Poem

ಹಾಗಾದರೆ `ಮಾರಿಬಿಡಿ’!

ಅಮ್ಮನ ಒಂದು ಜೊತೆ ಬಂಗಾರದ ಬಳೆ
ಅವಳ ಬದುಕಿನಂತೆಯೇ ನವೆದು, ಸವೆದು
ಬಣ್ಣ ಕಳಕೊಂಡು ಕೊನೆಗೀಗ ಮುರಿದೇ ಹೋಗಿದೆ
`ಮಾರಿಬಿಡಿ...’ಯಾರೋ ಟಿವಿಯಲ್ಲಿ ಅರಚುತ್ತಿದ್ದಾರೆ!

ಮಾರಬಹುದೇ ಅವಳ ಬಳೆ ತೊಟ್ಟ ಸಂಭ್ರಮವನ್ನು
ಕಾಸಿಗೆ ಕಾಸು ಕೂಡಿಟ್ಟು ಕೊಂಡ ಚಿನ್ನಗನಸನ್ನು
ಗಾಜು ಬಳೆಗಳ ನಡುವೆ ಫಳಫಳಿಸಿದ ಆಸೆಯನ್ನು
ಹಬ್ಬವೋ, ತಿಥಿಯೋ, ಸೌಟು ಹಿಡಿದಾಗೆಲ್ಲ ಮಿರುಗಿದ್ದನ್ನು
ಒನಕೆಯಲ್ಲಿ ಕುಣಿದು, ಬೀಸುವಕಲ್ಲಿನೊಂದಿಗೆ ಸುತ್ತಿ,
ನೀರೆಳೆವಾಗ ಕೊಡದಂತೆ ಜಾರಿ ಮೇಲೆ ಬಂದಿದ್ದನ್ನು
ನೋವು-ನಲಿವು, ಮದುವೆ-ಮಸಣಕ್ಕೆ ಸಾಕ್ಷಿಯಾಗಿದ್ದನ್ನು
ಮಕ್ಕಳಿಗೆ ಬಳೆಯ ಜೊತೆ ರವಾನಿಸಿದ ಕೆಲಸದ ಹುಚ್ಚನ್ನು?

ಹಳೆಮನೆ ಸೋರುತ್ತಿದೆ, ಹೆಂಚು ಹಾರಿ ಹೋಗಿದೆ
ನೆಲ ಕರೆಗಟ್ಟಿದೆ, ಗೋಡೆ ಬಿರುಕು ಬಿಡುತ್ತಿದೆ
ಅಂಗಳದ ವೃಂದಾವನ ಮುರಿದೇ ಬಿದ್ದಿದೆ
`ಮಾರಿಬಿಡಿ...’ಯಾರೋ `ಟಿವಿ’ಯಲ್ಲಿ ಅರಚುತ್ತಿದ್ದಾರೆ!

ಮಾರಬಹುದೇ ಪುಟ್ಟ ಹೆಜ್ಜೆಗಳಿಟ್ಟಿದ್ದ ಖುಷಿಯನ್ನು
ತೊದಲಿನ ಮೊದಲನ್ನು, ಎಡವಿ ಬಿದ್ದು ಎದ್ದಿದ್ದನ್ನು
ಹಿತ್ತಲಿನ ನಿಂಬೆ, ದಾಳಿಂಬೆ, ಕರಿಬೇವಿನ ಘಮವನ್ನು
ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಕರೆಯನ್ನು
ಬೇರುಬಿಟ್ಟು ಬೇರಾದರೂ ಬೇರಾಗದ ಕಳ್ಳುಬಳ್ಳಿಗಳನ್ನು
ಅಂಗಳದಲ್ಲಿ ಹರಿದ ಬೆಳುದಿಂಗಳ ಹೊಳೆಯನ್ನು
ಜಗಲಿಕಟ್ಟೆಯ ಮಾತಲ್ಲಿ ಹುಟ್ಟಿ ಕಟ್ಟಿದ ಜಗತ್ತನ್ನು?

