Poem

ಹಾಗೊಂದು ವೇಳೆ ಗೆಳೆಯನಾಗುವಂತಿದ್ದರೆ

ಹಾಗೊಂದು ವೇಳೆ ಉಸಿರಾಡುವುದಾದರೆ
ಗಳಿಗೆ ಗಳಿಗೆಗಳ ಲೆಕ್ಕವಿಡಬೇಕು
ರಾತ್ರಿಗಳ ಮಡಚಬೇಕು
ಹಗಲುಗಳ ನೇಯ್ದಿರಬೇಕು

ಹಾಗೊಂದು ವೇಳೆ ಕೊಂಡಾಡಬೇಕೆಂದರೆ
ಚಿತ್ರಗಳ ಪಟ್ಟಿಯಿಡಬೇಕು
ಅಂಗೀಕಾರದ ಮುದ್ರೆಯಿದ್ದರೆ

ಹಾಗೊಂದು ವೇಳೆ ಪ್ರೇಮವ ಅಪ್ಪಿಕೊಳ್ಳುವಂತಿದ್ದರೆ
ಕೀಳಿಸಿಕೊಳ್ಳಬೇಕು ಕಣ್ಣು
ಮಣ್ಣಿಗೂ ಹತ್ತಿರವಾಗಬೇಕು

ಹಾಗೊಂದು ವೇಳೆ ಆಕಾಶಕಾಯವಾಗುವಂತಿದ್ದರೆ
ಜೀವಕಾಯದ ಪೆಟ್ಟುಗಳಿಗೆ ಪಕ್ಕಾಗಬೇಕು

ಹಾಗೊಂದು ವೇಳೆ ಹಾಜರಾತಿಗೆ ಹಪಾಹಪಿಸುವಂತಿದ್ದರೆ
ಕತ್ತರಿಸಬೇಕು ದಾರಿಯನ್ನು
ಪ್ರೇಮವನ್ನೂ

ಕಪ್ಪು ಬಣ್ಣಕ್ಕೂ ಉಸಿರ ತುಂಬಬೇಕು
ಹಾಗೊಂದು ವೇಳೆ
ಗೆಳಯನಾಗುವಂತಿದ್ದರೆ

-ಅಶೋಕ ಹೊಸಮನಿ

ಅಶೋಕ ಹೊಸಮನಿ

ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು. 1983 ಜೂನ್ 01 ರಂದು ಜನನ ‘ಅಶೋಕವನ’ ಇವರ ಕಾವ್ಯನಾಮ. ತಂದೆ ಬಸವಂತಪ್ಪ, ತಾಯಿ ಮಲ್ಲವ್ವ. ಸಿಂಧನೂರಿನಲ್ಲಿ ಡಿ.ಇಡಿ ತರಬೇತಿ, ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ಬಿ.ಎ. ಪದವಿ, ಹಾಗೂ ಎಂ.ಎ. ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಕರ್ನಾಟಕ ರಾಜ್ಯ ಮುಕ್ತ ವಿ.ವಿ.) ಪಡೆದಿದ್ದಾರೆ.  ಸೂಫಿ ಸಾಹಿತ್ಯ ಅಚ್ಚು ಮೆಚ್ಚು. 'ಒಂಟಿ ಹೊಸ್ತಿಲು' ಮೊದಲ ಕವನ ಸಂಕಲನ. ‘ಅನಾಮಧೇಯ ಹೂ’ ಅವರ ಮತ್ತೊಂದು ಹನಿಗವನ ಸಂಕಲನ.

More About Author