Poem

ಹೆಣ್ತನದ ಕವಿತೆ

ನಿನ್ನ ಕಣ್ಣಲ್ಲೇನೋ ಹೊಳಪಿನ ರೂಪಾಂತರ
ನಿನ್ನೆ ಮೊನ್ನೆ ಕಪ್ಪಾಗಿದ್ದವಳು ಇಂದು
ವರ್ಣವಾದೆ.
ಲಘುವಾಗಿದ್ದ ಬೆಡಗಿ ಇಂದು ನನಗೆ
ಗುರುವಾದೆ.

ಮಾಯೆಯಲ್ಲವೇ ನೀನು ಮಾಟಗಾತಿ
ಕವಿತೆಯ ಬೆನ್ನೇರಿ ನಿಂತ ಬೇಟೆಗಾರ್ತಿ
ದಶಕಗಳು ಉರುಳಿರಬೇಕು ನನ್ನ ನಿನ್ನ ಸಾಂಗತ್ಯಕೆ
ಮಕ್ಕಳು ಮರಿ ಮೊಮ್ಮಕ್ಕಳು
ಚಿಗದೊಡ್ಡಪ್ಪರ ಮಕ್ಕಳು ಆಡಿ ನಲಿದಿರಬೇಕು
ನಿನ್ನ ಅಂಗಳದಲ್ಲಿ.

ಎಷ್ಟೊಂದು ರೂಪಾಂತರಗಳನ್ನು ದಾಟಿ ಬಂದೆ
ಸಂಸ್ಕೃತ ಪ್ರಾಕೃತ ಕನ್ನಡದ ಮಣ್ಣಲ್ಲಿ ಮಿಂದೆದ್ದೆ
ಮತ ಧರ್ಮಗಳನ್ನು ದಾಟಿನಿಂತ ಹೃದಯದ ಹುಡುಗಿ
ದೇಶ ಕೋಶಗಳ ಬಾಳಿ ನಿಂತ ಬೆಡಗಿ.

ಹೆಣ್ತನದಲ್ಲಿ ಮಣ್ತನವ ಕೂಡಿ ಕಟ್ಟಿ
ಜೋಗುಳವಾಡಿದೆ
ತ್ರಿಪದಿ ಸಾಂಗತ್ಯದ ಅಕ್ಕರೆಯಲಿ
ಕಂದನಾದೆ.

ಏಳೇ ಚೌಪದಿ
ನಿನ್ನ ಮೃದು ವಚನದ ಬೆಡಗ ತೋರಿಸು
ಎಲ್ಲ ರಗಳೆಗಳ ಬಿಟ್ಟು ಛಂದಸ್ಸಾಗು
ಕೃಷ್ಣ ಕಾವೇರಿ ಮಲಪ್ರಭೆ ಭೀಮೆ
ತುಂಗೆ ಗೋದಾವರಿ ಗಂಗೆಯರಲ್ಲಿ ಮಿಂದೇಳು.

ಬಾ ಸಂಭವಿಸು
ಪ್ರೇಮದೊಡಲೇ
ಮಹಾಛಂದಸಿನಲ್ಲಿ ರೂಪಗೊಂಡ
ಮಹಾಬಿಂದುವೇ.

ನೀನು ಋತುವಿಲಾಸದವಳು
ಜೀವ ವಾಹಿನಿಯಂತೆ ನಿಂತು ಕನ್ನಡದ ತೇರ ಎಳೆದವಳು 'ಮನುಷ್ಯ ಜಾತಿ ತಾನೊಂದೇ ವಲಂ'ಎಂದು
ಒಲವಿನ ಮಾತುಗಳನ್ನಾಡಿಸಿ ಸರ್ವ ಜನಾಂಗದ ತೋಟವಾದಗಳು
ಯುಗ ಯುಗಕೂ ದಾರಿದೀಪವಾದವಳು.

ಬಾ ಪ್ರಿಯ ಬಂಧುವೇ
ಕಣ್ಣ ಹೊಳಪಿನ ಬಿಂದುವೇ
ಲೋಕದೃಷ್ಟಿಯ ಅಂದವೇ.

-ಡಾ.ನಿಂಗಪ್ಪ ಮುದೇನೂರು


ನಿಂಗಪ್ಪ ಮುದೇನೂರು

ಲೇಖಕ, ಕವಿ ನಿಂಗಪ್ಪ ಮುದೇನೂರು ಅವರು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಮುದೇನೂರು ಗ್ರಾಮದಲ್ಲಿ 1970 ಜೂನ್‌ 01ರಂದು ಜನನ. ಸಾಹಿತ್ಯ ಮಾತ್ರವಲ್ಲದೆ ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಧ್ಯಾಪಕರಾಗಿ ಕಾರ್ಯನಿರ್ವಹಣೆ. 

ಮಗುವಿನ ಧ್ಯಾನದಲ್ಲಿ, ಮಣ್ಣಿನ ಕವಿತೆ, ಕಡಲ ಕವಿತೆ, ನನ್ನ ಗಾಂಧಿ’ ಅವರ ಪ್ರಮುಖ ಕವನ ಸಂಕಲನಗಳು. ಜೀ.ಶಂ.ಪ ರವರ 'ಜನಪದ ಖಂಡಕಾವ್ಯಗಳು’, ಕುವೆಂಪು ಅವರ 'ಶೂದ್ರ ತಪಸ್ವಿ', ಜಾಗತೀಕರಣ ಮತ್ತು ಗಾಂಧಿ, ಸಂಸ್ಕೃತಿ ದರ್ಶನ, ಅಕ್ಷರ ಮತ್ತು ಅರಿವು ಅವರ ವಿಮರ್ಶಾ ಕೃತಿಗಳು. ‘ಬುರ್ರಕಥಾ ಈರಮ್ಮ: ಅಲೆಮಾರಿಯ ಆತ್ಮಕಥನ’ -  ದರೋಜಿ ಈರಮ್ಮ ಅವರ ಆತ್ಮಕಥನವನ್ನು ನಿರೂಪಿಸಿದ್ದಾರೆ.

ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿಯೂ ಕೃಷಿ ಸಾಧಿಸಿರುವ ಅವರು ‘ಸೊಂಡೂರು ಕುಮಾರಸ್ವಾಮಿ’, ‘ಕನ್ನಡ ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ವೀರರು’ ಅವರ ಸಂಶೋಧನಾ ಕೃತಿಗಳು. ‘ಬಿಚ್ಚುಗತ್ತಿಯ ಎದೆಯಲ್ಲಿ’ ಅವರ ನಾಟಕ ಕೃತಿ. ‘ಕಾಡಿನ ಕೊಳಲಿಗೆ ನಾಡಿನ ಸ್ವರ’ , ಜನಪದ ಕಥೆ ಮತ್ತು ಗೀತೆಗಳು-ಗುಲಬರ್ಗಾ.ವಿ.ವಿ ಪಠ್ಯ, ಬುರ್ರಕಥಾ ಈರಮ್ಮ:ಜೀವನ ಚರಿತ್ರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್.ಇ.ಪಿ)ಯಡಿಯಲ್ಲಿ ಗು.ವಿ.ವಿ ಪದವಿಗೆ ಪಠ್ಯ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. 

More About Author