೊಂಡ ಚೌಗಲೆಯವರ ಕತೆಗಳು. ಅವರು ಮುಂಬೈ ವಿಶ್ವವಿದ್ಯಾಲಯದ ಜಾನಪದ ರಂಗಭೂಮಿ ವಿಭಾಗ ಮತ್ತು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ ನಾಟಕ ವಿಭಾಗದ ರಂಗತಜ್ಞರಾಗಿದ್ದಾರೆ. 'ದಿಶಾಂತರ', 'ವಖಾರಿಧೂಸ, 'ಉದ್ದಷ್ಟ' ನಾಟಕಗಳು ಮರಾರಿ ಮತ್ತು ಇಂಗ್ಲಿಷ್‌ಗೆ ಅನುವಾದಗೊಂಡಿವೆ. ಟರ್ಕಿ ದೇಶದಲ್ಲಿ ನಡೆದ ವಿಶ್ವಕಲಾ ಮೇಳದಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ರಂಗ ಸಮಾಜದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮರಾಠಿ ಭಾಷೆಯ ‘ಕ್ಯಾರಿ ಆನ್ ಮರಾಠಾ’ ಚಲನಚಿತ್ರಕ್ಕೆ ಕನ್ನಡ ಸಂಭಾಷಣೆ ರಚಿಸಿರುವರು. ಕನ್ನಡದ ಮೊದಲ ಮಹಿಳಾ ದಲಿತ ಆತ್ಮಕತೆ ಆಧರಿಸಿದ ಚಿತ್ರ ‘ಮಾತಂಗಿ ದೀವಟಿಗೆ’ಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. 

 

More About Author