ಅತ್ಯಾಚಾರ, ದುರಾಚಾರ, ಮಾನಭಂಗ, ಶೀಲಭಂಗ...
ಭರಿಸಬಹುದೇ ಹೆಂಗೂಸುಗಳು ಇಂಥ ಪದಭಾರವನ್ನು?
`ದೇಹ ಮಾರುವುದ ಕಾನೂನುಬದ್ಧಗೊಳಿಸಿ’- ಕಿರುಚುತ್ತಾರೆ
ಮಾರುವ ಮಾರಿ ಹೊಕ್ಕಿದ್ದು ನಿನ್ನೆ ಮೊನ್ನೆಯೇನಲ್ಲ
`ಪತಿಗಳೆನ್ನನು ಮಾರಿ ಧರ್ಮಸ್ಥಿತಿಯ ಕೈಗೊಂಡರು’
ಎಂದು ಪಾಂಚಾಲಿಯ ಕೊರಳು ಒರಲಿದಷ್ಟೇ
ಚಂದ್ರಮತಿ ಹರಾಜು ಕಟ್ಟೆಯಲಿ ನಿಂತಷ್ಟೇ ಹಳೆಯದು!

ಆದರೂ ಮಾರಬಹುದೇ ನೀವು ಅವಳ ಘನತೆಯನ್ನು
ಕಟ್ಟುಪಾಡಿಲ್ಲದೇ ಕಟ್ಟಿಹಿಡಿವ ತಾಯ್ತನದ ಮಮತೆಯನ್ನು?

- ಎಂ.ಆರ್. ಕಮಲಾ

ಎಂ.ಆರ್. ಕಮಲ

ಕವಿ-ಅನುವಾದಕಿಯಾಗಿ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಎಂ.ಆರ್. ಕಮಲಾ ಅವರು ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. 1959ರ ಮಾರ್ಚ್‌ 27ರಂದು ಜನಿಸಿದರು. ತಂದೆ ಎಂ.ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿಎಂಶ್ರೀ ಚಿನ್ನದ ಪದಕ ವಿಜೇತರು.  ಫ್ರೆಂಚ್ ಭಾಷೆಯಲ್ಲಿ ಪದವೀಧರರು.
ಶಕುಂತಲೋಪಾಖ್ಯಾನ (1988), ಜಾಣೆ ಮತ್ತು ಇತರ ಕವಿತೆಗಳು (1992), ಹೂವು ಚೆಲ್ಲಿದ ಹಾದಿ (2007), ಮಾರಿಬಿಡಿ (2017) ಕವನ ಸಂಕಲನಗಳು. ಆಫ್ರಿಕನ್-ಅಮೆರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ’ಕತ್ತಲ ಹೂವಿನ ಹಾಡು (1989) ಕನ್ನಡದಲ್ಲಿ ಕಪ್ಪು ಕವಿಗಳನ್ನು ಪರಿಚಯಿಸುವ ಪ್ರಯತ್ನ.  ಗುಲಾಮಗಿರಿಯ ವಿರುದ್ದ ಹೋರಾಟ, ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ಯ್ರ ಹೋರಾಟದ ಕತೆಗಳ ಸಂಕಲನ- ’ಕಪ್ಪು ಹಕ್ಕಿಯ ಬೆಳಕಿನ ಹಾಡು’ ಸರಣಿಯನ್ನು ನಾಲ್ಕು ಕೃತಿಗಳು ಅಂದರೆ ’ಕಪ್ಪು ಹಕ್ಕಿಯ ಬೆಳಕಿನ ಹಾಡು’, ’ಉತ್ತರ ನಕ್ಷತ್ರ’, ’ರೋಸಾ ಪಾರ್ಕ್‌’, ’ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ’ ಅವರ ಅನುವಾದಿತ ಕೃತಿಗಳು.
ಬಂಗಾಲಿ ಕವಿ ಜೀವನಾನಂದರ ಕವಿತೆಗಳು (2003) ಹಾಗೂ ಆಧುನಿಕೋತ್ತರ ಬಂಗಾಲಿ ಕವಿತೆಗಳ ಅನುವಾದ ’ಜೀರೊ ಪಾಯಿಂಟ್’ ಸಂಕಲನದಲ್ಲಿದೆ.
ಕಮಲಾ ಅವರಿಗೆ ಕುವೆಂಪು ಭಾಷಾ ಭಾರತಿಯ ಗೌರವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ (2018), ಎಸ್.ವಿ. ಪರಮೇಶ್ವರಭಟ್ ಸಂಸ್ಮರಣ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಸ್ಮಾರಕ ಪುರಸ್ಕಾರ, ಮುದ್ದಣ ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿಗಳು ಸಂದಿವೆ.

More About Author