Poem

ಕನಸುಗಳ ಬಿತ್ತದಿರು, ಗೆಳೆಯ

ಕಾಳರಾತ್ರಿ ಎದೆಯಲಿ
ಕನಸುಗಳ ಬೀಜ ಬಿತ್ತದಿರು, ಗೆಳೆಯ
ತಿಳಿದು, ತಿಳಿದು ತುಳಿದು ಹೋಗುವರು
ತಲೆ, ಎದೆ ಎಲ್ಲೆಂದರಲ್ಲಿ!

ಹಳೆಯ ಗಾಯವೇ ಇನ್ನೂ
ನೋವ ಉಸಿರಾಡುತ್ತಿದೆ
ಹೆಸರಿಗೆ ನಾನು ಹಸಿರು, ಕಾಂಡ, ರೆಂಬೆ, ಕೊಂಬೆ
ಗಳ್ಳುಳ್ಳ ಧ್ರುಮವು
ಬುಡದಲ್ಲಿಯ ಗೆದ್ದಲೊಂದಿಗೆ ಸದಾ ಹೋರಾಡುವ ಕಲಿ ನಾ

ಕಿಲುಬುಗಟ್ಟಿದ ಕೀಲಿ ಕೈ ಒಡೆದು
ಸಮ ಸಮಾಜ ನವ ದ್ವಾರ ತೆರೆದು
ಬರೆಯಬೇಕಿದೆ
ನಾನು, ನೀನು, ಅವರು, ಎಲ್ಲರೂ ಕೂಡೆ
ಪರಿವರ್ತನೆಯ 'ಧಮ್ಮಲಿಪಿ'

ಕಾಲದ ಹಿಮ್ಮಡಿ ಒಡೆದು
ಕೀವು, ರಕುತ ಸೋರುತ್ತಿದೆ
ಸೋತ ಕೈ ತಲೆಗೆ ತರದೇ ಏರು ಏರಿ,ಇಳಿವ ತಕದಲ್ಲಿರುವೆ, ಜತೆಗಿರು ಗೆಳೆಯ ಮುನ್ನೆಡೆವೆ,
ನಿನ್ನ ಕರ ಹಿಡಿವೆ

-ಡಾ. ಸದಾಶಿವ ದೊಡಮನಿ
ಇಲಕಲ್ಲ

ಸದಾಶಿವ ದೊಡಮನಿ

ಸದಾಶಿವ ದೊಡಮನಿ ಮೂಲತಃ ಇಳಕಲ್ ನವರು. ಕಾವ್ಯ ಸಂಶೋಧನೆ, ವಿಮರ್ಶೆ ಹೀಗೆ ಹಲವು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹನಿಗವಿತೆಗಳನ್ನು ಬರೆಯುತ್ತಿದ್ದಾರೆ. ಪ್ರಸ್ತುತ ಇಳಕಲ್ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ನೆರಳಿಗೂ ಮೈಲಿಗೆ, ಇರುವುದು ಒಂದೇ ರೊಟ್ಟಿ

More About Author