Poem

ಖಾಲಿ ಜೋಳಿಗೆ

ಬರೀ ತಪ್ಪುಗಳನ್ನು ಹುಡುಕದಿರು
ಅಕ್ಕಿಯಲ್ಲಿ ತುಂಬಾ ಹಳ್ಳುಗಳು ಇವೆ
ಆರಿಸು ಅಕ್ಕಿ
ಆರಿಸದಿರು ಹಳ್ಳು

ನುಸಿ, ಬಾಲುಹುಳು ಎಂದು
ಅಕ್ಕಿಯನ್ನೇ ಎತ್ತಿ ಎಸೆಯದಿರು;
ಹಸಿವು ಹೆತ್ತ ಕರುಳು ಬಾಣಂತಿ ನಾನು!
ಹಸಿವೆಯ ಕುರಿತ ನಿನ್ನ ಒಣ ಮಾತು
ಹೊಟ್ಟೆ ತುಂಬಿಸಲಾರವು

ಕರುಳು ಸುಟ್ಟುಕೊಂಡು
ಯಾರೋ ಕೊಟ್ಟ ತುಕುಡಿ ರೊಟ್ಟಿ
ಯನು ಸೆರಗಿನಲ್ಲಿ ಕಟ್ಟಿಕೊಂಡು
ಬಾಳ ಬಂಡಿ ಉರುಳಿಸಲು
ನಿತ್ಯ ಅಗ್ಗಿ ಹಾಯುವ ಅವ್ವ
ನನ್ನ ಪಾಲಿಗೆ ಖಾಲಿ ಜೋಳಿಗೆ ಸಂತೆ

ಚರುಮ ಸುಲಿದ ಪಾದಗಳಿಗೆ
ಬಾಳೆ ಬಚ್ಚಿ ಸುತ್ತಿ, ಅವರಿವರ ಹೊಲಗಳಲೆದು
ಆಯ್ದ ಬೊಗಸೆ ಸೇಂಗಾ ಬುಡ್ಡಿಯನು
ಅವರಿವರಿಗೆ ಹಂಚುತ್ತಲೇ
ಮನೆ ಮುಟ್ಟುವ ಅಪ್ಪನಿಗೆ
ತುಕಾರಾಮ ಹೆಸರು ಅನ್ವರ್ಥಕ

ಅಗಸೆ ಬಾಗಿಲಲ್ಲಿ ಆನೆ
ಹಾದು ಹೋದರೂ
ಇರುವೆ ಹೊರುವಷ್ಟೇ
ಅನ್ನದಗಳಿಗೆ ಇಲ್ಲಿ ನಿತ್ಯ ಹೋರಾಟ, ಕಸರತ್ತು
ಕಸುವಿಲ್ಲದ ಹಸಿದ ಕರುಳ ಪಾಡು!

-ಡಾ. ಸದಾಶಿವ ದೊಡಮನಿ

ಸದಾಶಿವ ದೊಡಮನಿ

ಸದಾಶಿವ ದೊಡಮನಿ ಮೂಲತಃ ಇಳಕಲ್ ನವರು. ಕಾವ್ಯ ಸಂಶೋಧನೆ, ವಿಮರ್ಶೆ ಹೀಗೆ ಹಲವು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹನಿಗವಿತೆಗಳನ್ನು ಬರೆಯುತ್ತಿದ್ದಾರೆ. ಪ್ರಸ್ತುತ ಇಳಕಲ್ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ನೆರಳಿಗೂ ಮೈಲಿಗೆ, ಇರುವುದು ಒಂದೇ ರೊಟ್ಟಿ

More About Author